ಮಾರ್ಚ್ 20ರವರೆಗೂ ಕೇರಳ, ಕರಾವಳಿ ಪ್ರದೇಶಗಳಲ್ಲಿ ಮಳೆ ಸಾಧ್ಯತೆ
ನವದೆಹಲಿ, ಮಾರ್ಚ್ 17: ಬೇಸಿಗೆ ಆರಂಭವಾಗಿದ್ದರೂ ಸದ್ಯಕ್ಕೆ ಉತ್ತರ ಪಾಕಿಸ್ತಾನದಲ್ಲಿನ ತೀವ್ರ ಸುಳಿಗಾಳಿ ಪ್ರಭಾವದಿಂದಾಗಿ ಭಾರತದ ಉತ್ತರ ಭಾಗಗಳಲ್ಲಿ ಮಳೆಯಾಗುವುದಾಗಿ ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
Recommended Video
ಮುಂದಿನ ಐದು ದಿನಗಳ ಕಾಲ ಈ ಪ್ರಭಾವ ಮುಂದುವರೆಯಲಿದ್ದು, ಮಾರ್ಚ್ 17 ಹಾಗೂ 18ರಂದು ಅರುಣಾಚಲ ಪ್ರದೇಶ, ಜಮ್ಮು ಹಾಗೂ ಕಾಶ್ಮೀರ, ಲಡಾಖ್ನಲ್ಲಿ ಚದುರಿದ ಮಳೆಯಾಗಲಿದೆ. ಉತ್ತರಾಖಂಡ ಹಾಗೂ ಸಿಕ್ಕಿಂನಲ್ಲಿಯೂ ಮಾರ್ಚ್ 19ರವರೆಗೆ ಮಳೆಯಾಗುವುದಾಗಿ ಮುನ್ಸೂಚನೆ ನೀಡಿದೆ. ಮಾರ್ಚ್ 18 ಹಾಗೂ 19ರಂದು ವಾಯವ್ಯ ರಾಜ್ಯಗಳಲ್ಲಿ ಗುಡುಗು ಮಿಂಚು ಸಹಿತ ಮಳೆಯಾಗಲಿರುವುದಾಗಿ ಸೂಚನೆ ನೀಡಿದೆ. ಮುಂದೆ ಓದಿ...

ಕೇರಳ ಹಾಗೂ ರಾಜ್ಯದ ಕರಾವಳಿ ತುಂತುರು ಮಳೆ
ದೇಶದ ಉತ್ತರ ಭಾಗವಲ್ಲದೇ ದಕ್ಷಿಣ ಭಾರತದ ಕೆಲವೆಡೆಯೂ ತುಂತುರು ಮಳೆಯಾಗಲಿರುವುದಾಗಿ ತಿಳಿದುಬಂದಿದೆ. ಕೇರಳ ಹಾಗೂ ಕರ್ನಾಟಕದ ಕರಾವಳಿ ಪ್ರದೇಶಗಳಲ್ಲಿ ಎರಡು ದಿನಗಳ ಕಾಲ ತುಂತುರು ಮಳೆಯಾಗುವ ಸಾಧ್ಯತೆಯಿರುವುದಾಗಿ ಇಲಾಖೆ ಮಾಹಿತಿ ನೀಡಿದೆ. ನಂತರ ತಾಪಮಾನದಲ್ಲಿ ಏರಿಕೆಯಾಗುವುದಾಗಿ ತಿಳಿಸಿದೆ.

ಮಧ್ಯ ಭಾರತದಲ್ಲಿ ಎರಡು ದಿನ ತಾಪಮಾನ ಇಳಿಕೆ
ಮುಂದಿನ ಎರಡು ದಿನಗಳ ಕಾಲ ಮಧ್ಯ ಭಾರತದಲ್ಲಿ ತಾಪಮಾನವು 2-3 ಡಿಗ್ರಿ ಸೆಲ್ಸಿಯಸ್ ಇಳಿಯಲಿದೆ. ಈಶಾನ್ಯ ರಾಜ್ಯಗಳಲ್ಲಿ ಮಳೆಯಾಗಲಿದೆ ಎಂದು ತಿಳಿಸಿದೆ. ಉಳಿದಂತೆ ಮಾರ್ಚ್ 19ರವರೆಗೂ ಹಿಮಾಲಯದ ಪಶ್ಚಿಮ ಭಾಗಗಳಲ್ಲಿ (ಜಮ್ಮು ಕಾಶ್ಮೀರ, ಲಡಾಖ್, ಗಿಲ್ಗಿಟ್, ಬಾಲ್ಟಿಸ್ತಾನ, ಮುಜಾಫರ್ಬಾದ್, ಹಿಮಾಚಲ ಪ್ರದೇಶ ಹಾಗೂ ಉತ್ತರಾಖಂಡ) ಗುಡುಗು ಮಿಂಚು ಸಹಿತ ಮಳೆ ಮುಂದುವರೆಯುವುದು ಎಂದು ತಿಳಿಸಿದೆ.

ಕೆಲ ದಿನಗಳಲ್ಲೇ ಕರಾವಳಿ ಪ್ರದೇಶಗಳಲ್ಲಿ ಬಿಸಿಲು ಏರಿಕೆ
ಪಶ್ಚಿಮ ಸೌರಾಷ್ಟ್ರ, ಕಚ್, ಕೊಂಕಣ್ ಹಾಗೂ ಗೋವಾದಂಥ ಪಶ್ಚಿಮ ಕರಾವಳಿ ಪ್ರದೇಶಗಳಲ್ಲಿ ಬಿಸಿಗಾಳಿ ವಾತಾವರಣ ಆರಂಭವಾಗುವುದಾಗಿ ತಿಳಿದುಬಂದಿದೆ. ದೇಶದ ಇನ್ನುಳಿದ ಕಡೆಗಳಲ್ಲಿ ಒಣ ಹವೆ ಮುಂದುವರೆಯಲಿದ್ದು, ಮಾರ್ಚ್ 19 ನಂತರ ತಾಪಮಾನದಲ್ಲಿ ಭಾರೀ ಏರಿಕೆಯಾಗುವುದಾಗಿ ಇಲಾಖೆ ಮಾಹಿತಿ ನೀಡಿದೆ.

ರಾಜ್ಯದಲ್ಲಿ ಮಾರ್ಚ್ 20ರಂದು ಕೆಲವೆಡೆ ಮಳೆ ಸಾಧ್ಯತೆ
ಮಾರ್ಚ್ 20ರಂದು ರಾಜ್ಯದ ದಕ್ಷಿಣ ಕನ್ನಡ, ಚಿಕ್ಕಬಳ್ಳಾಪುರ, ಹಾಸನ, ಕೊಡಗಿನಲ್ಲಿ ಮಳೆಯಾಗಲಿದೆ. ಉಡುಪಿ ಹಾಗೂ ಉತ್ತರ ಕನ್ನಡದಲ್ಲಿ ಮೋಡಕವಿದ ವಾತಾವರಣ ನಿರ್ಮಾಣವಾಗಲಿದ್ದು, ಸೆಖೆ ಹೆಚ್ಚಿರಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.












Click it and Unblock the Notifications