ತರಬೇತಿ ನಿರತ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ನಾಪತ್ತೆ
ನವದೆಹಲಿ, ಜುಲೈ 24: ತರಬೇತಿ ನಿರತ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ನಾಪತ್ತೆಯಾಗಿದ್ದಾರೆ. ಮಂಗಳವಾರ ಸಂಜೆಯ ತನಕ ನೀಡಿದ್ದ ಗಡುವಿನೊಳಗೆ ಅವರು ಮಸ್ಸೂರಿಯಲ್ಲಿ ತರಬೇತಿ ಕೇಂದ್ರಕ್ಕೆ ಹಾಜರಾಗಲು ಸಹ ವಿಫಲರಾಗಿದ್ದಾರೆ.
ಜುಲೈ 16ರಂದು ಮಸ್ಸೂರಿಯಲ್ಲಿರುವ ಲಾಲ್ ಬದ್ದೂರ್ ಶಾಸ್ತ್ರಿ ಅಕಾಡೆಮಿ ಆಫ್ ಅಡ್ಮಿನಿಸ್ಟ್ರೇಷನ್ನಲ್ಲಿ ಪೂಜಾ ಖೇಡ್ಕರ್ ತರಬೇತಿಗೆ ತಡೆ ನೀಡಲಾಗಿತ್ತು. ಆದರೆ ಬಳಿಕ ಜುಲೈ 23ರ ಸಂಜೆ ಹಾಜರಾಗಬೇಕು ಎಂದು ಸೂಚನೆ ನೀಡಲಾಗಿತ್ತು.

ಆದರೆ ಬುಧವಾರದ ಮಾಹಿತಿ ಪ್ರಕಾರ ಪೂಜಾ ಖೇಡ್ಕರ್ ನಾಪತ್ತೆಯಾಗಿದ್ದಾರೆ. ಸೂಚಿಸಿದ್ದ ಗಡುವಿನಲ್ಲಿಯೂ ತರಬೇತಿಗೆ ಹಾಜರಾಗಲು ಅವರು ವಿಫಲಾಗಿದ್ದಾರೆ. ಆದ್ದರಿಂದ ತರಬೇತಿ ಕೇಂದ್ರ ಮುಂದಿನ ಕ್ರಮವನ್ನು ಕೈಗೊಳ್ಳಲಿದೆ.
ಈಗಾಗಲೇ ಕೇಂದ್ರ ಲೋಕಸೇವಾ ಆಯೋಗ ತರಬೇತಿ ನಿರತ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ವಿರುದ್ಧ ಕ್ರಮ ಕೈಗೊಂಡಿದೆ. 2022ರ ಸಿವಿಲ್ ಸರ್ವೀಸಸ್ ಪರೀಕ್ಷೆಗೆ ಅವರ ಉಮೇದುವಾರಿಕೆಯನ್ನು ರದ್ದುಗೊಳಿಸುವಂತೆ ನೋಟಿಸ್ ಜಾರಿಗೊಳಿಸಿದೆ.
ವೈಯಕ್ತಿಕ ಕಾರಣ: ವೈಯಕ್ತಿಕ ಕಾರಣದಿಂದಾಗಿ ಮಸ್ಸೂರಿಯಲ್ಲಿರುವ ಲಾಲ್ ಬದ್ದೂರ್ ಶಾಸ್ತ್ರಿ ಅಕಾಡೆಮಿ ಆಫ್ ಅಡ್ಮಿನಿಸ್ಟ್ರೇಷನ್ಗೆ ಹಾಜರಾಗಲು ಸಾಧ್ಯವಾಗಿಲ್ಲ ಎಂದು ಪೂಜಾ ಖೇಡ್ಕರ್ ತರಬೇತಿ ಕೇಂದ್ರಕ್ಕೆ ಮಾಹಿತಿ ನೀಡಿದ್ದಾರೆ. ಆದರೆ ಕೇಂದ್ರ ಅವರ ವಿರುದ್ಧ ಕ್ರಮವನ್ನು ಕೈಗೊಳ್ಳಲಿದೆ.
ಪರೀಕ್ಷೆಗೆ ತಪ್ಪು ಮಾಹಿತಿ ನೀಡಿದ್ದು ಸೇರಿದಂತೆ ಹಲವು ಆರೋಪಗಳನ್ನು ಪೂಜಾ ಖೇಡ್ಕರ್ ಎದುರಿಸುತ್ತಿದ್ದಾರೆ. ಅಂಗವೈಕಲ್ಯ ಕೋಟಾವನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಎಂಬ ಆರೋಪದ ಕುರಿತು ಯುಪಿಎಸ್ಸಿ ಅವರ ವಿರುದ್ಧ ದೂರು ದಾಖಲು ಮಾಡಿದೆ.
ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ನೀಡಿದ್ದ ಅನುಮತಿ ಮಿತಿಯನ್ನು ಮೀರಿ ಹಲವು ಪ್ರಯತ್ನಗಳನ್ನು ಪಡೆದಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ. ಆದ್ದರಿಂದ ಅವರ ನೇಮಕಾತಿಯನ್ನು ಏಕೆ ರದ್ದು ಮಾಡಬಾರದು? ಎಂದು ಯುಪಿಎಸ್ಸಿ ಕಾರಣ ಕೇಳಿ ನೋಟಿಸ್ ನೀಡಿದೆ.
ತಂದೆ-ತಾಯಿ ಹೆಸರು ಬದಲಾವಣೆ, ಮೊಬೈಲ್ ನಂಬರ್ ಬದಲಾವಣೆ, ವಿಳಾಸ ಮತ್ತು ಭಾವಚಿತ್ರ ಬದಲಾವಣೆ ಮೂಲಕ ಗುರುತು ಮರೆಮಾಚಿ, ಆಯೋಗವನ್ನು ವಂಚಿಸಿದ್ದಾರೆ ಎಂದು ಸಹ ಆರೋಪಿಸಲಾಗಿದೆ. ಈ ಕುರಿತು ಈಗಾಗಲೇ ಆಂತರಿಕ ತನಿಖೆ ನಡೆಯುತ್ತಿದೆ.
ಪೂಜಾ ಖೇಡ್ಕರ್ ಐಷಾರಾಮಿ ನಿವಾಸದ ಪಕ್ಕದಲ್ಲಿ ನಿರ್ಮಾಣ ಮಾಡಲಾಗಿದ್ದ ಅವರಿಗೆ ಸೇರಿದ್ದ ಕಟ್ಟಡವನ್ನು ಪುಣೆ ಮಹಾನಗರ ಪಾಲಿಕೆ ಬುಧವಾರ ತೆರವು ಮಾಡಿತ್ತು. ಕಟ್ಟಡ ತೆರವುಗೊಳಿಸಲು ಮಹಾನಗರ ಪಾಲಿಕೆ ನೀಡಿದ್ದ ಗಡುವಿನಲ್ಲಿ ಅವರು ತೆರವು ಮಾಡಿರಲಿಲ್ಲ. ಆದ್ದರಿಂದ ಪಾಲಿಕೆ ಅಧಿಕಾರಿಗಳೇ ಅದನ್ನು ತೆರವು ಮಾಡಿ, ಅದಕ್ಕೆ ಆಗುವ ವೆಚ್ಚವನ್ನು ಅವರ ಕುಟುಂಬದಿಂದಲೇ ಪಡೆದಿದ್ದಾರೆ.
ಪೂಜಾ ಖೇಡ್ಕರ್ ತಾಯಿ ಮನೋರಮಾ ಖೇಡ್ಕರ್ ಸಹ ಪೊಲೀಸರಿಂದ ಬಂಧನಕ್ಕೊಳಗಾಗಿದ್ದಾರೆ. ಭೂ ವಿವಾದಕ್ಕೆ ಸಂಬಂಧಿಸಿದಂತೆ ಬಂದೂಕು ತೋರಿಸಿ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರನ್ನು ಬಂಧಿಸಲಾಗಿದೆ.
ತಮ್ಮ ವಿರುದ್ಧ ಪ್ರಕರಣ ದಾಖಲಾದ ಬಳಿಕ ಮನೋರಮಾ ಖೇಡ್ಕರ್ ತಲೆಮರೆಸಿಕೊಂಡಿದ್ದರು. ಅವರನ್ನು ಪೊಲೀಸರು ರಾಯಗಢ ಜಿಲ್ಲೆಯ ಮಹಾಡ್ನಲ್ಲಿರುವ ಲಾಡ್ಜ್ನಲ್ಲಿ ಪತ್ತೆ ಹಚ್ಚಿ, ಬಂಧಿಸಿದ್ದರು.












Click it and Unblock the Notifications