ಯುಪಿಎ, ಎನ್ ಡಿಎ ಪಾಲಿಗೆ ನಾನು ಫುಟ್ಬಾಲ್ ಆಗಿದ್ದೇನೆ: ಮಲ್ಯ ವಿಷಾದ
ದೊಡ್ಡ ಪ್ರಮಾಣದ ಹಣಕಾಸು ಅಕ್ರಮಗಳೆನ್ನಸಗಿ ದೇಶ ಬಿಟ್ಟು ಓಡುವವರ ವಿರುದ್ಧ ಕಠಿಣ ಕಾನೂನು ಘೋಷಿಸಿರುವ ಜೇಟ್ಲಿ ಹೇಳಿಕೆ ಬಂದ ಹಿನ್ನೆಲೆಯಲ್ಲಿ ಮಲ್ಯ ಬೇಸರ.
ನವದೆಹಲಿ, ಫೆಬ್ರವರಿ 3: ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಯುಪಿಎ ಹಾಗೂ ಹಾಲಿ ಅಧಿಕಾರ ನಡೆಸುತ್ತಿರುವ ಎನ್ ಡಿಎ ಸರ್ಕಾರಗಳ ಪಾಲಿಗೆ ನಾನೊಬ್ಬ ಫುಟ್ಬಾಲ್ ಆಗಿದ್ದೇನೆ ಎಂದು ಮದ್ಯದ ದೊರೆ ವಿಜಯ್ ಮಲ್ಯ ವಿಷಾದ ವ್ಯಕ್ತಪಡಿಸಿದ್ದಾರೆ.
ಟ್ವಿಟರ್ ಮೂಲಕ ತಮ್ಮ ಬೇಸರ ಹೊರಹಾಕಿರುವ ಅವರು, ನನ್ನನ್ನು ಆಟವಾಡಿಸುತ್ತಿರುವ ಸರ್ಕಾರಗಳು ಮಾಧ್ಯಮಗಳನ್ನೂ ಉಪಯೋಗಿಸಿಕೊಂಡು ತಮ್ಮ ಚಾರಿತ್ರ್ಯವಧೆಗೆ ಮುಂದಾದವು ಎಂದಿದ್ದಾರೆಂದು ಹೇಳಿದ್ದಾರೆ.

ಭಾರತೀಯ ಬ್ಯಾಂಕುಗಳಿಗೆ ಸಾವಿರಾರು ಕೋಟಿ ರು. ವಂಚಿಸಿ ವಿದೇಶಕ್ಕೆ ಪರಾರಿಯಾಗಿದ್ದಾರೆಂಬ ಆರೋಪ ಅವರ ಮೇಲಿದೆ. ಫೆಬ್ರವರಿ 1ರಂದು ಸಂಸತ್ತಿನಲ್ಲಿ 2017-18ರ ಆಯವ್ಯಯ ಮಂಡಿಸಿದ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿಯವರು, ಭಾರತೀಯ ಸರ್ಕಾರಕ್ಕೆ, ಬ್ಯಾಂಕುಗಳಿಗೆ ದೊಡ್ಡಮಟ್ಟದ ಮೋಸ ಮಾಡಿ ಪರಾರಿಯಾಗುವ ವ್ಯಕ್ತಿಗಳ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಕಾನೂನನ್ನು ಜಾರಿಗೆ ತರಲಾಗುವುದೆಂದು ಹೇಳಿದ್ದರು.
ಈ ಹಿನ್ನೆಲೆಯಲ್ಲಿ ಮಲ್ಯ ಅವರು ಟ್ವೀಟ್ ಮೂಲಕ ತಮ್ಮ ಅಸಹಾಯಕತೆಯನ್ನು ಬಿಂಬಿಸಿಕೊಳ್ಳಲೆತ್ನಿಸಿದ್ದಾರೆ. ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ಮೂಲಕ ಮಲ್ಯ ವಿರುದ್ಧ ತನಿಖೆ ನಡೆಸಲಾಗುತ್ತಿದ್ದು ಅವರ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿಗೊಳಿಸಲಾಗಿದೆ.
ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಮಲ್ಯ, ''ಸಿಬಿಐ ನನ್ನ ಮೇಲೆ ಹೊರಿಸಿರುವ ಆರೋಪಗಳನ್ನು ಕೇಳಿ ದಂಗಾದೆ. ನನ್ನ ವಿರುದ್ಧ ಇಂಥ ದೊಡ್ಡ ಮಟ್ಟದಲ್ಲಿ ಸುಳ್ಳು ಆರೋಪಗಳನ್ನು ಮಾಡಲಾಗುತ್ತಿದೆ. ಈ ಹಿರಿಯ ಅಧಿಕಾರಿಗಳಿಗೆ ಭಾರತದ ಅರ್ಥ ವ್ಯವಸ್ಥೆ, ವಾಣಿಜ್ಯ ವ್ಯವಹಾರಗಳ ಬಗ್ಗೆ ಏನು ಗೊತ್ತಿದೆ?'' ಎಂದು ಅವರು ತಿಳಿಸಿದರು.












Click it and Unblock the Notifications