ಜಯಾ ಮೇಲೆ ಲವ್ ಆಗಿತ್ತು: ನ್ಯಾ. ಕಾಟ್ಜು ಹನಿ ಹನಿ ಪ್ರೇಮ್ ಕಹಾನಿ
ಪ್ರಾಯದ ಹುಡುಗನಾಗಿದ್ದಾಗ ತಾವು ಜಯಲಲಿತಾ ಅವರನ್ನು ತುಂಬಾ ಇಷ್ಟಪಡುತ್ತಿದ್ದುದಾಗಿ ಸಾಮಾಜಿಕ ಜಾಲತಾಣವಾದ ಫೇಸ್ ಬುಕ್ ನಲ್ಲಿ ತಮ್ಮ ಹಳೆಯ ಪ್ರೇಮಕಥೆ ಹೇಳಿಕೊಂಡಿರುವ ನ್ಯಾ. ಮಾರ್ಕಂಡೇಯ ಕಾಟ್ಜು.
ನವದೆಹಲಿ, ಮಾರ್ಚ್ 28: ಲವ್ ಯಾರಿಗೆ ಆಗೋಲ್ಲ ಸ್ವಾಮಿ? ಎಲ್ಲರಿಗೂ ಆಗುತ್ತೆ. ಬಡವನಾದರೇನು, ಶ್ರೀಮಂತನಾದರೇನು, ಅಧಿಕಾರಿಯಾದರೇನು, ಅಲೆಮಾರಿಯಾದರೇನು...? ಎಲ್ಲರಿಗೂ ಹೃದಯ ಅಂತೂ ಇದ್ದೇ ಇರುತ್ತಲ್ವಾ? So, ಲವ್ ಆಗೇ ಆಗುತ್ತೆ. ಯಾಕೇಂದ್ರೆ ಇದು 'ಹೃದಯಗಳ ವಿಷಯ' ಅನ್ನೋದನ್ನು ನ್ಯಾ. ಮಾರ್ಕಂಡೇಯ ಕಾಟ್ಜು ತೋರಿಸಿಕೊಟ್ಟಿದ್ದಾರೆ.
ಯಾವುದೇ ಅಳುಕಿಲ್ಲದೆ ತಮ್ಮ ಮನದಾಳದ ಮಾತುಗಳನ್ನು ನೇರವಾಗಿ ಹೇಳುವ ಅಭ್ಯಾಸ ರೂಢಿಸಿಕೊಂಡಿರುವ ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಕಾಟ್ಜು, ತುಂಬಾ ವರ್ಷಗಳ ಹಿಂದೆ ತಮಗೆ ಜಯಲಲಿತಾ ಅವರ ಮೇಲೆ ಪ್ರೇಮಾಂಕುರವಾಗಿತ್ತೆಂದು ಹೇಳುವ ಮೂಲಕ ಒಂದು ಕುತೂಹಲಕಾರಿ 'ಒನ್ ವೇ ಲವ್' ವಿಚಾರವನ್ನು ತೆರೆದಿಟ್ಟಿದ್ದಾರೆ.
ಫೇಸ್ ಬುಕ್ ನಲ್ಲಿ ಈ ಬಗ್ಗೆ ಹೇಳಿಕೊಂಡಿರುವ ಅವರು, ''ನಾನು ಪ್ರಾಯದ ಹುಡುಗನಾಗಿದ್ದಾಗ, ಜಯಲಲಿತಾ ನನ್ನ ಕಣ್ಣಿಗೆ ಸುಂದರವಾಗಿ ಕಾಣುತ್ತಿದ್ದರು. ನಾನು 1946ರ ಸೆಪ್ಟಂಬರ್ ನಲ್ಲಿ ಹುಟ್ಟಿದ್ದು. ಅವರು, 1948ರ ಫೆಬ್ರವರಿಯಲ್ಲಿ ಹುಟ್ಟಿದ್ದು. ಹಾಗಾಗಿ, ನಾನು ಅವರಿಗಿಂತ ಎರಡು ವರ್ಷ ದೊಡ್ಡವನು. ಎಳೆ ವಯಸ್ಸಿನಲ್ಲಿದ್ದಾಗಲೇ ಅವರೆಂದರೆ ನನಗೆ ಬಲು ಇಷ್ಟವಾಗುತ್ತಿತ್ತು'' ಎಂದಿದ್ದಾರೆ.[ಚೆನ್ನೈನ ದುರ್ಗಾ ಪೀಠಂನಲ್ಲಿ ಬರ್ಗರ್, ಕೇಕ್ ಪ್ರಸಾದ]
''ಮನಸ್ಸಿನಲ್ಲಿ ಅದೆಷ್ಟೇ ಪ್ರೀತಿಯಿತ್ತು. ಅವರನ್ನು ನಾನು ಮೊದಲು ಭೇಟಿಯಾಗಿದ್ದು 2004ರಲ್ಲಿ. ಆಗ ನಾನು, ಮದ್ರಾಸ್ ಹೈಕೋರ್ಟ್ ನ ಮುಖ್ಯ ನ್ಯಾಯಾಧೀಶನಾಗಿ ನೇಮಕಗೊಂಡಿದ್ದೆ. ಆಗ ನಡೆದ ಪ್ರಮಾಣ ವಚನ ಕಾರ್ಯಕ್ರಮದಲ್ಲೇ ನಾನು ಮೊದಲು ಅವರನ್ನು ಭೇಟಿಯಾಗಿದ್ದು. ಆಗ ಅವರು, ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದರು'' ಎಂದು ತಮ್ಮ ಮೊದಲ ಭೇಟಿಯನ್ನು ಹೇಳಿಕೊಂಡಿದ್ದಾರೆ.['ಅಮ್ಮನ ಮಗ'ನ ದಾಖಲೆ ನಕಲಿ, ಆತನ ಜೈಲಿಗಟ್ಟಿ ಎಂದ ಹೈಕೋರ್ಟ್]
''ಆ ಹೊತ್ತಿಗಾಗಲೇ ವಯಸ್ಸಾಗಿತ್ತು. ಹಿಂದಿದ್ದಷ್ಟು ಭಾವುಕತೆ ಇಲ್ಲದಿದ್ದರೂ, ಯುವಕನಾಗಿದ್ದಾಗ ನಾನು ನಿಮ್ಮನ್ನು ಇಷ್ಟಪಡುತ್ತಿದ್ದೆ ಎಂದು ನಾನು ಒಮ್ಮೆಯೂ ಅವರ ಬಳಿ ಹೇಳಿಕೊಳ್ಳಲಾಗಲಿಲ್ಲ'' ಎಂದಿದ್ದಾರೆ ಅವರು.[ಉಪಚುನಾವಣೆ: ಮತಯಂತ್ರ ಸಾಮರ್ಥ್ಯ ಮೀರಿದ ಅಭ್ಯರ್ಥಿ ಸಂಖ್ಯೆ]
ಅವರು ಹೇಳುವುದೂ ಒಂದು ರೀತಿ ಸರಿಯೇ. ಅವರಿಬ್ಬರ ಕೆರಿಯರ್ ಬೇರೆ ಬೇರೆ ಆಗಿದ್ದರಿಂದ ಅವರಿಬ್ಬರೂ ಆಗಾಗ ಭೇಟಿಯಾಗಿ ಮಾತನಾಡುವ ಅವಕಾಶ ಸಿಕ್ಕಿರಲಿಕ್ಕಿಲ್ಲ. ಹಾಗಾನಾದರೂ, ಜಯಲಲಿತಾ ಅವರು ನ್ಯಾಯಾಂಗ ಕ್ಷೇತ್ರದಲ್ಲಿ ಇದ್ದಿದ್ದರೆ ಅಥವಾ ಕಾಟ್ಜು ಸಿನಿಮಾ ರಂಗದಲ್ಲಿದ್ದರೆ ಕನಿಷ್ಟ ಒಂದು ಸ್ನೇಹ ಸೇತುವೆಯಾದರೂ ಇಬ್ಬರ ನಡುವೆ ನಿರ್ಮಾಣವಾಗುತ್ತಿತ್ತೇನೋ. ಹಾಗೂ ಆಗಿಲ್ಲ.
ಇವರದ್ದು ಬೇರೆ ವೃತ್ತಿಜೀವನ, ಅವರದ್ದು ಬೇರೆ... 'ಮಾಮರವೆಲ್ಲೋ... ಕೋಗಿಲೆಯೆಲ್ಲೋ....' ಅನ್ನೋ ಹಾಗೆ.
ಆದರೂ, ''ಮೇಡಂ, ನೀವು ನನಗೆ ಸ್ವಾತಂತ್ರ್ಯ ಕೊಟ್ಟರೆ ನನ್ನ ಮನದಾಳದ ಮಾತುಗಳನ್ನು ನಿಮ್ಮ ಬಳಿ ಹೇಳಿಕೊಂಡು ಹೃದಯ ಹಗುರವಾಗಿಸಿಕೊಳ್ಳುತ್ತೇನೆ'' ಎಂದು ಕೇಳಬೇಕೆಂದು ತುಂಬಾ ಸಾರಿ ಅಂದ್ಕೊಂಡಿದ್ರಂತೆ. ಆದರೆ, ಅದು ಸಾಧ್ಯವಾಗಲಿಲ್ಲ ಎಂದು ಕೊಂಚ ಬೇಸರ ಪಟ್ಟುಕೊಂಡಿದ್ದಾರ ಕಾಟ್ಜು.
ಅವರ ಫೇಸ್ ಬುಕ್ ಪೋಸ್ಟ್ ಓದಿದರೆ, ಅಲ್ಲಿ ಕಾಟ್ಜು ಮಾತನಾಡುತ್ತಿಲ್ಲ. ಆದರೆ, ಒಬ್ಬ ವಿರಹ ಪ್ರೇಮಿ ತನ್ನೊಳಗೇ ಇದ್ದ ಕನಸೊಂದನ್ನು ಹಂಚಿಕೊಳ್ಳುತ್ತಿದ್ದಾನೆ ಎಂದೆನಿಸುತ್ತದೆ.
ಈ ಮಾತುಗಳ ಜತೆಗೇ ಜಯಲಲಿತಾ ಅವರ ಅಭಿನಯದ, ತಮಗೆ ಬಲು ಇಷ್ಟವಾದ 'ಪರ್ವಾಯ್ ಒಂಡ್ರೆ ಪೋತ್ತುಮೆ' ಚಿತ್ರದ 'ಯಾರ್ ನೀ' ಎಂಬ ಯುಗಳ ಗೀತೆಯ ಲಿಂಕ್ ಒಂದನ್ನು ಹಾಕಿದ್ದಾರೆ.
ಈ ಹಾಡನ್ನು ನೋಡಿದರೆ, ಜಯ ಅವರ ಚಲನಚಿತ್ರಗಳ ರೊಮ್ಯಾಂಟಿಕ್ ಗೀತೆಗಳನ್ನು ನೋಡಿಯೇ ಅವರು ಖುಷಿ ಪಡುತ್ತಿದ್ದರು ಎನ್ನಿಸುತ್ತದೆ. ರಣಧೀರ ಚಿತ್ರದ ಹಾಡಿನಲ್ಲಿದ್ದಂತೆ, ''ಏನೇ ಹೇಳು ಸಂಜು, ಅವಳ ಹಾಡು ಕೇಳಿ ಮನಸಿಗೆ ತಿಳಿಯದ ಮುಜುಗರ...'' ಎಂದಂದುಕೊಳ್ಳುತ್ತಿದ್ದರೋ ಏನೋ?!
ಅಂದಹಾಗೆ, ಜಯಲಲಿತಾ ಅವರು ಕಳೆದ ವರ್ಷಾಂತ್ಯದ ಹೊತ್ತಿಗೆ ಅನಾರೋಗ್ಯ ಪೀಡಿತರಾಗಿ ಆಸ್ಪತ್ರೆಗೆ ದಾಖಲಾಗಿದ್ದಾಗ ಇವರಿಗೂ ಕರುಳು.... ಕ್ಷಮಿಸಿ ಹೃದಯ ಚುರ್ ಅಂದಿರಬೇಕು. ಹಾಗಾಗಿಯೇ, ಆಗಲೇ ಅವರು ಫೇಸ್ ಬುಕ್ ನಲ್ಲಿ ತಾವು ಜಯ ಅವರನ್ನು ಭೇಟಿ ಮಾಡಿದ ಕೆಲ ಫೋಟೋಗಳನ್ನು ಹಾಕಿಕೊಂಡಿದ್ದರು. ಆದರೆ, ನೋಡಿದವರಿಗೆ ಅದು ಸಹಜವಾಗಿಯೇ ಕಾಣುತ್ತಿತ್ತೇ ಹೊರತು ಅವುಗಳ ಹಿಂದೆ ದೊಡ್ಡದೊಂಡು ಪ್ರೇಮ್ ಕಹಾನಿ ಇದೆ ಅಂತ ಅನ್ನಿಸಿರಲಿಲ್ಲ.
ಆದರೆ, ಒಂದಂತೂ ಸತ್ಯ. ಹುಡುಗರಿಗೆ ಒಂದು ಹುಡುಗಿಯ ಮುಂದೆ ನಿಂತು ನಾನು ನಿನ್ನನ್ನು ಪ್ರೀತಿಸುತ್ತೀನಿ ಎಂದು ಹೇಳೋದು ನಿಜಕ್ಕೂ ಕಷ್ಟದ ಕೆಲಸವೇ ಸರಿ. ಆದರೂ, ಹೇಗಾದರೂ ಧೈರ್ಯ ಮಾಡಿ ಆಗ ಹೇಳಿಕೊಳ್ಳಬಹುದಾಗಿತ್ತೇನೋ.... ಬಹುಶಃ ಕಾಟ್ಜು ಅವರು, ರಣಧೀರ ಚಿತ್ರದ ''ಪ್ರೀತಿ ಮಾಡಬಾರದು, ಮಾಡಿದರೆ ಜಯಕೆ ಹೆದರಬಾರದು'' ಹಾಡು ಕೇಳಿರಲಿಲ್ಲ ಎನ್ನಿಸುತ್ತದೆ.