ಚುನಾವಣೆಯಲ್ಲಿ ಸ್ಪರ್ಧಿಸುವುದು ನನ್ನ ಗುರಿಯಲ್ಲ : ಹಾರ್ದಿಕ್ ಪಟೇಲ್
ಅಹಮದಾಬಾದ್, ಅಕ್ಟೋಬರ್ 26: ಪಾಟೀದರ್ ಸಮುದಾಯದ ಪ್ರಬಲ ನಾಯಕ ಹಾರ್ದಿಕ್ ಪಟೇಲ್ ಅವರು ಮುಂಬರುವ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಯಾವ ಪಕ್ಷಕ್ಕೆ ಬೆಂಬಲ ನೀಡುತ್ತಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ, ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಹಾರ್ದಿಕ್ ಪಟೇಲ್ ನೀಡಿರುವ ಹೇಳಿಕೆ ಹುಬ್ಬೇರುವಂತೆ ಮಾಡಿದೆ.
ಮುಂಬರುವ ಚುನಾವಣೆಯಲ್ಲಿ ಎಲ್ಲಾ ಪಕ್ಷಗಳು ಒಗ್ಗೂಡಿ, ಬಿಜೆಪಿ ವಿರುದ್ಧ ಸೆಣೆಸಬೇಕಿದೆ, ಚುನಾವಣೆಯಲ್ಲಿ ಸ್ಪರ್ಧಿಸುವುದು ನನ್ನ ಆದ್ಯತೆಯಲ್ಲ. ಪಾಟೀದರ್ ಸಮುದಾಯಕ್ಕೆ ಸಮಾಜದಲ್ಲಿ ತಕ್ಕ ಮಾನ್ಯತೆ ಸಿಗಬೇಕಿದೆ. ಪ್ರಮುಖ ಕ್ಷೇತ್ರಗಳಲ್ಲಿ ಮೀಸಲಾತಿ ಸಿಗದೆ ಅನ್ಯಾಯಕ್ಕೊಳಗಾಗಿರುವ ಸಮುದಾಯಕ್ಕೆ ಮೊದಲು ನ್ಯಾಯ ದೊರಕಬೇಕಿದೆ ಎಂದಿದ್ದಾರೆ.
ಗುಜರಾತ್ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಭರತ್ ಸೋಲಂಕಿ ಅವರು ಅಧಿಕೃತವಾಗಿ ಕಾಂಗ್ರೆಸ್ ಜತೆ ಕೈಜೋಡಿಸುವಂತೆ ಹಾರ್ದಿಕ್ ಪಟೇಲ್ ಗೆ ಆಹ್ವಾನ ನೀಡಿದ್ದಾರೆ. ಕಾಂಗ್ರೆಸ್ ಮುಂದೆ ಬೇಡಿಕೆಗಳ ಪಟ್ಟಿ ಇಟ್ಟಿರುವ ಹಾರ್ದಿಕ್ ಅವರು, ಭರವಸೆ ಈಡೇರಿಸುವ ವಿಶ್ವಾಸ ಸಿಕ್ಕರೆ ಮಾತ್ರ ಕಾಂಗ್ರೆಸ್ ಪರ ನಿಲ್ಲುವುದಾಗಿ ಹೇಳಿದ್ದಾರೆ.
'ಇದು ಬಿಜೆಪಿ-ಕಾಂಗ್ರೆಸ್ ಗಾಗಿ ನಡೆಯುವ ಚುನಾವಣೆಯಲ್ಲ, 6 ಕೋಟಿ ಗುಜರಾತಿಗಳಿಗಾಗಿ ನಡೆಯುವ ಚುನಾವಣೆ ಎಂಬುದು ನೆನಪಿರಲಿ' ಎಂದು ಹಾರ್ದಿಕ್ ಅವರು ಹೇಳಿದ್ದಾರೆ. ಈ ನಡುವೆ ಬಿಜೆಪಿ ವಿರುದ್ಧ ಸಮರ ಸಾರಿರುವ ಮತ್ತಿಬ್ಬರು ಯುವ ನಾಯಕರ ಪೈಕಿ ಅಲ್ಪೇಶ್ ಠಾಕೂರ್ ಅವರು ಕಾಂಗ್ರೆಸ್ ಪರ ಬೆಂಬಲ ವ್ಯಕ್ತಪಡಿಸಿದ್ದಾರೆ. ಜಿಗ್ನೇಶ್ ಮೆವಾನಿ ಅವರು ಇನ್ನೂ ತಮ್ಮ ನಿಲುವು ಸ್ಪಷ್ಟಪಡಿಸಿಲ್ಲ.
ಗುಜರಾತಿನಲ್ಲಿ ಎರಡು ಹಂತಗಳಲ್ಲಿ ಮತದಾನ ನಡೆಯಲಿದ್ದು, ಡಿಸೆಂಬರ್ 9 ಹಾಗೂ 14ರಂದು ಮತದಾನ ಪ್ರಕ್ರಿಯೆ ನಡೆಯಲಿದೆ. ಡಿಸೆಂಬರ್ 18ರಂದು ಮತ ಎಣಿಕೆ ನಡೆಯಲಿದೆ.