ನನ್ನ ಮೇಲೆ ಕೆಸರು ಎರಚಿದ್ದಕ್ಕೆ ಆಭಾರಿ, ಕಮಲ ಅರಳೋದೆ ಕೆಸರಲ್ಲಿ: ಮೋದಿ
Recommended Video
ನನ್ನ ಮೇಲೆ ಕೆಸರು ಎರಚಿದ್ದಕ್ಕೆ ನಾನು ಆಭಾರಿಯಾಗಿದ್ದೇನೆ. ಏಕೆಂದರೆ ಕಮಲ ಅರಳುವುದೇ ಕೆಸರಿನಲ್ಲಿ. ಆದ್ದರಿಂದ ಇನ್ನಷ್ಟು ಕೆಸರು ಎರಚಿದರೂ ನಾನು ಬೇಸರ ಪಟ್ಟುಕೊಳ್ಳುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಹೇಳಿದರು.
ಗುಜರಾತ್ ನ ಭುಜ್ ನಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಗುಜರಾತ್ ನನ್ನ ಆತ್ಮ ಮತ್ತು ತಾಯಿ. ನಿಮ್ಮೊಂದಿಗಿನ ನನ್ನ ಸಂಬಂಧ ಎಂಥದ್ದು ಅಂದರೆ, ಇಲ್ಲಿ ಸಮಾನತೆ ಇದೆ. ನೀವು ನನ್ನನ್ನು ಸೋದರ ಅಂತ ಕರೆದಿದ್ದೀರಿ ಎಂದರು.
ಮನ್ ಕೀ ಬಾತ್ ನಲ್ಲಿ ಕರ್ನಾಟಕದ ವಿದ್ಯಾರ್ಥಿಗಳ ನೆನೆದ ಮೋದಿ
ಅಧಿಕಾರಿಗಳು ಕಛ್ ಪ್ರದೇಶಕ್ಕೆ ವರ್ಗಾವಣೆ ಆಗುವುದನ್ನು ಬಯಸಲ್ಲ. ಯಾಕೆಂದರೆ, ಇಲ್ಲಿನ ನೀರಿನ ಬಣ್ಣ ಕಪ್ಪು. ಇನ್ನು ಇಲ್ಲಿಗೆ ನರ್ಮದಾ ನದಿಯ ನೀರು ತರೋಣ ಅಂದರೆ ಕಾಂಗ್ರೆಸ್ ನವರು ಬಿಡುವುದಿಲ್ಲ. ಮೂವತ್ತು ವರ್ಷಗಳ ಹಿಂದೆಯೇ ಇಲ್ಲಿಗೆ ನರ್ಮದಾ ನದಿಯ ನೀರು ಬಂದಿದ್ದರೆ ಏನಾಗಿರುತ್ತಿತ್ತು? ಖಂಡಿತಾ ದೊಡ್ಡ ವ್ಯತ್ಯಾಸ ಆಗಿರುತ್ತಿತ್ತು ಎಂದು ಮೋದಿ ಹೇಳಿದರು.
ಕಾಂಗ್ರೆಸ್ ಪಕ್ಷ ಸರ್ದಾರ್ ಪಟೇಲ್ ರನ್ನು ಅವಮಾನಿಸಿತು. ಗುಜರಾತ್ ನ ಜನ ಕ್ಷಮಿಸಿದರು. ಆದರೆ ತಮ್ಮ ಪ್ರತಿಷ್ಠೆ ಮೇಲೆ ಆಗುವ ದಾಳಿಯನ್ನು ಇನ್ನು ಬಹಳ ಕಾಲ ಸಹಿಸುವುದಿಲ್ಲ ಎಂದರು.
ಭೂಕಂಪನದ ನಂತರ ಕಛ್ ನಲ್ಲಿ ಮಾಡಿದ ಕೆಲಸ
ದೊಡ್ಡ ಭೂಕಂಪನ ಆದಾಗ ಜನರು ನೋಡಿ, ಇವೆಲ್ಲ ಕಟ್ಟಡಗಳು ನೆಲಕ್ಕುರುಳಿದವು ಅಂತ ತೋರಿಸ್ತಾರೆ. ಆದರೆ ಕಛ್ ನ ಜನರು, ಇದು ಶಾಲೆ, ಈ ಆಸ್ಪತ್ರೆ, ಈ ಎಲ್ಲ ಕಟ್ಟಡಗಳು ಭೂಕಂಪನದ ನಂತರ ನಿರ್ಮಾಣವಾದವು ಎನ್ನುತ್ತಾರೆ. ಇಲ್ಲಿನ ಜನರ ಸಹಕಾರದಿಂದ ಇವೆಲ್ಲ ಸಾಧ್ಯವಾಯಿತು ಎಂದು ಹೇಳಿದರು.
ಕಛ್ ನಲ್ಲಿ ಭೂಕಂಪವಾದಾಗ ಜನರಂದಿಗೆ ಸೇರಿ ಕೆಲಸ ಮಾಡುವುದಕ್ಕೆ ಅಂತ ಅಟಲ್ ಬಿಹಾರಿ ವಾಜಪೇಯಿ ಅವರು ನನ್ನನ್ನು ಇಲ್ಲಿಗೆ ಕಳುಹಿಸಿದರು. ಅದರಿಂದ ನಾನು ಬಹಳ ಕಲಿತೆ ಎಂದರು.
ಅವರದೇ ಪಕ್ಷದವರನ್ನು ಕಾಂಗ್ರೆಸ್ ನೆನಪಿಸಿಕೊಳ್ಳಲ್ಲ
"ನೀವೇಕೆ ಭಾಷಣದಲ್ಲಿ ನೆಹರೂ ಅವರ ಪ್ರಸ್ತಾವ ಮಾಡಲ್ಲ ಅಂತ ಕೇಳ್ತಾರೆ. ನಾನು ಕಾಂಗ್ರೆಸ್ ನಾಯಕರನ್ನು ಕೇಳ್ತೀನಿ, ಅವರ ಪಕ್ಷದ ಅಧ್ಯಕ್ಷರ ಹೆಸರನ್ನು ಬರೆದು ಕೊಡಿ. ಆದರೆ ಸುಭಾಷ್ ಚಂದ್ರ ಭೋಸ್, ಕಾಮರಾಜ್ ಅಂಥವರನ್ನು ನೆನಪಿಸಿಕೊಳ್ಳಲ್ಲ. ಅವರದೇ ಪಕ್ಷದವರನ್ನು ಕಾಂಗ್ರೆಸ್ ನವರು ನೆನಪಿಸಿಕೊಳ್ಳಲ್ಲ ಅಂದ ಮೇಲೆ ಅವರಿಗೆ ಬೇರೆ ಏನು ಅರ್ಥವಾಗೋಕೆ ಸಾಧ್ಯ?" ಎಂದು ಕುಟುಕಿದರು.
ಎರಡು ಸರಕಾರದ ಮಧ್ಯೆ ಹೋಲಿಕೆ ಮಾಡಿ
ಭಾರತದ ಮುಂಬೈ ಹಾಗೂ ಉರಿ ಮೇಲೆ ದಾಳಿ ಆಯಿತು. ಎರಡೂ ದಾಳಿ ಸಂದರ್ಭದಲ್ಲಿ ದೇಶ ಹೇಗೆ ಪ್ರತಿಕ್ರಿಯೆ ನೀಡಿತು ಎಂದು ನೋಡಿದ್ದೀರಿ. ಇದೇ ಸಾಕು, ನಮ್ಮ ಹಾಗೂ ಅವರ ಸರಕಾರದ ಮಧ್ಯೆ ಇರುವ ವ್ಯತ್ಯಾಸವನ್ನು ವಿವರಿಸುತ್ತದೆ ಎಂದರು.
ದೇಶ ಕೊಳ್ಳೆ ಹೊಡೆಯಲು ಬಿಡಲ್ಲ
ಅಪನಗದೀಕರಣದ ಬಗ್ಗೆ ಕಾಂಗ್ರೆಸ್ ಗೆ ಅಸಮಾಧಾನವಿದೆ. ಆ ವಿಚಾರವಾಗಿ ನನ್ನ ಮೇಲೆ ಮುಗಿ ಬೀಳುತ್ತಿದ್ದಾರೆ. ಅವರಿಗೆ ಹೇಳಲು ಬಯಸ್ತೀನಿ: ಸರ್ದಾರ್ ಪಟೇಲ್ ಹುಟ್ಟಿದ ಭೂಮಿಯಲ್ಲಿ ಬೆಳೆದವನು ನಾನು. ಬಡವರಿಗೆ ಏನು ತಲುಪಬೇಕೋ ಅದನ್ನು ತಲುಪಿಸ್ತೀನಿ. ನಾವು ಈ ದೇಶವನ್ನು ಕೊಳ್ಳೆ ಹೊಡೆಯುವುದಕ್ಕೆ ಬಿಡುವುದಿಲ್ಲ ಎಂದರು.
ಚೀನಾ ರಾಯಭಾರಿಯ ಹೆಗಲು ತಬ್ಬಿಕೊಂಡರು
ಪಾಕಿಸ್ತಾನವು ನಮ್ಮ ಕಡೆಯ ಒಬ್ಬರನ್ನು ಅಪಹರಿಸಿಕೊಂಡು ಹೋದರೆ ಅದನ್ನು ನಮ್ಮ ವೈಫಲ್ಯ ಅಂತ ಬಿಂಬಿಸಲಾಗುತ್ತಿದೆ. ಆದರೆ ದೋಕ್ಲಾಂನಲ್ಲಿ ನಾವೇನು ಮಾಡಿದಿವಿ, ಅವರು ಹೋಗಿ ಚೀನಾ ರಾಯಭಾರಿಯ ಹೆಗಲು ತಬ್ಬಿಕೊಂಡರು. ಅಂದಹಾಗೆ ನಾವು ಇಲ್ಲಿರುವುದು ಅಧಿಕಾರಕ್ಕಾಗಿ ಅಲ್ಲ. ನಾವಿರುವುದು ನೂರಾ ಇಪ್ಪತ್ತೈದು ಕೋಟಿ ಭಾರತೀಯರಿಗಾಗಿ ಇದೀವಿ. ಭಾರತವನ್ನು ಹೊಸ ಎತ್ತರಕ್ಕೆ ಹಾಗೂ ವೈಭವಕ್ಕೆ ತೆಗೆದುಕೊಂಡು ಹೋಗಲು ಬಯಸುತ್ತೀವಿ ಎಂದರು.