ಹೈದ್ರಾಬಾದ್ ವಿವಿ: ರೋಹಿತ್ ವೇಮುಲ ಸ್ಮಾರಕ ಧ್ವಂಸ?
ಹೈದ್ರಾಬಾದ್, ಮಾರ್ಚ್, 31: ಹೈದ್ರಾಬಾದ್ ವಿವಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲಾ ನೆನಪಿನಲ್ಲಿ ನಿರ್ಮಿಸಿದ್ದ ಸ್ಮಾರಕವನ್ನು ಧ್ವಂಸ ಮಾಡಲು ವಿವಿ ಮುಂದಾಗಿದೆ.
ಈ ವರ್ಷದ ಜನವರಿ ತಿಂಗಳಲ್ಲಿ ಕಾಲೇಜು ಹಾಸ್ಟೆಲ್ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದ ಪಿಹೆಚ್ಡಿ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲಾಗೆ ಕಾಲೇಜಿನ ಕ್ಯಾಂಪಸ್ನಲ್ಲೇ ವಿದ್ಯಾರ್ಥಿಗಳು ಸ್ಮಾರಕ ನಿರ್ಮಿಸಿದ್ದರು. [ವೇಮುಲಾ ಆತ್ಮಹತ್ಯೆ: ತಾಯಿ ಮಗನನ್ನು ಕಳೆದುಕೊಂಡಿದ್ದಾಳೆ]
ಆದರೆ ಇತ್ತೀಚೆಗೆ ಹೈದ್ರಾಬಾದ್ ವಿಶ್ವವಿದ್ಯಾಲಯದ ಉಪ ಕುಲಪತಿ ಪಿ. ಅಪ್ಪಾರಾವ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕ್ಯಾಂಪಸ್ನೊಳಗಿರುವ ಅನಗತ್ಯ ವಸ್ತುಗಳನ್ನು ಧ್ವಂಸಗೊಳಿಸಲು ತೀರ್ಮಾನಿಸಲಾಗಿತ್ತು. ಈ ವೇಳೆ ಸ್ಮಾರಕದ ಮಾತು ಕೇಳಿಬಂದಿತ್ತು.
ಆದರೆ ವಿವಿಯ ತೀರ್ಮಾನವನ್ನು ವಿದ್ಯಾರ್ಥಿಗಳು ವಿರೋಧಿಸಿದ್ದು ಪ್ರತಿಭಟನೆ ಆರಂಭಿಸಿದ್ದಾರೆ. ವೇಮುಲ ಸ್ಮಾರಕವನ್ನು ಕೆಡವಿದರೆ ನಾವು ಸುಮ್ಮನಿರಲ್ಲ ಎಂದು ಅಂಬೇಡ್ಕರ್ ವಿದ್ಯಾರ್ಥಿ ಸಂಘಟನೆಯ ನಾಯಕ ಪ್ರಭಾಕರ್ ಎಚ್ಚರಿಕೆ ನೀಡಿದ್ದಾರೆ.
ರೋಹಿತ್ ವೇಮುಲಾ ಆತ್ಮಹತ್ಯೆ ಮಾಡಿಕೊಂಡ ನಂತರ ಕೇಂದ್ರ ಸಚಿವೆ ಸ್ಮೃತಿ ಇರಾನಿ ರಾಜೀನಾಮೆ ನೀಡಬೇಕು ಎಂಬ ಆಗ್ರಹ ಕೇಳಿಬಂದಿತ್ತು. ಅದಾದ ಮೇಲೆ ದೆಹಲಿಯಲ್ಲಿ ಜವಾಹರಲಾಲ್ ನೆಹರು ವಿವಿ ಗೊಂದಲ ಆರಂಭವಾಗಿತ್ತು. ವೇಮುಲಾ ಆತ್ಮಹತ್ಯೆಗೆ ನ್ಯಾಯ ಸಿಗುವಂತೆ ಆಗ್ರಹಿಸಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಹ ಹೈದರಾಬಾದ್ ಗೆ ಬಂದು ಪ್ರತಿಭಟನೆ ನಡೆಸಿದ್ದರು.