Nagarjuna: ತೆಲುಗು ನಟ ನಾಗಾರ್ಜುನ ಒಡೆತನದ ಕನ್ವೆನ್ಷನ್ ಹಾಲ್ ನೆಲಸಮ; ನಟ ಹೇಳಿದ್ದೇನು?
ತೆಲುಗು ಹಿರಿಯ ನಟ ಅಕ್ಕಿನೇನಿ ನಾಗಾರ್ಜುನ ಒಡೆತನದ ಐಷಾರಾಮಿ ಕನ್ವೆನ್ಷನ್ ಸೆಂಟರ್ನ ಹಲವಾರು ಭಾಗಗಳನ್ನು ಇಂದು ನೆಲಸಮ ಮಾಡಲಾಗಿದ್ದು, ಹೊಸ ವಿವಾದಕ್ಕೆ ಕಾರಣವಾಗಿದೆ. ಒತ್ತುವರಿ ಮಾಡಿಕೊಂಡಿರುವ ಜಾಗದಲ್ಲಿ ಕನ್ವೆನ್ಷನ್ ಹಾಲ್ ನಿರ್ಮಾಣ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಬಗ್ಗೆ ಮೊದಲೇ ನೋಟಿಸ್ ಕೊಡಲಾಗಿತ್ತು ಎಂದು ಅಧಿಕಾರಿಗಳು ವಾದಿಸಿದ್ದಾರೆ. ಆದರೆ ನಟ ನಾಗಾರ್ಜುನ ಮಾತ್ರ ಬುಲ್ಡೋಜರ್ ಕಾರ್ಯಾಚರಣೆಗೆ ವಿರೋಧ ವ್ಯಕ್ತಪಡಿಸಿದ್ದು, ಇದು ಕಾನೂನು ಬಾಹಿರ ಎಂದು ಆರೋಪಿಸಿದ್ದಾರೆ.
ಹೊಸದಾಗಿ ರಚನೆಯಾಗಿರುವ ಹೈದರಾಬಾದ್ ವಿಪತ್ತು ಪರಿಹಾರ ಮತ್ತು ಆಸ್ತಿ ಸಂರಕ್ಷಣಾ ಸಂಸ್ಥೆಯ (ಹೈಡ್ರಾ) ಅಧಿಕಾರಿಗಳ ನಿರ್ದೇಶನದ ಮೇರೆಗೆ ಕನ್ವೆನ್ಷನ್ ಹಾಲ್ನ ಕೆಲವು ಭಾಗಗಳನ್ನು ನೆಲಸಮ ಮಾಡಲಾಗಿದೆ. ತುಮ್ಮಿಡಿಕುಂಟಾ ಕೆರೆಯ ಫುಲ್ ಟ್ಯಾಂಕ್ ಲೆವೆಲ್ (ಎಫ್ಟಿಎಲ್) ಜಾಗವನ್ನು ಒತ್ತುವರಿ ಮಾಡಿಕೊಂಡು ಕನ್ವೆನ್ಷನ್ ಹಾಲ್ ನಿರ್ಮಾಣ ಮಾಡಿರುವ ಆರೋಪ ಕೇಳಿ ಬಂದಿದೆ. ಮಾದಾಪುರದ ಎನ್-ಕನ್ವೆನ್ಷನ್ ಸೆಂಟರ್ಗೆ ಅಧಿಕಾರಿಗಳು ನೋಟಿಸ್ ಕೊಟ್ಟಿದ್ದರು, ಇದು 10 ಎಕರೆ ವಿಸ್ತೀರ್ಣದಲ್ಲಿದ್ದು ಅದರಲ್ಲಿ 1.12 ಎಕರೆ ಜಾಗ ಕೆರೆಗೆ ಸೇರಿದ್ದು ಎಂದು ಅಧಿಕಾರಿಗಳು ಹೇಳಿದ್ದಾರೆ.

ಇನ್ನೂ 2 ಎಕರೆ ಕೆರೆಯ ಬಫರ್ ಜೋನ್ನಲ್ಲಿದೆ, ಅವರು ನಿಯಮಗಳನ್ನು ಸ್ಪಷ್ಟವಾಗಿ ಉಲ್ಲಂಘಿಸಿದ್ದಾರೆ. 3 ಎಕರೆಗೂ ಹೆಚ್ಚು ಜಾಗ ಅತಿಕ್ರಮಣ ಮಾಡಿದ್ದಾರೆ. ನಾವು ಒತ್ತುವರಿ ಮಾಡಿಕೊಂಡಿರುವ ಜಾಗದಲ್ಲಿ ನಿರ್ಮಾಣ ಮಾಡಿರುವ ಕನ್ವೆನ್ಷನ್ ಹಾಲ್ನ ಭಾಗಗಳನ್ನು ಮಾತ್ರ ತೆರವು ಮಾಡುತ್ತಿದ್ದೇವೆ ಎಂದಯ ಹೈದ್ರಾ ಕಮಿಷನರ್ ಎವಿ ರಂಗನಾಥ್ ಮಾಹಿತಿ ನೀಡಿದ್ದಾರೆ.
ಹೈದರಾಬಾದ್ನ ಕೆರೆ, ಕಟ್ಟೆಗಳು ಸೇರಿದಂತೆ ಜಲಮೂಲಗಳ ರಕ್ಷಣೆ ಮತ್ತು ಅತಿಕ್ರಮಣಗಳ ತೆರವು ಮಾಡಲು ಕಳೆದ ತಿಂಗಳು ಹೈಡ್ರಾ ಏಜೆನ್ಸಿಯನ್ನು ರಚಿಸಲಾಗಿದೆ. ಇದು ಏಜೆನ್ಸಿಯ ಎರಡನೇ ದೊಡ್ಡ ಅತಿಕ್ರಮ ತೆರವು ಕಾರ್ಯಾಚರಣೆಯಾಗಿದೆ. ಕಳೆದ ವಾರವಷ್ಟೇ ಹೈದರಾಬಾದ್ನ ಹೊರವಲಯದಲ್ಲಿರುವ ಶಿವರಾಂಪಲ್ಲಿ ಕೆರೆಯ ಬಫರ್ ವಲಯದಲ್ಲಿ ನಿರ್ಮಾಣವಾಗಿದ್ದ ಹಲವು ಬಂಗಲೆಗಳು, ಕಟ್ಟಡಗಳನ್ನು ನೆಲಸಮ ಮಾಡಲಾಗಿತ್ತು.
ಎನ್-ಕನ್ವೆನ್ಷನ್ ಸೆಂಟರ್ 2012 ರಲ್ಲಿ ನಿರ್ಮಾಣವಾದಾಗಿನಿಂದಲೂ ವಿವಾದದ ಕೇಂದ್ರ ಬಿಂದುವಾಗಿದೆ. ಹಿಂದಿನ ಸರ್ಕಾರ ಕೂಡ ಅತಿಕ್ರಮ ತೆರವು ಮಾಡುವಂತೆ ನೋಟಿಸ್ ಕೊಡಲಾಗಿತ್ತು, ಆದರೆ ಕಟ್ಟಡ ನೆಲಸಮ ಮಾಡಲು ಅವಕಾಶ ಕೊಟ್ಟಿರಲಿಲ್ಲ. ಇಲ್ಲಿ ಕೈಗಾರಿಕೋದ್ಯಮಿಗಳು, ಚಲನಚಿತ್ರ ತಾರೆಯರು, ರಾಜಕಾರಣಿಗಳ ಕುಟುಂಬದ ಮದುವೆಗಳು ನಡೆದಾಗ ಟ್ರಾಫಿಕ್ ಸಮಸ್ಯೆ ಜಾಸ್ತಿ ಇರುತ್ತಿತ್ತು.
ತೆರವು ಕಾರ್ಯಾಚರಣೆಗೆ ನಾಗಾರ್ಜುನ ವಿರೋಧ
ತೆರವು ಕಾರ್ಯಾಚರಣೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಟ ನಾಗಾರ್ಜುನ, ಹೈಡ್ರಾ ತಪ್ಪು ಮಾಹಿತಿಯಿಂದ ಇಂತಹ ಕ್ರಮ ತೆಗೆದುಕೊಂಡಿದೆ. ನ್ಯಾಯಾಲಯದ ತಡೆಯಾಜ್ಞೆ ಇದ್ದರು ಅಧಿಕಾರಿಗಳನ್ನು ಅದನ್ನು ಮೀರಿ ಕಟ್ಟಡ ಕೆಡವಿದ್ದಾರೆ ಎಂದು ಆರೋಪಿಸಿದ್ದಾರೆ.
ನಾವು ಯಾವುದೇ ಕಾನೂನು ಉಲ್ಲಂಘನೆ ಮಾಡಿಲ್ಲ. ಇದು ನಾವು ಖರೀದಿ ಮಾಡಿದ ಜಾಗವಾಗಿದ್ದು, ಕೆರೆಯ ಜಾಗವನ್ನು ಒತ್ತುವರಿ ಮಾಡಿಕೊಂಡಿಲ್ಲ ಎಂದು ಹೇಳಿದ್ದಾರೆ. ಆದರೆ 3 ಎಕರೆಗೂ ಹೆಚ್ಚು ಕೆರೆ ಜಮೀನು ಒತ್ತುವರಿ ಮಾಡಿಕೊಂಡಿರುವ ಬಗ್ಗೆ ಕಂದಾಯ ಇಲಾಖೆ ಬಳಿ ದಾಖಲೆಗಳು ಇವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇದು ಪಟ್ಟಾ ಭೂಮಿಯಾಗಿದ್ದು, ಒಂದು ಇಂಚು ಕೂಡ ಕೆರೆಯ ಜಾಗವನ್ನು ಒತ್ತುವರಿ ಮಾಡಿಕೊಂಡಿಲ್ಲ, ಖಾಸಗಿ ಜಾಗದಲ್ಲಿ ನಿರ್ಮಾಣ ಮಾಡಿರುವ ಕಟ್ಟಡ ಕೆಡವಲು ಈ ಹಿಂದೆ ನೋಟಿಸ್ ಕೊಟ್ಟಿದ್ದಕ್ಕೆ ಕೋರ್ಟ್ ತಡೆಯಾಜ್ಞೆ ಕೊಟ್ಟಿದೆ. ತಪ್ಪು ಮಾಹಿತಿ ಆಧಾರದ ಮೇಳೆ ಕಟ್ಟಡವನ್ನು ನೆಲಸಮ ಮಾಡಲಾಗಿದೆ ಎಂದು ನಾಗಾರ್ಜುನ ಹೇಳಿದ್ದಾರೆ. ಇದಕ್ಕೆ ಹೈಡ್ರಾ ಪ್ರತಿಕ್ರಿಯೆ ನೀಡಿದ್ದು, ಕಟ್ಟಡ ನಿರ್ಮಾಣಕ್ಕೆ ಯಾವುದೇ ಅನುಮತಿ ಪಡೆದಿಲ್ಲ ಎಂದು ಹೇಳಿದೆ.
ಸದ್ಯ ತೆರವು ಕಾರ್ಯಾಚರಣೆಗೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ಕೊಟ್ಟಿದ್ದು, ತೆರವು ಕಾರ್ಯಾಚರಣೆಯನ್ನು ನಿಲ್ಲಿಸಲಾಗಿದೆ.












Click it and Unblock the Notifications