Wayanad Landslide: ವಯನಾಡ್ ಮಹಾ ಭೂಕುಸಿತಕ್ಕೆ ಕಾರಣವೇನು?
ಭಾರಿ ಮಳೆಗೆ ಕೇರಳದಲ್ಲಿ ಮಹಾದುರಂತವೇ ನಡೆದಿದೆ. ವಯನಾಡಿನ ಮೆಪ್ಪಾಡಿ, ಮುಂಡಕ್ಕೈ, ಚೂರಲ್ ಪ್ರದೇಶದಲ್ಲಿ ಸಂಭವಿಸಿದ ಭೀಕರ ಭೂಕುಸಿತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 84ಕ್ಕೆ ಏರಿಕೆಯಾಗಿದೆ. ಕರ್ನಾಟಕದ ಶಿರೂರು ಗುಡ್ಡ ಕುಸಿತ ದುರಂತ ಘಟನೆ ಬೆನ್ನಲ್ಲೇ ಕೇರಳದಲ್ಲಿ ಭೀಕರ ದುರಂತ ಸಂಭವಿಸಿದೆ.
ಸದ್ಯ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕ ಶುರುವಾಗಿದೆ. ಸವಾಲಿನ ಪರಿಸ್ಥಿತಿಗಳ ನಡುವೆಯೂ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಈ ಭೀಕರ ದುರಂತಕ್ಕೆ ಕಾರಣವೇನು ಎನ್ನುವ ಪ್ರಶ್ನೆ ಶುರುವಾಗಿದ್ದು, ಕೊನೆಗೆ ಬಂದು ನಿಲ್ಲುವುದು ಅವೈಜ್ಞಾನಿಕ ಅಭಿವೃದ್ಧಿ ಎನ್ನುವ ಹುಚ್ಚು ಕುದುರೆಯ ಬಳಿಗೆ!

ಗುಡ್ಡಗಾಡಿನಲ್ಲಿ ಮನೆ ನಿರ್ಮಾಣ, ರಸ್ತೆ ನಿರ್ಮಾಣ, ಕೃಷಿ ಚಟುವಟಿಕೆ ಮತ್ತು ಕಾಡಿನ ನಾಶ ಮತ್ತು ಅವೈಜ್ಞಾನಿಕ ಅಭಿವೃದ್ಧಿಯೇ ಇಂದಿನ ಮಹಾ ದುರಂತಕ್ಕೆ ಕಾರಣ ಎಂದು ತಜ್ಞರು ಹೇಳಿದ್ದಾರೆ. ಶಿರೂರು ಗುಡ್ಡ ಕುಸಿಯಲು ಕೂಡ ಅವೈಜ್ಞಾನಿಕ ಅಭಿವೃದ್ಧಿ ಕಾರಣವಾಗಿತ್ತು. ಪರಿಸರ ತಜ್ಞರ ವಿರೋಧದ ನಡುವೆಯೂ ಗುಡ್ಡವನ್ನು ಬಗೆದು ರಸ್ತೆ ನಿರ್ಮಾಣ ಮಾಡಿದ್ದು, ದುರಂತಕ್ಕೆ ಕಾರಣ ಎನ್ನಲಾಗಿದೆ.
ಸ್ಮಶಾಣವಾದ ಹಳ್ಳಿಗಳು!
ಮಂಗಳವಾರ ಮುಂಜಾನೆ ಭೂಕುಸಿತವು ಚೂರಲ್ಮಲಾ ಗ್ರಾಮವನ್ನು ನಾಮಾವಶೇಷ ಮಾಡಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್), ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್ಡಿಆರ್ಎಫ್), ಅಗ್ನಿಶಾಮಕ ದಳ ಮತ್ತು ಪೊಲೀಸರು ಸತತವಾಗಿ ಪರಿಹಾರ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ. ಮೃತಪಟ್ಟವರ ಸಂಖ್ಯೆ 84ಕ್ಕೆ ಹೆಚ್ಚಾಗಿದ್ದು, ಇನ್ನೂ ಹಲವರು ಸಿಕ್ಕಿಬಿದ್ದಿದ್ದಾರೆ ಎನ್ನಲಾಗಿದೆ.
ಸೇತುವೆಗಳ ಕೆಳಗೆ, ನದಿ ದಡ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಶವಗಳು ಪತ್ತೆಯಾಗಿವೆ. ಗ್ಯಾಸ್ ಸಿಲಿಂಡರ್, ಗೃಹಪಯೋಗಿ ವಸ್ತುಗಳು ಸೇರಿದಂತೆ ನೀರಿನಲ್ಲಿ ತೇಲಿಹೋಗುತ್ತವೆ.
ನೀರಾವರಿ, ಅರಣ್ಯನಾಶ, ಉತ್ಖನನ ಮತ್ತು ನೀರಿನ ಸೋರಿಕೆಯಂತಹ ಮಾನವ ಚಟುವಟಿಕೆಗಳು ಇಳಿಜಾರುಗಳನ್ನು ಅಸ್ಥಿರಗೊಳಿಸಿದ್ದು ಭೂಕುಸಿತದ ಅಪಾಯವನ್ನು ಹೆಚ್ಚಿಸಿದೆ. ವಯನಾಡಿನಲ್ಲಿ ನಡೆಯುತ್ತಿರುವ ಅರಣ್ಯನಾಶ ಮತ್ತು ನಿರ್ಮಾಣ ಚಟುವಟಿಕೆಗಳು ಈ ಪ್ರದೇಶದ ಇಳಿಜಾರುಗಳನ್ನು ದುರ್ಬಲಗೊಳಿಸಿದ್ದು ಇಂತಹ ಭೂಕುಸಿತಕ್ಕೆ ಕಾರಣವಾಗಿದೆ.
ಇರುವಝಿಂಜಿ ನದಿಯ ಮೇಲಿನ ಏಕೈಕ ಸೇತುವೆ ಕುಸಿದಿದೆ ಮತ್ತು ಹೆಲಿಕಾಪ್ಟರ್ಗಳು ಅಪಾಯಕಾರಿ ಭೂಪ್ರದೇಶದಲ್ಲಿ ಸಂತ್ರಸ್ತರನ್ನು ಹುಡಗಾಡಲು ಹೆಣಗಾಡುತ್ತಿವೆ. ನಿರಂತರವಾಗಿ ಮಳೆಯಾಗುತ್ತಿರುವ ಕಾರಣ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ. ವೆಲ್ಲಿಂಗ್ಟನ್, ಕೂನೂರಿನ ಭಾರತೀಯ ಸೇನೆಯ ತಂಡವನ್ನು ರಕ್ಷಣಾ ಕಾರ್ಯಾಚರಣೆಯಲ್ಲಿ ಸಹಾಯ ಮಾಡಲು ಮತ್ತು ತಾತ್ಕಾಲಿಕ ಸೇತುವೆಯನ್ನು ನಿರ್ಮಿಸಲು ನಿಯೋಜಿಸಲಾಗಿದೆ.












Click it and Unblock the Notifications