ಪುಷ್ಕರ್ ಧಾಮಿ ಸಿಎಂ ಆದದ್ದು ಹೇಗೆ?: ಉತ್ತರಾಖಂಡ ಬಿಜೆಪಿ ರಾಜಕೀಯದ ಹಿಂದಿದೆ ವಿಜ್ಞಾನ
ಡೆಹ್ರಾಡೂನ್, ಜು.04: ಉತ್ತರಾಖಂಡದಲ್ಲಿ ತೀರಥ್ ಸಿಂಗ್ ರಾವತ್ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ಬಳಿಕ ಈಗ ಪುಷ್ಕರ್ ಸಿಂಗ್ ಧಾಮಿ ಉತ್ತರಾಖಂಡದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಬಿಜೆಪಿಯು ರಾಜ್ಯದಲ್ಲಿ ಖತೀಮ್ ಕ್ಷೇತ್ರದ ಹಾಲಿ ಶಾಸಕರಾಗಿರುವ ಯುವ ಠಾಕೂರ್ ಮುಖವನ್ನು ಸಿಎಂ ಆಗಿ ಆಯ್ಕೆ ಮಾಡಿದೆ. ರಾಜ್ಯದ ಕೊನೆಯ ಇಬ್ಬರು ಮುಖ್ಯಮಂತ್ರಿಗಳು ಗರ್ವಾಲ್ ಪ್ರದೇಶದವರಾಗಿದ್ದಾರೆ.
ರಾವತ್ ರಾಜೀನಾಮೆ ಸಲ್ಲಿಸಬೇಕಾದ ಪರಿಸ್ಥಿತಿ ಬಂದ ಸಂದರ್ಭದಲ್ಲಿ ಈ ಹುದ್ದೆಗೆ ಪುಷ್ಕರ್ ಸಿಂಗ್ ಧಾಮಿ ಆಯ್ಕೆಯಾಗಿರುವುದು ಅಚ್ಚರಿಯೂ ಹೌದು. ಖತೀಮ್ ಕ್ಷೇತ್ರದಲ್ಲಿ ಎರಡು ಬಾರಿ ಶಾಸಕರಾಗಿದ್ದ ಧಾಮಿ, ತ್ರಿವೇಂದ್ರ ಸಿಂಗ್ ರಾವತ್ ಆಗಲಿ ತೀರಥ್ ಸಿಂಗ್ ರಾವತ್ ಆಗಲಿ, ಇಬ್ಬರ ಸರ್ಕಾರದಲ್ಲೂ ಸಚಿವರಾಗಿ ಇರಲಿಲ್ಲ. ಹಾಗಿರುವಾಗಲೂ ಈಗ ಮುಖ್ಯಮಂತ್ರಿ ಆಗಿರುವುದು ಅನೇಕ ಹಿರಿಯ ನಾಯಕರ ಹುಬ್ಬೇರಿಸಿದೆ.
ಆದರೆ ಗರ್ವಾಲ್ನ ಬ್ರಾಹ್ಮಣ ನಾಯಕ ಮದನ್ ಕೌಶಿಕ್, ಪಕ್ಷದ ಮುಖ್ಯಸ್ಥನಾಗಿ ಆಯ್ಕೆ ಮಾಡಿದ ಬಳಿಕ ಉತ್ತರಾಖಂಡದಲ್ಲಿ ಪಕ್ಷದೊಳಗಿನ ಪ್ರಾದೇಶಿಕ ಮತ್ತು ಜಾತಿ ಪ್ರಾತಿನಿಧ್ಯವನ್ನು ಸಮತೋಲನಗೊಳಿಸಲ ಈಗ ಪುಷ್ಕರ್ ಸಿಂಗ್ ಧಾಮಿ ಆಯ್ಕೆ ಮಾಡಲಾಗಿದೆ ಎಂಬುದು ಪಕ್ಷದ ಮುಖಂಡರ ವಾದ.

ಮುಖ್ಯಮಂತ್ರಿ ಹುದ್ದೆಗೆ ತಮ್ಮ ಹೆಸರನ್ನು ಘೋಷಿಸಿದ ನಂತರ ಮಾಧ್ಯಮಗಳಿಗೆ ನೀಡಿದ ಮೊದಲ ಹೇಳಿಕೆಯಲ್ಲಿ, "ನಾನು ಪಿಥೋರಗಢದಲ್ಲಿ ಜನಿಸಿದ ಪಕ್ಷದ ಸರಳ ಕಾರ್ಯಕರ್ತ, ಸೈನಿಕನ ಮಗ," ಎಂದು ಹೇಳಿದ್ದಾರೆ. ಇಂದು ಸಂಜೆ 5 ಗಂಟೆಗೆ ಪುಷ್ಕರ್ ಪ್ರಮಾಣವಚನ ಸ್ವೀಕರಿಸಲಿದ್ದಾರೆ. 45 ವರ್ಷದ ಧಾಮಿ ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಯುವ ಮೋರ್ಚಾ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರಿಂದ ಯುವ ಮತದಾರರಿಗೆ ಬಿಜೆಪಿಗೆ ಮತ ಹಾಕಲು ಇನ್ನಷ್ಟೂ ಪ್ರೇರಣೆಯಾಗಬಹುದು ಎಂಬುದು ಬಿಜೆಪಿಯ ಒಂದು ಕಾರ್ಯತಂತ್ರ.
70 ಸ್ಥಾನಗಳ ಪೈಕಿ 57 ಸ್ಥಾನಗಳನ್ನು ತನ್ನದಾಗಿಸಿಕೊಂಡು ಬಿಜೆಪಿ ಮುನ್ನಡೆದ 2017 ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕುಮಾವೂನ್ನ 29 ಸ್ಥಾನಗಳಲ್ಲಿ 23 ಸ್ಥಾನಗಳನ್ನು ಪಕ್ಷ ಗೆದ್ದಿದೆ. ಮಾಜಿ ಸಿಎಂ ಹರೀಶ್ ಸಿಂಗ್ ರಾವತ್ ಸೇರಿದಂತೆ ರಾಜ್ಯದ ಹೆಚ್ಚಿನ ಹಿರಿಯ ಕಾಂಗ್ರೆಸ್ ನಾಯಕರು ಈ ಕ್ಷೇತ್ರವನ್ನೇ ಪ್ರತಿನಿಧಿಸಿದ್ದಾರೆ. ಈಗ ಬಿಜೆಪಿಯು ಕಾಂಗ್ರೆಸ್ ವಿರುದ್ದ ಧಾಮಿಯನ್ನು ಎದುರಾಳಿಯಾಗಿಸಲು ಭವಿಷ್ಯದ ಚಿಂತನೆ ಈಗಲೇ ನಡೆಸಿದೆ. ಕುಮಾವೂನ್ನ ಮತ್ತೊಬ್ಬ ಉನ್ನತ ಕಾಂಗ್ರೆಸ್ ಮುಖಂಡ ಇಂದಿರಾ ಹೃದಯೇಶ್ ಕಳೆದ ತಿಂಗಳು ನಿಧನ ಹೊಂದಿದ್ದಾರೆ.
ಕುಮಾವೂನ್ನ ಬಾಗೇಶ್ವರ ಮೂಲದವರಾದ ಮಾಜಿ ಉತ್ತರಾಖಂಡದ ಸಿಎಂ ಭಗತ್ ಸಿಂಗ್ ಕೊಶಿಯಾರಿಯ ಶಿಷ್ಯ ಧಾಮಿ. ಇಬ್ಬರೂ ಆರ್ಎಸ್ಎಸ್ನೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾರೆ. ಕೊಶಿಯಾರಿ ಪ್ರಸ್ತುತ ಮಹಾರಾಷ್ಟ್ರ ರಾಜ್ಯಪಾಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಳೆದ ನಾಲ್ಕು ವರ್ಷಗಳಲ್ಲಿ ಬಿಜೆಪಿಯು ತನ್ನ ಉತ್ತರಾಖಂಡದಲ್ಲಿ ಮೂವರನ್ನು ಮುಖ್ಯಮಂತ್ರಿಯನ್ನಾಗಿಸಿದೆ. ಇನ್ನು ಈ ನಡುವೆ ನೂತನ ಮುಖ್ಯಮಂತ್ರಿ ಧಾಮಿ, ಪಕ್ಷವು ಮತ್ತೆ ಅಧಿಕಾರಕ್ಕೆ ಬರುವ ಅವಕಾಶವಾಗಿ ಚುನಾವಣೆಯತ್ತ ಚಿತ್ತನೆಟ್ಟಿದ್ದೇನೆ ಎಂದು ಹೇಳಿದ್ದಾರೆ.
(ಒನ್ಇಂಡಿಯಾ)












Click it and Unblock the Notifications