ವಿಶ್ವಸಂಸ್ಥೆಯಲ್ಲಿ ಕಾಶ್ಮೀರ ವಿಷಯ ಪ್ರಸ್ತಾಪಿಸಿದ ಪಾಕಿಸ್ತಾನಕ್ಕೆ ಭಾರತದ ತಿರುಗೇಟು
ನ್ಯೂಯಾರ್ಕ್, ನವೆಂಬರ್ 17: ಪಾಕಿಸ್ತಾನ ನಡೆಸುತ್ತಿರುವ ಗಡಿಯಾಚೆಗಿನ ಭಯೋತ್ಪಾದನೆಯ ವಿರುದ್ಧ ಭಾರತವು ದೃಢ ಮತ್ತು ನಿರ್ಣಾಯಕ ಕ್ರಮವನ್ನು ತೆಗೆದುಕೊಳ್ಳುತ್ತಲೇ ಇರುತ್ತದೆ ಎಂದು ಭಾರತೀಯ ಪ್ರತಿನಿಧಿ ಕಾಜಲ್ ಭಟ್ ವಿಶ್ವಸಂಸ್ಥೆಯಲ್ಲಿ ಮಂಗಳವಾರ ತಿಳಿಸಿದ್ದಾರೆ.
ಭಯೋತ್ಪಾದನೆ, ಹಗೆತನ ಮತ್ತು ಹಿಂಸಾಚಾರ ಮುಕ್ತ ವಾತಾವರಣ ನಿರ್ಮಾಣದ ಕುರಿತು ಅರ್ಥಪೂರ್ಣ ಸಂವಾದಕ್ಕೆ ಅನುಕೂಲಕರವಾಗುವ ವಾತಾವರಣವನ್ನು ಸೃಷ್ಟಿಸುವ ಜವಾಬ್ದಾರಿಯನ್ನು ಭಾರತ ವಹಿಸಿಕೊಳ್ಳುತ್ತದೆ ಎಂದು ತಿಳಿಸಿದರು.
ಆತ್ಮಾಹುತಿ ದಾಳಿಕೋರರ ಕುಟುಂಬಕ್ಕೆ ನಿವೇಶನದ ಜೊತೆ ನಗದು ಬಹುಮಾನ!
"ಭಾರತವು ಪಾಕಿಸ್ತಾನ ಸೇರಿದಂತೆ ಎಲ್ಲಾ ದೇಶಗಳೊಂದಿಗೆ ಸಾಮಾನ್ಯ ನೆರೆಹೊರೆಯ ಸಂಬಂಧವನ್ನು ಬಯಸುತ್ತದೆ. ಸಿಮ್ಲಾ ಒಪ್ಪಂದ ಮತ್ತು ಲಾಹೋರ್ ಘೋಷಣೆಗೆ ಅನುಗುಣವಾಗಿ ಯಾವುದೇ ಸಮಸ್ಯೆಗಳಿದ್ದರೆ ಅದನ್ನು ದ್ವಿಪಕ್ಷೀಯ ಮತ್ತು ಶಾಂತಿಯುತವಾಗಿ ಪರಿಹರಿಸಲು ಬದ್ಧವಾಗಿದೆ" ಎಂದು ಯುಎನ್ಗೆ ಭಾರತದ ಖಾಯಂ ಮಿಷನ್ನ ಕೌನ್ಸಿಲರ್ ಕಾಜಲ್ ಭಟ್ ಹೇಳಿದ್ದಾರೆ.
ಪಾಕಿಸ್ತಾನಕ್ಕೆ ಭಾರತದ ತಿರುಗೇಟು:
ಯಾವುದೇ ರೀತಿ ಭಯೋತ್ಪಾದನೆ, ಹಗೆತನ ಮತ್ತು ಹಿಂಸೆಯಿಲ್ಲದ ವಾತಾವರಣದಲ್ಲಿ ಮಾತ್ರ ಅರ್ಥಪೂರ್ಣ ಸಂವಾದವನ್ನು ನಡೆಸಲು ಸಾಧ್ಯವಾಗುತ್ತದೆ. ಅಂತಹ ಅನುಕೂಲಕರ ವಾತಾವರಣ ನಿರ್ಮಿಸುವ ಜವಾಬ್ದಾರಿ ಪಾಕಿಸ್ತಾನದ ಮೇಲಿದೆ. ಅಲ್ಲಿಯವರೆಗೆ ಭಾರತವು ಗಡಿಯಾಚೆಗಿನ ಭಯೋತ್ಪಾದನೆಗೆ ಪ್ರತ್ಯುತ್ತರ ನೀಡಲು ದೃಢವಾದ ಮತ್ತು ನಿರ್ಣಾಯಕ ಕ್ರಮಗಳನ್ನು ತೆಗೆದುಕೊಳ್ಳುವುದನ್ನು ಮುಂದುವರಿಸುತ್ತದೆ ಎನ್ನುವ ಮೂಲಕ ಪಾಕಿಸ್ತಾನಕ್ಕೆ ತಿರುಗೇಟು ನೀಡಿದ್ದಾರೆ. 15 ರಾಷ್ಟ್ರಗಳ ಕೌನ್ಸಿಲ್ನಲ್ಲಿ ಇಸ್ಲಾಮಾಬಾದ್ ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸಿದ ನಂತರ ಭಾರತವು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಪಾಕಿಸ್ತಾನಕ್ಕೆ ಈ ರೀತಿ ತಿರುಗೇಟು ನೀಡಿದೆ.
ಪಾಕಿಸ್ತಾನದ ಕುತಂತ್ರ ಇದೇ ಮೊದಲೇನಲ್ಲ:
"ನನ್ನ ದೇಶದ ವಿರುದ್ಧ ಸುಳ್ಳು ಮತ್ತು ದುರುದ್ದೇಶಪೂರಿತ ಪ್ರಚಾರಕ್ಕಾಗಿ ಪಾಕಿಸ್ತಾನದ ಪ್ರತಿನಿಧಿಯು ವಿಶ್ವಸಂಸ್ಥೆ ಒದಗಿಸಿದ ವೇದಿಕೆಗಳನ್ನು ದುರುಪಯೋಗಪಡಿಸಿಕೊಂಡಿರುವುದು ಇದೇ ಮೊದಲೇನೂ ಅಲ್ಲ. ಸಾಮಾನ್ಯ ಜನರ ಬದುಕನ್ನು ಕದಡುವ ಭಯೋತ್ಪಾದಕರು ಸ್ವತಂತ್ರರಾಗಿ ಬದುಕುವುದಕ್ಕೆ ಅವಕಾಶ ನೀಡಿರುವ ಪಾಕಿಸ್ತಾನವು, ತನ್ನ ದೇಶದಲ್ಲಿರುವ ಇತರ ದುಃಖಿತ ಪ್ರಜೆಗಳ ಬದುಕನ್ನು ತೋರಿಸಿಕೊಳ್ಳುತ್ತಾ ವಿಶ್ವದ ಗಮನವನ್ನು ಬೇರೆ ಕಡೆ ತಿರುಗಿಸುವ ಹುನ್ನಾರ ನಡೆಸಿದೆ.
ಪಾಕಿಸ್ತಾನ ಪ್ರಶ್ನೆಗೆ ಭಾರತದ ಪ್ರತಿಕ್ರಿಯೆ:
ಪಾಕಿಸ್ತಾನ ರಾಯಭಾರಿ ಮುನೀರ್ ಅಕ್ರಂ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ "ಜಮ್ಮು ಮತ್ತು ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸಿದರು. ತದನಂತರ ''ರಾಜತಾಂತ್ರಿಕತೆಯ ಪ್ರತಿರೋಧದ ಮೂಲಕ ಅಂತರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯ ನಿರ್ವಹಣೆ'' ಕುರಿತು ಬಹಿರಂಗ ಚರ್ಚೆಯ ವೇಳೆ ಭಟ್ ಈ ಪ್ರತಿಕ್ರಿಯೆ ನೀಡಿದರು.
"ಪಾಕಿಸ್ತಾನವು ಭಯೋತ್ಪಾದಕರಿಗೆ ಆಶ್ರಯ ನೀಡುವ, ಸಹಾಯ ಮಾಡುವ ಮತ್ತು ಸಕ್ರಿಯವಾಗಿ ಬೆಂಬಲಿಸುವ "ಸ್ಥಾಪಿತ ಇತಿಹಾಸ ಮತ್ತು ನೀತಿ"ಯನ್ನು ಹೊಂದಿದೆ ಎಂಬುದು ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳಿಗೆ ತಿಳಿದಿದೆ. ಇದು ರಾಜ್ಯ ನೀತಿಯ ವಿಷಯವಾಗಿ ಭಯೋತ್ಪಾದಕರನ್ನು ಬಹಿರಂಗವಾಗಿ ಬೆಂಬಲಿಸುವ, ತರಬೇತಿ ನೀಡುವ, ಹಣಕಾಸು ಒದಗಿಸುವ ಮತ್ತು ಶಸ್ತ್ರಾಸ್ತ್ರ ನೀಡುವ ದೇಶವಾಗಿ ಗುರುತಿಸಿಕೊಂಡಿದೆ. ಇದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಿಂದ ನಿಷೇಧಿಸಲ್ಪಟ್ಟ ಅತಿ ಹೆಚ್ಚು ಭಯೋತ್ಪಾದಕರಿಗೆ ಆತಿಥ್ಯ ಮತ್ತು ಆಶ್ರಯ ನೀಡಿರುವುದರಲ್ಲಿ ಹೊಸ ದಾಖಲೆಯನ್ನು ಹೊಂದಿದೆ," ಎಂದು ಕಾಜಲ್ ಭಟ್ ಹೇಳಿದ್ದಾರೆ.
ಜಮ್ಮು ಕಾಶ್ಮೀರ, ಲಡಾಖ್ ಭಾರತದ ಅವಿಭಾಜ್ಯ ಅಂಗ:
ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ನ ಭಾಗವು ಸಂಪೂರ್ಣ ಕೇಂದ್ರಾಡಳಿತ ಪ್ರದೇಶಗಳಾಗಿದ್ದು, ಯಾವಾಗಲೂ ಭಾರತದ ಅವಿಭಾಜ್ಯ ಮತ್ತು ಬೇರ್ಪಡಿಸಲಾಗದ ಭಾಗವಾಗಿದೆ. "ಪಾಕಿಸ್ತಾನವು ಅಕ್ರಮವಾಗಿ ವಶಪಡಿಸಿಕೊಂಡಿರುವ ಪ್ರದೇಶಗಳನ್ನೂ ಇದು ಒಳಗೊಂಡಿದೆ," ಎಂದು ಭಾರತೀಯ ಪ್ರತಿನಿಧಿ ಕಾಜಲ್ ಭಟ್ ಹೇಳಿದ್ದಾರೆ. ಇದರ ಮಧ್ಯೆ ಪಾಕಿಸ್ತಾನವು ಅಕ್ರಮವಾಗಿ ವಶಪಡಿಸಿಕೊಂಡಿರುವ ಎಲ್ಲಾ ಪ್ರದೇಶಗಳನ್ನು ತಕ್ಷಣವೇ ಖಾಲಿ ಮಾಡುವಂತೆ ಭಾರತವು ಎಚ್ಚರಿಕೆ ನೀಡಿದೆ.