ಸುಪ್ರೀಂಕೋರ್ಟ್ನಲ್ಲಿ ಲಸಿಕೆ ನೀತಿ ಸಮರ್ಥಿಸಿಕೊಂಡ ಕೇಂದ್ರ ಸರ್ಕಾರ
ನವದೆಹಲಿ, ಮೇ 10: ಭಾರತದಲ್ಲಿ ಕೊರೊನಾವೈರಸ್ ಲಸಿಕೆಯ ಬೆಲೆ ನಿಗದಿ, ವಿತರಣೆ ವೇಗ ಮತ್ತು ಲಸಿಕೆ ಕೊರತೆ ನಡುವೆಯೂ ಕೇಂದ್ರ ಸರ್ಕಾರವು ತನ್ನ ಕೊವಿಡ್-19 ಲಸಿಕೆ ವಿತರಣೆ ನೀತಿಯನ್ನು ಸಮರ್ಥಿಸಿಕೊಂಡಿದೆ.
ಕೇಂದ್ರ ಸರ್ಕಾರ ಭಾನುವಾರ ತಡರಾತ್ರಿ ಸುಪ್ರೀಂ ಕೋರ್ಟ್ಗೆ ಸಲ್ಲಿಸಿದ ಅಫಿಡವಿಟ್ನಲ್ಲಿ ತನ್ನ ಲಸಿಕೆ ವಿತರಣೆ ನೀತಿಯನ್ನು ಸಮರ್ಥಿಸಿಕೊಂಡಿದೆ. ನ್ಯಾಯಾಂಗ ಹಸ್ತಕ್ಷೇಪದ ವಿರುದ್ಧ ಅಫಿಡವಿಟ್ನಲ್ಲಿ ಉಲ್ಲೇಖಿಸಲಾಗಿದ್ದು, "ಅತಿಯಾದ, ಉತ್ತಮವಾದರೂ, ಹಸ್ತಕ್ಷೇಪವು ಅನಿರೀಕ್ಷಿತ ಮತ್ತು ಅನಪೇಕ್ಷಿತ ಪರಿಣಾಮಗಳಿಗೆ ಕಾರಣವಾಗಬಹುದು. ನ್ಯಾಯಾಲಯವು "ತಜ್ಞರ ಸಲಹೆಯ ಆಧಾರದ ಮೇಲೆ ಸಾರ್ವಜನಿಕ ಹಿತದೃಷ್ಟಿಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕೆಂದು ಮನವಿ ಮಾಡಿಕೊಂಡಿದೆ.
ಕೊವಿಡ್ 19: ಮೇ 09ರಂದು ವಿಶ್ವದಲ್ಲಿ ಎಷ್ಟು ಮಂದಿ ಚೇತರಿಕೆ?
ಕೊರೊನಾವೈರಸ್ ಲಸಿಕೆಯ ಬೆಲೆಯು ವಾಸ್ತವದಲ್ಲಿ ಸಮಂಜಸವಾಗಿಲ್ಲ. ಆದರೆ ಕೇಂದ್ರ ಸರ್ಕಾರವು ಎರಡು ಕಂಪನಿಗಳ ಜೊತೆಗೆ ನಡೆಸಿದ ಮನವೊಲಿಕೆಯಿಂದಾಗಿ ದೇಶಾದ್ಯಂತ ಲಸಿಕೆಗೆ ಏಕರೂಪ ಬೆಲೆಗೆ ಸಿಗುತ್ತಿದೆ ಎಂದು ಅಫಿಡವಿಟ್ನಲ್ಲಿ ಹೇಳಿದೆ.
18-44 ವಯೋಮಾನದವರಿಗೆ ಕೊವಿಡ್-19 ಲಸಿಕೆ
ಕೊವಿಡ್-19 ಲಸಿಕೆ ಕೊರತೆಯಿಂದಾಗಿ ಮೇ ಮೊದಲ ವಾರದಲ್ಲಿ ವಿಳಂಬವಾಗಿದ್ದ ಯೋಜನೆ ಆರಂಭಿಸುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ. ಆಯಾ ರಾಜ್ಯಗಳ ಯೋಜನೆಗಳಿಗೆ ಸಂಬಂಧಿಸಿದಂತೆ 18ರಿಂದ 44 ವರ್ಷದವರಿಗೆ ಉಚಿತವಾಗಿ ಕೊರೊನಾವೈರಸ್ ಲಸಿಕೆ ನೀಡಲಾಗುವುದು ಎಂದು ಕೋರ್ಟ್ ಹೇಳಿದೆ.
ಸಮಾನತೆ ಬಗ್ಗೆ ಕೇಂದ್ರ ಸರ್ಕಾರಕ್ಕೆ ಕೋರ್ಟ್ ಪಾಠ
ಕಳೆದ ವಾರವಷ್ಟೇ ಕೊರೊನಾವೈರಸ್ ಲಸಿಕೆಗಳ ಬೆಲೆಯನ್ನು ಮರುಪರಿಶೀಲನೆ ನಡೆಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿತ್ತು. ಲಸಿಕೆ ವಿತರಣೆಯಲ್ಲಿ ತಾರತಮ್ಯ ಮಾಡುವುದು ಸಂವಿಧಾನದ 14ನೇ ವಿಧಿ ಸಮಾನತೆ ಮತ್ತು 21ನೇ ವಿಧಿಯ ಪ್ರಕಾರ ರಕ್ಷಣೆ ಮತ್ತು ವೈಯಕ್ತಿಯ ಸ್ವಾತಂತ್ರ್ಯವನ್ನು ಗಣನೆಗೆ ತೆಗೆದುಕೊಳ್ಳುವಂತೆ ಸೂಚನೆ ನೀಡಿತ್ತು.
ಕೇಂದ್ರ, ರಾಜ್ಯ, ಖಾಸಗಿ ಆಸ್ಪತ್ರೆಗಳಿಗೆ ಪ್ರತ್ಯೇಕ ಬೆಲೆ
ಭಾರತದಲ್ಲಿ ಸೆರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾದ ಕೊವಿಶೀಲ್ಡ್ ಲಸಿಕೆಯನ್ನು ಕೇಂದ್ರ, ರಾಜ್ಯ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಪ್ರತ್ಯೇಕ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರ ಒಂದು ಡೋಸ್ ಕೊವಿಶೀಲ್ಡ್ ಲಸಿಕೆಗೆ 150 ರೂಪಾಯಿ, ರಾಜ್ಯ ಸರ್ಕಾರಕ್ಕೆ 300 ರೂಪಾಯಿ ಹಾಗೂ ಖಾಸಗಿ ಆಸ್ಪತ್ರೆಗಳಿಗೆ 600 ರೂಪಾಯಿ ಬೆಲೆ ನಿಗದಿಗೊಳಿಸಲಾಗಿದೆ. ಭಾರತ್ ಬಯೋಟೆಕ್ ಸಂಸ್ಥೆಯ ಕೊವ್ಯಾಕ್ಸಿನ್ ಲಸಿಕೆ ಕೂಡಾ ಇದರಿಂದ ಹೊರತಾಗಿಲ್ಲ. ಕೇಂದ್ರ ಸರ್ಕಾರಕ್ಕೆ ಕೊವಿಶೀಲ್ಡ್ ಲಸಿಕೆಗೆ 150 ರೂಪಾಯಿ ನೀಡಿದರೆ, ಅದೇ ಒಂದು ಡೋಸ್ ಲಸಿಕೆಗೆ ರಾಜ್ಯ ಸರ್ಕಾರ 400 ರೂಪಾಯಿ ಹಾಗೂ ಖಾಸಗಿ ಆಸ್ಪತ್ರೆಗಳು 1200 ರೂಪಾಯಿ ಪಾವತಿಸಬೇಕಿದೆ.
ಒಂದು ರಾಷ್ಟ್ರ, ಒಂದೇ ಬೆಲೆ ಎಂದು ವ್ಯಂಗ್ಯ
ಕೊರೊನಾವೈರಸ್ ಲಸಿಕೆ ಬೆಲೆಯಲ್ಲಿನ ವ್ಯತ್ಯಾಸವು ರಾಜಕೀಯ ವಲಯದಲ್ಲೂ ಬಿರುಗಾಳಿ ಎಬ್ಬಿಸಿದೆ. ಕೇಂದ್ರ ಸರ್ಕಾರದವು ಔಷಧಿಯಲ್ಲೂ ಲಾಭ ಗಳಿಕೆಗೆ ಮುಂದಾಗುತ್ತಿದೆ ಎಂದು ಟೀಕಿಸಿರುವ ಕಾಂಗ್ರೆಸ್, ಒಂದು ರಾಷ್ಟ್ರ ಒಂದೇ ಬೆಲೆ ಬಗ್ಗೆ ವ್ಯಂಗ್ಯ ಮಾಡಿದೆ. ಪ್ರಸ್ತುತ ರಾಜ್ಯಗಳಿಗೆ ಕೊವಿಡ್-19 ಲಸಿಕೆ ಸಿಗುತ್ತವೆಯೋ ಇಲ್ಲವೋ ಎನ್ನುವುದು ಆಯಾ ರಾಜ್ಯ ಸರ್ಕಾರಗಳ ನಡೆ ಮೇಲೆ ನಿರ್ಧಾರವಾಗುತ್ತದೆ. ಇದರಿಂದ ಸಾರ್ವಜನಿಕರ ಹಿತವನ್ನು ಹೊಂದಿರುವ ಲಸಿಕೆ ವಿಷಯದಲ್ಲೂ ಅಸಮಾನತೆ ಸೃಷ್ಟಿಯಾಗುತ್ತದೆ ಎಂಬ ಟೀಕೆ ಕೇಳಿ ಬಂದಿತ್ತು.