'ಕುದುರೆ ಕಾಲು ಮುರಿದಿದ್ರೆ, ನನ್ನ ಕಾಲು ಮುರಿಯಲಿ'
ನವದೆಹಲಿ, ಮಾರ್ಚ್ 16: ಉತ್ತರಾಖಂಡದ ಬಿಜೆಪಿ ಮುಖಂಡ ಗಣೇಶ್ ಜೋಶಿ ಅವರು ಕುದುರೆ ಕಾಲು ಮುರಿದ ಪ್ರಸಂಗ ಈಗಾಗಲೇ ಓದುಗರಿಗೆ ತಿಳಿದಿರಬಹುದು. ಈಗ ಈ ಬಗ್ಗೆ ಜೋಶಿ ಅವರು 'ಕಾಲಿಗೆ ಕಾಲ್' ಕೊಡಲು ಸಿದ್ಧ ಎಂದು ಘೋಷಿಸಿದ್ದಾರೆ.
ಗಣೇಶ್ ಜೋಶಿ ಅವರು ಏಕಲವ್ಯನ ರೀತಿಯಲ್ಲಿ 'ಬೆರಳ್ ಗೆ ಕೊರಳ್' ನೀಡುವ ಪೈಕಿಯಲ್ಲದಿದ್ದರೂ, ತಮ್ಮ ವಾದ ಮಂಡನೆಯಲ್ಲಿ ರಾಮ್ ಜೇಠ್ಮಲಾನಿ ಅವರನ್ನೇ ಮೀರಿಸಬಲ್ಲರು.

ಎಲ್ಲರ ಕಣ್ಣಿಗೆ ಕಾಣುವಂತೆ ನಡುರಸ್ತೆಯಲ್ಲಿ ಕುದುರೆ ಕಾಲು ಮುರಿದ ಘಟನೆಯ ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿತ್ತು. ಆದರೆ, 'ನಾನು ಯಾವ ತಪ್ಪು ಮಾಡಿಲ್ಲ, ನಾನು ತಪ್ಪಿತಸ್ಥ ಎಂದು ಸಾಬೀತಾದರೆ ನನ್ನ ಕಾಲನ್ನು ಕಡಿದು ಹಾಕಿ' ಎಂದು ಜೋಶಿ ಅವರು ಬುಧವಾರ ಘೋಷಣೆ ಹಾಕಿದ್ದಾರೆ.
ಘಟನೆ ಸಮಯದಲ್ಲಿ ನಾನು ಅಲ್ಲಿ ಇರಲೇ ಇಲ್ಲ. ನನ್ನ ವಿರುದ್ಧದ ಸಂಚು ರೂಪಿಸಲಾಗಿದೆ. ನಾನು ಲಾಠಿ ಪ್ರಹಾರ ಮಾಡಿದ್ದು ನೆಲಕ್ಕೆ, ನನ್ನ ಕಾರ್ಯಕರ್ತರನ್ನು ಉಳಿಸಿಕೊಳ್ಳಲು ಮಾತ್ರ. ಆದರೆ, ಕುದುರೆ ಚಿಕಿತ್ಸೆಗೆ ನಾನು ಹಣ ನೀಡುತ್ತೇನೆ ಎಂದು ಜೋಶಿ ಹೇಳಿದ್ದಾರೆ.
ಶಕ್ತಿಮಾನ್ ಹೆಸರಿನ ಕುದುರೆ ಕಾಲನ್ನು ಉಳಿಸಲು ಪ್ರಯತ್ನ ನಡೆಸಲಾಗಿದೆ. ಪೊಲೀಸ್ ಇಲಾಖೆಯಲ್ಲಿ ಕಳೆದ 10 ವರ್ಷದಿಂದ ಶಕ್ತಿಮಾನ್ ಕರ್ತವ್ಯ ನಿರ್ವಹಿಸುತ್ತಿದೆ. ತಮಿಳುನಾಡಿನಿಂದ ಪಶುವೈದ್ಯರನ್ನು ಕರೆಸಲಾಗಿದೆ. ಕೇಂದ್ರ ಸಚಿವೆ ಮೇನಕಾ ಗಾಂಧಿ ಅವರು ಪ್ರತಿಕ್ರಿಯಿಸಿ, ತಕ್ಷಣವೇ ಗಣೇಶ್ ಜೋಶಿ ಅವರನ್ನು ಪಕ್ಷದಿಂದ ಉಚ್ಚಾಟಿಸುವಂತೆ ಆಗ್ರಹಿಸಿದ್ದಾರೆ.
ಸದ್ಯಕ್ಕೆ ಪ್ರಾಣಿಗಳಿಗೆ ಹಿಂಸೆ ನೀಡಿದ ಆರೋಪದ ಮೇಲೆ ಗಣೇಶ್ ಜೋಶಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. (ಒನ್ಇಂಡಿಯಾ ಸುದ್ದಿ)












Click it and Unblock the Notifications