ರಾಹ್ ರಹೀಮ್ ದತ್ತು ಪುತ್ರಿ ಹನಿಪ್ರೀತ್ ಬಂಧನಕ್ಕೆ ಹೈ ಅಲರ್ಟ್
ಚಂಡೀಗಢ, ಸೆಪ್ಟೆಂಬರ್ 11: ಲುಕ್ ಔಟ್ ನೋಟಿಸ್ ಜಾರಿಯಾದರೂ ಪೊಲೀಸರ ಕೈಗೆ ಸಿಗದೆ ತಪ್ಪಿಸಿಕೊಂಡಿರುವ ದೇರಾ ಸಚ್ಚಾ ಸೌದಾದ ಗುರ್ಮಿತ್ ರಾಮ್ ರಹೀಮ್ ಸಿಂಗ್ ದತ್ತು ಪುತ್ರಿ ಹನಿಪ್ರೀತ್ ಇನ್ಸಾನ್ ಬಂಧನಕ್ಕೆ ಪೊಲೀಸರು ಮತ್ತಷ್ಟು ಬಲೆ ಬೀಸಿದ್ದಾರೆ.
ಹನಿಪ್ರೀತ್ 'ಬೇಗೆ'ಯಲ್ಲಿ ಪತ್ನಿಯನ್ನೇ ಮರೆತ ರಾಮ್ ರಹೀಂ!
ಯಾವುದೇ ಕಾರಣಕ್ಕೂ ಹನಿಪ್ರೀತ್ ಭಾರತ ಬಿಟ್ಟು ತೊಲಗದಂತೆ ಎಚ್ಚರಿಕೆ ವಹಿಸಿರುವ ಪೊಲೀಸರು ನೇಪಾಳ-ಭಾರತ ಗಡಿಯಲ್ಲಿ ಬರುವ ಪೊಲೀಸ್ ಠಾಣೆಗಳಲ್ಲಿ ಆಕೆಯ ಪೋಸ್ಟರ್ ಗಳನ್ನು ಅಂಟಿಸಿದ್ದಾರೆ.
ನೇಪಾಳ ಗಡಿಯಲ್ಲಿ ಬರುವ ಕಪಿಲವಸ್ತು, ಶೊಹ್ರತ್ ಘರ್, ದೆಬರುವಾ ಠಾಣೆಗಳ ಮೇಲೆ ಆಕೆಯ ಫೋಟೋ ಇರುವ ಪೋಸ್ಟರ್ ಗಳನನ್ನು ಅಂಟಿಸಲಾಗಿದೆ. ನೇಪಾಳಕ್ಕೆ ಹನಿಪ್ರೀತ್ ಪರಾರಿಯಾಗುವ ಸಂಭವವಿದೆ ಎಂಬ ಗುಪ್ತಚರ ಮಾಹಿತಿಗಳ ಮೇರೆಗೆ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.
ಇನ್ನು ಗುಪ್ತಚರ ಇಲಾಖೆಗೂ ಆಕೆಯ ಮೇಲೆ ಕಣ್ಣಿಡುವಂತೆ ಸೂಚನೆ ನೀಡಲಾಗಿದೆ. ಇದಲ್ಲದೆ ಉತ್ತರ ಪ್ರದೇಶದಲ್ಲಿ ಬರುವ ನೇಪಾಳ ಗಡಿಯಲ್ಲಿಯೂ ಆಕೆಯ ಬಗ್ಗೆ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಲಾಗಿದೆ.
ರಾಮ್ ರಹೀಮ್ ಸಿಂಗ್ ಬಂಧನವಾದ ನಂತರ ಆತನನ್ನು ಅಪಹರಣ ಮಾಡಲು ರೂಪಿಸಿದ ಯೋಜನೆಯಲ್ಲಿ ಹನಿಪ್ರೀತ್ ಕೈವಾಡವೂ ಇತ್ತು ಎಂಬ ಆರೋಪದ ಮೇಲೆ ಆಕೆಯ ಮೇಲೆ ಪ್ರಕರಣ ದಾಖಲಿಲಾಗಿದೆ. ಇದೇ ಸೆಪ್ಟೆಂಬರ್ 1ರಂದು ಹನಿಪ್ರೀತ್ ವಿರುದ್ಧ ಹರ್ಯಾಣ ಪೊಲೀಸು ಲುಕ್ ಔಟ್ ನೊಟೀಸ್ ಜಾರಿ ಮಾಡಿದ್ದರು. ಆದರೆ ಆಕೆ ಇನ್ನೂ ಪೊಲೀಸರ ಕೈಗೆ ಸಿಕ್ಕಿ ಬಿದ್ದಿಲ್ಲ.