ಜಮ್ಮು ಕಾಶ್ಮೀರ ಗೃಹ ಇಲಾಖೆ ಅಲ್ಲಿನ ರಾಜ್ಯಪಾಲರ ಹೆಗಲಿಗೆ?
ಜಮ್ಮು ಕಾಶ್ಮೀರದ ಗೃಹ ಇಲಾಖೆ ಸದ್ಯದಲ್ಲೇ ರಾಜ್ಯಪಾಲರ ಹೆಗಲಿಗೆ. ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರ. ಕಾಶ್ಮೀರದ ಹಿಂಸಾಚಾರ ಹತ್ತಿಕ್ಕಲು ಕೇಂದ್ರ ಸರ್ಕಾರದ ಹೊಸ ಕ್ರಮ.
ಶ್ರೀನಗರ, ಜುಲೈ 4: ಜಮ್ಮು ಕಾಶ್ಮೀರದಲ್ಲಿನ ಹಿಂಸಾಚಾರ ವಾತಾವರಣವನ್ನು ಶತಾಯಗತಾಯ ಹತ್ತಿಕ್ಕಲು ನಿರ್ಧರಿಸಿರುವ ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಹೊಸ ಕ್ರಮಗಳನ್ನು ಅಳವಡಿಸಲು ಮುಂದಾಗಿದೆ.
ಇದೇ ಕಾರಣಕ್ಕಾಗಿ, ಜಮ್ಮು ಕಾಶ್ಮೀರದಲ್ಲಿ ಸಮರ್ಥ ರಾಜ್ಯಪಾಲರನ್ನು ನೇಮಿಸಬೇಕೆಂದು ಆಲೋಚಿಸಿರುವ ಕೇಂದ್ರ ಸರ್ಕಾರ, ಈಗಿರುವ ರಾಜ್ಯಪಾಲ ಎನ್ಎನ್ ವೊಹ್ರಾ ಬದಲಿಗೆ ಕೇಂದ್ರ ಗೃಹ ಸಚಿವಾಲಯದ ಕಾರ್ಯದರ್ಶಿ ರಾಜೀವ್ ಮಹರ್ಷಿಯವರನ್ನು ನೇಮಿಸಲು ಮುಂದಾಗಿದೆ.
ಇದರ ಮೊದಲ ಹೆಜ್ಜೆಯಾಗಿ, ಜಮ್ಮು ಕಾಶ್ಮೀರದ ಗೃಹ ಇಲಾಖೆಯನ್ನು ಅಲ್ಲಿನ ರಾಜ್ಯಪಾಲರಿಗೆ ಹಸ್ತಾಂತರಿಸಲು ನಿರ್ಧರಿಸಲಾಗಿದೆ. ಈಗ ಸದ್ಯಕ್ಕೆ ಆ ಗೃಹ ಇಲಾಖೆಯನ್ನು ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ನೋಡಿಕೊಳ್ಳುತ್ತಿದ್ದಾರೆ.
ಆದರೆ, ಅಲ್ಲಿನ ಮತದಾರರ ವಿರುದ್ಧ ಹೋಗಲೊಲ್ಲದ ಮುಫ್ತಿ ಅವರು, ಕೆಲವಾರು ಪ್ರಮುಖ ಹಾಗೂ ಸೂಕ್ಷ್ಮ ಸಂದರ್ಭಗಳಲ್ಲಿ ದಿಟ್ಟ ನಿರ್ಧಾರಗಳನ್ನು ಕೈಗೊಳ್ಳುವಲ್ಲಿ ಹಿಂದೇಟು ಹಾಕುತ್ತಿದ್ದಾರೆಂಬ ಆರೋಪ ಅವರ ಮೇಲಿದೆ.
ಇದರ ಫಲವಾಗಿಯೇ ಅಲ್ಲಿ ಭದ್ರತಾ ಸಿಬ್ಬಂದಿ ಹಾಗೂ ಕೆಲ ಪೊಲೀಸ್ ಅಧಿಕಾರಗಳನ್ನು ಜನರು ಹೊಡೆದು ಸಾಯಿಸುವಂಥ ಘಟನೆಗಳು ನಡೆಯುತ್ತಿವೆ ಎಂದು ಕೇಂದ್ರ ಸರ್ಕಾರ ನಿರ್ಧರಿಸಿದೆ.