Himachal Pradesh: ಪ್ರವಾಹದಲ್ಲಿ ಕೊಚ್ಚಿ ಹೋದ 12 ಪ್ರಮುಖ ಸೇತುವೆ- 30 ಸಾವು, ನೂರಾರು ಹಳ್ಳಿಗಳಿಲ್ಲ ಸಂಪರ್ಕ
ಇಂಫಾಲ, ಜುಲೈ 11: ಹಿಮಾಚಲ ಪ್ರದೇಶದ ಬಹುತೇಕ ಸ್ಥಳಗಳಲ್ಲಿ ಹಲವು ದಿನಗಳಿಂದ ಭಾರೀ ಮಳೆ ಸುರಿಯುತ್ತಿದೆ. ನಿರಂತರ ಮಳೆಯಿಂದಾಗಿ ರಾಜ್ಯದ ಹಲವಾರು ಪ್ರದೇಶಗಳಲ್ಲಿ ಹಠಾತ್ ಪ್ರವಾಹ ಉಂಟಾಗಿದೆ. ಈ ದುರಂತದಲ್ಲಿ ಮೂವತ್ತು ಜನರು ಸಾವಿಗೀಡಾಗಿದ್ದಾರೆ. ಸುಮಾರು 500 ಜನರು ಭೂಕುಸಿತದಲ್ಲಿ ಸಿಲುಕಿಕೊಂಡಿದ್ದಾರೆ. ರಸ್ತೆ, ಹೆದ್ದಾರಿಗಳು ಕೊಚ್ಚಿ ಹೋಗಿವೆ.
ಮುಂದಿನ 24 ಗಂಟೆಗಳ ಕಾಲ ಸೋಲನ್, ಶಿಮ್ಲಾ, ಸಿರ್ಮೌರ್, ಕುಲು, ಮಂಡಿ, ಕಿನ್ನೌರ್ ಮತ್ತು ಲಾಹೌಲ್ನಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಈ ಪ್ರದೇಶಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.
ಹೆಚ್ಚುವರಿಯಾಗಿ, ಉನಾ, ಹಮೀರ್ಪುರ, ಕಂಗ್ರಾ ಮತ್ತು ಚಂಬಾದಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಮುಂದಿನ 24 ಗಂಟೆಗಳ ಕಾಲ ಮಂಡಿ, ಕಿನ್ನೌರ್ ಮತ್ತು ಲಾಹೌಲ್-ಸ್ಪಿಟಿಗೆ ಹಠಾತ್ ಪ್ರವಾಹದ ಎಚ್ಚರಿಕೆ ನೀಡಲಾಗಿದೆ.

ಹಿಮಾಚಲ ಪ್ರದೇಶದ ಪ್ರಮುಖ ಅಪ್ಡೇಟ್ಗಳು ಇಲ್ಲಿವೆ
1- ಭಾರತೀಯ ಹವಾಮಾನ ಇಲಾಖೆ ಮುಂದಿನ 24 ಗಂಟೆಗಳ ಕಾಲ ಹಿಮಾಚಲದ ಹಲವಾರು ಜಿಲ್ಲೆಗಳಿಗೆ ರೆಡ್ ಹಾಗೂ ಆರೆಂಜ್ ಅಲರ್ಟ್ಗಳನ್ನು ಘೋಷಿಸಿದೆ.
2- ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯಲ್ಲಿ ಭಾರೀ ಪ್ರವಾಹ ಉಂಟಾಗಿದೆ. ನಿರಂತರ ಮಳೆಯಿಂದಾಗಿ ಮಂಗಳವಾರದಂದು ಬಿಯಾಸ್ ನದಿಯಲ್ಲಿ ತೀವ್ರ ಪ್ರವಾಹ ಸಂಭವಿಸಿತು. ಮಂಡಿ ಜಿಲ್ಲೆಯಲ್ಲಿ ಹಲವಾರು ಮನೆಗಳು ಮತ್ತು ರಸ್ತೆಗಳು ಹಾನಿಗೊಳಗಾಗಿವೆ.
3- ಭಾರೀ ಮಳೆಯ ನಡುವೆ ಒಟ್ಟು 12 ಪ್ರಮುಖ ಸೇತುವೆಗಳು ಹಾನಿಗೊಳಗಾಗಿವೆ. ಈ ವರೆಗೆ ಹಿಮಾಚಲದಲ್ಲಾದ ಮೂಲಸೌಕರ್ಯ ನಷ್ಟವು ₹ 3,000 ಕೋಟಿಯಿಂದ ₹ 4,000 ಕೋಟಿ ಎಂದು ಪಿಟಿಐ ವರದಿ ಮಾಡಿದೆ.

4- ಹಿಮಾಚಲ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಅವರು ಮಂಗಳವಾರ ಮಂಡಿ ಮತ್ತು ಕುಲು ಭಾಗಗಳಿಗೆ ಭೇಟಿ ನೀಡಲಿದ್ದಾರೆ ಎಂದು ತಿಳಿದುಬಂದಿದೆ. ಈ ಕುರಿತು ಅವರು ಟ್ವೀಟ್ ಮಾಡಿದ್ದಾರೆ. 'ಇಂದು, ನಾನು ಜಿಲ್ಲೆಯ ಮಂಡಿ ಮತ್ತು ಕುಲು ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡುತ್ತಿದ್ದೇನೆ, ಹಠಾತ್ ಪ್ರವಾಹ ಮತ್ತು ಭಾರೀ ಮಳೆಯಿಂದ ಜೀವ ಮತ್ತು ಆಸ್ತಿ ಹಾನಿಯನ್ನು ಖುದ್ದಾಗಿ ಪರಿಶೀಲಿಸುತ್ತಿದ್ದೇನೆ' ಎಂದು ಹೇಳಿದ್ದಾರೆ.
5- ಮಂಡಿಯ ಸಿಕ್ಸ್ ಮೈಲ್ ಪ್ರದೇಶದ ಬಳಿ ಭೂಕುಸಿತ ಸಂಭವಿಸಿದ್ದು, ಚಂಡೀಗಢ-ಮನಾಲಿ ರಾಷ್ಟ್ರೀಯ ಹೆದ್ದಾರಿಯನ್ನು ಮುಚ್ಚಲಾಗಿದೆ. ಭಾರೀ ಮಳೆಯಿಂದಾಗಿ ಹೆದ್ದಾರಿಗಳು ಸೇರಿದಂತೆ 1200 ಕ್ಕೂ ಹೆಚ್ಚು ರಸ್ತೆಗಳನ್ನು ನಿರ್ಬಂಧಿಸಲಾಗಿದೆ.
6- ಭಾರೀ ಮಳೆಯ ನಂತರ ಪಂಚವಕ್ತ್ರ ದೇವಾಲಯದ ಸುತ್ತಲು ಪ್ರವಾಹ ಉಂಟಾಗಿತ್ತು. ಇಂದು ನೀರಿನ ಹರಿವು ಕಡಿಮೆಯಾಗಿದೆ.
7- ಕಳೆದ ರಾತ್ರಿಯಿಂದ ಹವಾಮಾನ ಸುಧಾರಿಸಿದೆ. ಇದು ನಮ್ಮ ಪರಿಹಾರ ಕಾರ್ಯದಲ್ಲಿ ಪ್ರಗತಿ ಸಾಧಿಸಲು ಸಹಾಯ ಮಾಡಿದೆ. ಕುಲುವಿನಲ್ಲಿ ಏಳು ಪರಿಹಾರ ಶಿಬಿರಗಳನ್ನು ಸ್ಥಾಪಿಸಲಾಗಿದೆ. ಸಿಕ್ಕಿಬಿದ್ದ ಜನರನ್ನು ನೋಡಿಕೊಳ್ಳಲಾಗುತ್ತಿದೆ ಎಂದು ಕುಲು ಡೆಪ್ಯುಟಿ ಕಮಿಷನರ್ ಅಶುತೋಷ್ ಗರ್ಗ್ ತಿಳಿಸಿದ್ದಾರೆ.

8- ಹಿಮಾಚಲ ಪ್ರದೇಶದ ಲಾಹೌಲ್ ಮತ್ತು ಸ್ಪಿತಿ ಜಿಲ್ಲೆಯ ಚಂದರ್ತಾಲ್ನಲ್ಲಿ ಸಿಕ್ಕಿಬಿದ್ದಿರುವ ಹಲವಾರು ಪ್ರವಾಸಿಗರನ್ನು ಏರ್ಲಿಫ್ಟ್ ಮಾಡಲು ಭಾರತೀಯ ವಾಯುಪಡೆಯ (ಐಎಎಫ್) ಹೆಲಿಕಾಪ್ಟರ್ ಅನ್ನು ಕೋರಲಾಗಿದೆ. ಕಾಜಾದಿಂದ ರಕ್ಷಣಾ ತಂಡ ಕೂಡ ಕುಂಜುಮ್ಗೆ ತಲುಪಿದೆ. ಈ ಜಿಲ್ಲೆಗಳಲ್ಲಿ 300 ಕ್ಕೂ ಅಧಿಕ ಜನರು, ಹೆಚ್ಚಾಗಿ ಪ್ರವಾಸಿಗರು ಶಿಬಿರಗಳಲ್ಲಿ ಸಿಲುಕಿಕೊಂಡಿದ್ದಾರೆ.
9- ಭಾರೀ ಮಳೆಯ ನಡುವೆ, ಶಿಮ್ಲಾದಲ್ಲಿ ಮಂಗಳವಾರ ಕುಡಿಯುವ ನೀರಿನ ಕೊರತೆ ಉಂಟಾಗಿದೆ. ಶಿಮ್ಲಾ ಜಲ ಪ್ರಬಂಧನ್ ನಿಗಮ್ ಲಿಮಿಟೆಡ್ (SJPNL) ನಿವಾಸಿಗಳಿಗೆ ಟ್ಯಾಂಕರ್ಗಳ ಮೂಲಕ ನೀರು ಸರಬರಾಜು ಮಾಡುತ್ತಿದೆ. ಶಿಮ್ಲಾದಲ್ಲಿ 1,418 ನೀರು ಸರಬರಾಜು ಸ್ಥಾವರಗಳು ಹಾನಿಗೊಳಗಾಗಿವೆ.
10- ಈ ಕುರಿತು ಮಾತನಾಡಿರು ಶಿಮ್ಲಾ ಮುನ್ಸಿಪಲ್ ಕಾರ್ಪೊರೇಷನ್ ಮೇಯರ್ ಸುರೇಂದರ್ ಚೌಹಾಣ್, 'ವಿಪತ್ತಿನಿಂದಾಗಿ ರಾಜ್ಯಕ್ಕೆ ಸಾಕಷ್ಟು ನಷ್ಟವಾಗಿದೆ. ನೀರಿನ ಸ್ಥಾವರಗಳು, ರಸ್ತೆಗಳು ಹಾಗೂ ಅಣೆಕಟ್ಟುಗಳು ಕೊಚ್ಚಿಹೋಗಿವೆ. ಶಿಮ್ಲಾದಲ್ಲಿ ನಾವು ಖಾಸಗಿ ಟ್ಯಾಂಕರ್ಗಳನ್ನು ಬಾಡಿಗೆಗೆ ಪಡೆದಿದ್ದೇವೆ. ನಗರ ನಿಗಮದ ಟ್ಯಾಂಕರ್ಗಳು ಸಹ ನೀರು ಒದಗಿಸುತ್ತಿವೆ. ಟ್ಯಾಂಕರ್ಗಳ ಬಳಕೆಯಿಂದ ನಾವು ಸಾಧ್ಯವಾದಷ್ಟು ಸ್ಥಳಗಳನ್ನು ತಲುಪಲು ಪ್ರಯತ್ನಿಸುತ್ತಿದ್ದೇವೆ. ಶಿಮ್ಲಾದ ಪ್ರದೇಶಗಳು ಕಿರಿದಾದ ರಸ್ತೆಗಳನ್ನು ಹೊಂದಿವೆ. ಆದ್ದರಿಂದ ನಾವು ಆ ಸ್ಥಳಗಳಿಗೆ ಸಣ್ಣ ಟ್ಯಾಂಕರ್ ನೀರನ್ನು ಕಳುಹಿಸುತ್ತಿದ್ದೇವೆ' ಎಂದು ತಿಳಿಸಿದ್ದಾರೆ.












Click it and Unblock the Notifications