ಹಿಮಾಚಲದಲ್ಲಿ 'ಕೈ'ಕಮಾಂಡ್ ನಾಯಕರ ಬೆಂಗಾವಲು ಪಡೆ ಕಾರಿಗೆ ತಡೆ
ಶಿಮ್ಲಾ, ಡಿಸೆಂಬರ್ 09: ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ ನಂತರ ಕಾಂಗ್ರೆಸ್ನಲ್ಲಿ ಆಂತರಿಕ ಬಿಕ್ಕಟ್ಟು ಹೆಚ್ಚುತ್ತಿದೆ. ಸಿಎಂ ರೇಸ್ ನಲ್ಲಿರುವ ಪ್ರತಿಭಾ ಸಿಂಗ್ ಬೆಂಬಲಿಗರು ವಿಭಿನ್ನ ರೀತಿಯಲ್ಲಿ ತಮ್ಮ ಬೆಂಬಲ ಸೂಚಿಸಿದರು. ಕಾಂಗ್ರೆಸ್ ಪಕ್ಷದ ನಾಯಕರ ಕಾರನ್ನೇ ತಡೆದು ನಿಲ್ಲಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಾ ಸಿಂಗ್ ಬೆಂಬಲಿಗರು ಶಿಮ್ಲಾದ ಒಬೆರಾಯ್ ಸೆಸಿಲ್ ಹೊರಗೆ ಜಮಾಯಿಸಿದರು. ಈ ವೇಳೆ ಮುಖ್ಯಮಂತ್ರಿಯನ್ನು ನಿರ್ಧರಿಸಲು ಹಿಮಾಚಲ ಪ್ರದೇಶಕ್ಕೆ ಕಳುಹಿಸಲಾದ ಕೇಂದ್ರ ನಾಯಕರಲ್ಲಿ ಒಬ್ಬರಾದ ಛತ್ತೀಸ್ಗಢ ಮುಖ್ಯಮಂತ್ರಿ ಭೂಪೇಶ್ ಬಾಘೇಲ್ ಬೆಂಗಾವಲು ಪಡೆಯನ್ನು ತಡೆದು ನಿಲ್ಲಿಸಿದರು.
Himachal Pradesh: ನಮ್ಮ ಕುಟುಂಬವನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ- ಪ್ರತಿಭಾ ಸಿಂಗ್ ಹೇಳಿಕೆಯಲ್ಲಿ ಬೆದರಿಕೆ ತಂತ್ರ?
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವೀಡಿಯೊವೊಂದರಲ್ಲಿ, ಕಾರ್ಯಕರ್ತರು ಬಾಘೇಲ್ ಕಾರನ್ನು ಸುತ್ತುವರೆದಿರುವುದು ಕಂಡು ಬರುತ್ತದೆ. ಅದೇ ರೀತಿ ಹಿಮಾಚಲ ಪ್ರದೇಶ ಪ್ರಚಾರದ ನೇತೃತ್ವ ವಹಿಸಿದ್ದ ಕಾಂಗ್ರೆಸ್ ಸಂಸದ ಪ್ರತಿಭಾ ಸಿಂಗ್ ಪರವಾಗಿ ಘೋಷಣೆಗಳನ್ನು ಕೂಗುತ್ತಿರುವುದು ಕಂಡುಬಂದಿದೆ.
|
'ಕೈ'ಕಮಾಂಡ್ ನಾಯಕರೇ ಈ ಹೆಸರು ನೆನಪಿಟ್ಟುಕೊಳ್ಳಿ
ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದ ನಂತರದಲ್ಲಿ ಮುಖ್ಯಮಂತ್ರಿ ಯಾರು ಎಂಬುದನ್ನು ನಿರ್ಧರಿಸುವುದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಉನ್ನತ ನಾಯಕ ಸಭೆ ನಡೆಸಲಾಗಿತ್ತು. ಈ ಹಂತದಲ್ಲಿ ಗಾಂಧಿಗಳಿಗೆ ತೀಕ್ಷ್ಣವಾದ ಸಂದೇಶವನ್ನು ರವಾನಿಸುವ ನಿಟ್ಟಿನಲ್ಲಿ ಪ್ರತಿಭಾ ಸಿಂಗ್ ಬೆಂಬಲಿಗರು ಈ ಪ್ರಯತ್ನವನ್ನು ಮಾಡಿದ್ದಾರೆ. ಕಳೆದ ವರ್ಷ ನಿಧನರಾದ ತಮ್ಮ ಪತಿ ವೀರಭದ್ರ ಸಿಂಗ್ ಹೆಸರಿನಲ್ಲಿ ಚುನಾವಣೆಗಳನ್ನು ಹೋರಾಡಿ ಗೆದ್ದಿದ್ದಾರೆ ಎಂಬುದನ್ನು ತಮ್ಮ ಪಕ್ಷಕ್ಕೆ ನೆನಪಿಸಲು ಪ್ರಯತ್ನಿಸಿದರು.
ಗುಂಪುಗಾರಿಕೆ ಇಲ್ಲವೇ ಇಲ್ಲ ಎಂದ ಪ್ರತಿಭಾ ಸಿಂಗ್
"ಯಾವುದೇ ಗುಂಪುಗಾರಿಕೆ ಇಲ್ಲ ಮತ್ತು ಎಲ್ಲರೂ ನಮ್ಮೊಂದಿಗಿದ್ದಾರೆ ಎಂದು ಸಿಎಂ ಕುರ್ಚಿ ರೇಸ್ ನಲ್ಲಿರುವ ಪ್ರತಿಭಾ ಸಿಂಗ್ ಹೇಳಿಕೆ ಕೊಟ್ಟಿದ್ದಾರೆ. ಶುಕ್ರವಾರ ಮಧ್ಯಾಹ್ನ ಕೇಂದ್ರದ ಉನ್ನತ ನಾಯಕರು ಮತ್ತು ಶಾಸಕರ ಸಭೆಯ ಮೊದಲು ಈ ರೀತಿ ಸ್ಪಷ್ಟನೆ ನೀಡಿದ್ದಾರೆ. ಆ ಮೂಲಕ ಮುಖ್ಯಮಂತ್ರಿ ಆಗಬೇಕೆಂದು ಸ್ಪಷ್ಟ ಸಂದೇಶಗಳನ್ನು ರವಾನಿಸುತ್ತಿದ್ದಾರೆ.
ಸಿಎಂ ಆಗಿ ರಾಜ್ಯ ಮುನ್ನಡೆಸುವ ಬಗ್ಗೆ ಉಲ್ಲೇಖ
"ಈ ಹಿಂದೆ ಹಿಮಾಚಲ ಪ್ರದೇಶ ಚುನಾವಣೆಗೂ ಮುನ್ನ ಪಕ್ಷವನ್ನು ಮುನ್ನಡೆಸುವ ಜವಾಬ್ದಾರಿಯನ್ನು ಸೋನಿಯಾ ಗಾಂಧಿ ಮತ್ತು ಹೈಕಮಾಂಡ್ ನನಗೆ ನೀಡಿದ್ದರಿಂದ ನಾನು ರಾಜ್ಯವನ್ನು ಮುಖ್ಯಮಂತ್ರಿಯಾಗಿ ಮುನ್ನಡೆಸಬಹುದು ಎಂದು ಭಾವಿಸುತ್ತೇನೆ," ಎಂದು ಸಂಸದರು ತಿಳಿಸಿದರು. ಈ ಚುನಾವಣೆಯಲ್ಲಿ ಹೋರಾಡಿ ವೀರಭದ್ರ ಸಿಂಗ್ ಅವರ ಹೆಸರಿನಲ್ಲಿ ಗೆದ್ದು ವೀರಭದ್ರ ಸಿಂಗ್ ಕುಟುಂಬವನ್ನು ಬದಿಗೆ ಸರಿಸುವುದು ಸರಿಯಲ್ಲ. ಜನರು ವೀರಭದ್ರ ಸಿಂಗ್ ಜೊತೆಗೆ ಭಾವನಾತ್ಮಕ ಸಂಪರ್ಕವನ್ನು ಹೊಂದಿರುವುದರಿಂದ ನಾವು 40 ಸ್ಥಾನಗಳನ್ನು ಗೆದ್ದಿದ್ದೇವೆ," ಎಂದು ಪ್ರತಿಭಾ ಸಿಂಗ್ ಪ್ರತಿಪಾದಿಸಿದರು.
ಹಳೆಯ ಪರಂಪರೆಯನ್ನು ನಿರ್ಲಕ್ಷ್ಯ ಮಾಡುವಂತಿಲ್ಲ
"ಮುಖ್ಯಮಂತ್ರಿ ಹುದ್ದೆಯ ಪಟ್ಟಿಯಲ್ಲಿ ಅನೇಕ ನಾಯಕರು ಇರಬಹುದು, ಆದರೆ ಕಾಂಗ್ರೆಸ್ ಹೈಕಮಾಂಡ್ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ. ಈ ವೇಳೆ ವೀರಭದ್ರ ಸಿಂಗ್ ಪರಂಪರೆಯನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡುವಂತಿಲ್ಲ. ನಾವು ನಮ್ಮವರನ್ನು ಒಟ್ಟಿಗೆ ಇಡಬೇಕು. ಶೀಘ್ರದಲ್ಲೇ ಸಿಎಂ ಯಾರು ಎಂಬುದನ್ನು ನಿರ್ಧರಿಸಲಾಗುವುದು. ಇಂದಿನ ಸಭೆಯಲ್ಲಿ ಈ ಬಗ್ಗೆ ಸ್ಪಷ್ಟವಾಗುತ್ತವೆ," ಎಂದು ಹೇಳಿದರು.
ಹಿಮಾಚಲ ಪ್ರದೇಶದಲ್ಲಿ ಸದ್ಯದ ಮಟ್ಟಿಗೆ ಮಾಜಿ ರಾಜ್ಯ ಮುಖ್ಯಸ್ಥ ಸುಖವಿಂದರ್ ಸಿಂಗ್ ಸುಖು, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಮುಖೇಶ್ ಅಗ್ನಿಹೋತ್ರಿ ಮತ್ತು ಹರ್ಷವರ್ಧನ್ ಚೌಹಾಣ್ ಕೂಡ ಸಿಎಂ ಕುರ್ಚಿ ಪೈಪೋಟಿಯಲ್ಲಿದ್ದಾರೆ.