India Weather: ದೇಶದ ಈ ರಾಜ್ಯಗಳಿಗೆ ಅತ್ಯಧಿಕ ಮಳೆ ನಿರೀಕ್ಷೆ: ಐಎಂಡಿ
ನವದೆಹಲಿ, ಜೂನ್ 28: ಭಾರತ ದೇಶದ ಶೇಕಡಾ 80 ರಷ್ಟು ಭಾಗಗಳನ್ನು ಆವರಿಸಿರುವ ಮುಂಗಾರು ಮಳೆ ಇನ್ನೂ ಕೆಲವು ದಿನಗಳು ಮುಂದುವರಿಯುವ ಸಾಧ್ಯತೆ ಇದೆ. ಈ ಮಳೆ ಕೆಲವು ರಾಜ್ಯಗಳಲ್ಲಿ ಹೆಚ್ಚಿನ ಪರಿಣಾಮ ಬೀರುವುದರಿಂದ ಭಾರತೀಯ ಹವಾಮಾನ ಇಲಾಖೆ ಮಂಗಳವಾರ ದೇಶದ ವಿವಿಧ ಭಾಗಗಳಿಗೆ 'ಆರೆಂಜ್' ಮತ್ತು 'ಯೆಲ್ಲೋ ಅಲರ್ಟ್' ಎಚ್ಚರಿಕೆ ನೀಡಿದೆ.
ಹಿಮಾಚಲ ಪ್ರದೇಶದ ಶಿಮ್ಲಾ ಜಿಲ್ಲೆ ಕೆಲವು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಅಲ್ಲಿ ಪ್ರವಾಹದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸಂಚಾರ, ಜನ ಜೀವನ ಅಸ್ತವೆಸ್ತವಾಗಿದೆ. ಕಳೆದ 4-5 ದಿನಗಳಲ್ಲಿ ದೇಶದ ಮುಂಬೈ, ದೆಹಲಿ, ಕಾಶ್ಮೀರ, ಪಂಜಾಬ್, ರಾಜಸ್ತಾನ್ಗಳಲ್ಲಿ ಕ್ಷಿಪ್ರ ಪ್ರಗತಿಯೊಂದಿಗೆ ಪ್ರಸ್ತುತ ಮಾನ್ಸೂನ್ ಸಕ್ರಿಯವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಭಾರತದ ವಾಯುವ್ಯ ಭಾರತದ ಕೆಲವು ಭಾಗಗಳನ್ನು ಬಿಟ್ಟರೆ, ಮುಂಗಾರು ಬಹುತೇಕ ಇಡೀ ದೇಶದ ಮೇಲೆ ಪರಿಣಾಮ ಬೀರಿದೆ. ಸದ್ಯ ಭಾರೀ ಮಳೆ ಗುಜರಾತ್ ರಾಜ್ಯದ ಮತ್ತು ರಾಜಸ್ಥಾನದ ಆಗ್ನೇಯ ಭಾಗವನ್ನು ಆವರಿಸಿಕೊಂಡಿದೆ. ಇನ್ನೆರಡು ದಿನಗಳಲ್ಲಿ ಪಂಜಾಬ್ ರಾಜ್ಯದ ದಕ್ಷಿಣ ಭಾಗ, ಹರಿಯಾಣ ಹಾಗೂ ರಾಜಸ್ಥಾನದ ಇನ್ನಿತರ ಭಾಗಗಳನ್ನು ಆವರಿಸಿಕೊಳ್ಳಲಿದೆ.
#WATCH | Heavy rain lashes parts of Delhi, visuals from RK Puram.
— ANI (@ANI) June 27, 2023
As per IMD, leaving some parts of northwest India, the monsoon has impacted almost the entire country. pic.twitter.com/DlV5dJXdj7
ನಾಳೆಯಿಂದ ಕೆಲವು ದಿನಗಳ ಕಾಲ ಮುನ್ಸೂಚನಾ ಪ್ರದೇಶಗಳಲ್ಲಿ ಅತ್ಯಧಿಕ ಮಳೆ ಸುರಿಯಲಿದೆ ಎಂದು ಐಎಂಡಿ ವಿಜ್ಞಾನಿ ಸೋಮ ಸೇನ್ ಮಾಹಿತಿ ನೀಡಿದ್ದಾರೆ.
ಗುಜರಾತ್ನ ವಿವಿಧೆಡೆ ಭಾರೀ ಮಳೆ
ಬಿಪರ್ಜಾತ್ ಚಂಡಮಾರುತಕ್ಕೆ ತುತ್ತಾಗಿ ಈಗಷ್ಟೇ ಸುಧಾರಿಸಿಕೊಳ್ಳುತ್ತಿದ್ದ ಗುಜರಾತ್ನ ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮಳೆಯಾಗುವ ಸಾಧ್ಯೆತೆ ಇದೆ. ಕರಾವಳಿ ಭಾಗದಲ್ಲಿ ಮತ್ತೆ ಕಟ್ಟೆಚ್ಚರ ವಹಿಸಲಾಗಿದೆ. ಇದೇ ಈ ಅವಧಿಯಲ್ಲಿ ಗುಜರಾತ್ ರಾಜ್ಯದ ದಕ್ಷಿಣ ಹಾಗೂ ಉತ್ತರ ಭಾಗದ ಜಿಲ್ಲೆಗಳಲ್ಲಿ ಮತ್ತು ಸೌರಾಷ್ಟ್ರದ ಜಿಲ್ಲೆಗಳಲ್ಲಿ ಅನೇಕ ಕಡೆಗಳಲ್ಲಿ ಭಾರೀ ಮತ್ತು ಅತಿ ಭಾರೀ ಮಳೆಯಾಗುವ ಮುನ್ಸೂಚನೆ ಇದೆ. ಹೀಗಾಗಿ ಇಲ್ಲೆಲ್ಲ ಆರೆಂಜ್ ಮತ್ತು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಈ ಮಧ್ಯೆ ಗುಜರಾತ್ ನೀರಾವರಿ ಇಲಾಖೆ ನೀಡಿದ ಮಾಹಿತಿ ನೋಡಿದರೆ, ರಾಜ್ಯದ 206 ಜಲಾಶಯಗಳಲ್ಲಿ ಆರು ಭಾರಿ ಮಳೆಯಿಂದಾಗಿ ಹೈ ಅಲರ್ಟ್, ಮೂರು ಅಲರ್ಟ್ ಮತ್ತು ಒಂದು ಸಾಮಾನ್ಯ ಎಚ್ಚರಿಕೆ ನೀಡಲಾಗಿದೆ ಎಂದು ತಿಳಿದು ಬಂದಿದೆ.
ಮಳೆಗಾಲ ಎದುರಿಸಲು ವಿಪತ್ತು ನಿರ್ವಹಣಾ ತಂಡ ಸಿದ್ಧ
ಮಳೆಗಾಲ ಶುರುವಾಗಿದ್ದ ಬೆನಲ್ಲೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ಭಾರಿ ಮಳೆ ಪರಿಸ್ಥಿತಿಯನ್ನು ಸಮರ್ಥವಾಗಿ ನಿರ್ವಹಿಸಲು ನಿಯೋಜನೆ ಯೋಜನೆಯನ್ನು ರೂಪಿಸಿಕೊಂಡಿದೆ. ಆ ಯೋಜನೆಯಡಿ ರಕ್ಷಣಾ ಸಿಬ್ಬಂದಿ ತಂಡದ ಸದಸ್ಯರು ತೀವ್ರ ನಿಗಾ ವಹಿಸಲಿದ್ದಾರೆ. ತೊಂದರೆಯಾದ ಸ್ಥಳಕ್ಕೆ ಕೂಡಲೇ ಧಾವಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿಲಿದ್ದಾರೆ.
ಐಎಂಡಿ ಮುನ್ಸೂಚನೆ ಪ್ರಕಾರ, ಹಿಮಾಚಲ ಪ್ರದೇಶದಲ್ಲಿ ಮುಂದಿನ ಐದು ದಿನಗಳ ಕಾಲ ಮಳೆಯಾಗುವ ಸಾಧ್ಯತೆ ಇದೆ.
ಮಹಾರಾಷ್ಟ್ರದ ಥಾಣೆ, ರಾಯಗಢ, ಪುಣೆ, ರತ್ನಗಿರಿ, ನಾಸಿಕ್ ಮತ್ತು ಸತಾರಾದಲ್ಲಿ ಸಹ ಭಾರೀ ಮಳೆ ಆಗಲಿದೆ. ಈ ಸಂಬಂಧ ಇಷ್ಟು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಎಚ್ಚರಿಕೆ ಕೊಡಲಾಗಿದೆ.
ನಿಂರಂತರ ಬಿಸಿಲ ಬೇಗೆಗೆ ಸುಸ್ತಾಗಿದ್ದ ರಾಷ್ಟ್ರ ರಾಜಧಾನಿ ದೆಹಲಿಯ ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗಿದೆ. ಸುರಿಮಳೆ ಸಾಮಾನ್ಯ ಜನರಿಗೆ ಬಿಸಿಲಿನ ಬೇಗೆಯಿಂದ ನೆಮ್ಮದಿ ತಂದಿದೆ. ನವದೆಹಲಿಯ ಐಟಿಒ ಮತ್ತು ಇತರ ಪ್ರದೇಶಗಳಲ್ಲಿ ಭಾರೀ ಮಳೆ ದಾಖಲಾಗಿದೆ.
ಮಳೆಗೆ ತರಕಾರಿ ದರ ಏರಿಕೆ
ದೇಶದ ವಿವಿಧ ಪ್ರದೇಶಗಳಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಟೊಮೇಟೊ ಸೇರಿದಂತೆ ತರಕಾರಿ ಬೆಲೆಗಳ ದರ ಏರಿಕೆ ಆಗಿದೆ. ದೇಶಾದ್ಯಂತ ಮಾರುಕಟ್ಟೆಗಳಲ್ಲಿ 10-20 ರೂ ಇದ್ದ ಕೆಜಿ ಟೊಮೆಟೋ ಬೆಲೆಗೆ 80-100 ರೂಪಾಯಿ ಹೆಚ್ಚಳವಾಗಿದೆ. ಬೆಂಗಳೂರಿನ ಮಾರುಕಟ್ಟೆಗಳಲ್ಲಿ ಟೊಮೆಟೋ ಬೆಲೆ ಕೆಜಿಗೆ 100 ರೂಪಾಯಿ ದಾಟಿದೆ. ಒಂದು ವೇಳೆ ಟೊಮೆಟೋ ಸಮಪರ್ಕವಾಗಿ ಮಾರುಕಟ್ಟೆಗಳಿಗೆ ಭಾರದಿಂದ ಬೆಲೆ ಇನ್ನೂ ಹೆಚ್ಚಾಗಲಿದೆ ಎಂದು ಊಹಿಸಲಾಗಿದೆ.












Click it and Unblock the Notifications