ಉತ್ತರಾಖಂಡದಲ್ಲಿ ನಿಲ್ಲದ ಮಳೆ: ನೋಡ ನೋಡುತ್ತಿದ್ದಂತೆ ವಾಹನಗಳ ಮೇಲೆ ಕುಸಿದ ಗುಡ್ಡ
ಡೆಹ್ರಾಡೂನ್ ಸೆಪ್ಟೆಂಬರ್ 22: ಉತ್ತರಾಖಂಡದಲ್ಲಿ ಮತ್ತೆ ಧಾರಾಕಾರ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಚಾರ್ಧಾಮ್ ಯಾತ್ರೆಯ ಮಾರ್ಗವು ಹಲವೆಡೆ ಅಸ್ತವ್ಯಸ್ತಗೊಂಡಿದೆ. ಗಂಗೋತ್ರಿ ಹೆದ್ದಾರಿಯಲ್ಲಿ ಗುಡ್ಡದಿಂದ ನಿರಂತರವಾಗಿ ಕಲ್ಲುಗಳು ಬೀಳುತ್ತಿವೆ. ರಸ್ತೆಯ ಮೇಲೆ ನಿಂತ ವಾಹನಗಳ ಮೇಲೆ ಗುಡ್ಡ ಕುಸಿದು ಬೀಳುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಭೂಕುಸಿತದಿಂದಾಗಿ ರುದ್ರಪ್ರಯಾಗದ ರಾಷ್ಟ್ರೀಯ ಹೆದ್ದಾರಿಯನ್ನು ಮುಚ್ಚಲಾಗಿದ್ದು, ಸೆಪ್ಟೆಂಬರ್ 24 ರವರೆಗೆ ಹವಾಮಾನದ ಬಗ್ಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಮುಂದಿನ ದಿನಗಳಲ್ಲಿ ಮಲೆನಾಡಿನಿಂದ ಬಯಲು ಸೀಮೆಯವರೆಗೆ ಮಳೆಯ ಅಬ್ಬರ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆಯನ್ನು ನೀಡಿದೆ. ಜೊತೆಗೆ ಚಾರ್ಧಾಮ್ಗಳಲ್ಲಿ ಹಿಮಪಾತ ಮತ್ತು ಮಳೆಯಿಂದಾಗಿ ಚಳಿ ಹೆಚ್ಚಾಗಿದೆ.
ರುದ್ರಪ್ರಯಾಗ ಜಿಲ್ಲೆಯಲ್ಲಿ ಈ ಋತುವಿನ ಮೊದಲ ಹಿಮಪಾತ ಆರಂಭವಾಗಿದೆ. ಜೊತೆಗೆ ಮಳೆ ಕೂಡ ಸುರಿಯುತ್ತಿದೆ. ಇದರಿಂದಾಗಿ ಜನರ ಸಮಸ್ಯೆಗಳು ಹೆಚ್ಚಿವೆ. ಭೂಕುಸಿತದಿಂದಾಗಿ ರುದ್ರಪ್ರಯಾಗದ ರಾಷ್ಟ್ರೀಯ ಹೆದ್ದಾರಿಯನ್ನು ಮುಚ್ಚಲಾಗಿದೆ. ಜಿಲ್ಲೆಯ ತಾರ್ಸಾಲಿ ಗ್ರಾಮದ ಬಳಿ ಹಠಾತ್ ಭೂಕುಸಿತದಿಂದಾಗಿ, ಪರ್ವತಗಳಿಂದ ಅವಶೇಷಗಳು ಬೀಳಲು ಪ್ರಾರಂಭಿಸಿವೆ. ಇದರಿಂದಾಗಿ ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತ ಸ್ಥಳಗಳಲ್ಲಿ ನಿಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಯೂರ್ ದೀಕ್ಷಿತ್ ತಿಳಿಸಿದ್ದಾರೆ. ಅವಶೇಷಗಳನ್ನು ತೆರವುಗೊಳಿಸಿದ ನಂತರ ವಾಹನ ಸಂಚಾರವನ್ನು ಪುನರಾರಂಭಿಸಲಾಗುವುದು ಎಂದಿದ್ದಾರೆ.
ಗಂಗೋತ್ರಿ ಹೆದ್ದಾರಿಯಲ್ಲಿ ಭೂಕುಸಿತ, ಸಂಚಾರ ಬಂದ್
ಗಂಗೋತ್ರಿ ಹೆದ್ದಾರಿಯಲ್ಲಿ ಬುಧವಾರ ಸಂಜೆ 5.30ರ ವೇಳೆಗೆ ಭೂಕುಸಿದಿದೆ. ಭಟವಾಡಿ ಸಮೀಪದ ಹೆಲ್ಗುಗಡ್ ಬಳಿ ದಿಢೀರ್ ಭೂಕುಸಿತ ಸಂಭವಿಸಿದ್ದರಿಂದ ಸಂಚಾರ ಸ್ಥಗಿತಗೊಂಡಿದೆ. ಹೆದ್ದಾರಿಯ ಎರಡೂ ಬದಿಯಲ್ಲಿ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ಸಿಲುಕಿಕೊಂಡಿದ್ದಾರೆ. ಮಾರ್ಗವನ್ನು ಮರುಸ್ಥಾಪಿಸುವ ಕಾರ್ಯ ನಡೆದಿದ್ದು ಸಂಚಾರ ಸುಗಮಗೊಳ್ಳದೆ ವಾಹನ ಸವಾರಾರು ಪರದಾಡುವಂತಾಗಿದೆ ಈ ಸ್ಥಳದಲ್ಲಿ ರಸ್ತೆಯನ್ನು ಮುಚ್ಚಿರುವುದರಿಂದ ಗಂಗೋತ್ರಿ ಧಾಮಕ್ಕೆ ಪ್ರಯಾಣಿಸಲು ಪದೇ ಪದೇ ತೊಂದರೆಯಾಗುತ್ತಿದೆ. ರಣಚಟ್ಟಿಯಲ್ಲಿ ಭೂಕುಸಿತದಿಂದಾಗಿ ಯಮುನೋತ್ರಿ ಹೆದ್ದಾರಿಯನ್ನೂ ಮುಚ್ಚಲಾಗಿದೆ.
|
ಹಳದಿ ಅಲರ್ಟ್ ಘೋಷಣೆ
ಮುಂದಿನ 24 ಗಂಟೆಗಳಲ್ಲಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರಿ ಮಳೆಯಾಗುವ ನಿರೀಕ್ಷೆಯಿದೆ. ಈ ಅವಧಿಯಲ್ಲಿ ಬಾಗೇಶ್ವರ್, ಪಿಥೋರಗಢ್, ನೈನಿತಾಲ್ ಮತ್ತು ಚಂಪಾವತ್ ಜಿಲ್ಲೆಗಳಲ್ಲಿ ಅಧಿಕ ಮಳೆಯಾಗಬಹುದು. ಅಧಿಕ ಮಳೆಯ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಹಳದಿ ಅಲರ್ಟ್ ಘೋಷಿಸಿದೆ.
ಡೆಹ್ರಾಡೂನ್ ಹವಾಮಾನ ಕೇಂದ್ರದ ಪ್ರಕಾರ, ಸೆಪ್ಟೆಂಬರ್ 22 ರಂದು ಡೆಹ್ರಾಡೂನ್, ತೆಹ್ರಿ, ಬಾಗೇಶ್ವರ್ ಮತ್ತು ಪಿಥೋರಗಢದಲ್ಲಿ ಧಾರಾಕಾರ ಮಳೆಯಾಗುವ ಸಾಧ್ಯತೆಯಿದೆ. ಸೆಪ್ಟೆಂಬರ್ 23 ಮತ್ತು 24 ರಂದು ರಾಜ್ಯದ ಗುಡ್ಡಗಾಡು ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಇದರೊಂದಿಗೆ ಗುಡುಗು, ಸಿಡಿಲು ಸಹಿತ ಮಳೆಯಾಗುವ ಸಂಭವವಿದೆ.
ರುದ್ರಪ್ರಯಾಗ ಬಸ್ ನಿಲ್ದಾಣಕ್ಕೆ ಹಾನಿ
ರುದ್ರಪ್ರಯಾಗ ಜಿಲ್ಲಾ ಕೇಂದ್ರದ ದಾಟ್ ಪುಲಿಯಾ ಬಳಿಯ ಹೊಸ ಬಸ್ ನಿಲ್ದಾಣದ ರಸ್ತೆಯಲ್ಲಿ ಗುಡ್ಡದಿಂದ ಭಾರೀ ಬಂಡೆಗಳು ಮತ್ತು ಅವಶೇಷಗಳು ಬಿದ್ದಿದ್ದು, ಐದು ಗಂಟೆಗಳ ಕಾಲ ಸಂಚಾರವನ್ನು ಸ್ಥಗಿತಗೊಳಿಸಲಾಯಿತು. ಬುಧವಾರ ಬೆಳಗಿನ ಜಾವ ಐದು ಗಂಟೆ ಸುಮಾರಿಗೆ ಪುನಾಡ್ನಲ್ಲಿರುವ ಮಹಾದೇವ ದೇವಸ್ಥಾನದ ಹಿಂಭಾಗದಿಂದ ಭಾರಿ ಭೂಕುಸಿತದಿಂದ ಬಂಡೆಗಳು ನೇರವಾಗಿ ಹೊಸ ಬಸ್ ನಿಲ್ದಾಣ ರಸ್ತೆಗೆ ಬಿದ್ದಿವೆ. ಇದರಿಂದ ಹೊಸ ಬಸ್ ನಿಲ್ದಾಣದ ರಸ್ತೆ ಬದಿಯಲ್ಲಿ ಬಂಡೆಕಲ್ಲುಗಳಿಂದ ನಿರ್ಮಿಸಿರುವ ಪುರಸಭೆಯ ಶೌಚಾಲಯವೂ ಹಾಳಾಗಿದೆ.
ಹೆಲಿಕಾಪ್ಟರ್ ನಿಂದ 62 ಜನರ ರಕ್ಷಣೆ
ಇಲ್ಲಿ ವ್ಯಾಸ್ ಕಣಿವೆಯ ಏಳು ಗ್ರಾಮಗಳಲ್ಲಿ ಸಿಲುಕಿರುವ 62 ಆದಿ ಕೈಲಾಶ್ ಯಾತ್ರಿಗಳು ಮತ್ತು ಸ್ಥಳೀಯರನ್ನು ಚಿನೂಕ್, ಎಲ್ಎಚ್ ಮತ್ತು ಖಾಸಗಿ ಹೆಲಿಕಾಪ್ಟರ್ನಿಂದ ರಕ್ಷಿಸಲಾಗಿದೆ. ಬಿಆರ್ಒ ಅವರ ತವಾಘಾಟ್-ಲಿಪುಲೇಖ್ ರಸ್ತೆಯು ಮಾಲ್ಘಾಟ್ನಲ್ಲಿ ಎರಡು ವಾರಗಳ ಕಾಲ ನಿರಂತರ ಮಳೆಯಿಂದಾಗಿ ಮುಚ್ಚಲ್ಪಟ್ಟಿದೆ. ಇದರಿಂದ 62 ವೃದ್ಧರು, ಮಹಿಳೆಯರು, ಪುರುಷರು ಮತ್ತು ಮಕ್ಕಳು ವ್ಯಾಸ್ ಕಣಿವೆಯ ಹಳ್ಳಿಗಳಲ್ಲಿ ಸಿಕ್ಕಿಬಿದ್ದಿದ್ದರು. ಈ ಜನರು ಪೂಜೆಗಾಗಿ ವ್ಯಾಸ್ ಕಣಿವೆಗೆ ಹೋಗಿದ್ದರು. ಆದರೆ ಮಳೆಯಿಂದಾಗಿ ರಸ್ತೆ ಮುಚ್ಚಿದ್ದರಿಂದ ಅಲ್ಲಿ ಸಿಲುಕಿಕೊಂಡರು. ಮಾಹಿತಿಯ ಪ್ರಕಾರ, ಚಿನೂಕ್ ಹೆಲಿಕಾಪ್ಟರ್ ಮೂಲಕ 32 ಜನರನ್ನು ಗುಂಜಿಯಿಂದ ಪಿಥೋರಗಢಕ್ಕೆ ಕರೆತರಲಾಯಿತು. ಜೊತೆಗೆ ವಾಯುಪಡೆಯ ಎಲ್ ಎಚ್ ಹೆಲಿಕಾಪ್ಟರ್ ಮೂಲಕ 14 ಜನರನ್ನು ಸುರಕ್ಷಿತವಾಗಿ ಗುಂಜಿಯಿಂದ ಧಾರ್ಚುಲಾಗೆ ಸ್ಥಳಾಂತರಿಸಲಾಯಿತು. ಅಲ್ಲದೆ ಮೂರನೇ ಖಾಸಗಿ ಹೆಲಿಕಾಪ್ಟರ್ನಿಂದ 16 ಜನರನ್ನು ರಕ್ಷಿಸಲಾಗಿದೆ.