ಜುಲೈ 13ರವೆರೆಗೆ ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಭಾರಿ ಮಳೆ ಎಚ್ಚರಿಕೆ
ನವದೆಹಲಿ, ಜುಲೈ 8: ಮುಂದಿನ ಐದು ದಿನಗಳಲ್ಲಿ ಹಲವು ರಾಜ್ಯಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಶುಕ್ರವಾರ ಮುನ್ಸೂಚನೆ ನೀಡಿದೆ. ದಕ್ಷಿಣ ಜಾರ್ಖಂಡ್ ಅಕ್ಕಪಕ್ಕದ ರಾಜ್ಯಗಳಲ್ಲಿ ಚಂಡಮಾರುತ ವಿಸ್ತರಿಸುತ್ತದೆ ಎಂದು ಐಎಂಡಿ ಎಚ್ಚರಿಸಿದೆ.
ಹಿಮಾಚಲ ಪ್ರದೇಶ, ಉತ್ತರಾಖಂಡ, ಒಡಿಶಾ, ಛತ್ತೀಸ್ಗಢ, ಮಧ್ಯಪ್ರದೇಶ, ಮಹಾರಾಷ್ಟ್ರ, ಗುಜರಾತ್, ಕೇರಳ, ಕರಾವಳಿ ಆಂಧ್ರ ಪ್ರದೇಶ, ತೆಲಂಗಾಣ ಮತ್ತು ಕರ್ನಾಟಕದಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ಇದೆ. ಕಳೆದ ನಾಲ್ಕು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಮಹಾರಾಷ್ಟ್ರ ತತ್ತರಿಸಿದ್ದು, ಮುಂದಿನ 24 ಗಂಟೆಗಳ ಕಾಲ ಮುಂಬೈಗೆ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ.
ಮಳೆ; ಮುಂಬೈನಲ್ಲಿ 24 ಗಂಟೆಗಳ ರೆಡ್ ಅಲರ್ಟ್ ಘೋಷಣೆ
ಗುಜರಾತ್ಗೆ ಸಂಬಂಧಿಸಿದಂತೆ, ಹವಾಮಾನ ಇಲಾಖೆ, ಜುಲೈ 11 ರವರೆಗೆ ಅತಿ ಹೆಚ್ಚು ಮಳೆಯ ಮುನ್ಸೂಚನೆ ನೀಡಿದೆ, ಆದರೆ ಮಧ್ಯ ಮಹಾರಾಷ್ಟ್ರದಲ್ಲಿ ಜುಲೈ 10 ಮತ್ತು 11 ರಂದು ತುಂತುರು ಮಳೆಯಾಗುವ ನಿರೀಕ್ಷೆಯಿದೆ. ಜುಲೈ 9ರಂದು ಕರಾವಳಿ ಕರ್ನಾಟಕ, ಜುಲೈ 8 ಮತ್ತು 11 ರಂದು ಕರಾವಳಿ ಆಂಧ್ರ ಪ್ರದೇಶ, ತೆಲಂಗಾಣ, ಜುಲೈ 8ರಂದು ದಕ್ಷಿಣ ಒಳ ಕರ್ನಾಟಕ, ಜುಲೈ 8 ಮತ್ತು 10 ರಂದು ಪಶ್ಚಿಮ ಮಧ್ಯಪ್ರದೇಶ, ಜುಲೈ11 ರಂದು ಪೂರ್ವ ಮಧ್ಯಪ್ರದೇಶ ಮತ್ತು ಛತ್ತೀಸ್ಗಢದಲ್ಲಿ ಜುಲೈ 11 ರಂದು ಭಾರಿ ಮಳೆಯಾಗುವ ಮುನ್ಸೂಚನೆ ನೀಡಿದೆ.
ಕರ್ನಾಟಕದಲ್ಲೂ ಭಾರಿ ಮಳೆ ಸೂಚನೆ
ರಾಜ್ಯದ ಕರಾವಳಿ, ಮಲೆನಾಡು ಪ್ರದೇಶಗಳನ್ನೂ ಜುಲೈ 13ರವರೆಗೆ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈಗಾಗಲೇ ಭಾರಿ ಮಳೆಯಿಂದ ರಾಜ್ಯದ ಮಲೆನಾಡು, ಕರಾವಳಿ ಭಾಗದ ಜನತೆ ತತ್ತರಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವು ಕಡೆ ಭೂಕುಸಿತ ಸಂಭವಿಸಿದೆ. ರಾಜ್ಯದ ಬಹುತೇಕ ನದಿಗಳು ತುಂಬಿ ಹರಿಯುತ್ತಿದ್ದು, ಜಲಾಶಯಗಳಿಗೆ ಒಳಹರಿವು ಹೆಚ್ಚಾಗಿದೆ. ಕಬಿನಿ ಜಲಾಶಯ ತುಂಬುವ ಹಂತದಲ್ಲಿದ್ದು ಯಾವುದೇ ಕ್ಷಣದಲ್ಲಾದರೂ ಜಲಾಶಯದಿಂದ ನೀರು ಹೊರಬಿಡಲಾಗುತ್ತದೆ ಎಂದು ಹೇಳಲಾಗಿದೆ.
ಕೇರಳದಲ್ಲಿ ರೆಡ್ ಅಲರ್ಟ್; 5 ದಿನ ಭಾರೀ ಮಳೆ ನಿರೀಕ್ಷೆ
ಹಿಮಾಚಲ, ಉತ್ತರಾಖಂಡದಲ್ಲಿ ಭಾರಿ ಮಳೆ
ಜುಲೈ 8 ಮತ್ತು 9 ರಂದು ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರಾಖಂಡದಲ್ಲಿ ಶನಿವಾರ (ಜುಲೈ 9) ಅತಿ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ. ಜುಲೈ 8 ಮತ್ತು 9 ಕ್ಕೆ ಕಂಗ್ರಾ, ಮಂಡಿ, ಸಿರ್ಮೌರ್ ಮತ್ತು ಸೋಲನ್ ಜಿಲ್ಲೆಗಳಿಗೆ ತಮ್ಮ ಕಚೇರಿ ಆರೆಂಜ್ ಅಲರ್ಟ್ ಘೋಷಿಸಿದೆ ಎಂದು ಶಿಮ್ಲಾದಲ್ಲಿರುವ ಭಾರತೀಯ ಹವಾಮಾನ ಇಲಾಖೆಯಯ ಹಿರಿಯ ವಿಜ್ಞಾನಿ ಎಸ್ಕೆ ಶರ್ಮಾ ಶುಕ್ರವಾರ ತಿಳಿಸಿದ್ದಾರೆ. ಮುಂದಿನ 4-5 ದಿನಗಳ ಕಾಲ ಮಳೆ ಚಟುವಟಿಕೆ ಮುಂದುವರಿಯಲಿದೆ ಎಂದರು.
ಉತ್ತರ ಭಾರತದಲ್ಲಿ ಭಾರಿ ಮಳೆ ಸಾಧ್ಯತೆ
ಗುಡುಗು ಮತ್ತು ಮಿಂಚುಗಳೊಂದಿಗೆ ಪೂರ್ವ ಉತ್ತರ ಪ್ರದೇಶದಲ್ಲಿ ಮತ್ತು ಪಶ್ಚಿಮ ಉತ್ತರ ಪ್ರದೇಶ, ಪಂಜಾಬ್, ಹರಿಯಾಣ, ಚಂಡೀಗಢ, ದೆಹಲಿ ಮತ್ತು ರಾಜಸ್ಥಾನಗಳಲ್ಲಿ ಶುಕ್ರವಾರ (ಜುಲೈ 8) ಚದುರಿದ ಮಳೆಯಾಗುತ್ತದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಶನಿವಾರದಿಂದ ಎರಡು ದಿನಗಳ ಕಾಲ ಈ ಪ್ರದೇಶಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ.
"8 ಮತ್ತು 10 ರಂದು ಪಂಜಾಬ್, ಹರಿಯಾಣ, ಚಂಡೀಗಢದಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ, ಪಶ್ಚಿಮ ಉತ್ತರ ಪ್ರದೇಶ, ರಾಜಸ್ಥಾನ, ಉತ್ತರ ಪಂಜಾಬ್ ಮತ್ತು ಉತ್ತರ ಹರಿಯಾಣದಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಜುಲೈ 9ರಂದು ದಕ್ಷಿಣ ರಾಜಸ್ಥಾನದಲ್ಲಿ ಭಾರಿ ಮಳೆಯಾಗಬಹುದು" ಎಂದು ಭಾರತಯ ಹವಾಮಾನ ಇಲಾಖೆ ತಿಳಿಸಿದೆ.
ಒಡಿಶಾ, ಆಂಧ್ರ ಕರಾವಳಿಯಲ್ಲಿ ಭಾರಿ ಮಳೆ ಸಾಧ್ಯತೆ
ಒಡಿಶಾ ಕರಾವಳಿಯಲ್ಲಿ ಕಡಿಮೆ ಒತ್ತಡದ ಪ್ರದೇಶ ರಚನೆಯಾಗುವ ಸಾಧ್ಯತೆಯಿರುವುದರಿಂದ ಜುಲೈ 12-13 ರ ಅವಧಿಯಲ್ಲಿ ದಕ್ಷಿಣ ಒಡಿಶಾ ಮತ್ತು ದಕ್ಷಿಣ ಛತ್ತೀಸ್ಗಢ ಮತ್ತು ಉತ್ತರ ಕರಾವಳಿ ಆಂಧ್ರಪ್ರದೇಶದಲ್ಲಿ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಭಾರಿ ಮಳೆ, ಗಾಳಿ ನಿರೀಕ್ಷೆ ಇರುವುದರಿಂದ ಕರಾವಳಿ ಭಾಗದ ಜನರಿಗೆ ಎಚ್ಚರಿಕೆಯಿಂದ ಇರುವಂತೆ ಹವಾಮಾನ ಇಲಾಖೆ ಸೂಚನೆ ನೀಡಿದೆ. ಮೀನುಗಾರಿಕೆಗೆ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ.