ಮನೆ-ಹೊಲವೆಲ್ಲ ನೀರುಪಾಲು: ನಮ್ಮ ನಾಳೆಗಳಿಗೆ ಗತಿ ಯಾರು?
ದಿಸ್ಪುರ್(ಅಸ್ಸಾಂ): ಜುಲೈ 10: ಜಲಾವೃತವಾದ ಹಳ್ಳಿಗಳು, ಮೇಲ್ಛಾವಣಿ ಇಲ್ಲದ ಮನೆಗಳು, ಸಾರಿಗೆಗೆ ದೋಣಿಯೇ ಗತಿ, ನಿರ್ಗತಿಕ ಜನರ ಆಕ್ರಂದನ, ಜನರನ್ನು ಉಳಿಸಲು ರಕ್ಷಣಾ ತಂಡಗಳ ಹರಸಾಹಸ... ಇದು ಸದ್ಯಕ್ಕೆ ಅಸ್ಸಾಮಿನ ಚಿತ್ರಣ.
ತಾಯಿಯೊಬ್ಬರು, ತಾವು ಅರ್ಧ ನೀರಿನಲ್ಲಿ ಮುಳುಗಿದ್ದರೂ, ತಮ್ಮ ಮಗುವನ್ನು ದೊಡ್ಡ ಪಾತ್ರೆಯೊಂದರಲ್ಲಿ ಕೂರಿಸಿಕೊಂಡು ಆತನ ರಕ್ಷಣೆಗೆ ಮುಂದಾಗಿರುವ ಚಿತ್ರವೊಂದು, ತಾಯಿ ಪ್ರೀತಿಯ ಮಹೋನ್ನತಿಯನ್ನು ಅರ್ಥಮಾಡಿಸುವ ಜೊತೆಯಲ್ಲೇ ಇಂಥ ಸನ್ನಿವೇಶ ಸೃಷ್ಟಿಸಿದ ವರುಣ ದೇವನ ಕುರಿತು ಮುನಿಸುಹುಟ್ಟಿಸುತ್ತದೆ!
ಅಸ್ಸಾಂ ರಾಜ್ಯದಾದ್ಯಂತ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಗೆ ಇದುವರೆಗೂ 25 ಜನ ಮೃತಪಟ್ಟಿದ್ದು, ನಾಲ್ಕು ಲಕ್ಷಕ್ಕೂ ಹೆಚ್ಚು ಜನರು ನಿರಾಶ್ರಿತರಾಗಿದ್ದಾರೆ. ರಾಜ್ಯದ ಒಟ್ಟು 15 ಜಿಲ್ಲೆಗಳು ಪ್ರವಾಹವನ್ನು ಎದುರಿಸುತ್ತಿದ್ದು, ರಕ್ಷಣಾ ಕಾರ್ಯ ನಡೆಯುತ್ತಿದೆ.
ಅಸ್ಸಾಮಿನ ಸಂಕಷ್ಟದಲ್ಲಿ ನಾವು ಜೊತೆಗಿರುತ್ತೇವೆಂದು ಪ್ರಧಾನಿ ನರೇಂದ್ರ
ಮೋದಿ, ಅಸ್ಸಾ ಮುಖ್ಯಮಂತ್ರಿ ಸರ್ಬಾನಂದ್ ಸೋನೋವಾಲ್ ಅವರಿಗೆ ಅಭಯ ನೀಡಿದ್ದಾರೆ. ಈಗಾಗಲೇ ಒಟ್ಟು 108 ಸಂತ್ರಸ್ತ ಶಿಬಿರಗಳನ್ನು ತೆರೆಯಲಾಗಿದ್ದು, ಆಹಾರ ಮತ್ತು ಅತ್ಯಾವಶ್ಯಕಗಳನ್ನು ಒದಗಿಸಲಾಗುತ್ತಿದೆ. ವೈದ್ಯಕೀಯ ಸೌಲಭ್ಯಗಳನ್ನೂ ನೀಡಲಾಗುತ್ತಿದೆ.
ಅಸ್ಸಾಮಿನ ಪ್ರವಾಹದ ಚಿತ್ರಗಳಂತೂ ಹೃದಯವನ್ನು ಕಿವುಚುತ್ತವೆ. ಕೃಷಿ ಭೂಮಿ, ಜಾನುವಾರು, ಮನೆ ಎಲ್ಲವನ್ನೂ ಕಳೆದುಕೊಂಡು ಭವಿಷ್ಯದ ಕತೆಯೇನು ಎಂದು ತಲೆಮೇಲೆ ಕೈಹೊತ್ತು ಕೂತ ಅಲ್ಲಿನ ಜನರ ಪಾಡು ಯಾರಿಗೂ ಬೇಡ! (ಚಿತ್ರ ಕೃಪೆ: ಪಿಟಿಐ)

ಈ ದೃಶ್ಯ ವಿವರಿಸುವುದಕ್ಕೆ ಪದವೆಲ್ಲಿದೆ?
ನೆಲಕ್ಕುರುಳಿದ ಮನೆಯ ಅವಶೇಷಗಳ ನಡುವೆ ಹೂತುಹೋಗಿ ಮೃತಳಾದ ತನ್ನ ಏಳು ವರ್ಷದ ಮಗಳ ಶೂವೊಂದನ್ನು ಹಿಡಿದು ನಿಂತಿ ಈ ತಾಯಿಯ ಚಿತ್ರ ಮನಕಲಕದೇ ಇದ್ದೀತೇ?

ಗೂಡು ತೊರೆವ ಸಂಕಟ
ಹಲವು ವರ್ಷಗಳಿಂದ ಜೀವನ ನಡೆಸುತ್ತಿದ್ದ ಮನೆಯನ್ನು ಬಿಟ್ಟು, ಸುರಕ್ಷಿತ ಸ್ಥಳವೊಂದಕ್ಕೆ ಭಾರದ ಮನಸ್ಸಿನಿಂದ ತೆರಳುತ್ತಿರುವ ತಾಯಿ. ಒಂದೇ ಒಂದು ಬಿದರಿನ ಗಳದ ಮೇಲೆ, ಮಗುವನ್ನೂ ಕಂಕಳಲ್ಲಿ ಹೊತ್ತು ನಡೆಯುತ್ತಿರುವ ವೀ ದೃಶ್ಯವನ್ನು ಸಾಹಸ ಎನ್ನದಿರುವದಕ್ಕಾಗುತ್ತದೆಯೇ?

ಎಲ್ಲಿಗೆ ಪಯಣ..?
ಪ್ರವಾಹ ಉಂಟಾಗಿರುವ ಸ್ಥಳದಿಂದ ಮತ್ತೊಂದು ಸುರಕ್ಷಿತ ಸ್ಥಳಕ್ಕೆ ದೋಣಿಯಲ್ಲಿ ಹೊರಟಿರುವ ಜನಕ್ಕೆ ತಮ್ಮ ಪಯಣ ಎಲ್ಲಿಗೆ ಎಂಬ ಅರಿವಿಲ್ಲ! ಈ ವಿಚಿತ್ರ ಸಂಕಟವನ್ನು ಅನುಭವಿಸಲೇಬೇಕಾದ ಅನಿವಾರ್ಯತೆಯಲ್ಲಿ ಅವರೆಲ್ಲ ಬದುಕುತ್ತಿದ್ದಾರೆ.

ನಮ್ಮ ನಾಳೆಗಳ ಗತಿಯೇನು?
ಕೆಲವೆಡೆಯಂತೂ ಅಸ್ಸಾಮಿನ ಹಳ್ಳಿಗೆ ಹಳ್ಳಿಯೇ ಜಲಾವೃತವಾಗಿದೆ. ಮನೆಗಳ ಹೆಂಚು ಬಿಟ್ಟರೆ ಬೇರೇನೂ ಕಾಣಿಸೋದಿಲ್ಲ. ಆರ್ಥಿಕವಾಗಿ ಸದಾ ಸಂಕಷ್ಟದಲ್ಲೇ ಇರುವ ಇವರೆಲ್ಲರ ಸೂರನ್ನೂ ಹೀಗೆ ಮಳೆ ನುಂಗಿಬಿಟ್ಟರೆ ನಮ್ಮ ನಾಳೆಗಳ ಗತಿ ಏನು ಎಂಬುದು ಸದ್ಯಕ್ಕೆ ಅವರೆಲ್ಲರ ಪ್ರಶ್ನೆ.












Click it and Unblock the Notifications