ಸರ್ಕಾರದ ಮಾರ್ಗಸೂಚಿ: ಕೊರೊನಾ ರೋಗಿಗಳು ಈ ಔಷಧಿಗಳನ್ನು ತೆಗೆದುಕೊಳ್ಳುವಂತಿಲ್ಲ
ನವದೆಹಲಿ, ಜೂನ್ 07: ಭಾರತದಲ್ಲಿ ಕೊರೊನಾವೈರಸ್ ಸೋಂಕು ತಗುಲಿದ್ದರೂ ಕೂಡಾ ಸೋಂಕಿತರಿಗೆ ಇನ್ನು ಮುಂದೆ ಕೆಲವು ಔಷಧಿಗಳನ್ನು ನೀಡುವಂತಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಆರೋಗ್ಯ ಸೇವೆಗಳ ನಿರ್ದೇಶನಾಲಯ ಹೊಸ ಮಾರ್ಗಸೂಚಿಯನ್ನು ಹೊರಡಿಸಿದೆ.
ಕಳೆದ ಮೇ 27ರಂದು ದೇಶದ ಕೊವಿಡ್-19 ಸೋಂಕಿತರಲ್ಲಿ ಸೌಮ್ಯ ಲಕ್ಷಣಗಳನ್ನು ಹೊಂದಿರುವ ರೋಗಿಗಳಿಗೆ ಯಾವ ರೀತಿಯ ಔಷಧಿಗಳನ್ನು ನೀಡಬೇಕು. ರೋಗದ ಗಂಭೀರ ಸಮಸ್ಯೆಗಳನ್ನು ಹೊಂದಿರುವ ರೋಗಿಗಳಿಗೆ ಯಾವ ಔಷಧಿಗಳನ್ನು ನೀಡಬೇಕು ಎಂಬುದರ ಬಗ್ಗೆ ಮಾರ್ಗಸೂಚಿಯಲ್ಲಿ ಉಲ್ಲೇಖಿಸಲಾಗಿದೆ.
ಒಂದು ಬಾರಿ ಕೊರೊನಾವೈರಸ್ ಬಂದು ಹೋಗುವುದು ಒಳ್ಳೆಯದ್ದೇ!?
ಕೊರೊನಾವೈರಸ್ ಸೋಂಕಿನ ಸೌಮ್ಯ ಲಕ್ಷಣಗಳನ್ನು ಹೊಂದಿರುವ ರೋಗಿಗಳಿಗೆ ಹೈಡ್ರೋಕ್ಸಿ ಕ್ಲೋರೋಕ್ಯುನ್, ಇವೆರ್ ಮೆಕ್ಟಿನ್, ಡೊಕ್ಸಿಸಿಕ್ಲಿನ್, ಜಿಂಕ್ ಮತ್ತು ಮಲ್ಟಿ ವಿಟಮಿನ್ ಔಷಧಿಗಳನ್ನು ನೀಡುವಂತಿಲ್ಲ ಎಂದು ವೈದ್ಯರಿಗೆ ಮಾರ್ಗಸೂಚಿಗಳ ಮೂಲಕ ಸೂಚಿಸಲಾಗಿದೆ.
ಶೀತ ಮತ್ತು ಜ್ವರ ಕಾಣಿಸಿರುವ ಸೋಂಕಿತರಿಗೆ ಔಷಧಿಗಳು
ಕೊರೊನಾವೈರಸ್ ಸೋಂಕಿತರಲ್ಲಿ ಜ್ವರದಿಂದ ಬಳಲುತ್ತಿರುವವರಿಗೆ ಆಂಟಿಪೈರೆಟಿಕ್ ಮತ್ತು ಶೀತದ ಲಕ್ಷಣಗಳನ್ನು ಹೊಂದಿರುವ ಕೊವಿಡ್-19 ಸೋಂಕಿತರಿಗೆ ಆಂಟಿಟಸ್ಸಿವ್ ಔಷಧಿಯನ್ನು ಮಾತ್ರ ನೀಡುವುದಕ್ಕೆ ಅನುಮತಿ ನೀಡಲಾಗಿದೆ. ಅನಗತ್ಯವಾಗಿ ಕೊರೊನಾವೈರಸ್ ಸೋಂಕು ತಪಾಸಣೆಗಾಗಿ ಸಿಟಿ ಸ್ಕ್ಯಾನ್ ರೀತಿಯ ಪರೀಕ್ಷೆಗಳಿಗೆ ಶಿಫಾರಸ್ಸು ಮಾಡುವಂತಿಲ್ಲ ಎಂದು ಸಚಿವಾಲಯವು ಸೂಚನೆ ನೀಡಿದೆ.
ಕೊವಿಡ್-19 ರೋಗಿಗಳಿಗೆ ನಿರ್ದಿಷ್ಟ ಔಷಧಿ ಬೇಕಿಲ್ಲ
ಭಾರತದಲ್ಲಿ ಕೊರೊನಾವೈರಸ್ ಸೋಂಕು ತಗುಲಿರುವ ರೋಗಿಗಳಿಗೆ ನೀಡುವುದಕ್ಕೆ ಪ್ರತ್ಯೇಕ ಹಾಗೂ ನಿಗದಿತ ಔಷಧಿಗಳಿಲ್ಲ. ಈ ಹಿನ್ನೆಲೆ ಸಾಮಾನ್ಯ ಔಷಧಿಗಳ ಜೊತೆಗೆ ವಿಟಮಿನ್ ವೃದ್ಧಿಸುವ ಔಷಧಿಗಳನ್ನು ನೀಡಲಾಗುತ್ತಿದೆ. ಇದರ ಹೊರತಾಗಿ ರೋಗಿಯ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದರೆ ಹೆಚ್ಚಿನ ಚಿಕಿತ್ಸೆಗೆ ಒಳಪಡಿಸಲಾಗುವುದು ಎಂದು ಕೇಂದ್ರ ಆರೋಗ್ಯ ಮತ್ತು ಕುಟಂಬ ಕಲ್ಯಾಣ ಸಚಿವಾಲಯ ಸ್ಪಷ್ಟಪಡಿಸಿದೆ.
WHO ಐವರ್ ಮೆಕ್ಟಿನ್ ಬಳಸದಂತೆ ಸೂಚನೆ
ವಿಶ್ವ ಆರೋಗ್ಯ ಸಂಸ್ಥೆಯು ಈಗಾಗಲೇ ಐರವ್ ಮೆಕ್ಟಿನ್ ಔಷಧಿಯನ್ನು ಬಳಸದಂತೆ ಸಲಹೆ ನೀಡಿದೆ. ಕೊರೊನಾವೈರಸ್ ಸೋಂಕಿಗೆ ಪ್ರೊಪಿಲಾಕ್ಸಿಸ್ ಚಿಕಿತ್ಸೆ ನೀಡುವ ಉದ್ದೇಶದಿಂದ ಪ್ಯಾರಾಸೈಟ್ ವಿರೋಧಿ ಔಷಧಿಗಳನ್ನು ಪ್ಯಾರಾಸ್ಟಿಕ್ ಸಮಸ್ಯೆ ಉಳ್ಳವರ ಮೇಲೆ ಪ್ರಯೋಗಿಸದಂತೆ ಸಲಹೆ ನೀಡಲಾಗಿದೆ. ಕೊವಿಡ್-19 ಸೋಂಕಿನ ಎರಡನೇ ಅಲೆಯು ಸ್ಟಿರಾಯ್ಡ್ ಮಾತ್ರೆಗಳ ಹೆಚ್ಚು ಬಳಕೆಯಿಂದಾಗಿ ಕಪ್ಪು ಶಿಲೀಂಧ್ರದ ರೋಗವು ಹೆಚ್ಚಾಗಿ ಕಾಣಿಸಿಕೊಂಡಿತ್ತು.
ದೇಶದಲ್ಲಿ ಕೊವಿಡ್-19 ಸೋಂಕಿತ ಪ್ರಕರಣಗಳ ಏರಿಳಿತ
ಭಾರತದಲ್ಲಿ ಒಂದೇ ದಿನ 1,00,636 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಇದೇ ಅವಧಿಯಲ್ಲಿ 1,74,399 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಒಂದೇ ದಿನ ಕೊರೊನಾವೈರಸ್ ಮಹಾಮಾರಿಗೆ 2427 ಮಂದಿ ಪ್ರಾಣ ಬಿಟ್ಟಿದ್ದಾರೆ. ದೇಶದಲ್ಲಿ ಒಟ್ಟು 2,89,09,975 ಕೊರೊನಾವೈರಸ್ ಸೋಂಕಿತ ಪ್ರಕರಣಗಳು ವರದಿಯಾಗಿವೆ. ಈ ಪೈಕಿ ಇದುವರೆಗೂ 2,71,59,180 ಸೋಂಕಿತರು ಗುಣಮುಖರಾಗಿದ್ದು, ಮಹಾಮಾರಿಯಿಂದ ಒಟ್ಟು 3,49,186 ಜನರು ಪ್ರಾಣ ಬಿಟ್ಟಿದ್ದಾರೆ. ಇದರ ಹೊರತಾಗಿ 14,01,609 ಕೊರೊನಾವೈರಸ್ ಸಕ್ರಿಯ ಪ್ರಕರಣಗಳು ಪತ್ತೆಯಾಗಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
ದೇಶದಲ್ಲಿ 15 ಲಕ್ಷ ಜನರಿಗೆ ಕೊರೊನಾವೈರಸ್ ತಪಾಸಣೆ
ಭಾರತದಲ್ಲಿ ಇದೇ ಮೊದಲ ಬಾರಿಗೆ ಒಂದೇ ದಿನ ಅತಿಹೆಚ್ಚು ಜನರಿಗೆ ಕೊರೊನಾವೈರಸ್ ಸೋಂಕಿತ ಪರೀಕ್ಷೆ ನಡೆಸಲಾಗಿದೆ. ಕಳೆದ 24 ಗಂಟೆಗಳಲ್ಲಿ 15,87,589 ಜನರ ಮಾದರಿ ತಪಾಸಣೆಗೆ ಒಳಪಡಿಸಲಾಗಿದೆ. ದೇಶದಲ್ಲಿ ಈವರೆಗೂ 36,63,34,111 ಜನರಿಗೆ ಕೊವಿಡ್-19 ಸೋಂಕಿನ ತಪಾಸಣೆ ನಡೆಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ ಮಾಹಿತಿ ನೀಡಿದೆ.
Recommended Video