ದೇಶದಲ್ಲಿ ದ್ವೇಷ ಹರಡುವ ಸಂಘಟನೆಗಳನ್ನು ನಿಷೇಧಿಸಬೇಕು: ಅಖಿಲೇಶ್ ಯಾದವ್
ಲಕ್ನೋ, ಮೇ 6: ದೇಶ ಮತ್ತು ಸಮಾಜದಲ್ಲಿ ದ್ವೇಷ ಹರಡುವ ಸಂಘಟನೆಗಳನ್ನು ನಿಷೇಧಿಸಬೇಕು ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ, ಉತ್ತರಪ್ರದೇಶದ ಮಾಜಿ ಸಿಎಂ ಅಖಿಲೇಶ್ ಯಾದವ್ ಹೇಳಿದ್ದಾರೆ.
ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಗೆದ್ದರೆ ಬಜರಂಗದಳ ಮತ್ತು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಕಾಂಗ್ರೆಸ್ ಭರವಸೆ ನೀಡಿದ ಹಿನ್ನೆಲೆಯಲ್ಲಿ ಅಖಿಲೇಶ್ ಯಾದವ್ ಅವರು ಈ ಹೇಳಿಕೆ ನೀಡಿದ್ದಾರೆ.

ಸಮಾಜವಾದಿ ಪಕ್ಷ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಸರ್ದಾರ್ ವಲ್ಲಭಭಾಯಿ ಪಟೇಲ್ ಆರ್ಎಸ್ಎಸ್ ಅನ್ನು ನಿಷೇಧಿಸಿದ ಸಮಯವಿತ್ತು. ಬಿಜೆಪಿ ಆಡಳಿತದಲ್ಲಿ ಹಣದುಬ್ಬರ ಮತ್ತು ನಿರುದ್ಯೋಗವು ಉತ್ತುಂಗದಲ್ಲಿದೆ. ಅಭಿವೃದ್ಧಿ ನಿಂತಿದೆ. ದೇಶ ಮತ್ತು ಸಮಾಜದಲ್ಲಿ ದ್ವೇಷವನ್ನು ಹರಡುವ ಸಂಘಟನೆಗಳನ್ನು ನಿಷೇಧಿಸಬೇಕು, ಸರ್ದಾರ್ ವಲ್ಲಭಭಾಯ್ ಪಟೇಲ್ ಆರ್ಎಸ್ಎಸ್ ಅನ್ನು ನಿಷೇಧಿಸಿದ ಸಮಯವಿತ್ತು ಎಂದು ಹೇಳಿದ್ದಾರೆ.
ಮಂಗಳವಾರ ಬಿಡುಗಡೆಯಾದ ಕರ್ನಾಟಕ ಚುನಾವಣಾ ಪ್ರಣಾಳಿಕೆಯಲ್ಲಿ, ಜಾತಿ ಮತ್ತು ಧರ್ಮದ ಆಧಾರದ ಮೇಲೆ ಸಮುದಾಯಗಳ ನಡುವೆ "ದ್ವೇಷ ಹರಡುವ" ಬಜರಂಗದಳ ಮತ್ತು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದಂತಹ ವ್ಯಕ್ತಿಗಳು ಮತ್ತು ಸಂಘಟನೆಗಳ ವಿರುದ್ಧ ದೃಢ ಮತ್ತು ನಿರ್ಣಾಯಕ ಕ್ರಮ ತೆಗೆದುಕೊಳ್ಳಲು ಬದ್ಧವಾಗಿದೆ. ಈ ಕ್ರಮವು ದ್ವೇಷ ಹರಡುವ ಸಂಘಟನೆಗಳ ವಿರುದ್ಧ ನಿಷೇಧವನ್ನು ಒಳಗೊಂಡಿರುತ್ತದೆ ಎಂದು ಕಾಂಗ್ರೆಸ್ ಪಕ್ಷವು ಭರವಸೆ ನೀಡಿದೆ.

ಕಳೆದ ಎರಡು ದಿನಗಳ ಹಿಂದೆ ಯಾವುದೇ ಸಂಸ್ಥೆ ಯಾವ ವ್ಯಕ್ತಿಯೊಬ್ಬ ಭಯದ ವಾತಾವರಣ ಸೃಷ್ಟಿಸುತ್ತಿದ್ದರೆ, ವಿದ್ವೇಷಕ ಕೃತ್ಯವನ್ನು ಪ್ರಚುರ ಪಡಿಸುತ್ತಿದ್ದರೆ ಅದು ಸಂವಿಧಾನ ವಿರೋಧವೆಂದು ಸುಪ್ರೀಂ ಕೋರ್ಟ್ ಹೇಳಿದೆ. ಅಂಥವರ ವಿರುದ್ಧ ಸುಮೋಟೊ ಕೇಸು ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದೆ. ಆದ್ದರಿಂದ ಈ ವಿಚಾರದಲ್ಲಿ ಕಾನೂನು ಪ್ರಕಾರ ನಡೆದರೆ ಬಿಜೆಪಿಯವರಿಗೆ ಸಮಸ್ಯೆಯೇನು ಎಂದು ಮಾಜಿ ಸಿಎಂ ವೀರಪ್ಪ ಮೊಯ್ಲಿ ಪ್ರಶ್ನಿಸಿದರು.
ಹಿಂದೆ ಗೋವಾದಲ್ಲಿ ಮನೋಹರ್ ಪರಿಕ್ಕರ್ ಸರ್ಕಾರ ಶ್ರೀರಾಮ ಸೇನೆಯನ್ನು ಬ್ಯಾನ್ ಮಾಡಿತ್ತು. ಹಾಗದರೇ ಇದು ರಾಮನ ವಿರೋಧವಲ್ಲವೇ ಎಂದು ವೀರಪ್ಪ ಮೊಯ್ಲಿ ಪ್ರಶ್ನಿಸಿದರು. ಬಿಜೆಪಿಯವರು ದೇಶದಲ್ಲಿ ಅತೀ ದೊಡ್ಡ ಪ್ರತಿಮೆ ಸ್ಥಾಪಿಸಿದ ವಲ್ಲಭಭಾಯ್ ಪಟೇಲ್ ಅವರೇ ಹಿಂದೆ ಆರ್ಎಸ್ಎಸ್ ಅನ್ನು ಬ್ಯಾನ್ ಮಾಡಿದ್ದರು. ಆದರೆ ಜವಾಹರಲಾಲ್ ನೆಹರೂ ಅವರು ಈ ಬ್ಯಾನ್ ಅನ್ನು ಹಿಂಪಡೆದಿದ್ದರು ಎಂದು ಹೇಳಿದ್ದರು.
ಅಮಿತ್ ಶಾ ಹಾಗೂ ಪ್ರಧಾನಿ ಮೋದಿ ಅವರು ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿಯೇ ಇದ್ದಾರೆ. ರಾಜ್ಯದ ಚುನಾವಣೆಗೆಂದು ದೇಶದ ಪ್ರಧಾನಿಯವರು ಇಷ್ಟೊಂದು ಸಮಯ ಕಳೆದಿದ್ದು ಇತಿಹಾಸದಲ್ಲಿಯೇ ಇಲ್ಲ. ತಾವು ಗೆಲ್ಲುತ್ತೇವೆ ಎಂದು ನಂಬಿಕೆಯಿದ್ದರೆ ಅವರು ಇಷ್ಟೊಂದು ಸಮಯ ಇಲ್ಲಿ ಇರಬೇಕೆಂದಿಲ್ಲ. ಇದಕ್ಕೆ ಅವರಿಗಿರುವ ಸೋಲುವ ಭೀತಿಯೇ ಕಾರಣ ಎಂದು ಮಾಜಿ ಸಿಎಂ ವೀರಪ್ಪ ಮೊಯಿಲಿ ಹೇಳಿದ್ದರು.












Click it and Unblock the Notifications