ಬಾಬಾ ಡ್ರಾಮಾ ಅಂತ್ಯ, ರಾಮ್ಪಾಲ್ ಬಂಧನ
ನವದೆಹಲಿ. 20 : ಕೊನೆಗೂ ಹರ್ಯಾಣ ಪೊಲೀಸರು ಸತ್ಯಲೋಕ ಆಶ್ರಮದಲ್ಲಿ ಅಡಗಿದ್ದ ಸ್ವಯಂ ಘೋಷಿತ ದೇವಮಾನವ ರಾಮ್ಪಾಲ್ ಅವರನ್ನು ಬುಧವಾರ ರಾತ್ರಿ ಬಂಧಿಸಿದ್ದಾರೆ. ಬಾಬಾಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು, ಇಂದು ಕೋರ್ಟಿಗೆ ಹಾಜರು ಪಡಿಸಲಾಗುತ್ತದೆ.
ರಾಮ್ಪಾಲ್ ಜೊತೆಗೆ ಅವರ ಆಪ್ತ ಸಹಾಯಕ ಪುರುಷೋತ್ತಮ ದಾಸ್ ಸೇರಿದಂತೆ 270 ಜನರನ್ನು ಬಂಧಿಸಲಾಗಿದ್ದು ಅವರ ವಿರುದ್ಧ ರಾಜದ್ರೋಹ ಸೇರಿದಂತೆ ಹಲವು ಆರೋಪಗಳನ್ನು ಮಾಡಲಾಗಿದೆ. ಬಾಬಾ ಆಶ್ರಮದ ಮುಂದೆ ನೂರಾರು ಭಕ್ತರು ಬಾಬಾ ಬಂಧನ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಕೊಲೆ ಹಾಗೂ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ಗೆ ದೇವಮಾನವನನ್ನು ಹಾಜರುಪಡಿಸಲು ಪೊಲೀಸರು ಸಿದ್ಧತೆ ನಡೆಸುತ್ತಿದ್ದಾರೆ. ಹರ್ಯಾಣದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಕೇಂದ್ರ ಗೃಹ ಸಚಿವಾಲಯವು ರಾಜ್ಯಕ್ಕೆ 500ಕ್ಕೂ ಹೆಚ್ಚು ಸಿಬ್ಬಂದಿಯ ಅರೆಸೇನಾ ಪಡೆಯ ತುಕಡಿಗಳನ್ನು ರವಾನಿಸಿದೆ. [ಮಾಧ್ಯಮದ ಮೇಲೆ ಹರ್ಯಾಣ ಪೊಲೀಸ್ ಲಾಠಿ ಪ್ರಹಾರ]
ಹೊರಬಂದ ಭಕ್ತರು : ಕೆಲವು ದಿನಗಳಿಂದ ಸತ್ಯಲೋಕ ಆಶ್ರಮದಲ್ಲಿದ್ದ ಸಾವಿರಾರು ಭಕ್ತರು ಆಶ್ರಮದಿಂದ ಹೊರಬಂದಿದ್ದಾರೆ. ಸೋಮವಾರ ಪೊಲೀಸರು ಆಶ್ರಮದ ಮೇಲೆ ದಾಳಿ ನಡೆಸಿದ ನಂತರ ದೇವಮಾನವ ರಾಮ್ಪಾಲ್ ಖಾಸಗಿ ಬೆಂಗಾವಲು ಪಡೆ ಅವರೆಲ್ಲರನ್ನೂ ಒತ್ತೆಯಾಗಿರಿಸಿಕೊಂಡಿತ್ತು.

ಬುಧವಾರ ಪೊಲೀಸರು ಆಶ್ರಮ ಪ್ರವೇಶಿಸಿ ಬಾಬಾ ಬಂಧಿಸಿದ ಬಳಿಕ ಗುಂಪು ಗುಂಪಾಗಿ 10 ಸಾವಿರಕ್ಕೂ ಹೆಚ್ಚು ಭಕ್ತರ ದಂಡು ಹೊರ ಬಂದಿದೆ. ಆಶ್ರಮದಲ್ಲಿ ಸುಮಾರು 317 ಗನ್, ಪೆಟ್ರೋಲ್ ಬಾಂಬ್ ಹಾಗೂ 250 ಸಿಲಿಂಡರ್ ಹಾಗೂ ಶಸ್ತ್ರಾಸ್ತ್ರಗಳ ಸಂಗ್ರಹವಿದೆ ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications