Breaking News: ಹರ್ಯಾಣ ಚುನಾವಣೆ, ಬಿಜೆಪಿ ಮೊದಲ ಪಟ್ಟಿ 67 ಅಭ್ಯರ್ಥಿಗಳ ಘೋಷಣೆ
ನವದೆಹಲಿ, ಸೆಪ್ಟೆಂಬರ್ 05: ಹರ್ಯಾಣ ವಿಧಾನಸಭೆ ಚುನಾವಣೆ 2024ಕ್ಕೆ ಆಡಳಿತಾರೂಢ ಪಕ್ಷ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಿದೆ. 90 ವಿಧಾನಸಭಾ ಕ್ಷೇತ್ರಗಳ ಪೈಕಿ 67 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದೆ. ಅಕ್ಟೋಬರ್ 5ರಂದು ಒಂದೇ ಹಂತದಲ್ಲಿ ಹರ್ಯಾಣ ವಿಧಾನಸಭೆ ಚುನಾವಣೆಗೆ ಮತದಾನ ನಡೆಯಲಿದ್ದು, ಅಕ್ಟೋಬರ್ 8ರಂದು ಫಲಿತಾಂಶ ಪ್ರಕಟವಾಗಲಿದೆ.
ಕೇಂದ್ರ ಚುನಾವಣಾ ಸಮಿತಿ ಸಭೆಯ ಬಳಿಕ ಹರ್ಯಾಣ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದೆ. ಮೊದಲ ಪಟ್ಟಿಯಲ್ಲಿ ಹಲವಾರು ಹಿರಿಯ ನಾಯಕರ ಹೆಸರು ಘೋಷಣೆಯಾಗಿದೆ. ಪ್ರಸ್ತುತ ಕರ್ನಾಲ್ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಹರ್ಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಈ ಬಾರಿಯ ಚುನಾವಣೆಯಲ್ಲಿ ಕ್ಷೇತ್ರದ ಬದಲಾಯಿಸಿದ್ದಾರೆ. ಅವರು ಲಾಡ್ವಾ ಸ್ಥಾನದಿಂದ ಸ್ಪರ್ಧಿಸಲಿದ್ದಾರೆ.

ರಾಜ್ಯದಲ್ಲಿಯೇ ಟಿಕೆಟ್ಗಾಗಿ ಭಾರೀ ಪೈಪೋಟಿ ಎದುರಾಗಿದ್ದ ಕ್ಷೇತ್ರ ಬಾದಶಹಪುರ. ಮೊದಲ ಪಟ್ಟಿಯಲ್ಲಿಯೇ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯನ್ನು ಘೋಷಣೆ ಮಾಡಿದೆ. ರಾಜ್ಯದಲ್ಲಿಯೇ ಅತಿ ಹೆಚ್ಚು ಮತದಾರರು ಇರುವ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ರಾವ್ ನರಬೀರ್ ಸಿಂಗ್ ಸ್ಪರ್ಧಿಸಲಿದ್ದಾರೆ ಎಂದು ಬಿಜೆಪಿ ಹೇಳಿದೆ.
ಮೊದಲ ಪಟ್ಟಿಯಲ್ಲಿ ಸಚಿವ ಅನಿಲ್ ವಿಜ್ಗೆ ಅಂಬಾಲಾ ಕ್ಯಾಂಟ್, ರಾಜ್ಯಸಭಾ ಸದಸ್ಯರಾದ ಕಿರಣ್ ಚೌಧರಿ ಪುತ್ರಿ ಶ್ರುತಿ ಚೌಧರಿಗೆ ತೋಷಮ್ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ನೀಡಲಾಗಿದೆ. ಬಿಜೆಪಿ ಏಕಾಂಗಿಯಾಗಿ ಹರ್ಯಾಣ ವಿಧಾನಸಭೆ ಚುನಾವಣೆಯನ್ನು ಎದುರಿಸುತ್ತಿದೆ.
ಪ್ರಸ್ತುತ ಕರ್ನಾಲ್ ವಿಧಾನಸಭಾ ಕ್ಷೇತ್ರದ ಶಾಸಕರು ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ. ಆದರೆ ಈ ಬಾರಿಯ ಚುನಾವಣೆಯಲ್ಲಿ ಹಿರಿಯ ನಾಯಕ ಜಗಮೋಹನ್ ಆನಂದ್ಗೆ ಟಿಕೆಟ್ ನೀಡಲಾಗಿದೆ. ಇವರು ಮಾಜಿ ಮುಖ್ಯಮಂತ್ರಿ, ಹಾಲಿ ಕೇಂದ್ರ ಸಚಿವ ಮನೋಹರ್ ಲಾಲ್ ಖಟ್ಟರ್ ಆಪ್ತರು.
ಹಿರಿಯ ನಾಯಕ ಮತ್ತು ಮಾಜಿ ಸಚಿವ ಕ್ಯಾಪ್ಟನ್ ಅಭಿಮನ್ಯು ನಾರ್ನಾಂಡ್, ಭವ್ಯ ಬಿಷ್ಣೋಯ್ ಆದಂಪುರ, ಸುನೀತಾ ದುಗ್ಗಲ್ ರಾಟಿಯಾ ಕ್ಷೇತ್ರಗಳಿಂದ ಕಣಕ್ಕಿಳಿಯಲಿದ್ದಾರೆ. ಅಂಬಾಲಾ ಮೇಯರ್ ಶಕ್ತಿ ರಾಣಿ ಶರ್ಮಾಗೆ ಕಲ್ಕಾದಿಂದ ಸ್ಪರ್ಧಿಸಲು, ವಿಧಾನಸಭೆ ಸ್ಪೀಕರ್ ಜಿಯಾನ್ ಚಂದ್ ಗುಪ್ತಾಗೆ ಪಂಚಕುಲದಿಂದ ಟಿಕೆಟ್ ನೀಡಲಾಗಿದೆ.
ರಾನಿಯಾ ಕ್ಷೇತ್ರದ ಟಿಕೆಟ್ ಸಚಿವ ರಂಜಿತ್ ಸಿಂಗ್ ಚೌತಾಲಾ ಕೈ ತಪ್ಪಿದೆ. ಕ್ಷೇತ್ರದಿಂದ ಶಿಶ್ಪಾಲ್ ಕಾಂಬೋಜ್ಗೆ ಟಿಕೆಟ್ ನೀಡಲಾಗಿದೆ. ಮೊದಲ ಪಟ್ಟಿಯಲ್ಲಿ ಸಚಿವ ಸಂಜಯ್ ಸಿಂಗ್ ಮತ್ತು ಮಾಜಿ ಸಚಿವ ಸಂದೀಪ್ ಸಿಂಗ್ ಸೇರಿದಂತೆ ಕೆಲವು ಹಾಲಿ ಶಾಸಕರಿಗೆ ಟಿಕೆಟ್ ನೀಡಿಲ್ಲ. ಫರಿದಾಬಾದ್ನ ಹಾಲಿ ಶಾಸಲ ನರೇಂದರ್ ಗುಪ್ತಾ. ಆದರೆ ಚುನಾವಣೆಯಲ್ಲಿ ಮಾಜಿ ಸಚಿವ ವಿಪುಲ್ ಗೋಯೆಲ್ಗೆ ಟಿಕೆಟ್ ನೀಡಲಾಗಿದೆ.
ಜೆಜೆಪಿಯ ಬಂಡಾಯಗಾರ ರಾಮ್ ಕುಮಾರ್ ಗೌತಮ್ಗೆ ಸಫಿಡಾನ್, ರೋಹ್ಟಕ್ನ ಮಾಜಿ ಸಂಸದ ಅರವಿಂದ್ ಶರ್ಮಾ ಗೊಹಾನಾದಿಂದ ಸ್ಪರ್ಧಿಸಲಿದ್ದಾರೆ. ಬಿಜೆಪಿಗೆ ಸೇರ್ಪಡೆಗೊಂಡಿರುವ ಮಾಜಿ ಜೈಲು ಅಧೀಕ್ಷಕ ಸುನಿಲ್ ಸಾಂಗ್ವಾಗೆ ಚಾರ್ಖಿ ದಾದ್ರಿಯಿಂದ ಟಿಕೆಟ್ ಕೊಡಲಾಗಿದೆ.












Click it and Unblock the Notifications