ನಾನೊಬ್ಬ ರಾಮಭಕ್ತ, ಹೆಮ್ಮೆಯ ಹಿಂದೂ: ಹಾರ್ದಿಕ್ ಪಟೇಲ್ ಚಿತ್ತ ಎತ್ತ?
ಅಹ್ಮದಾಬಾದ್, ಏ. 22: ಬೃಹತ್ ಪಾಟೀದಾರ್ ಚಳವಳಿ ಮೂಲಕ ಬಿಜೆಪಿಗೆ ಚಳಿ ಹುಟ್ಟಿಸಿದ್ದ ಹಾರ್ದಿಕ್ ಪಟೇಲ್ ಈಗ ಅದೇ ಪಕ್ಷಕ್ಕೆ ಟವಲ್ ಹಾಕುವ ಸಿದ್ಧತೆಯಲ್ಲಿದ್ದಂತಿದೆ. ಗುಜರಾತ್ ಘಟಕದ ಕಾಂಗ್ರೆಸ್ ಅಧ್ಯಕ್ಷರಾಗಿರುವ ಹಾರ್ದಿಕ್ ಪಟೇಲ್ ಪಕ್ಷ ತೊರೆಯುವ ಸೂಚನೆ ನೀಡಿದ್ದಾರೆ. ಮುಂದಿನ ರಾಜಕೀಯ ದಾರಿಗೆ ಮುಕ್ತವಾಗಿರುವುದಾಗಿ ಅವರು ಪರೋಕ್ಷವಾಗಿ ಕೈ ಪಾಳಯ ಬಿಟ್ಟುಹೋಗುವ ಸುಳಿವು ನೀಡಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಹಾರ್ದಿಕ್ ಪಟೇಲ್ ಅವರು ರಾಜ್ಯ ಕಾಂಗ್ರೆಸ್ ನಾಯಕತ್ವದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಇದೀಗ ಅವರು ಬಿಜೆಪಿ ಪಕ್ಷವನ್ನು ಹಾಡಿಹೊಗಳಿದ್ದಾರೆ. ಹಾಗೆಯೇ, ತಾನೊಬ್ಬ ಹೆಮ್ಮೆಯ ಹಿಂದು ಎಂದು ಅವರು ಹೇಳಿಕೊಂಡಿರುವುದು, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಖುಷಿ ವ್ಯಕ್ತಪಡಿಸಿರುವುದು ಅವರು ಮೃದು ಹಿಂದುತ್ವದ ಧೋರಣೆ ಹಾದಿ ತುಳಿಯುವ ಮನಸ್ಸು ಮಾಡಿರುವುದರ ಸೂಚಕವಾಗಿದೆ. ಗುಜರಾತ್ನ ಪತ್ರಿಕೆಯೊಂದಕ್ಕೆ ಶುಕ್ರವಾರ ನೀಡಿರುವ ಸಂದರ್ಶನದಲ್ಲಿ ಅವರು ಕೆಲ ಮಹತ್ವ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.
"ಬಿಜೆಪಿ ನಾಯಕತ್ವಕ್ಕೆ ಒಳ್ಳೆಯ ನಿರ್ಧಾರ ತೆಗೆದುಕೊಳ್ಳುವ ಶಕ್ತಿ ಇದೆ. ಕಾಂಗ್ರೆಸ್ ಬಗ್ಗೆ ನನಗಿರುವ ಅಸಮಾಧಾನದಿಂದ ನಾನಿದನ್ನು ಹೇಳುತ್ತಿಲ್ಲ. ಬಿಜೆಪಿಯವರು ತಮ್ಮ ಸಂಘಟನೆಗೆ ಬಹಳ ಶ್ರಮ ಹಾಕುತ್ತಾರೆ. ಆಗಾಗ ಬದಲಾವಣೆಗಳನ್ನ ಮಾಡುತ್ತಿರುತ್ತಾರೆ. ಹೊಸ ಆವಿಷ್ಕಾರಗಳನ್ನು ತರುತ್ತಿರುತ್ತಾರೆ. ಹಲವು ವರ್ಷಗಳಿಂದ ಇದು ನಡೆಯುತ್ತಾ ಬಂದಿದೆ. ಕಾಂಗ್ರೆಸ್ ಸೋಲುತ್ತಿದೆ, ಬಿಜೆಪಿ ಗೆಲ್ಲುತ್ತಿದೆ ಎಂದು ಜನರೂ ಮಾತನಾಡುತ್ತಿದ್ದಾರೆ" ಎಂದು ಹಾರ್ದಿಕ್ ಪಟೇಲ್ ಹೇಳಿದ್ದಾರೆ.

ಕಾಂಗ್ರೆಸ್ ತೊರೆಯುತ್ತೇನೆಂದಲ್ಲ:
"ಗುಜರಾತ್ ಕಾಂಗ್ರೆಸ್ನ ಯಾವುದೇ ನಾಯಕನ ಬಗ್ಗೆ ನನಗೆ ಸಮಸ್ಯೆ ಇಲ್ಲ. ಆದರೆ, ನಾಯಕತ್ವದ ಬಗ್ಗೆ ತಗಾದೆ ಇದೆ. ಈ ನಾಯಕತ್ವವು ಯಾರಿಗೂ ಕೆಲಸ ಮಾಡಲು ಬಿಡುವುದಿಲ್ಲ. ಯಾರಾದರೂ ಕೆಲಸ ಮಾಡಲು ಹೋದರೆ ತಡೆಯಲಾಗುತ್ತದೆ... ಹೈಕಮಾಂಡ್ ಎದುರು ಇದನ್ನು ಹೇಳಿಕೊಂಡಿದ್ದೇನೆ. ಸಮಸ್ಯೆಗೆ ಪರಿಹಾರ ಕೊಡುವ ಭರವಸೆ ನೀಡಿದ್ದಾರೆ. ಮನೆಯೊಳಗೆ ನಿಮಗೆ ಏನಾದರೂ ಇಷ್ಟ ಆಗದಿದ್ದರೆ ಅಪ್ಪ ಮತ್ತು ಅಮ್ಮನನ್ನು ದೂರುತ್ತೀರಿ. ನಾನು ನಾಯಕತ್ವವನ್ನು ಟೀಕಿಸಿದೆನೆಂದು ಪಕ್ಷ ಬಿಡುತ್ತೇನೆಂದು ಅರ್ಥವಲ್ಲ" ಎಂದೂ ಹಾರ್ದಿಕ್ ಸ್ಪಷ್ಟಪಡಿಸಿದ್ದಾರೆ.
ಗುಜರಾತ್ನ ವಿಪಕ್ಷವಾಗಿ ನಾವು ಜನರ ಧ್ವನಿ ಎತ್ತಲು ವಿಫಲರಾಗಿದ್ದೇವೆ. ಜನರ ಬೇಡಿಕೆಗಳನ್ನು ಸರಕಾರದ ಮುಂದಿಟ್ಟು ಅದಕ್ಕಾಗಿ ಹೋರಾಡುವುದು ವಿಪಕ್ಷದ ಕರ್ತವ್ಯ. ನಾವು ಅದರಲ್ಲಿ ಯಶಸ್ವಿಯಾಗಿಲ್ಲದಿರುವುದರಿಂದ ಜನರು ಬೇರೆ ಆಯ್ಕೆಗಳತ್ತ ಆಲೋಚಿಸುತ್ತಿದ್ದಾರೆ" ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಶತ್ರುಗಳ ಶಕ್ತಿಯನ್ನ ಒಪ್ಪಿಕೊಳ್ಳಬೇಕು:
ಕಾಂಗ್ರೆಸ್ ಪಕ್ಷ ತನ್ನ ಎದುರಾಳಿಯಾದ ಬಿಜೆಪಿಯ ಶಕ್ತಿಯನ್ನು ಕಡಿಮೆ ಅಂದಾಜು ಮಾಡಬಾರದು ಎಂದು ಹಾರ್ದಿಕ್ ಈ ವೇಳೆ ತಿಳಿ ಹೇಳಿದ್ದಾರೆ. "ಬಿಜೆಪಿಗೆ ಒಳ್ಳೆಯ ಹಾಗೂ ಭದ್ರವಾದ ನೆಲೆ ಇದೆ. ಸೂಕ್ತ ಹಾಗು ಕಠಿಣ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಇರುವ ನಾಯಕತ್ವ ಇದೆ. ಬಿಜೆಪಿಯ ಶಕ್ತಿಯನ್ನು ಕಾಂಗ್ರೆಸ್ ಒಪ್ಪಿಕೊಳ್ಳಬೇಕು. ಆಗ ಮಾತ್ರ ಅದನ್ನು ಸಮರ್ಥವಾಗಿ ಎದುರಿಸಲು ಸಿದ್ಧವಾಗಬಹುದು" ಎಂಬುದು ಅವರ ಅನಿಸಿಕೆ.

ಸಂತಾನಹರಣ ಚಿಕಿತ್ಸೆಗೆ ಒಳಪಟ್ಟು ಮದುವೆ ಆದ ವರನ ಕತೆ:
ಗುಜರಾತ್ ಕಾಂಗ್ರೆಸ್ನಲ್ಲಿ ತನ್ನ ಸ್ಥಿತಿ ಬಗ್ಗೆ ಬಹಳ ವ್ಯಂಗ್ಯವಾಗಿ ಮಾತನಾಡಿದ ಹಾರ್ದಿಕ್ ಪಟೇಲ್, "ಮದುವೆ ಆದ ಕೂಡಲೇ ಸಂತಾನಹರಣ ಚಿಕಿತ್ಸೆ ಮಾಡಿಸಿದ ವರನಂತೆ ಆಗಿದ್ದೇನೆ. ಪಕ್ಷದ ನಾಯಕತ್ವವು ಡಿಸಿಶನ್ ಮೇಕಿಂಗ್ ಪ್ರಕ್ರಿಯೆಗಳಿಂದ ನನ್ನನ್ನು ದೂರವೇ ಇಟ್ಟಿದೆ" ಎಂದು ಹೇಳಿದ್ದಾರೆ.

ನಾನೊಬ್ಬ ಹೆಮ್ಮೆಯ ಹಿಂದೂ ಎಂದ ಹಾರ್ದಿಕ್:
"ನಾನು ರಘುವಂಶದವನು. ಲವ-ಕುಶ ಸಂತತಿಯವನು. ರಾಮ, ಶಿವ ಮತ್ತು ಕುಲದೇವರ ಬಗ್ಗೆ ಶ್ರದ್ಧೆ ನಂಬಿಕೆ ಇಟ್ಟುಕೊಂಡವನು. ನಾನು ಹಿಂದೂ ಧರ್ಮದ ಆಚರಣೆಗಳನ್ನ ಅನುಸರಿಸುವ ಸಕಲ ಪ್ರಯತ್ನ ಮಾಡುತ್ತೇನೆ" ಎಂದ ಹಾರ್ದಿಕ್ ಪಟೇಲ್, ಏಪ್ರಿಲ್ 28ರಂದು ತನ್ನ ತಂದೆಯ ಪುಣ್ಯತಿಥಿಯಂದು ಭಗವದ್ಗೀತೆಯ 4 ಸಾವಿರ ಪ್ರತಿಗಳನ್ನು ಸಾರ್ವಜನಿಕರಿಗೆ ಹಂಚುತ್ತೇನೆ ಎಂದು ಹೇಳಿ ಕುತೂಹಲ ಮೂಡಿಸಿದ್ದಾರೆ.
ಹಾರ್ದಿಕ್ ಪಟೇಲ್ ಅವರು ಕಾಂಗ್ರೆಸ್ ನಾಯಕತ್ವದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಬಳಿಕ ಗುಜರಾತ್ ಕಾಂಗ್ರೆಸ್ನ ಉಸ್ತುವಾರಿ ಆಗಿರುವ ರಘು ಶರ್ಮಾ ಅವರು ಮಾಧ್ಯಮಗಳ ಮುಂದೆ ಹೇಳಿಕೆ ಕೊಡುವ ಬದಲು ಪಕ್ಷದ ವೇದಿಕೆಯಲ್ಲಿ ಸಮಸ್ಯೆ ಬಗೆಹರಿಸಿಕೊಳ್ಳಬೇಕೆಂದು ಹಾರ್ದಿಕ್ ಪಟೇಲ್ ಅವರಿಗೆ ಎಚ್ಚರಿಕೆ ಕೊಟ್ಟಿದ್ದರು.
ಹೀಗಿದ್ದರೂ ಮಾಧ್ಯಮಗಳೆದುರು ಮಾತನಾಡುತ್ತಿರುವುದರಿಂದ ಕಾಂಗ್ರೆಸ್ ಪಕ್ಷದಿಂದ ಶಿಸ್ತಿನ ಕ್ರಮ ಎದುರಾಗುವ ಸಾಧ್ಯತೆ ಬಗ್ಗೆ ಮಾತನಾಡಿದ ಹಾರ್ದಿಕ್ ಪಟೇಲ್, "ಯಾರಿಗೆ ಅವರ ಭವಿಷ್ಯದ ಬಗ್ಗೆ ಚಿಂತೆ ಇದೆಯೋ ಅವರು ರಾಜಕೀಯ ನಷ್ಟದಿಂದ ಆತಂಕಗೊಳ್ಳಬೇಕು. ನಾನು ಗುಜರಾತ್ ಜನರು ಮತ್ತವರ ಒಳಿತಿನ ಬಗ್ಗೆ ಮಾತ್ರ ಚಿಂಚಿತನಾಗಿದ್ದೇನೆ" ಎಂದು ತಿರುಗೇಟು ನೀಡಿದ್ದಾರೆ.

ಆಮ್ ಆದ್ಮಿ ಪಕ್ಷ ಹಾಗೂ ಹಾರ್ದಿಕ್ ಪಟೇಲ್
ಇದೇ ವೇಳೆ, ಹಾರ್ದಿಕ್ ಪಟೇಲ್ ಅವರು ತಮ್ಮ ಸ್ವಂತ ಪಕ್ಷದ ಮೇಲೆ ಟೀಕಾ ಪ್ರಹಾರ ಮಾಡಿದ ಬಳಿಕ ಬಿಜೆಪಿಯು ಅವರ ಹೇಳಿಕೆಯನ್ನು ಸ್ವಾಗತಿಸಿದೆ. ದೇಶಾದ್ಯಂತ ಜನರು ಮೋದಿ ಆಡಳಿತಕ್ಕೆ ಮಾರುಹೋಗಿರುವುದರ ಕುರುಹು ಇದು ಎಂದು ಗುಜರಾತ್ ಬಿಎಸ್ಪಿ ಮುಖಂಡರು ಹೇಳಿದ್ದಾರೆ.
ಇನ್ನು, ಆಮ್ ಆದ್ಮಿ ಪಕ್ಷ ಹಾರ್ದಿಕ್ ಪಟೇಲ್ ಅವರನ್ನು ಬರಮಾಡಿಕೊಳ್ಳುವ ಮನಸಿನಲ್ಲಿದೆ. ಹೀಗಿದ್ದರೂ ಹಾರ್ದಿಕ್ ಪಟೇಲ್ ಚಿತ್ತ ಎತ್ತ ವಾಲುತ್ತಿದೆ ಎಂದು ಹೇಳುವುದು ಕಷ್ಟ. "ಗುಜರಾತ್ ರಾಜ್ಯದ ಪ್ರಗತಿಗೆ ನಾನು ಏನು ಮಾಡಬೇಕೆಂದು ಬಹಳ ಸ್ಪಷ್ಟವಾಗಿದ್ದೇನೆ. ಕೇಜ್ರಿವಾಲ್ ಜೊತೆ ನನ್ನನ್ನು ಅನೇಕರು ಜೋಡಿಸುತ್ತಾರೆ. ನನಗೆ ಕಾಂಗ್ರೆಸ್, ಎಎಪಿ ಮತ್ತು ಬಿಜೆಪಿ ಆಯ್ಕೆಗಳಿವೆ. ಎಲ್ಲದಕ್ಕೂ ಮುಕ್ತವಾಗಿದ್ದೇನೆ" ಎಂದು ಹೇಳಿದ ಉಸಿರಿನಲ್ಲೇ ಅವರು ತಾನು ಕಾಂಗ್ರೆಸ್ ತೊರೆಯುವ ಮನಸ್ಸು ಹೊಂದಿಲ್ಲ ಎಂದೂ ತಿಳಿಸಿದ್ದಾರೆ. (ಒನ್ಇಂಡಿಯಾ ಸುದ್ದಿ)
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications