ಹಾರ್ವರ್ಡ್ ವಿವಿ ಮತ್ತು ಹಾರ್ಡ್ ವರ್ಕ್: ಪ್ರಧಾನಿ ಮೋದಿ ವಾಕ್ ಪ್ರಹಾರ
ನೋಟು ನಿಷೇಧವನ್ನು ಕಟುವಾದ ಶಬ್ದದಲ್ಲಿ ಟೀಕಿಸಿದ್ದ ಖ್ಯಾತ ಅರ್ಥಶಾಸ್ತ್ರಜ್ಞ ಅಮಾರ್ತ್ಯ ಸೇನ್ ವಿರುದ್ದ ವಾಕ್ ಪ್ರಹಾರ ನಡೆಸಿರುವ ಮೋದಿ, ಹಾರ್ವರ್ಡ್ ವಿಶ್ವವಿದ್ಯಾಲಯದ ಯೋಚನೆಗಿಂತ, ಹಾರ್ಡ್ ವರ್ಕ್ ಮುಖ್ಯ ಎಂದು ಲೇವಡಿ.
ಮಹಾರಾಜಗಂಜ್, ಮಾ 1 (ಪಿಟಿಐ) : ಕೊನೆಯ ಎರಡು ಹಂತದ ವಿಧಾನಸಭಾ ಚುನಾವಣೆ ಬಾಕಿಯಿರುವ ಉತ್ತರಪ್ರದೇಶದಲ್ಲಿ, ಪ್ರಧಾನಿ ಮೋದಿ ನೊಬೆಲ್ ಪುರಷ್ಕೃತ ಅಮಾರ್ತ್ಯ ಸೇನ್ ಮತ್ತು ರಾಹುಲ್ ಗಾಂಧಿ ವಿರುದ್ದ ಹರಿಹಾಯ್ದಿದ್ದಾರೆ.
ನೋಟು ನಿಷೇಧವನ್ನು ಕಟುವಾದ ಶಬ್ದದಲ್ಲಿ ಟೀಕಿಸಿದ್ದ ಖ್ಯಾತ ಅರ್ಥಶಾಸ್ತ್ರಜ್ಞ ಅಮಾರ್ತ್ಯ ಸೇನ್ ವಿರುದ್ದ ವಾಕ್ ಪ್ರಹಾರ ನಡೆಸಿರುವ ಮೋದಿ, ಹಾರ್ವರ್ಡ್ ವಿಶ್ವವಿದ್ಯಾಲಯದ ಯೋಚನೆಗಿಂತ, ಹಾರ್ಡ್ ವರ್ಕ್ ಮುಖ್ಯ ಎಂದು ಲೇವಡಿ ಮಾಡಿದ್ದಾರೆ.
ಬುಧವಾರ (ಮಾ 1) ಚುನಾವಣಾ ಸಭೆಯಲ್ಲಿ ಮಾತನಾಡುತ್ತಿದ್ದ ಪ್ರಧಾನಿ, ಒಂದು ದಿನದ ಹಿಂದೆಯಷ್ಟೇ ಸಿಎಸ್ಒ ( Central Statistical Organisation) ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ನೋಟು ನಿಷೇಧದಿಂದ ದೇಶದ ಅಭಿವೃದ್ದಿಗೆ ಯಾವುದೇ ರೀತಿಯ ತೊಂದರೆಯಾಗಿಲ್ಲ.
ಹಾಗಿದ್ದಾಗ್ಯೂ, ಖ್ಯಾತ ಅರ್ಥಶಾಸ್ತ್ರಜ್ಞರೊಬ್ಬರು ನೋಟು ನಿಷೇಧದ ಕ್ರಮವನ್ನು ಟೀಕಿಸುತ್ತಾರೆ. ಹಾರ್ವರ್ಡ್ ಯುನಿವರ್ಸಿಟಿಯಲ್ಲಿ ಓದಿರುವ ಇವರು, ಕೇಂದ್ರದ ಕ್ರಮವನ್ನು ಟೀಕಿಸುವ ಮೊದಲು ವಸ್ತುಸ್ಥಿತಿಯ ಪರಾಮರ್ಶೆ ಮಾಡಿ ಮಾತನಾಡಲಿ ಎಂದು ಅಮಾರ್ತ್ಯ ಸೇನ್ ಹೆಸರು ಉಲ್ಲೇಖಿಸದೇ ಪ್ರಧಾನಿ ಮೋದಿ ಟೀಕಿಸಿದ್ದಾರೆ.
ಎರಡು ದಿನದ ಹಿಂದೆ ಅತಂತ್ರ ವಿಧಾನಸಭಾ ಚುನಾವಣಾ ಫಲಿತಾಂಶ ಹೊರಬೀಳುವ ಸಾಧ್ಯತೆಯಿದೆ ಎಂದು ಹೇಳಿದ್ದ ಮೋದಿ, ಬುಧವಾರದ ಸಭೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಸಿಗಲಿದೆ ಎನ್ನುವ ವಿಶ್ವಾಸದ ಮಾತನ್ನಾಡಿದ್ದಾರೆ.
ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಮತ್ತು ಎಳನೀರು ವ್ಯಾಪಾರ, ಮೋದಿ ವ್ಯಂಗ್ಯ.. ಮುಂದೆ ಓದಿ...
ಅಮಾರ್ತ್ಯ ಸೇನ್ ವಿರುದ್ದ ಮೋದಿ ವಾಕ್ ಪ್ರಹಾರ
ಬಡಕುಟುಂಬದಿಂದ ಬಂದ ವ್ಯಕ್ತಿಯೊಬ್ಬ ದೇಶದ ಪ್ರಧಾನಿಯಾಗುತ್ತಾನೆ. ದೇಶದ ಅಭಿವೃದ್ದಿಗೆ ಕಷ್ಟಪಟ್ಟು ದುಡಿಯುತ್ತಾನೆ, ಇದು ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಓದಿದ ವ್ಯಕ್ತಿಗೆ ಮತ್ತು ಹಾರ್ಡ್ ವರ್ಕ್ ಮಾಡುವ ವ್ಯಕ್ತಿಯ ನಡುವಿನ ವ್ಯತ್ಯಾಸ - ಮೋದಿ.
ಅಮಾರ್ತ್ಯ ಸೇನ್ ಹೇಳಿದ್ದೇನು?
ನೊಬೆಲ್ ಪ್ರಶಸ್ತಿ ವಿಜೇತ, ಖ್ಯಾತ ಅರ್ಥಶಾಸ್ತ್ರಜ್ಞ ಅಮಾರ್ತ್ಯ ಸೇನ್, ನೋಟು ನಿಷೇಧದ ಕೇಂದ್ರದ ಕ್ರಮ ದೇಶದ ಅಭಿವೃದ್ದಿಗೆ ಮಾರಕವಾಗುತ್ತದೆ. ದೇಶ ಮುಂದೆ ಸಾಗುವ ಬದಲು ಹಿನ್ನಡೆ ಅನುಭವಿಸುತ್ತದೆ ಎಂದು ಸೇನ್ ಹೇಳಿದ್ದರು.
ಪ್ರಧಾನಿಗೆ ಅತಂತ್ರದಿಂದ ಬಹುಮತದ ವಿಶ್ವಾಸ
ನಾವು ಉತ್ತರಪ್ರದೇಶದ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಪಡೆಯಲಿದ್ದೇವೆ. ಹಾವು ಮುಂಗುಸಿಯಂತೆ ಇದ್ದ ಬಿಎಸ್ಪಿ ಮತ್ತು ಎಸ್ಪಿ ಅತಂತ್ರ ಫಲಿತಾಂಶ ಬಂದರೆ ಒಳ್ಳೆಯದು ಎನ್ನುವ ಲೆಕ್ಕಾಚಾರದಲ್ಲಿದೆ, ರಾಜ್ಯದ ಜನತೆ ಬಿಜೆಪಿಗೆ ಹರಸಲಿದ್ದಾರೆ - ಮೋದಿ.
ರಾಹುಲ್ ವಿರುದ್ದ ಮೋದಿ ವಾಗ್ದಾಳಿ
ತೆಂಗಿನಕಾಯಿ, ಆಲೂಗಡ್ಡೆ ಕಾರ್ಖಾನೆ ಎನ್ನುವ ಬಗ್ಗೆ ರಾಹುಲ್ ಗಾಂಧಿ ಭಾಷಣ ಬಿಗಿಯುತ್ತಿದ್ದಾರೆ. ಅವರು ಏನು ಮಾತನಾಡುತ್ತಿದ್ದಾರೆ ಎನ್ನುವ ಅರಿವು ಅವರಿಗಿದೆಯಾ? ತೆಂಗಿನಕಾಯಿಯೊಳಗೆ ನೀರಿರುವುದು ಚಿಕ್ಕ ಮಕ್ಕಳಿಗೂ ಗೊತ್ತಿರುವ ವಿಚಾರವಲ್ಲವೇ - ಪ್ರಧಾನಿ.
ಲಂಡನ್ ನಲ್ಲಿ ತೆಂಗಿನಕಾಯಿ ಫ್ಯಾಕ್ಟರಿ
ಬ್ರಿಟನ್ ನಲ್ಲಿ ಎಳನೀರು ಮಾರಲು ಇಚ್ಚಿಸುತ್ತೇನೆ ಎನ್ನುವ ರಾಹುಲ್ ಗಾಂಧಿ, ಉತ್ತರಪ್ರದೇಶದಲ್ಲಿ ಆಲೂಗೆಡ್ಡೆ ಫ್ಯಾಕ್ಟರಿ ಸ್ಥಾಪಿಸಬೇಕು ಎನ್ನುವ ಹೇಳಿಕೆಯನ್ನು ನೀಡುತ್ತಾರೆ. ಇದು ಕಾಂಗ್ರೆಸ್ ಪಕ್ಷದ ನಿಲುವು - ರಾಹುಲ್ ವಿರುದ್ದ ಮೋದಿ ವಾಗ್ದಾಳಿ.