ಗೋರಕ್ಷಕರಿಂದ ಅಮಾನವೀಯ ಥಳಿತ: ಮತ್ತೊಂದು ವೈರಲ್ ವಿಡಿಯೋ
Recommended Video

ಲಖನೌ, ಜೂನ್ 23: ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಗೋವುಗಳನ್ನು ಕಳ್ಳಸಾಗಣೆ ಮಾಡುತ್ತಿದ್ದರೆಂದು ಇಬ್ಬರು ವ್ಯಕ್ತಿಗಳ ಮೇಲೆ ಎಸಗಿದ ಅಮಾನುಷ ಹಲ್ಲೆಯ ಎರಡನೆಯ ವಿಡಿಯೋ ಈಗ ವೈರಲ್ ಆಗಿದೆ.
ಹಾಪುರ್ ಜಿಲ್ಲೆಯ ಪಿಲಾಖುವಾ ಎಂಬ ಗ್ರಾಮದಲ್ಲಿ ಸೋಮವಾರ ಇಬ್ಬರು ಮುಸ್ಲಿಂ ವ್ಯಕ್ತಿಗಳ ಮೇಲೆ ಹಲ್ಲೆ ನಡೆಸುವ ಮತ್ತು ಅವರಲ್ಲಿ ಒಬ್ಬನನ್ನು ಎಳೆದೊಯ್ಯುವ ಅಮಾನವೀಯ ದೃಶ್ಯ ದೇಶದಾದ್ಯಂತ ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು.
ಘಟನೆಯಲ್ಲಿ 45 ವರ್ಷದ ಖಾಸಿಂ ಮೇಲೆ ತೀವ್ರ ಹಲ್ಲೆ ನಡೆಸಲಾಗಿತ್ತು. ಗಾಯಗೊಂಡು ಖಾಸಿಂ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.
ಅದೇ ಘಟನೆಯ ಮತ್ತೊಂದು ವಿಡಿಯೋ ಈಗ ವೈರಲ್ ಆಗಿದ್ದು, 65 ವರ್ಷದ ವೃದ್ಧನ ಮೇಲೆ ರಕ್ತ ಬರುವಂತೆ ಹಲ್ಲೆ ನಡೆಸುವ ದೃಶ್ಯ ಮನಕಲಕುವಂತಿದೆ.
| Array |
ಒಪ್ಪಿಕೊಳ್ಳುವಂತೆ ಬೆದರಿಕೆ
ಸಾಮಾಜಿಕ ಜಾಲತಾಣಗಳಲ್ಲಿ ಹಾಕಿರುವ ಒಂದು ನಿಮಿಷದ ವಿಡಿಯೋದಲ್ಲಿ ಗುಂಪೊಂದು ಸಮಿಯುದ್ದೀನ್ ಅವರನ್ನು ನಿಂದಿಸಿ, ತಾನು ಅವರ ಹೊಲದಲ್ಲಿ ಹಸುವನ್ನು ಕೊಂದು ಹಾಕಿದ್ದಾಗಿ ತಪ್ಪೊಪ್ಪಿಕೊಳ್ಳುವಂತೆ ಬೆದರಿಸಿರುವುದು ಕಂಡುಬಂದಿದೆ.
ದುಷ್ಕರ್ಮಿಗಳು ಸಮಿಯುದ್ದೀನ್ ಅವರ ಗಡ್ಡವನ್ನು ಹಿಡಿದು ಎಳೆದಿದ್ದಲ್ಲದೆ ಅವರ ತಲೆ ಮತ್ತಿತರ ಕಡೆ ರಕ್ತ ಬರುವಂತೆ ಹೊಡೆದಿದ್ದಾರೆ.
|
ನೀರು ಕೇಳಿದರೂ ಕೊಡಲಿಲ್ಲ
ಗೋವು ಕೊಂದಿದ್ದಾರೆ ಎಂದು ಆರೋಪಿಸಿ ಹಲ್ಲೆಗೊಳಗಾದ ಇಬ್ಬರಲ್ಲಿ ಖಾಸಿಂ ಮೇಲೆ ಹೆಚ್ಚು ಹಲ್ಲೆ ನಡೆಸಲಾಗಿತ್ತು. ಮೈತುಂಬಾ ಗಾಯವಾಗಿ ನರಳುತ್ತಿದ್ದ ಖಾಸಿಂ, ನೀರು ಕೊಡುವಂತೆ ಬೇಡಿಕೊಂಡರೂ ಅಲ್ಲಿ ನೆರೆದಿದ್ದವರ ಮನಸ್ಸು ಕರಗಿರಲಿಲ್ಲ. ತೀವ್ರ ಗಾಯಗೊಂಡಿದ್ದ ಖಾಸಿಂನನ್ನು ಮನಬಂದಂತೆ ಎಳೆದೊಯ್ಯಲಾಗಿತ್ತು. ಕೊನೆಗೆ ಖಾಸಿಂ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.

ಅಲ್ಲೇ ಇದ್ದರು ಪೊಲೀಸರು
ದೊಡ್ಡ ಗುಂಪು ಮನಬಂದಂತೆ ಇಬ್ಬರ ಮೇಲೆ ಅಮಾನವೀಯವಾಗಿ ಕ್ರೌರ್ಯ ಎಸಗುವಾಗ ಉತ್ತರ ಪ್ರದೇಶದ ಮೂವರು ಪೊಲೀಸರು ಸ್ಥಳದಲ್ಲಿಯೇ ಇದ್ದರು. ಆದರೆ, ಅವರು ಮೂಕ ಪ್ರೇಕ್ಷಕರಂತೆ ಅದನ್ನು ನೋಡುತ್ತಿದ್ದರೇ ವಿನಾ, ದುಷ್ಕರ್ಮಿಗಳನ್ನು ತಡೆಯುವ ಗೋಜಿಗೆ ಹೋಗಲಿಲ್ಲ. ಬೈಕ್ ವಿಚಾರಕ್ಕೆ ಸಂಬಂಧಿಸಿದ ಜಗಳ ಹೊಡೆದಾಟಕ್ಕೆ ತಿರುಗಿದೆ ಎಂದು ಪೊಲೀಸರು ಕಥೆ ಕಟ್ಟಿದ್ದಾರೆ ಎಂಬುದಾಗಿ ಅವರ ಕುಟುಂಬಸ್ಥರು ಆರೋಪಿಸಿದ್ದಾರೆ.
|
'ಸಾರಿ' ಕೇಳಿದ ಪೊಲೀಸ್ ಇಲಾಖೆ
ಈ ಹಿಂಸಾಕೃತ್ಯದ ವಿಡಿಯೋ ಮತ್ತು ಫೋಟೊಗಳು ವೈರಲ್ ಆಗುತ್ತಿದ್ದಂತೆಯೇ ಉತ್ತರ ಪ್ರದೇಶದ ಪೊಲೀಸರು ಕ್ಷಮೆ ಕೋರಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದರು.
ಚಿತ್ರದಲ್ಲಿದ್ದ ಮೂವರೂ ಪೊಲೀಸರನ್ನು ವರ್ಗಾವಣೆ ಮಾಡಲಾಗಿದ್ದು, ಅವರ ವಿರುದ್ಧ ತನಿಖೆಗೆ ಆದೇಶಿಸಲಾಗಿದೆ ಎಂದು ಅದು ಹೇಳಿತ್ತು. ಆದರೆ, ಪೊಲೀಸರನ್ನು ಸಮರ್ಥನೆ ಮಾಡಿಕೊಂಡಿತ್ತು.
ಪೊಲೀಸರು ಸ್ಥಳಕ್ಕೆ ತಲುಪಿದಾಗ ಈ ಫೋಟೊಗಳನ್ನು ತೆಗೆದಿರಬಹುದು. ಆ ಸಮಯದಲ್ಲಿ ಆಂಬುಲೆನ್ಸ್ ಲಭ್ಯವಿಲ್ಲದ ಕಾರಣ ಗಾಯಾಳುವನ್ನು ಎತ್ತಿಕೊಂಡು ಪೊಲೀಸ್ ವಾಹನದಲ್ಲಿ ಕರೆತರಲಾಗಿತ್ತು. ಗಾಯಾಳುವನ್ನು ಈ ರೀತಿ ಕೊಂಡೊಯ್ದಿದ್ದು ದುರದೃಷ್ಟಕರ.
ಪೊಲೀಸರು ಈ ವಿಚಾರದಲ್ಲಿ ಹೆಚ್ಚು ಸೂಕ್ಷ್ಮವಾಗಿ ವರ್ತಿಸಬೇಕಿತ್ತು. ಜೀವವೊಂದನ್ನು ಉಳಿಸುವ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ತುರ್ತು ಸಂದರ್ಭದಲ್ಲಿ ಮಾನವೀಯ ಕಾಳಜಿಗಳನ್ನು ಮರೆತುಬಿಡಲಾಗುತ್ತದೆ. ಪೊಲೀಸರು ಗಾಯಾಳುವನ್ನು ತಮ್ಮ ವಾಹನದಲ್ಲಿ ಕರೆತರುವುದನ್ನು ಚಿತ್ರಗಳೇ ಸ್ಪಷ್ಟಪಡಿಸುತ್ತವೆ ಎಂದು ಉತ್ತರ ಪ್ರದೇಶ ಪೊಲೀಸರು ಹೇಳಿದ್ದಾರೆ.












Click it and Unblock the Notifications