ಪಟೇಲ್ ದೇಶದ ಮೊದಲ ಪ್ರಧಾನಿ ಆಗಬೇಕಾಗಿತ್ತು : ಮೋದಿ
ಅಹ್ಮದಾಬಾದ್, ಅ. 29 : "ಉಕ್ಕಿನ ಮನುಷ್ಯನೆಂದೇ ಖ್ಯಾತರಾಗಿದ್ದ ಸರದಾರ ಪಟೇಲರು ಭಾರತದ ಸ್ವಾತಂತ್ರ್ಯಾನಂತರ ಮೊದಲ ಪ್ರಧಾನಿಯಾಗಿದ್ದರೆ ದೇಶದ ಹಣೆಬರಹವೇ ವಿಭಿನ್ನವಾಗಿರುತ್ತಿತ್ತು" ಎಂದು ಪ್ರಧಾನಿ ಡಾ. ಮನಮೋಹನ ಸಿಂಗ್ ಎದುರಿಗೇ ಕಾಂಗ್ರೆಸ್ ಪಕ್ಷವನ್ನು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಕೆಣಕಿದ್ದಾರೆ.
ಶ್ರೀ ವಲ್ಲಭಭಾಯಿ ಪಟೇಲ್ ಸ್ಮೃತಿ ಸ್ಮಾರಕದ ಉದ್ಘಾಟನೆಯ ಸಂದರ್ಭದಲ್ಲಿ ಮನಮೋಹನ ಸಿಂಗ್ ಅವರೊಂದಿಗೆ ವೇದಿಕೆಯನ್ನು ಹಂಚಿಕೊಂಡಿದ್ದ ನರೇಂದ್ರ ಮೋದಿ ಅವರು, ದೇಶದ ಮೊದಲ ಗೃಹಮಂತ್ರಿ ಪಟೇಲರು ದೇಶವನ್ನು ಒಗ್ಗೂಡಿಸಿದ್ದರು ಎಂದು ಶ್ಲಾಘಿಸಿದರು. ಆದರೆ, ಅದೇ ಐಕ್ಯತೆಗೆ ಭಯೋತ್ಪಾದನೆ ಮತ್ತು ಮಾವೋವಾದಿ ದಾಳಿಗಳಿಂದಾಗಿ ಧಕ್ಕೆಯುಂಟಾಗಿದೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು.
"ಸರದಾರ ಪಟೇಲರು ಮೊದಲ ಪ್ರಧಾನಿ ಆಗದಿದ್ದಕ್ಕೆ ಇಂದಿಗೂ ಕೂಡ ಎಲ್ಲ ಭಾರತೀಯರಲ್ಲಿಯೂ ಅಸಮಾಧಾನವಿದೆ. ಅಂದು ಅವರು ಪ್ರಧಾನಿಯಾಗಿದ್ದಿದ್ದರೆ ಇಂದಿನ ಭಾರತದ ಹಣೆಬರಹ ವಿಭಿನ್ನವಾಗಿರುತ್ತಿತ್ತು" ಎಂದು ಹೇಳಿ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಮೇಲೆ ಮೋದಿ ಆಕ್ರಮಣ ಮಾಡಿದ್ದಾರೆ.

ನರೇಂದ್ರ ಮೋದಿ ಅವರ ಮಾತಿನ ಏಟಿಗೆ ಪ್ರಧಾನಿ ಡಾ. ಮನಮೋಹನ ಸಿಂಗ್ ಅವರು ವೇದಿಕೆಯ ಮೇಲೆಯೇ ತಕ್ಕ ಪ್ರತ್ಯುತ್ತರ ನೀಡಿದ್ದಾರೆ. "ಸರದಾರ ಪಟೇಲ್ ಅವರು ಜಾತ್ಯತೀತರಾಗಿದ್ದರು. ಗಾಂಧಿ ಆಗಲಿ, ನೆಹರೂ ಆಗಲಿ ಅವರ ಅಭಿಪ್ರಾಯಗಳನ್ನು ಗೌರವಿಸುತ್ತಿದ್ದರು. ಅವರಲ್ಲಿ ಪರಸ್ಪರ ಗೌರವ ಭಾವನೆ ಇತ್ತು. ಅಂತಹ ಪಕ್ಷವನ್ನು ನಾನಿಂದು ಪ್ರತಿನಿಧಿಸುತ್ತಿದ್ದೇನೆ" ಎಂದು ತೀಕ್ಷ್ಣ ಉತ್ತರ ನೀಡಿದ್ದಾರೆ ಸಿಂಗ್.
"ನಮ್ಮನಮ್ಮಲ್ಲೇ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿದ್ದರೂ ಒಬ್ಬರನ್ನೊಬ್ಬರು ಗೌರವಿಸುವುದನ್ನು ಮಹಾತ್ಮಾ ಗಾಂಧೀಜಿ, ಮೌಲಾನಾ ಅಬ್ದುಲ್ ಕಲಾಂ ಆಝಾದ್, ಸರದಾರ ವಲ್ಲಭಭಾಯಿ ಪಟೇಲ್, ಜವಾಹರಲಾಲ್ ನೆಹರೂ ಅವರು ನಮಗೆ ಕಲಿಸಿಕೊಟ್ಟಿದ್ದಾರೆ. ಆದರೆ, ವಿಪರ್ಯಾಸವೆಂದರೆ, ಇಂದು ಅಂತಹ ಮೌಲ್ಯಗಳು ಕಣ್ಮರೆಯಾಗುತ್ತಿವೆ. ಈ ವೇದಿಕೆಯ ಮೇಲೆ ಇರುವ ಎಲ್ಲರೂ ತಮ್ಮನ್ನು ತಾವು ವಿಮರ್ಶೆ ಮಾಡಿಕೊಳ್ಳಬೇಕು" ಎಂದು ಮೋದಿ ಅವರಿಗೆ ಮನಮೋಹನ ಅವರು ಮೋಹಕ ಪ್ರತ್ಯುತ್ತರ ನೀಡಿದರು.












Click it and Unblock the Notifications