ನನ್ನ ಒಂದು ಮೊಬೈಲ್ ಕ್ಷೇತ್ರದ ಜನತೆಗೆ ಮೀಸಲು: ಸಿಧು
ಗುರುವಾರ ಅಸ್ತಿತ್ವಕ್ಕೆ ಬಂದ ಪಂಜಾಬ್ ಸರ್ಕಾರದಲ್ಲಿ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ನವಜೋತ್ ಸಿಂಗ್ ಸಿಂಧು ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದರು.
ಚಂಡೀಗಢ, ಮಾರ್ಚ್ 17: ನಾನು ನಿತ್ಯವೂ ಮೂರು ಮೊಬೈಲ್ ಫೋನ್ ಗಳನ್ನು ಕೊಂಡೊಯ್ಯುತ್ತೇನೆ. ಅದರಲ್ಲೊಂದು ನನ್ನ ಕ್ಷೇತ್ರದ ಜನತೆಗಷ್ಟೇ ಮೀಸಲಾಗಿರುತ್ತದೆ ಎಂದು ಪಂಜಾಬ್ ಸರ್ಕಾರದಲ್ಲಿ ನೂತನ ಸಚಿವ, ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ತಿಳಿಸಿದ್ದಾರೆ.
ಪಂಜಾಬ್ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು, ಅದರಲ್ಲಿ ಸಿಧು ಅವರು, ಸಚಿವಾರಿಗ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಅಧಿಕಾರ ಸ್ವೀಕರಿಸಿದ ಮರುದಿನ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಧು, ''ಪಂಜಾಬ್ ನ ನೂತನ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರು, ನನಗೆ ಸಚಿವ ಸ್ಥಾನ ಕೊಡದಿದ್ದರೂ ಕೇವಲ ಶಾಸಕನಾಗಿಯೇ ಮುಂದುವರಿ ಎಂದು ಸೂಚಿಸಿದ್ದರೂ ನಾನು ಬೇಸರ ಪಟ್ಟುಕೊಳ್ಳುತ್ತಿರಲಿಲ್ಲ. ಆದರೆ, ನನ್ನ ಮೇಲೆ ಭರವಸೆಯಿಟ್ಟು ಸಚಿವ ಸ್ಥಾನ ಕೊಟ್ಟಿರುವುದರಿಂದ ಉತ್ತಮವಾಗಿ ಕೆಲಸ ಮಾಡಿ ತೋರಿಸುತ್ತೇನೆ ಎಂದು ಅವರು ತಿಳಿಸಿದರು.
ನಾನು ಮೂರು ಫೋನುಗಳನ್ನು ಕೊಂಡೊಯ್ಯುತ್ತೇನೆ. ಒಂದು ನನ್ನ ಕ್ಷೇತ್ರದ ಜನತೆಯ ಸಮಸ್ಯೆಗಳನ್ನು ಆಲಿಸಲು, ಇನ್ನೊಂದು ಕಾಂಗ್ರೆಸ್ ನ ಎಂಎಲ್ ಎಗಳ ಸಂಪರ್ಕಕ್ಕಾಗಿ, ಮತ್ತೊಂದು ಅಮರಿಂದರ್ ಸಿಂಗ್ ಅವರಿಗಾಗಿ ಮೀಸಲು ಆಗಿರುತ್ತದೆ ಎಂದು ಅವರು ತಿಳಿಸಿದರು.
ಅಲ್ಲದೆ, ತಮ್ಮನ್ನು ಉಪ ಮುಖ್ಯಮಂತ್ರಿಯನ್ನಾಗಿ ನೇಮಿಸುವ ಸಾಧ್ಯತೆಗಳಿವೆ ಎಂಬ ಗಾಳಿ ಸುದ್ದಿಗಳನ್ನು ಹರಡಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಅಂಥ ಯಾವುದೇ ಆಸೆಗಳಿಲ್ಲ ಎಂದು ಅವರು ತಿಳಿಸಿದರು.