ಗ್ಯಾನವಾಪಿ ಮಸೀದಿ ವಿವಾದ: ಮೇ 12ಕ್ಕೆ ವಾರಾಣಸಿ ಕೋರ್ಟ್ ತೀರ್ಪು
ವಾರಾಣಸಿ, ಮೇ 12: ಉತ್ತರಪ್ರದೇಶದ ವಿಶ್ವಖ್ಯಾತ ಕಾಶಿ ವಿಶ್ವನಾಥ ದೇವಸ್ಥಾನದ ಬದಿಯಲ್ಲೇ ಇರುವ ಗ್ಯಾನವಾಪಿ ಮಸೀದಿಯೊಳಗೆ ಪರಿಶೀಲನೆ ಮಾಡುವ ಕಾರ್ಯಕ್ಕೆ ಸಂಬಂಧಿಸಿದಂತೆ ಇಂದು ಗುರುವಾರ ಇಲ್ಲಿನ ನ್ಯಾಯಾಲಯ ತೀರ್ಪು ನೀಡಲಿದೆ. ಮಸೀದಿಯೊಳಗೆ ಹಳೆಯ ದೇವಸ್ಥಾನದ ಕುರುಹು ಏನಾದರೂ ಇದೆಯಾ ಎಂಬುದನ್ನು ಪರಿಶೀಲಿಸಲು ಸರ್ವೇಕ್ಷಣೆ ನಡೆಸಿ ಮೇ 10ರೊಳಗೆ ವರದಿ ಸಲ್ಲಿಸುವಂತೆ ಹಿಂದಿನ ವಿಚಾರಣೆಯಲ್ಲಿ ಕೋರ್ಟ್ ಸೂಚಿಸಿತ್ತು. ಅದರಂತೆ ಸರ್ವೇಕ್ಷಣೆ ಮಾಡಲು ಹೋದ ತಂಡವೊಂದರ ಕಾರ್ಯಕ್ಕೆ ಮಸೀದಿಯವರು ಅಡ್ಡಿ ಪಡಿಸಿದ್ದರು. ಇಂದು ನ್ಯಾಯಾಲಯ ಈ ವಿಚಾರವನ್ನು ಚರ್ಚಿಸಿ ಮಧ್ಯಾಹ್ನ ತೀರ್ಪು ನೀಡುವ ಸಾಧ್ಯತೆ ಇದೆ.
ಕಾಶಿ ವಿಶ್ವನಾಥ ದೇವಸ್ಥಾನದ ಬದಿಯಲ್ಲಿರುವ ಗ್ಯಾನವಾಪಿ ಮಸೀದಿಯೊಳಗೆ ಹಿಂದೂ ದೇವರುಗಳ ವಿಗ್ರಹಗಳಿದ್ದು ಅದಕ್ಕೆ ಪೂಜೆ ಸಲ್ಲಿಸಲು ಅವಕಾಶ ಕೊಡಬೇಕೆಂದು ಇತ್ತೀಚೆಗೆ ಕೆಲ ಹಿಂದೂಗಳು ಒತ್ತಾಯ ಮಾಡುತ್ತಿದ್ದಾರೆ. ಐವರು ಮಹಿಳೆಯರು ಈ ಸಂಬಂಧ ಕೋರ್ಟ್ ಮೆಟ್ಟಿಲೇರಿದ್ದರು. ಈಗ ವಿಚಾರಣೆ ನಡೆಯುತ್ತಿರುವುದು ಅವರ ಅರ್ಜಿಯದ್ದೇ.
ಔರಂಗಜೇಬರ ಕಾಲದ ಮಸೀದಿ:
17ನೇ ಶತಮಾನದಲ್ಲಿ ಮೊಗಲ್ ದೊರೆ ಔರಂಗಜೇಬನ ಕಾಲದಲ್ಲಿ ಗ್ಯಾನವಾಪಿ ಮಸೀದಿ ಕಟ್ಟಲಾಗಿದೆ. ಆದರೆ, ಕಾಶಿ ವಿಶ್ವನಾಥ ದೇವಸ್ಥಾನದ ಒಂದು ಭಾಗವನ್ನು ಕೆಡವಿ ಅದರ ಮೇಲೆ ಮಸೀದಿ ನಿರ್ಮಿಸಲಾಗಿದೆ ಎಂಬುದು ಹಿಂದೂಗಳ ವಾದ. ಇದಕ್ಕೆ ಕುರುಹುಗಳಾಗಿ ಈಗಲೂ ಹಿಂದೂ ದೇವರುಗಳ ವಿಗ್ರಹಗಳಿವೆ. ಮಸೀದಿಯೊಳಗೆ ಸರ್ವೆಕ್ಷಣೆ ನಡೆಸಿದರೆ ಸತ್ಯಾಂಶ ಹೊರಬರುತ್ತದೆ ಎಂದು ಹಿಂದೂಗಳು ಹೇಳಿದ್ದರು.

ಅದರಂತೆ ಸರ್ವೇಕ್ಷಣೆಗೆ ಕೋರ್ಟ್ ಅನುಮತಿ ಕೊಟ್ಟಿತು. ಆದರೆ, ಬ್ಯಾರಿಕೇಡ್ ಆಚೆ ಇರುವ ಕೋರ್ಟ್ ಯಾರ್ಡ್ವರೆಗೆ ಮಾತ್ರ ವಿಡಿಯೋ ರೆಕಾರ್ಡಿಂಗ್ ಮಾಡಬಹುದು. ಮಸೀದಿಯೊಳಗೆ ಚಿತ್ರೀಕರಣ ಮಾಡಬೇಕೆಂದು ಕೋರ್ಟ್ ಆದೇಶ ಮಾಡಿಲ್ಲ. ನಾವು ಅದಕ್ಕೆ ಅನುಮತಿ ಕೊಡಲ್ಲ ಎಂದು ಗ್ಯಾನವಾಪಿ ಮಸೀದಿ ನಿರ್ವಹಣಾ ಸಮಿತಿ ಹೇಳಿತು. ಹೀಗಾಗಿ, ಮಸೀದಿಯೊಳಗೆ ಸರ್ವೇಕ್ಷಣೆ ಮಾಡಲು ಹೋದವರು ಬರಿಗೈಯಲ್ಲಿ ಮರಳಬೇಕಾಯಿತು.

ಮಸೀದಿಯೊಳಗೆ ಮಂದಿರ ಅಸ್ತಿತ್ವಕ್ಕೆ ಇತ್ತೆನ್ನಲಾದ ಸಾಕ್ಷ್ಯಾಧಾರಗಳನ್ನು ಹಂತಹಂತವಾಗಿ ನಾಶ ಮಾಡಲಾಗುತ್ತಿದೆ ಎಂಬುದು ಹಿಂದೂ ಅರ್ಜಿದಾರರ ಪರ ವಕೀಲರ ವಾದ. ಮಸೀದಿ ಹೊರಗೆ ನಡೆಸಲಾದ ಉತ್ಖನನದ ವೇಳೆ ಎರಡು ಪುರಾತನ ಸ್ವಸ್ತಿಕಾ ಚಿಹ್ನೆ ಸೇರಿದಂತೆ ಹಿಂದೂ ಮಂದಿರ ಅಸ್ತಿತ್ವದಲ್ಲಿದ್ದುದಕ್ಕೆ ಪುಷ್ಟಿ ನೀಡುವ ವಸ್ತುಗಳು ಸಿಕ್ಕಿವೆ ಎಂದು ವಕೀಲ ಹರಿಶಂಕರ್ ಜೈನ್ ಹೇಳಿದ್ದಾರೆ.
ಇಂದು ನ್ಯಾಯಾಲಯ ಈ ವಿಚಾರಗಳ ಬಗ್ಗೆ ತೀರ್ಪು ಕೊಡಲಿದೆ. ಮಸೀದಿಯೊಳಗೆ ವಿಡಿಯೋ ರೆಕಾರ್ಡಿಂಗ್ ಮಾಡಲು ಅನುಮತಿ ಕೊಡುವ ಸಾಧ್ಯತೆ ಇದೆ.
Recommended Video
(ಒನ್ಇಂಡಿಯಾ ಸುದ್ದಿ)












Click it and Unblock the Notifications