ಗುರ್ಜರ್ ಸಮುದಾಯದಿಂದ ಭಾರತ್ ಜೋಡೋ ಯಾತ್ರೆಗೆ ವಿರೋಧ
ಜೈಪುರ, ನವೆಂಬರ್ 14: ಕಾಂಗ್ರೆಸ್ ಆಡಳಿತವಿರುವ ರಾಜ್ಯ ರಾಜಸ್ಥಾನದಲ್ಲಿ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯನ್ನು ವಿರೋಧಿಸುವಂತೆ ಗುರ್ಜರ್ ನಾಯಕ ದಿವಂಗತ ಕಿರೋರಿ ಸಿಂಗ್ ಬೈನ್ಸ್ಲಾ ಅವರ ಪುತ್ರ ಮತ್ತು ಗುರ್ಜರ್ ಆರಕ್ಷಣ್ ಸಂಘರ್ಷ ಸಮಿತಿ ಅಧ್ಯಕ್ಷ ವಿಜಯ್ ಬೈನ್ಸ್ಲಾ ಕರೆ ನೀಡಿದ್ದಾರೆ.
ಗುರ್ಜರ್ ಮೀಸಲಾತಿ ಒಪ್ಪಂದದ ಉಳಿದ ಬೇಡಿಕೆಗಳನ್ನು ಜಾರಿಗೊಳಿಸದ ರಾಜಸ್ಥಾನದ ಅಶೋಕ್ ಗೆಹ್ಲೋಟ್ ನೇತೃತ್ವದ ಸರ್ಕಾರದ ವಿರುದ್ಧ ಕೋಪಗೊಂಡ ಗುರ್ಜರ್ ನಾಯಕ ವಿಜಯ್ ಬೈನ್ಸ್ಲಾ ಅವರು ಕಾಂಗ್ರೆಸ್ ಪಕ್ಷ ನಡೆಸುತ್ತಿರುವ ಭಾರತ್ ಜೋಡೋ ಯಾತ್ರೆಗೆ ರಾಜಸ್ತಾನದಲ್ಲಿ ಪ್ರತಿರೋಧ ಒಡ್ಡುವುದಾಗಿ ಎಚ್ಚರಿಸಿದ್ದಾರೆ.
ರಾಜಸ್ಥಾನದ ಕಾಂಗ್ರೆಸ್ ಸರ್ಕಾರದ ವಿರುದ್ಧ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿರುವ ವಿಜಯ್ ಬೈನ್ಸ್ಲಾ ಅವರು, ಸರ್ಕಾರ ರಚನೆಯಾಗಿ ನಾಲ್ಕು ವರ್ಷಗಳಾಗಿವೆ. ಗುಜ್ಜರ್ ಮೀಸಲಾತಿ ಒಪ್ಪಂದವನ್ನು ರಾಜ್ಯ ಸರ್ಕಾರ ಜಾರಿಗೆ ತಂದಿಲ್ಲ. ನಮ್ಮ ತಾಳ್ಮೆಯನ್ನು ಹೆಚ್ಚು ಪರೀಕ್ಷಿಸಲು ಹೋಗಬೇಡಿ ಎಂದರು. ಗುರ್ಜರ್ ನಾಯಕ ವಿಜಯ್ ಬೈನ್ಸ್ಲಾ ಹೇಳಿಕೆಗೆ ಪ್ರತಿಕ್ರಿಯಿಸಿದ ರಾಜಸ್ಥಾನ ಕಾಂಗ್ರೆಸ್ ಕಾರ್ಯದರ್ಶಿ ಜಸ್ವಂತ್ ಗುರ್ಜಾರ್ ಬೈನ್ಸ್ಲಾ ಹೇಳಿಕೆಯು ರಾಜಕೀಯ ಪ್ರೇರಿತವಾಗಿದೆ ಎಂದು ಹೇಳಿದ್ದಾರೆ.
''ಅವರ ಹೇಳಿಕೆ ಇದು ಆರ್ಎಸ್ಎಸ್ನ ಅಜೆಂಡಾವಾಗಿದ್ದು ಯಾತ್ರೆಯ ವಿರುದ್ಧದ ಆಂದೋಲನವು ರಾಜಕೀಯ ಪ್ರೇರಿತವಾಗಿದೆ. ಗುರ್ಜರ್ ಸಮುದಾಯಕ್ಕೆ ಸೇರಿದ 70ಕ್ಕೂ ಹೆಚ್ಚು ಜನರ ಮೇಲೆ ಬಿಜೆಪಿ ಗುಂಡು ಹಾರಿಸಿತ್ತು. ಅವರು ಆ ಬಗ್ಗೆ ಕೆಲಸ ಮಾಡಲು ಇಚ್ಚಿಸುವುದಿಲ್ಲ. ಅಲ್ಲದೆ ವಿಜಯ್ ಬೈನ್ಸ್ಲಾ ಅವರು ಸಂವಿಧಾನದ 9ನೇ ಶೆಡ್ಯೂಲ್ ಬಗ್ಗೆ ಏಕೆ ಮೌನವಾಗಿದ್ದಾರೆ'' ಎಂದು ಜಸ್ವಂತ್ ಗುರ್ಜರ್ ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಮಹಾರಾಷ್ಟ್ರದಲ್ಲಿ 66ನೇ ದಿನಕ್ಕೆ ಕಾಲಿಟ್ಟಿದ್ದು, ಮಹಾರಾಷ್ಟ್ರದ ಲೆಗ್ನಲ್ಲಿರುವ ಭಾರತ್ ಜೋಡೋ ಯಾತ್ರೆಯು ಶನಿವಾರ ಮಹಾರಾಷ್ಟ್ರದ ಹಿಂಗೋಲಿಯ ಕಳಮ್ನೂರಿನ ಶೆವಾಲಾ ಗ್ರಾಮದಿಂದ ಪುನರಾರಂಭಗೊಂಡಿದೆ. ಯಾತ್ರೆಯು ಮಹಾರಾಷ್ಟ್ರವನ್ನು ಪ್ರವೇಶಿಸುವ ಮೊದಲು ತಮಿಳುನಾಡು, ಕೇರಳ, ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣ ಭಾಗಗಳಲ್ಲಿ ಯಾತ್ರೆ ಮುಗಿಸಿ ಬಂದಿದೆ. ರಾಹುಲ್ ಗಾಂಧಿ ಮಹಾರಾಷ್ಟ್ರದ ಐದು ಜಿಲ್ಲೆಗಳ 15 ವಿಧಾನಸಭೆ ಮತ್ತು 6 ಸಂಸದೀಯ ಕ್ಷೇತ್ರಗಳಲ್ಲಿ ಬರೋಬ್ಬರಿ 382 ಕಿ.ಮೀ. ಸಂಚರಿಸಲಿದ್ದಾರೆ.

ಅತಿ ಹೆಚ್ಚು ದೂರ ನಡೆದ ರಾಜಕಾರಣಿ ರಾಹುಲ್ ಗಾಂಧಿ
ಭಾರತ್ ಜೋಡೋ ಯಾತ್ರೆಯು ಸೆಪ್ಟೆಂಬರ್ 7ರಂದು ಕನ್ಯಾಕುಮಾರಿಯಿಂದ ಪ್ರಾರಂಭವಾಯಿತು. ಕೈ ಬಣ 3,570 ಕಿಮೀ ಮೆರವಣಿಗೆಯಲ್ಲಿ 2,355 ಕಿಮೀ ದೂರವನ್ನು ಕ್ರಮಿಸಲಿದೆ. ಇದು ಮುಂದಿನ ವರ್ಷ ಕಾಶ್ಮೀರದಲ್ಲಿ ಕೊನೆಗೊಳ್ಳಲಿದ್ದು, ಭಾರತದ ಇತಿಹಾಸದಲ್ಲಿ ಇತರೆ ಯಾವುದೇ ಭಾರತೀಯ ರಾಜಕಾರಣಿಗಳು ಕಾಲ್ನಡಿಗೆಯಲ್ಲಿ ನಡೆಸಿದ ಅತಿ ಉದ್ದದ ಮೆರವಣಿಗೆ ಇದಾಗಲಿದೆ ಎಂದು ಕಾಂಗ್ರೆಸ್ ಈ ಹಿಂದೆ ಹೇಳಿಕೆಯಲ್ಲಿ ಹೇಳಿಕೊಂಡಿದೆ. ಭಾರತ್ ಜೋಡೋ ಯಾತ್ರೆಗೆ ದೇಶಾದ್ಯಂತ ವಿವಿಧ ರಾಜಕೀಯ ಪಕ್ಷಗಳು ಮತ್ತು ಸಾಮಾಜಿಕ ಸಂಘಟನೆಗಳಿಂದ ಬೆಂಬಲ ವ್ಯಕ್ತವಾಗುತ್ತಿದ್ದು, ದಿನದಿಂದ ದಿನಕ್ಕೆ ಪ್ರತಿಕ್ರಿಯೆ ಹೆಚ್ಚುತ್ತಿದೆ.

ಶಂಕರರಾವ್ ಸತವ್ ಕಾಲೇಜು ಮೈದಾನದಲ್ಲಿ ವ್ಯವಸ್ಥೆ
ಮಹಾರಾಷ್ಟ್ರದಲ್ಲಿ ಮೊದಲ ವಿರಾಮದ ಭಾಗವಾಗಿ ಯಾತ್ರೆಯು ಕಾಳಮ್ನೂರಿ ನಗರದ ನೀಲಾವತಿ ಪೆಟ್ರೋಲಿಯಂ ಎದುರಿನ ಮಾತೋಶ್ರೀ ಹೋಟೆಲ್ ಬಳಿ ನಿಂತಿತು. ಇದು ಶೀಘ್ರದಲ್ಲೇ ಪಾರ್ಡಿ ಮೋಡ್ನಿಂದ ಪಾದಯಾತ್ರೆಯನ್ನು ಪುನರಾರಂಭಿಸಲಿದ್ದು, ಬಸ್ ನಿಲ್ದಾಣದಿಂದ ಮತ್ತೆ ಕಾಳಮ್ನೂರಿ ಜಿಲ್ಲಾ ಪರಿಷತ್ ಪ್ರೌಢಶಾಲೆಯಲ್ಲಿ ರಾತ್ರಿ 7 ಗಂಟೆಗೆ ಅಂತ್ಯವಾಗಲಿದೆ. ಬಳಿಕ ಭಾರತ್ ಜೋಡೋದ ಪಾದಯಾತ್ರಿಗಳು ಕಾಳಮ್ನೂರಿ ನಗರದ ಲೇಟ್ ಶಂಕರರಾವ್ ಸತವ್ ಕಲಾ ಮತ್ತು ವಾಣಿಜ್ಯ ಕಾಲೇಜು ಮೈದಾನದಲ್ಲಿ ತಂಗಲಿದ್ದಾರೆ.

ಎನ್ಸಿಪಿ, ಶಿವಸೇನೆ ಬೆಂಬಲ
ಯಾತ್ರೆಗೆ ದೇಶಾದ್ಯಂತ ವಿವಿಧ ರಾಜಕೀಯ ಪಕ್ಷಗಳು ಹಾಗೂ ಸಾಮಾಜಿಕ ಸಂಘಟನೆಗಳಿಂದ ಬೆಂಬಲ ವ್ಯಕ್ತವಾಗುತ್ತಿದ್ದು, ದಿನದಿಂದ ದಿನಕ್ಕೆ ಪ್ರತಿಕ್ರಿಯೆ ಹೆಚ್ಚುತ್ತಿದೆ. ಮಹಾರಾಷ್ಟ್ರದಲ್ಲೂ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್ಸಿಪಿ) ಮತ್ತು ಶಿವಸೇನೆ (ಠಾಕ್ರೆ ಬಣ) ಕೂಡ ಯಾತ್ರೆಯಲ್ಲಿ ಭಾಗವಹಿಸಲು ಒಪ್ಪಿಗೆ ನೀಡಿದ್ದು, ಯಾತ್ರೆಯ ಮಹತ್ವವನ್ನು ಹೆಚ್ಚಿಸಿದೆ.

ಕೆಲವು ಕಂಟೈನರ್ಗಳಲ್ಲಿ ಎಸಿ ವ್ಯವಸ್ಥೆ
ರಾಹುಲ್ ಗಾಂಧಿ ಜೊತೆಗೆ ಪಕ್ಷದ ಎಲ್ಲಾ ಸಂಸದರು, ಮುಖಂಡರು ಮತ್ತು ಕಾರ್ಯಕರ್ತರು ಕಂಟೈನರ್ಗಳಲ್ಲಿ ತಂಗುತ್ತಿದ್ದಾರೆ. ಕೆಲವು ಕಂಟೈನರ್ಗಳಲ್ಲಿ ಮಲಗುವ ಹಾಸಿಗೆಗಳು, ಶೌಚಾಲಯಗಳು ಮತ್ತು ಎಸಿಗಳನ್ನು ಸಹ ಅಳವಡಿಸಲಾಗಿದೆ. ಸ್ಥಳ ಬದಲಾವಣೆಯೊಂದಿಗೆ ತೀವ್ರವಾದ ಶಾಖ ಮತ್ತು ತೇವಾಂಶವನ್ನು ಗಮನದಲ್ಲಿಟ್ಟುಕೊಂಡು ಈ ವ್ಯವಸ್ಥೆಗಳನ್ನು ಮಾಡಲಾಗಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಡಿಸೆಂಬರ್ 3 ರಂದು ರಾಜಸ್ಥಾನ ಪ್ರವೇಶಿಸಲಿದೆ.












Click it and Unblock the Notifications