ಗುಜರಾತ್ ಚುನಾವಣೆ ರಂಗೇರಿಸಲಿದ್ದಾರೆ ಲಾಲೂ ಪ್ರಸಾದ್ ಯಾದವ್
ಅಹಮದಾಬಾದ್, ನವೆಂಬರ್ 22: ಗುಜರಾತ್ ವಿಧಾನಸಭೆ ಚುನಾವಣೆಗೆ ಲಾಲೂ ಪ್ರಸಾದ್ ಯಾದವ್ ಪ್ರವೇಶವಾಗಿದೆ. ಅಂದುಕೊಂಡಂತೆ ನಡೆದರೆ ಲಾಲೂ ಕಾಂಗ್ರೆಸ್ ಮತ್ತು ಹಾರ್ದಿಕ್ ಪರ ಗುಜರಾತಿನಲ್ಲಿ ತಮ್ಮ ಮಾತಿನ ಅಬ್ಬರ ತೋರಲಿದ್ದಾರೆ.
ನಮ್ಮ ಬೆಂಬಲವೇನಿದ್ದರೂ ಕಾಂಗ್ರೆಸಿಗೆ: ಹಾರ್ದಿಕ್ ಪಟೇಲ್ ಸ್ಪಷ್ಟನೆ
ಪಾಟೀದಾರ್ ಮೀಸಲಾತಿ ಆಂದೋಲನದ ಮುಂದಾಳು ಹಾರ್ದಿಕ್ ಪಟೇಲ್ ಗೆ ಬೆಂಬಲ ನೀಡಿರುವ ಆರ್.ಜೆ.ಡಿ ನಾಯಕ ಲಾಲೂ ಪ್ರಸಾದ್ ಯಾದವ್ ಸದ್ಯದಲ್ಲೇ ಗುಜರಾತಿಗೆ ಭೇಟಿ ನೀಡಲಿದ್ದಾರೆ.
ಭಾನುವಾರವೇ ಈ ಸಂಬಂಧ ಹಾರ್ದಿಕ್ ಪಟೇಲ್ ಜತೆ ಮಾತನಾಡಿರುವ ಲಾಲೂ ಪ್ರಸಾದ್ ಯಾದವ್, ಹಾರ್ದಿಕ್ ಮತ್ತು ಕಾಂಗ್ರೆಸ್ ಪರ ಪ್ರಚಾರ ನಡೆಸುವುದಾಗಿಯೂ ಹೇಳಿದ್ದಾರೆ.
ಹಾರ್ದಿಕ್ ಪಟೇಲ್ ಲಾಲೂ ಪ್ರಸಾದ್ ಯಾದವ್ ಹಿರಿಯ ಪುತ್ರಿ ಮೀಸಾ ಭಾರ್ತಿ ಜತೆಗೂ ಸಂಪರ್ಕದಲ್ಲಿದ್ದಾರೆ. ಇದಲ್ಲದೆ ಬಿಹಾರ ವಿರೋಧ ಪಕ್ಷದ ನಾಯಕ ತೇಜಸ್ವೀ ಯಾದವ್ ಜತೆಗೂ ಮಾತುಕತೆ ನಡೆಸುತ್ತಿದ್ದಾರೆ.
ಮಂಗಳವಾರ ಮುಗಿದ ಮೂರು ದಿನಗಳ ಸಭೆಯಲ್ಲಿ ಪಕ್ಷದ ಉಪಾಧ್ಯಕ್ಷ ಶಿವಾನಂದ ತಿವಾರಿ, ಹಾರ್ದಿಕ್ ಪಟೇಲ್ ಸೇರಿ ಒಂದೇ ಆಲೋಚನೆಯ ಜನರೆಲ್ಲಾ ಒಂದಾಗಬೇಕು ಎಂದು ಹೇಳಿದ್ದಾರೆ.
ಹಾರ್ದಿಕ್ ಪಟೇಲ್ ಆಹ್ವಾನಿಸಿದಲ್ಲಿ ಗುಜರಾತಿನಲ್ಲಿ ಪ್ರಚಾರ ನಡೆಸಲು ಲಾಲೂ ಪ್ರಸಾದ್ ಯಾದವ್ ಸಿದ್ದವಾಗಿದ್ದಾರೆ. ಅವರು ಯಾವತ್ತೂ ಹಾರ್ದಿಕ್ ಪಟೇಲ್ ರನ್ನು ಬೆಂಬಲಿಸಿದ್ದಾರೆ. ಈ ಸಂಬಂಧ ಭಾನುವಾರ ಅವರ ಜತೆ ಮಾತುಕತೆ ನಡೆಸಿದ್ದಾಗಿಯೂ ಹೇಳಿದ್ದಾರೆ.
ಕಳೆದ ಬಿಹಾರ ಚುನಾವಣೆ ವೇಳೆ ತಮ್ಮ ವಿಡಂಬನಾತ್ಮಕ, ಲಘು ಹಾಸ್ಯದ ಮಾತುಗಳಿಂದ ಪ್ರಧಾನಿ ನರೇಂದ್ರ ಮೋದಿಯನ್ನು ತಿವಿದಿದ್ದರು ಲಾಲೂ ಪ್ರಸಾದ್ ಯಾದವ್. ಈ ಮೂಲಕ ಹಲವು ವರ್ಷಗಳ ನಂತರ ಬಿಹಾರದಲ್ಲಿ ಆರ್.ಜೆ.ಡಿ ಉತ್ತಮ ಸ್ಥಾನಗಳನ್ನು ಗಳಿಸಿತ್ತು. ಇದೀಗ ತಮ್ಮ ವಾಗ್ಝರಿಯನ್ನು ಗುಜರಾತಿನಲ್ಲಿ ಹರಿಯಬಿಡಲು ಲಾಲೂ ಸಿದ್ದವಾಗಿದ್ದಾರೆ.