ಗುಜರಾತ್ ಮೊರ್ಬಿ ಸೇತುವೆ ದುರಂತಕ್ಕೆ ಬಿಜೆಪಿ ವಿರುದ್ಧ ಭಾರೀ ಟೀಕೆ
ಅಹಮದಾಬಾದ್, ಅ. 31: ಭಾನುವಾರ ಗುಜರಾತ್ನ ಮೊರ್ಬಿ ನಗರದಲ್ಲಿ ತೂಗು ಸೇತುವೆ ಕುಸಿದು ಕನಿಷ್ಠ 132 ಮಂದಿ ಸಾವನ್ನಪ್ಪಿದ್ದಾರೆ. ಘಟನೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವಾರು ನಾಯಕರು ಸಂತಾಪ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಗುಜರಾತ್ ರಾಜ್ಯದ ಎಲ್ಲಾ ಪಕ್ಷದ ಕಾರ್ಯಕರ್ತರಿಗೆ ರಕ್ಷಣಾ ಕಾರ್ಯದಲ್ಲಿ ಸಾಧ್ಯವಿರುವ ಎಲ್ಲ ನೆರವು ನೀಡುವಂತೆ ಮನವಿ ಮಾಡಿದ್ದಾರೆ.
ಜೊತೆಗೆ ಹಲವು ರಾಜಕೀಯ ಪಕ್ಷಗಳ ನಾಯಕರು ಘಟನೆಯ ಬಗ್ಗೆ ಬಿಜೆಪಿಯನ್ನು ಕಟುವಾಗಿ ಟೀಕಿಸಿದ್ದಾರೆ. ರಂದೀಪ್ ಸುರ್ಜೇವಾಲ ಇದನ್ನು "ಮಾನವ ನಿರ್ಮಿತ ದುರಂತ" ಎಂದು ಆರೋಪಿಸಿದ್ದಾರೆ. ಉಪರಾಷ್ಟ್ರಪತಿ ಜಗದೀಪ್ ಧನಕರ್ ಎಲ್ಲರನ್ನೂ ಸುರಕ್ಷಿತವಾಗಿ ರಕ್ಷಿಸಲಿ ಎಂದು ಪ್ರಾರ್ಥಿಸಿದ್ದಾರೆ.
ಗುಜರಾತ್ ಮೊರ್ಬಿ ಸೇತುವೆ ದುರಂತ: 100 ಸಾವು, 177 ಮಂದಿ ರಕ್ಷಣೆ
ಘಟನೆಯ ಕುರಿತು ಬಿಜೆಪಿಯನ್ನು ಕಟುವಾಗಿ ಟೀಕಿಸಿರುವ ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ ಸಿಂಗ್, ಇದು ದೇವರ ಕೃತ್ಯವೇ ಅಥವಾ ವಂಚನೆಯ ಕೃತ್ಯವೇ..? ಎಂದು ಪ್ರಶ್ನಿಸಿದ್ದಾರೆ. ಮಾರ್ಚ್ 31, 2016 ರಂದು ಕೋಲ್ಕತ್ತಾದ ವಿವೇಕಾನಂದ ರಸ್ತೆಯ ಮೇಲ್ಸೇತುವೆ ಕುಸಿತದ ಬಗ್ಗೆ ನಂತರ ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧ ಪ್ರಧಾನಿ ಮೋದಿ ದೇವರ ಕೃತ್ಯವೇ ಅಥವಾ ವಂಚನೆಯ ಕೃತ್ಯವೇ ಎಂದು ಟೀಕಿಸಿದ್ದರು ಎನ್ನಲಾಗಿಎ. ಘಟನೆಯಲ್ಲಿ ಹಲವು ಮಂದಿ ಸಾವನ್ನಪ್ಪಿದ್ದರು.
ದೇವರ ಕೃತ್ಯವೇ ಅಥವಾ ವಂಚನೆಯ ಕೃತ್ಯವೇ..?
ಮೊರ್ಬಿ ಸೇತುವೆ ಕುಸಿತದಲ್ಲಿ ಭಾರೀ ಪ್ರಮಾಣದ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿರುವ ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್, ಸೇತುವೆ ಕುಸಿತದ ಘಟನೆಯು ದೇವರ ಕೃತ್ಯವೇ ಅಥವಾ ವಂಚನೆಯ ಕೃತ್ಯವೇ..? ಎಂದು ಪ್ರಧಾನಿ ಮೋದಿಯನ್ನು ಪ್ರಶ್ನಿಸಿದ್ದಾರೆ.
ಮೋದಿಯವರ ಗುಜರಾತ್ ಮಾದರಿಯನ್ನು ಟೀಕಿಸಿರುವ ದಿಗ್ವಿಜಯ್ ಸಿಂಗ್, "ಸೇತುವೆಯನ್ನು 6 ತಿಂಗಳಿನಿಂದ ದುರಸ್ತಿ ಮಾಡಲಾಗುತ್ತಿದೆ, ಅದಕ್ಕೆ ಎಷ್ಟು ವೆಚ್ಚವಾಯಿತು..? 5 ದಿನದಲ್ಲಿ ಅದು ಕುಸಿದಿದೆ. 27 ವರ್ಷಗಳಿಂದ ಬಿಜೆಪಿ ಸರ್ಕಾರವಿದೆ, ಇದೇನಾ ನಿಮ್ಮ ಅಭಿವೃದ್ಧಿ ಮಾದರಿ..? ಈ ವರ್ಷದ ಜುಲೈನಲ್ಲಿ, ಕಚ್ ಜಿಲ್ಲೆಯ ಬಿದ್ರಾ ಗ್ರಾಮದಲ್ಲಿ ಮೊದಲ ದಿನದ ಪರೀಕ್ಷೆಯಲ್ಲಿ ನರ್ಮದಾ ಕಾಲುವೆ ಒಡೆದಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
"8-9 ವರ್ಷಗಳಿಂದ ನಿರ್ಮಿಸಲಾಗುತ್ತಿದ್ದ ಭುಜ್ ನಗರದ ಮೇಲ್ಸೇತುವೆ ಈ ವರ್ಷ ಉದ್ಘಾಟನೆಗೊಂಡಿದ್ದು, ಮತ್ತೆ ದುರಸ್ತಿ ಮಾಡಬೇಕಾಯಿತು. ಇಡೀ ಗುಜರಾತ್ನಲ್ಲಿ ಮೋದಿಶಾ ಅವರ ನೆಚ್ಚಿನ ಗುತ್ತಿಗೆದಾರರು ಮಾತ್ರ ಗುತ್ತಿಗೆ ಪಡೆಯುತ್ತಾರೆ ಎಂದು ನನಗೆ ತಿಳಿಸಿದೆ. ಕೆಲಸ ಪೂರ್ಣಗೊಳ್ಳದಿರಬಹುದು, ಆದರೆ ಪಾವತಿ ಪೂರ್ಣಗೊಂಡಿದೆ" ಎಂದು ದಿಗ್ವಿಜಯ್ ಸಿಂಗ್ ಟ್ವೀಟ್ ಮಾಡಿದ್ದಾರೆ.
ಮೃತರಿಗೆ 2 ಲಕ್ಷ ಪರಿಹಾರ ಘೋಷಿಸಿದ ಪ್ರಧಾನಿ ಕಚೇರಿ
ರಾಷ್ಟ್ರಪತಿ ದ್ರೌಪದಿ ಮುರ್ಮು ಟ್ವೀಟ್ ಮಾಡಿ, "ಗುಜರಾತ್ನ ಮೊರ್ಬಿಯಲ್ಲಿ ಸಂಭವಿಸಿದ ದುರಂತವು ನನ್ನನ್ನು ಚಿಂತೆಗೀಡು ಮಾಡಿದೆ. ಪರಿಹಾರ ಮತ್ತು ರಕ್ಷಣಾ ಪ್ರಯತ್ನಗಳು ಸಂತ್ರಸ್ತರಿಗೆ ಸಹಾಯ ಮಾಡುತ್ತವೆ" ಎಂದು ಹೇಳಿದ್ದಾರೆ.
"ಗುಜರಾತ್ನ ಮೊರ್ಬಿಯಲ್ಲಿ ನಡೆದ ದುರಂತ ಘಟನೆಯ ಬಗ್ಗೆ ಕೇಳಿ ದುಃಖಿತನಾಗಿದ್ದೇನೆ. ಎಲ್ಲರ ಸುರಕ್ಷಿತ ರಕ್ಷಣೆ ಮತ್ತು ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ನಾನು ಪ್ರಾರ್ಥಿಸುತ್ತೇನೆ. ಸಂತ್ರಸ್ತ ಕುಟುಂಬಗಳಿಗೆ ನನ್ನ ಸಂತಾಪಗಳು" ಎಂದು ಧನಕರ್ ಅವರನ್ನು ಉಲ್ಲೇಖಿಸಿ ಉಪರಾಷ್ಟ್ರಪತಿಯವರ ಕಾರ್ಯದರ್ಶಿ ಟ್ವೀಟ್ ಮಾಡಿದ್ದಾರೆ.
ಘಟನೆಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ 2 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಪ್ರಧಾನಿ ಮೋದಿ ಘೋಷಿಸಿದ್ದಾರೆ ಎಂದು ಅವರ ಕಚೇರಿ ತಿಳಿಸಿದೆ. ಘಟನೆಗೆ ದುಃಖ ವ್ಯಕ್ತಪಡಿಸಿರುವ ಪ್ರಧಾನಿ ಮೋದಿ, ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಮತ್ತು ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ ಎಂದು ಟ್ವೀಟ್ನಲ್ಲಿ ತಿಳಿಸಿದ್ದಾರೆ.
ಘಟನೆಗೆ ಗುಜರಾತ್ ಸರ್ಕಾರ ಉತ್ತರಿಸಬೇಕಾಗಿದೆ; ಅತಿಶಿ
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಟ್ವೀಟ್ ಮಾಡಿ, "ಗುಜರಾತ್ನಿಂದ ಬಹಳ ದುಃಖದ ಸುದ್ದಿ ಬಂದಿದೆ. ಮೊರ್ಬಿಯಲ್ಲಿ ಸೇತುವೆಯೊಂದು ಕುಸಿದಿದ್ದು, ಅನೇಕ ಜನರು ನದಿಗೆ ಬಿದ್ದಿದ್ದಾರೆ ಎಂದು ವರದಿಯಾಗಿದೆ. ಪ್ರತಿಯೊಬ್ಬರ ಜೀವನ ಮತ್ತು ಯೋಗಕ್ಷೇಮಕ್ಕಾಗಿ ನಾನು ದೇವರನ್ನು ಪ್ರಾರ್ಥಿಸುತ್ತೇನೆ" ಎಂದಿದ್ದಾರೆ. ಈ ಬಾರಿಯ ಗುಜರಾತ್ ವಿಧಾನಸಭಾ ಚುನಾವಣೆಯಲ್ಲು ಆಮ್ ಆದ್ಮಿ ಪಕ್ಷವು ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಲು ಸರ್ವಪ್ರಯತ್ನ ನಡೆಸುತ್ತಿದೆ ಎನ್ನಲಾಗಿದೆ.
ಎಎಪಿಯ ಅತಿಶಿ ಘಟನೆ ಬಗ್ಗೆ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. "ಗುಜರಾತ್ನ ಕಳ್ಳಭಟ್ಟಿ ದುರಂತದಲ್ಲಿ 100 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ ಘಟನೆಯಿಂದ ಇದೀಗ ಚೇತರಿಸಿಕೊಂಡಿದೆ. ಇದರ ಬೆನ್ನಲ್ಲೇ ಈಗ ಸೇತುವೆ ಕುಸಿದು ನೂರಾರು ಜನ ಪ್ರಾಣ ಕಳೆದುಕೊಂಡಿದ್ದಾರೆ. ಇದಕ್ಕೆ ಗುಜರಾತ್ ಸರ್ಕಾರ ಉತ್ತರಿಸಬೇಕಾಗಿದೆ" ಎಂದ ಆಗ್ರಹಿಸಿದ್ದಾರೆ.
ಇದು ಮಾನವ ನಿರ್ಮಿತ ದುರಂತ ಎಂದ ರಂದೀಪ್ ಸುರ್ಜೇವಾಲ
ಘಟನೆಯನ್ನು ಮಾನವ ನಿರ್ಮಿತ ದುರಂತ ಎಂದು ಕಾಂಗ್ರೆಸ್ ನಾಯಕ ರಂದೀಪ್ ಸುರ್ಜೇವಾಲಾ ಆರೋಪಿಸಿದ್ದಾರೆ.
"ಇದು ನೇರ ಕ್ರಿಮಿನಲ್ ಪಿತೂರಿ ಅಲ್ಲವೇ..? 'ಫಿಟ್ನೆಸ್ ಪ್ರಮಾಣಪತ್ರ' ಇಲ್ಲದೆ ಸಾರ್ವಜನಿಕ ಬಳಕೆಗೆ ಸೇತುವೆಯನ್ನು ತೆರೆಯಲು ಬಿಜೆಪಿ ಸರ್ಕಾರ ಹೇಗೆ ಅವಕಾಶ ನೀಡಿತು," ಎಂದು ಸುರ್ಜೇವಾಲಾ ಕಿಡಿಕಾರಿದ್ದಾರೆ.
ಗುಜರಾತಿನ ಮೋರ್ಬಿ ಸೇತುವೆ ಅಪಘಾತದಲ್ಲಿ ಅಸಂಖ್ಯಾತ ಜೀವಗಳು ಬಲಿಯಾದ ನೋವಿನ ಸುದ್ದಿ ಇಡೀ ದೇಶದ ಹೃದಯವನ್ನು ಅಲ್ಲಾಡಿಸಿದೆ. ಎಲ್ಲಾ ದುಃಖಿತ ಕುಟುಂಬಗಳಿಗೆ ಸಂತಾಪಗಳು. ಇದು ನೈಸರ್ಗಿಕ ಅಪಘಾತವಲ್ಲ, ಮಾನವ ನಿರ್ಮಿತ ದುರಂತ. ಗುಜರಾತಿನ ಬಿಜೆಪಿ ಸರಕಾರವೇ ಈ ಘೋರ ಅಪರಾಧಕ್ಕೆ ನೇರ ಹೊಣೆಯಾಗಿದೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಟ್ವೀಟ್ ಮಾಡಿ ದುರಂತಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ. "ಗುಜರಾತಿನ ಮೋರ್ಬಿ ಸೇತುವೆ ಕುಸಿತದಲ್ಲಿ ಹಲವಾರು ಮುಗ್ಧ ಜೀವಗಳ ನಷ್ಟದಿಂದ ತೀವ್ರ ನೋವಾಗಿದೆ. ಅಗಲಿದ ಕುಟುಂಬಗಳಿಗೆ ನನ್ನ ಹೃತ್ಪೂರ್ವಕ ಸಂತಾಪ. ಗಾಯಗೊಂಡಿರುವವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ನಾನು ಹಾರೈಸುತ್ತೇನೆ, ನದಿಯಲ್ಲಿ ಸಿಕ್ಕಿಬಿದ್ದಿರುವ ಉಳಿದ ಜನರನ್ನು ಆದಷ್ಟು ಬೇಗ ಸುರಕ್ಷಿತವಾಗಿ ರಕ್ಷಿಸಬೇಕು" ಎಂದಿದ್ದಾರೆ.