ಬಂಧನ ಭೀತಿಯಿಂದ ಪಾರಾದ ಹಾರ್ದಿಕ್ ಪಟೇಲ್
ಅಹಮದಾಬಾದ್, ಅಕ್ಟೋಬರ್ 26: ಪಾಟಿದಾರ್ ಮೀಸಲಾತಿ ಹೋರಾಟದ ಮುಂದಾಳು ಹಾರ್ದಿಕ್ ಪಟೇಲ್ ಗೆ ಜಾಮೀನು ಮಂಜೂರಾಗಿದೆ. ಈ ಮೂಲಕ ಹಾರ್ದಿಕ್ ಬಂಧನ ಭೀತಿಯಿಂದ ಪಾರಾಗಿದ್ದಾರೆ.
ಗುಜರಾತ್ ನ ವಿಸ್ನಾಗರ್ ಸೆಷನ್ಸ್ ನ್ಯಾಯಾಲಯ ಹಾರ್ದಿಕ್ ಪಟೇಲ್ ಹಾಗೂ ಲಾಲ್ಜಿ ಪಟೇಲ್ ಸೇರಿ 7 ಜನರ ವಿರುದ್ಧ ಬುಧವಾರ ಜಾಮೀನು ರಹಿತ ಬಂಧನದ ವಾರೆಂಟ್ ಜಾರಿಗೊಳಿಸಿತ್ತು. ಇದೀಗ ಹಾರ್ದಿಕ್ ಪಟೇಲ್ ಗೆ ವಿಸ್ನಾಗರ್ ನ್ಯಾಯಾಲಯವೇ ಜಾಮೀನು ಮಂಜೂರು ಮಾಡಿದೆ.

2015ರಲ್ಲಿ ಪಾಟಿದಾರ್ ಮೀಸಲಾತಿ ಹೋರಾಟದ ವೇಳೆ ಬಿಜೆಪಿ ಶಾಸಕ ರಿಶಿಕೇಶ್ ಪಟೇಲ್ ಕಚೇರಿಯಲ್ಲಿ ದಾಂಧಲೆ ನಡೆಸಿದ ಪ್ರಕರಣದಲ್ಲಿ ಹಾರ್ದಿಕ್ ಪಟೇಲ್ ಹಾಗೂ ಲಾಲ್ಜಿ ಪಟೇಲ್ ಸೇರಿ 7 ಜನರ ವಿರುದ್ಧ ದೂರು ದಾಖಲಾಗಿತ್ತು. ಇದರ ವಿಚಾರಣೆಗೆ ವಿಸ್ನಾಗರ್ ನ್ಯಾಯಾಲಯದಲ್ಲಿ ನಡೆಯುತ್ತಿತ್ತು.
ವಿಚಾರಣೆಗೆ ಹಾರ್ದಿಕ್ ಪಟೇಲ್ ಮತ್ತು ಇತರರು ಸತತ ಮೂರು ಬಾರಿ ಗೈರು ಹಾಜರಾದ ಹಿನ್ನಲೆಯಲ್ಲಿ ಅವರ ವಿರುದ್ಧ ಜಾಮೀನು ರಹಿತ ಬಂಧನದ ವಾರಂಟ್ ಜಾರಿಗೊಳಿಸಲಾಗಿತ್ತು.
ಒಂದಷ್ಟು ಷರತ್ತುಗಳನ್ನು ಮುಂದಿಟ್ಟು ಕಾಂಗ್ರೆಸ್ ಪಕ್ಷ ಸೇರಲು ಹೊರಟಿರುವ ಹಾರ್ದಿಕ್ ಪಟೇಲ್ ಗೆ ಜಾಮೀನು ರಹಿತ ಬಂಧನದ ವಾರಂಟ್ ಸಂಕಷ್ಟ ತಂದೊಡ್ಡಿತ್ತು. ಇದೀಗ ಜಾಮೀನು ಸಿಕ್ಕಿರುವುದರಿಂದ ಅವರನ್ನು ನಿರಾಳರನ್ನಾಗಿಸಿದೆ.












Click it and Unblock the Notifications