ಗುಜರಾತ್ ಚುನಾವಣೆ: ಬಿಜೆಪಿಯಿಂದ ಟಿಕೆಟ್ ನಿರಾಕರಣೆ- ಮಾತರ್ ಶಾಸಕ ಆಪ್ ಸೇರ್ಪಡೆ
ಅಹಮದಾಬಾದ್, ನವೆಂಬರ್ 10: ದಿನ ಕಳೆದಂತೆ ಗುಜರಾತ್ ಚುನಾವಣೆ ಪ್ರಚಾರ ಚುರುಕುಗೊಳ್ಳುತ್ತಿದೆ. ಈ ನಡುವೆ ಬಿಜೆಪಿಯಿಂದ ಟಿಕೆಟ್ ನಿರಾಕರಿಸಿದ್ದಕ್ಕೆ ಅತೃಪ್ತರಾದ ಮಾತರ್ ಶಾಸಕ ಆಮ್ ಆದ್ಮಿ ಪಕ್ಷ(ಆಪ್) ಸೇರ್ಪಡೆಗೊಂಡಿದ್ದಾರೆ.
ಗುಜರಾತ್ನ ಖೇಡಾ ಜಿಲ್ಲೆಯ ಮಾತರ್ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಭಾರತೀಯ ಜನತಾ ಪಕ್ಷದ (ಬಿಜೆಪಿ) ಶಾಸಕರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಆಡಳಿತ ಪಕ್ಷವು ಟಿಕೆಟ್ ನಿರಾಕರಿಸಿದ ನಂತರ ಆಮ್ ಆದ್ಮಿ ಪಕ್ಷಕ್ಕೆ (ಎಎಪಿ) ಸೇರಿದ್ದಾರೆ.
ಈ ಕ್ಷೇತ್ರದಿಂದ ಎರಡು ಬಾರಿ ಚುನಾವಣೆಯಲ್ಲಿ ಗೆದ್ದಿದ್ದ ಕೇಸರಿಸಿಂಹ ಸೋಲಂಕಿ ಅವರು ಎಎಪಿ ಸೇರಿದ್ದಾರೆ ಎಂದು ಅರವಿಂದ್ ಕೇಜ್ರಿವಾಲ್ ನೇತೃತ್ವದ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಗೋಪಾಲ್ ಇಟಾಲಿಯಾ ಟ್ವಿಟ್ಟರ್ನಲ್ಲಿ ತಿಳಿಸಿದ್ದಾರೆ.

''ಕೇಸರಿಸಿಂಹ ಸೋಲಂಕಿಜಿ ಜನಪ್ರಿಯ, ಶ್ರಮಜೀವಿ, ಮಾತರ್ ವಿಧಾನ ಸಭೆಯ ನಿರ್ಭೀತ ಶಾಸಕ. ಅರವಿಂದ್ ಕೇಜ್ರಿವಾಲ್ ಅವರ ಪ್ರಾಮಾಣಿಕ ರಾಜಕೀಯದಿಂದ ಪ್ರೇರಿತರಾಗಿ ಇಂದು ಆಮ್ ಆದ್ಮಿ ಪಕ್ಷಕ್ಕೆ ಸೇರಿದ್ದಾರೆ. ನಾನು ಕೇಸರಿಸಿಂಹಜಿ ಅವರನ್ನು ಆಮ್ ಆದ್ಮಿ ಪಕ್ಷಕ್ಕೆ ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ. ನಾವು ಒಟ್ಟಾಗಿ ಗುಜರಾತ್ನಲ್ಲಿ ಪ್ರಾಮಾಣಿಕ ಸರ್ಕಾರವನ್ನು ರಚಿಸುತ್ತೇವೆ'' ಎಂದು ಇಟಾಲಿಯಾ ಗುರುವಾರ ತಡರಾತ್ರಿ ಟ್ವೀಟ್ನಲ್ಲಿ ಹಂಚಿಕೊಮಡಿದ್ದಾರೆ. ಜೊತೆಗೆ ಸೋಲಂಕಿ ಅವರನ್ನು ಸ್ವಾಗತಿಸುತ್ತಿರುವ ಫೋಟೋವನ್ನು ಹರಿಬಿಟ್ಟಿದ್ದಾರೆ.
ರಾಜ್ಯ ಚುನಾವಣೆಗೆ 160 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಗುರುವಾರ ಬಿಡುಗಡೆ ಮಾಡಿದ ಆಡಳಿತಾರೂಢ ಬಿಜೆಪಿ, 2014 ಮತ್ತು 2017 ರಲ್ಲಿ ಸೋಲಂಕಿ ಪ್ರತಿನಿಧಿಸಿದ್ದ ಮತರ್ ಸ್ಥಾನಕ್ಕೆ ಕಲ್ಪೇಶ್ ಪರ್ಮಾರ್ ಅವರನ್ನು ಅಭ್ಯರ್ಥಿಯನ್ನಾಗಿ ಹೆಸರಿಸಿದೆ. 2014 ರಲ್ಲಿ ಆಗಿನ ಶಾಸಕ ದೇವುಸಿನ್ಹ ಚೌಹಾಣ್ ಲೋಕಸಭೆ ಚುನಾವಣೆಯಲ್ಲಿ ಗೆದ್ದ ನಂತರ ಸೋಲಂಕಿ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಗೆದ್ದಿದ್ದರು. ಚೌಹಾಣ್ ಪ್ರಸ್ತುತ ಕೇಂದ್ರ ಸಂಪರ್ಕ ಖಾತೆ ರಾಜ್ಯ ಸಚಿವರಾಗಿದ್ದಾರೆ.
ಸೋಲಂಕಿ ಅವರು 2017 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ನಲ್ಲಿ ಕ್ಷೇತ್ರದಿಂದ ಗೆದ್ದಿದ್ದರು. ಎಎಪಿ ಈಗಾಗಲೇ ಮಹಿಪತ್ಸಿನ್ಹ ಚೌಹಾಣ್ ಅವರ ಹೆಸರನ್ನು ತನ್ನ ಅಭ್ಯರ್ಥಿಯನ್ನಾಗಿ ಘೋಷಿಸಿದೆ.












Click it and Unblock the Notifications