ಗುಜರಾತಲ್ಲಿ ಕೇಸರಿ ಪಕ್ಷಕ್ಕೆ ಭರ್ಜರಿ ಸೋಲು: ಬಿಜೆಪಿ ಸಂಸದನ ಭವಿಷ್ಯ
ಅಹಮದಾಬಾದ್, ಡಿಸೆಂಬರ್ 18: ಎಲ್ಲಾ ಚುನಾವಣೋತ್ತರ ಸಮೀಕ್ಷೆಗಳು ಬಿಜೆಪಿಗೆ ಗೆಲುವು ಎನ್ನುತ್ತಿದ್ದರೆ ಬಿಜೆಪಿ ಸಂಸದರೊಬ್ಬರು ಮಾತ್ರ ಗುಜರಾತಲ್ಲಿ ಬಿಜೆಪಿ ಹೀನಾಯ ಸೋಲು ಕಾಣಲಿದೆ ಎಂದಿದ್ದಾರೆ.
"ಭರ್ಜರ ಜಯ ಬಿಟ್ಟಾಕಿ. ಬಿಜೆಪಿ ಸರಕಾರ ರಚಿಸುವಷ್ಟು ಸ್ಥಾನಗಳನ್ನು ಗುಜರಾತ್ ನಲ್ಲಿ ಪಡೆಯುವುದಿಲ್ಲ," ಎಂದು ರಾಜ್ಯಸಭಾ ಸದಸ್ಯ ಸಂಜಯ್ ಕಾಕಡೆ ಹೇಳಿದ್ದಾರೆ.
ಗುಜರಾತ್ ಚುನಾವಣಾ ರಿಯಾಲಿಟಿ ಶೋ ಫಿನಾಲೆ - LIVE
ಕಾಂಗ್ರೆಸ್ ಸರಕಾರ ಮ್ಯಾಜಿಕ್ ನಂಬರ್ ಗೆ ಹತ್ತಿರ ಬರಲಿದೆ ಎಂದು ಕಾಕಡೆ ವಾದಿಸಿದ್ದಾರೆ. "ಒಂದೊಮ್ಮೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಅದಕ್ಕೆ ನರೇಂದ್ರ ಮೋದಿಯವರೇ ಕಾರಣ," ಎಂದು ಕಾಕಡೆ ಅಭಿಪ್ರಾಯಪಟ್ಟಿದ್ದಾರೆ.
ಗುಜರಾತ್ ನಲ್ಲಿ 6 ಜನರ ತಂಡದಿಂದ ಸಮೀಕ್ಷೆ ನಡೆಸಲಾಗಿದೆ. ಈ ಸಮೀಕ್ಷೆಯ ಮಾಹಿತಿಗಳನ್ನು ಇಟ್ಟುಕೊಂಡು ತಾವು ಈ ಹೇಳಿಕೆ ನಿಡುತ್ತಿರುವುದಾಗಿ ಕಾಕಡೆ ಹೇಳಿದ್ದಾರೆ.
"ನಾನು 6 ಜನರ ತಂಡವನ್ನು ಗುಜರಾತ್ ಗೆ ಕಳುಹಿಸಿದ್ದೆ. ಇವರು ಗ್ರಾಮೀಣ ಭಾಗದಲ್ಲಿ ಮುಖ್ಯವಾಗಿ ಓಡಾಡಿದ್ದಾರೆ. ಇಲ್ಲಿ ರೈತರು, ಕಾರ್ಮಿಕರು, ಚಾಲಕರನ್ನು ಇವರು ಮಾತನಾಡಿಸಿದ್ದಾರೆ. ಈ ಸಮೀಕ್ಷೆಗಳ ಆಧಾರದಲ್ಲಿ ಮತ್ತು ನನ್ನ ಸ್ವಂತ ಗ್ರಹಿಕೆಯ ಮೇಲೆ ಬಿಜೆಪಿ ಗುಜರಾತಿನಲ್ಲಿ ಬಹುಮತ ಪಡೆಯುವುದಿಲ್ಲ," ಎಂದಿದ್ದಾರೆ.
ಬಿಜೆಪಿ ಸೋಲಿಗೆ ಆಡಳಿತ ವಿರೋಧಿ ಅಲೆಯೇ ಈ ಸೋಲಿಗೆ ಕಾರಣ ಎಂದು ಕಾಕಡೆ ಪ್ರತಿಪಾದಿಸಿದ್ದಾರೆ.
"ಗುಜರಾತ್ ನಲ್ಲಿ ಬಿಜೆಪಿ 22 ವರ್ಷಗಳಿಂದ ಅಧಿಕಾರದಲ್ಲಿದೆ. ಸ್ವಾತಂತ್ರ್ಯ ನಂತರ ಪಶ್ಚಿಮ ಬಂಗಾಳದಲ್ಲಿ ಕಮ್ಯೂನಿಷ್ಟ್ ಪಕ್ಷ ಬಿಟ್ಟರೆ ಮತ್ಯಾವ ಪಕ್ಷವೂ ನಿರಂತರ 25 ವರ್ಷಗಳನ್ನು ಆಳಿದ ಉದಾಹರಣೆ ಇಲ್ಲ," ಎಂದು ಅವರು ಹೇಳಿದ್ದಾರೆ.