ಅಹಂಕಾರ ಆತ್ಮವಿಶ್ವಾಸಗಳ ಅದ್ಭುತ ಸ್ಟ್ರಾಟಜಿಸ್ಟ್ ಅಮಿತ್ ಶಾ
ಅಹ್ಮದಾಬಾದ್, ಡಿಸೆಂಬರ್ 18 : ಭಾರತೀಯ ಜನತಾ ಪಕ್ಷದ ಅಧ್ಯಕ್ಷ ಅಮಿತ್ ಶಾ ಅಂದ್ರೆ ಅಹಂಕಾರ, ಆತ್ಮವಿಶ್ವಾಸಗಳ ಸಂಗಮ. ಅವರೊಬ್ಬ ನಿಷ್ಠುರ ಮಾತುಗಾರನಾದರೂ ಸ್ಟ್ರಾಟಜಿ ರೂಪಿಸುವಲ್ಲಿ ನೈಪುಣ್ಯತೆಯಿರುವ ಕುಸುರಿಗಾರ. ಪಕ್ಷದವರಿಗೆ ಅವರ ಮಾತು ವೇದವಾಕ್ಯ, ವಿರೋಧಿಗಳಿಗೆ ಕಾದಸೀಸ.
ಹಿಂದೆ ಗುಜರಾತ್ ಚುನಾವಣೆಯಲ್ಲೂ ಅವರ ಕೈವಾಡವಿತ್ತು, ಉತ್ತರ ಪ್ರದೇಶ ಸೇರಿದಂತೆ ಇತ್ತೀಚೆಗೆ ನಡೆದ ಐದು ರಾಜ್ಯಗಳ ಜಯದಲ್ಲಿಯೂ ಅಮಿತ್ ಶಾ ಕೈವಾಡ ಧಾರಾಳವಾಗಿದೆ. ಅವರ ಸ್ಟ್ರಾಟಜಿಗಳು, ಕರಾರುವಾಕ್ ನಿರ್ಧಾರಗಳು, ನಿಖರವಾದ ನೇಮಕಾತಿಗಳು ಸೋತಿದ್ದು ತೀರ ಅಪರೂಪ.
ಗುಜರಾತ್ LIVE : ಬಿಜೆಪಿ 103, ಕಾಂಗ್ರೆಸ್ 77, ಇತರೆ 2
ಉತ್ತರ ಪ್ರದೇಶದಲ್ಲಿ ಅವರ ಯಶಸ್ಸು ಕೇಕ್ ವಾಕ್ ನಂತಿತ್ತು. ಜಾತಿಯ ಜಾಡನ್ನೇ ಹಿಡಿದುಕೊಂಡು ಹೊರಟ ಅಮಿತ್ ಶಾ ಅವರು ಆಯಕಟ್ಟಿನ ಜಾಗದಲ್ಲಿ ಇಂಥವರೇ ಇರಬೇಕೆಂದು ನಿರ್ಧರಿಸಿ, ತಳಮಟ್ಟದಲ್ಲಿ ತಂಡವನ್ನು ಸಂಘಟಿಸಿ, ಸಾಕ್ಷಾತ್ ಸೇನಾಧಿಪತಿಯಂತೆ ಯುದ್ಧವಾಡಿ ಗೆದ್ದಿದ್ದಾರೆ.
ಆದರೆ ಅವರಿಗೆ ಉಳಿದೆಲ್ಲ ರಾಜ್ಯಗಳಿಗಿಂತ ಗುಜರಾತ್ ವಿಧಾನಸಭೆ ಚುನಾವಣೆ ಸವಾಲಿನದಾಗಿತ್ತು. 150 ಕ್ಷೇತ್ರಗಳನ್ನು ಗೆದ್ದೇ ಗೆಲ್ಲುತ್ತೇವೆಂದು ಅತಿಯಾದ ಆತ್ಮವಿಶ್ವಾಸದಿಂದ ಅವರು ಹೇಳುತ್ತಿದ್ದರೂ, ವಸ್ತುಸ್ಥಿತಿ ಹಾಗಿಲ್ಲವೆಂದು ಅವರಿಗೆ ಚೆನ್ನಾಗಿ ಗೊತ್ತಿತ್ತು. ಅವರ ಸ್ಟ್ರಾಟಜಿಗಳು ಸ್ವಲ್ಪ ಆಕಡೆ ಈಕಡೆಯಾಗಿದ್ದರೂ ಗುಜರಾತಿನಲ್ಲಿ ಅವಮಾನಕರ ಸೋಲು ಕಟ್ಟಿಟ್ಟ ಬುತ್ತಿಯಾಗಿತ್ತು.
ಚುನಾವಣೆ ಫಲಿತಾಂಶ : ಕರ್ನಾಟಕದ ನಾಯಕರು ಹೇಳುವುದೇನು?
ಆದರೂ, ಛಲಬಿಡದ ತ್ರಿವಿಕ್ರಮನಂತೆ ಗುಜರಾತಿನಲ್ಲಿ ಗೆಲುವಿನ ಹಾದಿ ಹಿಡಿದಿದ್ದಾರೆ ಅಮಿತ್ ಶಾ. ಅವರ ಯಾವ್ಯಾವ ನಡೆಗಳು, ಯಾವ್ಯಾವ ಸ್ಟ್ರಾಟಜಿಗಳು ಅವರ ಕೈಬಿಡಲಿಲ್ಲ ಎಂಬುದನ್ನು ನೋಡೋಣ.
ಭೂಪೇಂದ್ರ ಯಾದವ್ ನೇಮಕಾತಿ
ಏಕ್ ಮಾರ್ ದೋ ತುಕ್ಡಾ ಎನ್ನುವಂಥ ಮಾತಿನ ಭೂಪೇಂದ್ರ ಯಾದವ್ ಯುದ್ಧ ಭೂಮಿಯಲ್ಲಿ ಭಾಗವಹಿಸದೆ ಯುದ್ಧವನ್ನು ಗೆಲ್ಲಬಲ್ಲ ಸೇನಾನಿ. ಅವರನ್ನು ಇಡೀ ಗುಜರಾತ್ ಚುನಾವಣಾ ಪ್ರಕ್ರಿಯೆಯ ಮುಖ್ಯಸ್ಥರನ್ನಾಗಿ ಮಾಡಿದ್ದು ಶಾ ಅವರ ಮಾಸ್ಟರ್ ಸ್ಟ್ರೋಕ್. ರಾಜಸ್ತಾನ ಮತ್ತು ಜಾರ್ಖಂಡ್ ಚುನಾವಣೆಯಲ್ಲಿ ಭಾರೀ ಯೋಗದಾನ ನೀಡಿದ್ದ ಭೂಪೇಂದ್ರ ಗುಜರಾತಿನಲ್ಲಿಯೂ ತಮ್ಮ ಕೈಚಳಕ ತೋರಿದ್ದಾರೆ.
ಬಿಜೆಪಿ ಭರ್ಜರಿ ಜಯದ ಹಿಂದೆ ಅಮಿತ್ ಶಾ ತಂತ್ರಗಾರಿಕೆ!
ಶಾ ಅವರ 'ಪೇಜ್ ಪ್ರಮುಖ್' ಸ್ಟ್ರಾಟಜಿ
ಅಮಿತ್ ಶಾ ಅವರ 'ಪೇಜ್ ಪ್ರಮುಖ್' ಸ್ಟ್ರಾಟಜಿ ಕೂಡ ವಿಶಿಷ್ಟದ್ದಾಗಿದೆ. ಪ್ರತಿ ಕ್ಷೇತ್ರದಲ್ಲಿಯೂ ಹಲವಾರು ಬೂತ್ ಗಳಿರುತ್ತವೆ. ಪ್ರತಿ ಬೂತ್ ನಲ್ಲಿಯೂ ಹಲವಾರು ಮತದಾರರಿರುವ ಮತದಾರರ ಪಟ್ಟಿಯಿರುತ್ತದೆ. ಪ್ರತಿ ಪೇಜನ್ನೂ ಪರಿಗಣಿಸಿ ಅವರಲ್ಲಿನ ಓರ್ವ ವ್ಯಕ್ತಿಯನ್ನು 'ಪೇಜ್ ಪ್ರಮುಖ್'ನನ್ನಾಗಿ ನೇಮಿಸುವುದು ಅಮಿತ್ ಅವರ ಪ್ರಮುಖ ತಂತ್ರಗಾರಿಕೆ. ಈ ಪೇಜ್ ಪ್ರಮುಖರೇ, ತಮ್ಮ ಪಕ್ಷಕ್ಕೆ ಮತ ನೀಡಬೇಕೆಂದು ಮತದಾರರನ್ನು ಓಲೈಸುತ್ತಾರೆ.
ಕರ್ನಾಟಕಕ್ಕೆ ಅಮಿತ್ ಶಾ ರಣತಂತ್ರ 'ಉತ್ತರ'ವೇ?
ವ್ಯಕ್ತಿಯ ಜಾತಿ, ಪ್ರಭಾವ ನೋಡಿ ಅಂತಿಮಗೊಳಿಸುವ ತಂತ್ರ
ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಅವರು ಸಮಿತಿ ರಚಿಸಿದ್ದರು. ಪ್ರತಿ ಕ್ಷೇತ್ರಕ್ಕೆ ಮೂವರು ಅತ್ಯುತ್ತಮ ಅಭ್ಯರ್ಥಿಗಳನ್ನು ಶಾರ್ಟ್ ಲಿಸ್ಟ್ ಮಾಡುವುದು, ನಂತರ ವ್ಯಕ್ತಿಯ ಜಾತಿ, ಕ್ಷೇತ್ರದಲ್ಲಿರುವ ಅವರ ಪ್ರಭಾವವನ್ನು ನೋಡಿಕೊಂಡು ಅತ್ಯಂತ ಪ್ರಬಲ ಮತ್ತು ಕ್ಷೇತ್ರಕ್ಕೆ ಸೂಟ್ ಆಗುವ ವ್ಯಕ್ತಿಯನ್ನು ಅಂತಿಮಗೊಳಿಸಿದ್ದು ಸ್ವಲ್ಪ ಮಟ್ಟಿಗೆ ಯಶಸ್ಸು ತಂದುಕೊಟ್ಟಿದೆ. ಭೂಪೇಂದ್ರ ಯಾದವ್ ಮತ್ತು ಮುಖ್ಯಮಂತ್ರಿ ವಿಜಯ್ ರೂಪಾನಿ ಅವರನ್ನು ಸಂದರ್ಶಿಸಿಯೇ ಅವರು ವ್ಯಕ್ತಿಯನ್ನು ಅಂತಿಮಗೊಳಿಸುತ್ತಿದ್ದರು.
ಸೌರಾಷ್ಟ್ರದ ಪ್ರತಿಷ್ಠಿತ ಕ್ಷೇತ್ರ ಗೆದ್ದ ಸಿಎಂ ವಿಜಯ್ ರೂಪಾನಿ
ಮತದಾನದ ದಿನ ಮತದಾರರನ್ನು ಕ್ರೋಢೀಕರಿಸುವುದು
ಪ್ರತಿ ಜಿಲ್ಲೆಯ ಕಾರ್ಯಕರ್ತರನ್ನು ಖುದ್ದಾಗಿ ಭೇಟಿ ಮಾಡುತ್ತಿದ್ದ ಅಮಿತ್ ಶಾ, ಕಾರ್ಯಕರ್ತರ ಅವಗಾಹನೆಯನ್ನು, ಯೋಜನೆಯನ್ನು ಕೇಳಿ, ಕೂಲಂಕಷವಾಗಿ ಚರ್ಚಿಸುತ್ತಿದ್ದರು. ಮತದಾನದ ದಿನ ಮತದಾರರನ್ನು ಕ್ರೋಢೀಕರಿಸುವುದು ಮತ್ತು ಮತನೀಡುವಂತೆ ಪ್ರೋತ್ಸಾಹಿಸುವುದು ಕಾರ್ಯಕರ್ತರ ಆದ್ಯತೆಯಾಗಿತ್ತು. ಮೊದಲು ನೀವು ಮತ್ತು ನಿಮ್ಮ ಕುಟುಂಬದವರು ಬೆಳಗಿನ ಜಾವವೇ ಮತದಾನ ಮಾಡಿ, ನಂತರ ಇತರರನ್ನು ಪ್ರೋತ್ಸಾಹಿಸಿ ಎನ್ನುತ್ತಿದ್ದರು ಶಾ.
ಅಮಿತ್ ಶಾ ಶಕ್ತಿ ಕೇಂದ್ರಗಳಿಗೆ ಭೇಟಿ
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಪ್ರತಿ ಕ್ಷೇತ್ರಕ್ಕೆ ಭೇಟಿ ನೀಡುವುದಲ್ಲದೆ, ಎರಡು ಡಜನ್ ಗೂ ಹೆಚ್ಚು ದೇವಸ್ಥಾನಕ್ಕೆ ಭೇಟಿ ನೀಡಿ, ಮತದಾರರನ್ನು ಓಲೈಸಲು ಯತ್ನಿಸಿದರೆ, ಅಮಿತ್ ಶಾ ಅವರು ಪ್ರತಿ ಕ್ಷೇತ್ರಕ್ಕೆ ಭೇಟಿ ನೀಡಿದ್ದು ಕಡಿಮೆ. ಬದಲಾಗಿ ಜಿಲ್ಲಾಮಟ್ಟದಲ್ಲಿ ಶಕ್ತಿ ಕೇಂದ್ರಗಳಿಗೆ ಭೇಟಿ ನೀಡಿ, ಕಾರ್ಯಕರ್ತರನ್ನು, ಶಕ್ತಿ ಕೇಂದ್ರಗಳ ನಾಯಕರುಗಳನ್ನು ಭೇಟಿಯಾಗಿ ಅವರಲ್ಲಿ ಪ್ರೋತ್ಸಾಹ ತುಂಬುವುದನ್ನು ಮಾಡಿದ್ದಾರೆ.
"ಹಾಸ್ಯ: ರಾಹುಲ್ ಗಾಂಧಿ ಸನ್ಯಾಸಿಯಾದರೆ ಏನಾದೀತು?!"
ಜಿಎಸ್ಟಿ ಬಗ್ಗೆ ಭುಗಿಲೆದ್ದಿದ್ದ ಅಸಮಾಧಾನ
ಜಿಎಸ್ ಟಿ ಅನುಷ್ಠಾನಗೊಂಡ ಮೇಲೆ ಗುಜರಾತಿನಲ್ಲಿ ಅಸಮಾಧಾನ ಭುಗಿಲೆದ್ದಿತ್ತು. ಇದರ ಬಗ್ಗೆ ಜನರ ಅಭಿಪ್ರಾಯವೇನೆಂದು ಸಂಗ್ರಹಿಸಿದ ಅಮಿತ್ ಶಾ, ಜಿಎಸ್ಟಿ ದರಗಳನ್ನು ಕಡಿಮೆ ಮಾಡಲು, ನರೇಂದ್ರ ಮೋದಿ ಮೂಲಕ ಕ್ರಮ ಕೈಗೊಂಡರು ಮತ್ತು ಕಾರ್ಯಕರ್ತರ ಮೂಲಕವೇ ಮತದಾರರಿಗೆ ಜಿಎಸ್ಟಿ ಮತ್ತು ಅದರಿಂದ ಸಿಗುವ ಲಾಭಗಳ ಬಗ್ಗೆ ಮನವರಿಕೆ ಮಾಡಿಕೊಟ್ಟು, ಅವರಲ್ಲಿದ್ದ ಆತಂಕವನ್ನು ಶಮನ ಮಾಡಿದರು.
ಮುಳ್ಳನ್ನು ಮುಳ್ಳಿನಿಂದಲೇ ತೆಗೆಯುವುದು
ಮುಳ್ಳನ್ನು ಮುಳ್ಳಿನಿಂದಲೇ ತೆಗೆಯುವುದು ಹೇಗಂತೆ ಶಾ ಚೆನ್ನಾಗಿ ಅರಿತಿದ್ದಾರೆ. ಪಾಟಿದಾರ್ ಸಮುದಾಯದ ನಾಯಕ ಹಾರ್ದಿಕ್ ಪಟೇಲ್ ಪ್ರಾಬಲ್ಯ ಹೆಚ್ಚಾಗುತ್ತಿದ್ದ ಸಮಯದಲ್ಲಿ, ಅಮಿತ್ ಶಾ ಅವರು ಅನಿವಾಸಿ ಪಾಟಿದಾರ್ ಸಮುದಾಯವನ್ನು ತಮ್ಮ ತೆಕ್ಕೆದೆ ತೆಗೆದುಕೊಂಡು ಪಾಟಿದಾರ್ ಸಮುದಾಯಕ್ಕೆ ಭಾರೀ ಹೊಡೆತ ನೀಡಿದರು. ಇದೇ ಸಮಯದಲ್ಲಿ ಹಾರ್ದಿಕ್ ಪಟೇಲ್ ಅವರು ಕಾಂಗ್ರೆಸ್ ಜೊತೆ ಕೈಜೋಡಿಸಿದ್ದರಿಂದ ಅಮಿತ್ ಶಾ ಅವರ ರೊಟ್ಟಿ ಕೈಜಾರಿ ತುಪ್ಪಕ್ಕೆ ಬಿದ್ದಂತಾಗಿತ್ತು.