Gujarat Election Results 2022: ದೇಶದ ಆದರ್ಶ, ಜನರ ಹಕ್ಕುಗಳಿಗಾಗಿ ಹೋರಾಟ ಮುಂದುವರಿಯಲಿದೆ- ರಾಹುಲ್
ಅಹಮದಾಬಾದ್, ಡಿಸೆಂಬರ್ 8: ಗುಜರಾತ್ನಲ್ಲಿ ಪಕ್ಷವು ಅತಿದೊಡ್ಡ ಸೋಲು ಅನುಭವಿಸಿದ ನಂತರ ಕಾಂಗ್ರೆಸ್ ರಾಹುಲ್ ಗಾಂಧಿ ಪ್ರತಿಕ್ರಿಯಿಸಿದ್ದಾರೆ.
ಈ ವಿಚಾರವಾಗಿ ಟ್ವೀಟ್ ಮಾಡಿರುವ ಅವರು, 'ನಾವು ಗುಜರಾತಿನ ಜನರ ಆದೇಶವನ್ನು ನಮ್ರತೆಯಿಂದ ಸ್ವೀಕರಿಸುತ್ತೇವೆ' ಎಂದು ತಿಳಿಸಿದ್ದಾರೆ.
ಗುಜರಾತ್, ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ 2022 - ಲೈವ್ ಫಲಿತಾಂಶಗಳು
'ನಾವು ಮರುಸಂಘಟನೆ ಮಾಡುತ್ತೇವೆ ಮತ್ತು ಶ್ರಮಿಸುತ್ತೇವೆ. ದೇಶದ ಆದರ್ಶ ಹಾಗೂ ರಾಜ್ಯದ ಜನರ ಹಕ್ಕುಗಳಿಗಾಗಿ ಹೋರಾಟವನ್ನು ಮುಂದುವರಿಸುತ್ತೇವೆ' ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
हम गुजरात के लोगों का जनादेश विनम्रतापूर्वक स्वीकार करते हैं।
— Rahul Gandhi (@RahulGandhi) December 8, 2022
हम पुनर्गठन कर, कड़ी मेहनत करेंगे और देश के आदर्शों और प्रदेशवासियों के हक़ की लड़ाई जारी रखेंगे।
ಗುಜರಾತ್ ವಿಧಾನಸಭೆ ಫಲಿತಾಂಶ ಇಂದು ಹೊರಬಂದಿದೆ. ಬಿಜೆಪಿ ಸ್ಪಷ್ಟ ಬಹುಮತವನ್ನು ದಾಖಲಿಸಿದೆ. ಕಳೆದ ಬಾರಿ ಗುಜರಾತ್ನಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಕಾಂಗ್ರೆಸ್ ಈ ಭಾರಿ ಆಘಾತಕಾರಿ ಮಟ್ಟಕ್ಕೆ ಕುಸಿದಿದೆ. ಕೇವಲ 16 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ.
ಪ್ರಸ್ತುತ ಭಾರತ್ ಜೋಡೊ ಯಾತ್ರೆಯನ್ನು ಮುನ್ನಡೆಸುತ್ತಿರುವ ರಾಹುಲ್ ಗಾಂಧಿ ರಾಜಸ್ಥಾನದಲ್ಲಿದ್ದಾರೆ. ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ ಎಎಪಿ ಅಬ್ಬರ ಪ್ರಚಾರ ಕೈಗೊಂಡಿತ್ತು. ಆದರೆ, ಕಾಂಗ್ರೆಸ್ ಮಾತ್ರ ಮೌನ ಪ್ರಚಾರಕ್ಕೆ ಶರಣಾಗಿತ್ತು. ಪಕ್ಷದ ನಾಯಕ ರಾಹುಲ್ ಗಾಂಧಿ ಕೇವಲ ಒಂದು ಬಾರಿ ಗುಜರಾತ್ಗೆ ತೆರಳಿ ಪ್ರಚಾರ ಮಾಡಿದ್ದರು.
ರಾಹುಲ್ ಗಾಂಧಿ ಅವರು ಚುನಾವಣೆಯಲ್ಲಿ ಸಕ್ರಿಯರಾಗದೇ ಇರುವುದಕ್ಕೆ ವಿರೋಧ ಪಕ್ಷಗಳ ನಾಯಕರು ವಾಗ್ದಾಳಿ ನಡೆಸಿದ್ದರು. ಅತ್ತ ಹಿಮಾಚಲ ಪ್ರದೇಶ ಚುನಾವಣೆ ಪ್ರಚಾರದಲ್ಲಿಯೂ ರಾಹುಲ್ ಗಾಂಧಿ ಪಾಲ್ಗೊಂಡಿರಲಿಲ್ಲ. ಅಲ್ಲಿ ಪ್ರಿಯಾಂಕಾ ಗಾಂಧಿ ಪ್ರಚಾರ ನಡೆಸಿದ್ದರು. ಹಿಮಾಚಲ ಪ್ರದೇಶ ಚುನಾವಣೆಯಲ್ಲಿ ಕಾಂಗ್ರೆಸ್ ಜಯ ಗಳಿಸಿದೆ.
ರಾಹುಲ್ ಗಾಂಧಿ ನಡೆಸುತ್ತಿರುವ ಭಾರತ್ ಜೋಡೊ ಯಾತ್ರೆಯೂ ಈಗಾಗಲೇ ದೇಶದ ಆರು ರಾಜ್ಯಗಳಲ್ಲಿ ಕ್ರಮಿಸಿದೆ. ತಮಿಳು ನಾಡು, ಕೇರಳ, ಕರ್ನಾಟಕ, ತೆಲಂಗಾಣ, ಆಂದ್ರ ಪ್ರದೇಶ ಹಾಗೂ ಮಧ್ಯಪ್ರದೇಶದಲ್ಲಿ ಯಾತ್ರೆ ಸಾಗಿದೆ. ಈಗ ರಾಜಸ್ಥಾನದಲ್ಲಿ ಯಾತ್ರೆ ನಡೆಯುತ್ತಿದೆ. ತಮಿಳು ನಾಡಿನ ಕನ್ಯಾಕುಮಾರಿಯಿಂದ ಶುರುವಾದ ಯಾತ್ರೆಯು ಕಾಶ್ಮೀರದ ಶ್ರೀನಗರದಲ್ಲಿ ಕೊನೆಗೊಳ್ಳಲಿದೆ. ಸುಮಾರು 3,500 ಕಿಮೀ ದೂರದಷ್ಟು ಯಾತ್ರೆ ಕ್ರಮಿಸಲಿದೆ. ಈ ಯಾತ್ರೆಯಲ್ಲಿ ಕಲಾವಿದರು, ಸಾಮಾಜಿಕ ಹೋರಾಟಗಾರರು, ಕಾರ್ಮಿಕರು, ರಾಜಕೀಯ ನಾಯಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ.