ಗುಜರಾತ್ ಚುನಾವಣೆ: 'ಕಾಂಗ್ರೆಸ್ ಗುಜರಾತಿಗಳನ್ನು ಅವಮಾನಿಸಿದೆ' ಎಂದ ಹಾರ್ದಿಕ್ ಪಟೇಲ್
ಬಿಜೆಪಿ ನೀಡಿದ ಜವಾಬ್ದಾರಿಯನ್ನು ನಿಭಾಯಿಸಿ ಕೆಲಸ ಮಾಡುತ್ತೇನೆ. ಎಲ್ಲರನ್ನೂ ಒಗ್ಗೂಡಿಸಿ ವಿರಮಗಾಂ ಕ್ಷೇತ್ರವನ್ನು ಗೆಲ್ಲುವುದೇ ನನ್ನ ಪ್ರಯತ್ನ. ವಿರಾಮಗಾಂ ಜನರು ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದು ವಿರಮಗಾಂ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾರ್ದಿಕ್ ಪಟೇಲ್ ಹೇಳಿದ್ದಾರೆ.
ಮಾತ್ರವಲ್ಲದೆ ಗುಜರಾತ್ನ ಜನರು ಕಾಂಗ್ರೆಸ್ ಮಾತು ಕೇಳಲು ಬಯಸುವುದಿಲ್ಲ. ನಾನು ಒಮ್ಮೆ ಕಾಂಗ್ರೆಸ್ನಲ್ಲಿದ್ದೆ, ಅದು ನನಗೆ ಗೊತ್ತಿದೆ. ಗುಜರಾತಿಗಳನ್ನು ಅವಮಾನಿಸಿದ ಮತ್ತು ರಾಜ್ಯದ ಹೆಮ್ಮೆಯನ್ನು ಪ್ರಶ್ನಿಸಿದ ಕಾಂಗ್ರೆಸ್ ಅನ್ನು ಗುಜರಾತ್ ಜನರು ಎಂದಿಗೂ ಒಪ್ಪಿಕೊಳ್ಳುವುದಿಲ್ಲ ಎಂದು ಹಾರ್ದಿಕ್ ಪಟೇಲ್ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.
ಗುಜರಾತ್ನಲ್ಲಿ ಮತ್ತೆ ಕಮಲ ಅರಳಿಸಲು ವಲಸೆ ಬಿಜೆಪಿಗರು ತೊಡೆ ತಟ್ಟಿ ನಿಂತಿದ್ದಾರೆ. ಅಂತಹವರಲ್ಲಿ ಬಿಜೆಪಿ ಅಭ್ಯರ್ಥಿ ಹಾರ್ದಿಕ್ ಪಟೇಲ್ ಕೂಡ ಒಬ್ಬರು. 2019ರಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿ ಗುಜರಾತ್ ಘಟಕದ ಕಾರ್ಯಾಧ್ಯಕ್ಷ ಹುದ್ದೆಗೆ ಏರುವ ಅವಕಾಶ ಪಡೆದ ಹಾರ್ದಿಕ್ ಪಟೇಲ್, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಕೇಂದ್ರ ಹಾಗೂ ರಾಜ್ಯದ ನಾಯಕರ ವಿರುದ್ಧ ಮೂರು ವರ್ಷಗಳಿಂದ ವಾಗ್ದಾಳಿ ಮಾಡುತ್ತಾ ಬಂದಿದ್ದರು. ಆದರೀಗ ಕಮಲದ ಕೈ ಹಿಡಿದ ಹಾರ್ದಿಕ್ ಕಾಂಗ್ರೆಸ್ ಸ್ಥಿತಿಗತಿ ಬಗ್ಗೆ ಹೇಳುವ ಮೂಲಕ ಮತದಾರರನ್ನು ಸೆಳೆಯುತ್ತ ಗಮನ ಹರಿಸಿದ್ದಾರೆ.
ಬಹುತೇಕ ಎಲ್ಲ ಸುದ್ದಿಗೋಷ್ಠಿ, ಸಮಾರಂಭಗಳ ಭಾಷಣಗಳಲ್ಲಿ ಹಾರ್ದಿಕ್ ಬಿಜೆಪಿ ನಾಯಕರನ್ನು ಕಟುವಾಗಿ ಟೀಕಿಸುತ್ತಿದ್ದರು. ಕಾಂಗ್ರೆಸ್ನಲ್ಲಿ ಉನ್ನತ ಹುದ್ದೆ ನೀಡಿದ್ದರೂ, ತಮ್ಮನ್ನು ಪಕ್ಷದ ಚಟುವಟಿಕೆಗಳಲ್ಲಿ ಕಡೆಗಣಿಸಲಾಗುತ್ತಿದೆ ಮತ್ತು ತಮ್ಮನ್ನು ಯಾವ ನಾಯಕರೂ ಲೆಕ್ಕಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿ ಅವರು ಕಾಂಗ್ರೆಸ್ ತೊರೆದಿದ್ದಾರೆ. ಪಕ್ಷ ತ್ಯಜಿಸುವ ದಿನ ಬಿಜೆಪಿಯನ್ನು ಹೊಗಳಲು ಶುರುಮಾಡಿದರು. 'ಕೈ' ಬಿಟ್ಟು ಕಮಲ ಹಿಡಿಯುವ ದಿನ ಅವರು' ಪ್ರಧಾನಿ ಮೋದಿ ನಾಯಕ್ವದಲ್ಲಿ ಸಣ್ಣ ಸಿಪಾಯಿಯಂತೆ ದೇಶ ಸೇವೆ ಕೆಲಸ ಮಾಡುತ್ತೇನೆ' ಎಂದು ಹೇಳಿದ್ದರು.

ಕಾಂಗ್ರೆಸ್ನಿಂದ ಬಿಜೆಪಿಗೆ ಜಿಗಿದ ಹಾರ್ದಿಕ್
ಗುಜರಾತ್ನ ಪಾಟಿದಾರ್ ಸಮುದಾಯದ ನಾಯಕ ಹಾರ್ದಿಕ್ ಪಟೇಲ್. 28 ವರ್ಷದ ಹಾರ್ದಿಕ್ ಜೂನ್ ತಿಂಗಳಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿಕೊಂಡರು. ಆದರೆ ಅವರು ಬಿಜೆಪಿ ಸೇರಿರುವುದು ಮೂಲ ಬಿಜೆಪಿಗರಿಗೆ ಬೇಸರ ತಂದಿದೆ. ಹೀಗಾಗಿ ಹಾರ್ದಿಕ್ ಪಕ್ಷ ಸೇರುವ ಕಾರ್ಯಕ್ರಮದಲ್ಲಿ ಬಿಜೆಪಿಯ ಯಾವ ನಾಯಕರೂ ಕಾರ್ಯಕ್ರಮದಲ್ಲಿ ಭಾಗಿಯಾಗಿರಲಿಲ್ಲ.
ಬಿಜೆಪಿ ಸೇರುವ ಮುನ್ನ ಕಾಂಗ್ರೆಸ್ ಪಕ್ಷದಲ್ಲಿರುವಾಗ ಹಾರ್ದಿಕ ಪಟೇಲ್ ಬಿಜೆಪಿ ವಿರುದ್ಧ ಮಾಡಿದ ಆರೋಪಗಳು ಮತ್ತು ಬಿಜೆಪಿ ವಿರುದ್ಧ ಮಾಡಿದ ಹೋರಾಟಗಳು ಮೂಲ ಬಿಜೆಪಿ ನಾಯಕರಿಗೆ ಬೇಸರ ತಂದಿದ್ದವು. ಹೀಗಾಗಿ ಹಾರ್ದಿಕ್ ಪಡೇಟ್ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ವಿಚಾರದಲ್ಲಿ ಮೂಲ ಬಿಜೆಪಿಗರು ಬೇಸರ ವ್ಯಕ್ತಪಡಿಸಿದ್ದರು. ಈ ಅಸಮಾಧಾನಗಳ ನಡುವೆಯೇ ಹಾರ್ದಿಕ್ ಪಟೇಲ್ ಅವರನ್ನು ಬಿಜೆಪಿ ಹೈಕಮಾಂಡ್ ಪಕ್ಷಕ್ಕೆ ಸೇರಿಸಿಕೊಂಡಿದೆ.

ಬಿಜೆಪಿ ವಿರುದ್ಧ ಆರೋಪಗಳ ಸುರಿ ಮಳೆ
2017-18ರಲ್ಲಿ ಪಾಟಿದಾರ್ ಸಮುದಾಯಕ್ಕೆ ಮೀಸಲಾತಿ ನೀಡಬೇಕೆಂದು ಒತ್ತಾಯಿಸಿ ಹಾರ್ದಿಕ್ ಪಟೇಲ್ ಬೃಹತ್ ಪ್ರತಿಭಟನೆ ಮಾಡಿದ್ದರು. ಈ ಪ್ರತಿಭಟನೆಯಲ್ಲಿ ಹಾರ್ದಿಕ ನಾಯಕರಾಗಿ ಗುರುತಿಸಿಕೊಂಡಿದ್ದರು. ಇದಾದ ಬಳಿಕ ಹಾರ್ದಿಕ್ ಬಿಜೆಪಿ ವಿರುದ್ಧ ಗಂಭೀರ ಆರೋಪಗಳನ್ನು ಮಾಡಲು ಪ್ರಾರಂಭಿಸಿದರು. ಲೋಕಸಭೆ ಚುನಾವಣೆಗೂ ಮುನ್ನ 2019ರಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡ ಹಾರ್ದಿಕ್ ಪಟೇಲ್ ಬಿಜೆಪಿ ವಿರುದ್ಧ ತಮ್ಮ ಆರೋಪ ಹಾಗೂ ವಾಗ್ದಾಳಿಗಳನ್ನು ಚುರುಕುಗೊಳಿಸಿದ್ದರು.

ಗನ್ ಮತ್ತು ಪಿಸ್ತೂಲ್ ಇಟ್ಟುಕೊಳ್ಳುವ ವ್ಯಕ್ತಿ
ಹಾರ್ದಿಕ್ ಪಟೇಲ್ ವಿವಾದಿತ ವ್ಯಕ್ತಿ. ಪಟಿದಾರ್ ಪ್ರತಿಭಟನೆಯ ಬಳಿಕ ವಿವಾದಗಳ ಸುಳಿಯಲ್ಲಿ ಸಿಲುಕಿಕೊಂಡಿದ್ದರು. ಪ್ರತಿಭಟನೆಯಲ್ಲಿ ಸೊಂಟದಲ್ಲಿ ಗನ್ ಇಟ್ಟುಕೊಂಡಿದ್ದ ಹಾರ್ದಿಕ್ ತಮಗೆ ಗನ್ ಹುಚ್ಚು ಇದೆ ಎಂದು ಹೇಳಿಕೊಂಡಿದ್ದರು. ಮಾತ್ರವಲ್ಲದೆ ಗನ್ ಮತ್ತು ಪಿಸ್ತೂಲುಗಳನ್ನು ಹಿಡಿದುಕೊಂಡ ಅವರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದರು. ''ಸಂವಿಧಾನದಲ್ಲಿ ನನಗೆ ನಂಬಿಕೆ ಇಲ್ಲ. ಅಲ್ಲಿ ನ್ಯಾಯ ಸಿಗುವುದಿಲ್ಲ. ಹಿಂಸೆಗೆ ಹಿಂಸೆಯೇ ಉತ್ತರ'' ಎಂದಿದ್ದ ಹಾರ್ದಿಕ್ ಸದಾ ಕಾಲ ತಮ್ಮ ಬಲಿ ಗನ್ ಇಟ್ಟುಕೊಂಡೇ ಓಡಾಡುತ್ತಿದ್ದರು.

'ನನ್ನ ಅವಮಾನಿಸುವ ಬಿಜೆಪಿ ಕುತಂತ್ರ' ಹಾರ್ದಿಕ್ ಆರೋಪ
ಹಾರ್ದಿಕ್ ವಿವಾದಿತ ವ್ಯಕ್ತಿ ಮಾತ್ರವಾಗಿರದೆ ಹಲವಾರು ಆರೋಪಗಳು ಅವರ ಮೇಲೆ ಕೇಳಿ ಬಂದಿವೆ. ಈ ಹಿಂದೆ ಅಂದರೆ 2017ರಲ್ಲಿ ಯುವತಿ ಜೊತೆಗೆ ಸರಸ ಸಲ್ಲಾಪದಲ್ಲಿರುವ ವಿಡಿಯೋ ವೈರಲ್ ಆಗಿತ್ತು. ಈ ವೇಳೆ ಹಾರ್ದಿಕ್ ಪಾಟಿದಾರ್ ಅನಾಮತ್ ಆಂದೋಲನ ಸಮಿತಿ(ಪಿಎಎಎಸ್) ಮುಖ್ಯಸ್ಥರಾಗಿದ್ದರು. ಆದರೆ ಈ ಆರೋಪವನ್ನು ಹಾರ್ದಿಕ್ ತಳ್ಳಿಹಾಕಿದ್ದರು. ವಿಡಿಯೋದಲ್ಲಿರುವು ತಾವಲ್ಲ ಎಂದು ಹೇಳಿಕೊಂಡಿದ್ದರು. ಈ ವಿಡಿಯೋ ಮೂಲಕ ನನ್ನ ಮಾನಹಾನಿ ಮಾಡಲಾಗುತ್ತಿದೆ ಎಂದು ಹೇಳಿದ್ದರು. ತಮ್ಮ ವಿರುದ್ಧ ಬಿಜೆಪಿ ಷಡ್ಯಂತರ ಮಾಡುತ್ತಿದೆ ಎಂದು ಹಾರ್ದಿಕ್ ಪಟೇಲ್ ಆರೋಪ ಮಾಡಿದ್ದರು. ನನ್ನ ಹೆಸರು ಕೆಡಿಸಲು ಬಿಜೆಪಿ ಸೆಕ್ಸ್ ಸಿಡಿ ಬಿಡುಗಡೆ ಮಾಡಿದೆ ಎಂದು ಹಾರ್ದಿಕ ಬಿಜೆಪಿ ವಿರುದ್ಧ ವ್ಯಂಗ್ಯವಾಡಿದ್ದರು.
2017ರಲ್ಲಿ ಮಾತ್ರವಲ್ಲದೇ ಈ ಹಿಂದೆ ಕೂಡ ಹಾರ್ದಿಕ್ ಪಟೇಲ್ ಸೆಕ್ಸ್ ಸಿಡಿ ಎನ್ನಲಾಗಿದ್ದ ಸಿಡಿ ಬಿಡುಗಡೆಯಾಗಿತ್ತು. 2015ರಲ್ಲಿ ಪಾಟಿದಾರ್ ಸಮುದಾಯಗಳಿಗೆ ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿಗೆ ಒತ್ತಾಯಿಸಿ ಹಾರ್ದಿಕ್ ಪಟೇಲ್ ಪ್ರತಿಭಟನೆ ನಡೆಸಿದಾಗ ಅವರದ್ದು ಎನ್ನಲಾದ ಸೆಕ್ಸ್ ಸಿಡಿ ಬಿಡುಗಡೆ ಮಾಡಲಾಗಿತ್ತು. ಆಗಲೂ ಹಾರ್ದಿಕ್ ಈ ವಿಡಿಯೋದಲ್ಲಿರುವುದು ನಾನಲ್ಲ ಎಂದೇ ಹೇಳಿಕೊಂಡಿದ್ದರು. ಇದಕ್ಕೂ ಹಾರ್ದಿಕ್ ಬಿಜೆಪಿ ವಿರುದ್ಧ ಹರಿಹಾಯ್ದಿದ್ದರು.

ವಿರೋಧದ ನಡುವೆಯೂ ಬಿಜೆಪಿ ಸೇರಿದ ಹಾರ್ದಿಕ್
ಹಾರ್ದಿಕ್ ಪಟೇಲ್ ಬಿಜೆಪಿ ಸೇರ್ಪಡೆಗೆ ಪಕ್ಷದ ಮುಖಂಡ ವರುಣ್ ಪಟೇಲ್ ಹಾಗೂ ಬಿಜೆಪಿ ಕಾರ್ಯಕರ್ತರೇ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಮಾತ್ರವಲ್ಲದೆ ಪ್ರತಿಭಟನೆಗಳೂ ನಡೆದವು. ಹಾರ್ದಿಕ್ ಪಟೇಲ್ ಬಿಜೆಪಿ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಇದು ತೀರ ವೈಯಕ್ತ ವಿಚಾರವಾಗಿದೆ. ಹಾರ್ದಿಕ್ ಬಿಜೆಪಿ ಸೇರುವುದು ಕಾರ್ಯಕರ್ತರು ಇಷ್ಟಪಡುವುದಿಲ್ಲ ಎಮದು ವರುಣ್ ನೇರವಾಗಿ ಹೇಳಿದ್ದರು. ಮಾತ್ರವಲ್ಲದೆ ಕಾಂಗ್ರೆಸ್ನಲ್ಲಿ ಹಾರ್ದಿಕ್ ಪಟೇಲ್ನಿಂದ ಯಾವ ಲಾಭವೂ ಆಗಿಲ್ಲ. ಅವರು ಯಾವದೇ ಚುನಾವಣೆ ಗೆದ್ದಿಲ್ಲ. ಹೀಗಾಗಿ ಅವರು ಪಕ್ಷ ಸೇರುವುದು ಅರ್ಥವಿಲ್ಲ ಎಂಬ ವಿರೋಧಗಳು ಕೇಳಿ ಬಂದಿದ್ದವು. ಈ ಎಲ್ಲಾ ವಿರೋಧಗಳ ನಡುವೆಯೂ ಪಕ್ಷ ಹಾರ್ದಿಕ್ ಪಟೇಲ್ ಅವರನ್ನು ಬರಮಾಡಿಕೊಂಡಿದೆ. ಬಿಜೆಪಿ ಸೇರಿದ ಬಳಿಕ ಹಾರ್ದಿಕ್ ಬಿಜೆಪಿ ವಿರುದ್ಧ ಪೋಸ್ಟ್ ಹಾಗೂ ವಿಡಿಯೋಗಳನ್ನು ತಮ್ಮ ಖಾತೆಯಿಂದ ಡಿಲಿಟ್ ಮಾಡಿದ್ದಾರೆ.
ಒಟ್ಟಾರೆಯಾಗಿ ಆಗ ಬಿಜೆಪಿ ಈಗ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮಾಡುತ್ತಿರುವ ಹಾರ್ದಿಕ್ ಪಟೇಲ್ ಅವರನ್ನು ಜನ ಮೆಚ್ಚುತ್ತಾರಾ? ಮತ ನೀಡುತ್ತಾ? ಅವರನ್ನು ಗೆಲ್ಲಿಸುತ್ತಾರಾ ಎನ್ನುವುದನ್ನು ಕಾದುನೋಡಬೇಕಿದೆ.












Click it and Unblock the Notifications