ಗುಜರಾತ್ ಚುನಾವಣೆ: ಸೂರತ್ನಲ್ಲಿ ಬಿಜೆಪಿ ಬಗ್ಗೆ ಅಸಮಾಧಾನ, ಆಪ್ಗೆ ಬೆಂಬಲ
ಅಹಮದಾಬಾದ್, ನ.27: ಚುನಾವಣೆ ಹತ್ತಿರ ಬರುತ್ತಿದ್ದಂತೆ ಗುಜರಾತ್ ರಾಜ್ಯದಲ್ಲಿ ಕ್ಷೇತ್ರಗಳಲ್ಲಿನ ಮತದಾರರ ಒಲವು ಯಾರ ಕಡೆಗಿದೆ? ಎಂಬ ವಿಷಯವನ್ನು ತಿಳಿಯುವ ಪ್ರಯತ್ನಗಳು ನಡೆಯುತ್ತಿರುತ್ತವೆ. ಹಾಗೆಯೇ ಸೂರತ್ ಪ್ರದೇಶದ ಜನರು ಈ ಭಾರಿ ಬಿಜೆಪಿಗೆ ಹೊಡೆತ ನೀಡುವಂತೆ ಕಾಣಿಸುತ್ತಿದ್ದಾರೆ.
ಹೌದು, ಐತಿಹಾಸಿಕ ಮತ್ತು ಸಾಂಸ್ಕೃತಿಕ ಪರಂಪರೆಯ ಹೆಗ್ಗಳಿಕೆಯನ್ನು ಹೊಂದಿರುವ ಗುಜರಾತ್ನ ಸೂರತ್ ಇಂದು ದೇಶದ ಪ್ರಮುಖ ಕೈಗಾರಿಕಾ ಕೇಂದ್ರ ಮತ್ತು ವಾಣಿಜ್ಯ ಕೇಂದ್ರ ಎಂಬ ಖ್ಯಾತಿಯನ್ನು ಗಳಿಸಿದೆ. ರಾಜ್ಯದ 182 ವಿಧಾನಸಭಾ ಕ್ಷೇತ್ರಗಳಲ್ಲಿ, ಅಹಮದಾಬಾದ್ ನಂತರ ಎರಡನೇ ಅತಿ ಹೆಚ್ಚು ಅಂದರೆ 16 ಕ್ಷೇತ್ರಗಳು ಸೂರತ್ ಜಿಲ್ಲೆಯಲ್ಲಿವೆ.
ಗುಜರಾತ್ ಚುನಾವಣೆಗೆ ಬಿಜೆಪಿ ಪ್ರಣಾಳಿಕೆ ಬಿಡುಗಡೆ: 20 ಲಕ್ಷ ಉದ್ಯೋಗ ಭರವಸೆ
ಈ ಕಾರಣದಿಂದ ಗುಜರಾತ್ ಚುನಾವಣೆಯ ಭವಿಷ್ಯವನ್ನು ನಿರ್ಧರಿಸುವಲ್ಲಿ ಸೂರತ್ ಜಿಲ್ಲೆ ಪ್ರಮುಖ ಪಾತ್ರ ವಹಿಸುತ್ತದೆ. 2017ರ ಚುನಾವಣೆಯಲ್ಲಿ, ಬಿಜೆಪಿ ಸೂರತ್ ಜಿಲ್ಲೆಯಲ್ಲಿ 16 ವಿಧಾನಸಭಾ ಸ್ಥಾನಗಳಲ್ಲಿ 14 ಸ್ಥಾನಗಳನ್ನು ಗೆದ್ದು ಆಡಳಿತ ನಡೆಸಿತು. ಮಂಗ್ರೋಲ್ ಮತ್ತು ಮಾಂಡವಿ ಕ್ಷೇತ್ರಗಳಲ್ಲಿ ಮಾತ್ರ ಕಾಂಗ್ರೆಸ್ಗೆ ಜಯ ಸಿಕ್ಕಿತ್ತು.
ಆದರೆ, ಈ ಬಾರಿ ಫಲಿತಾಂಶ ಕೊಂಚ ಬೇರೆಯಾಗಲಿದೆ ಎಂಬ ಅಂಶಗಳು ಕೇಳಿಬರುತ್ತಿವೆ. ಅದಕ್ಕೆ ಕಾರಣ ಆಮ್ ಆದ್ಮಿ ಪಾರ್ಟಿ.
ವಜ್ರ ಉತ್ಪಾದನಾ ಘಟಕಗಳ ಕೆಲಸಗಾರರು ಫಲಿತಾಂಶ ಬದಲಿಸಲಿದ್ದಾರೆ
5,000 ಕ್ಕೂ ಹೆಚ್ಚು ವಜ್ರ ಉತ್ಪಾದನಾ ಘಟಕಗಳಿಗೆ ನೆಲೆಯಾಗಿರುವ ಸೂರತ್ ಅನ್ನು ಭಾರತದ 'ಡೈಮಂಡ್ ಸಿಟಿ' ಎಂದು ಕರೆಯಲಾಗುತ್ತದೆ. ರಾಜಕೀಯ ತಜ್ಞರ ಪ್ರಕಾರ, ನಗರದ ವಜ್ರದ ಕೆಲಸಗಾರರು ಗುಜರಾತ್ನ ಕನಿಷ್ಠ ಅರ್ಧ ಡಜನ್ ಸ್ಥಾನಗಳಲ್ಲಿ ಪ್ರಮುಖವಾಗಿ ಚದುರಿದ್ದಾರೆ. ಇವರು ಚುನಾವಣಾ ಫಲಿತಾಂಶದಲ್ಲಿ ವ್ಯತ್ಯಾಸವನ್ನುಂಟು ಮಾಡಬಹುದು.
ಅಂದಾಜಿನ ಪ್ರಕಾರ ಗುಜರಾತ್ನಲ್ಲಿ ಸುಮಾರು 15 ಲಕ್ಷ ವಜ್ರದ ಕೆಲಸಗಾರರಿದ್ದಾರೆ. ಅವರಲ್ಲಿ ಏಳು ಲಕ್ಷ ಮಂದಿ ಸೂರತ್ನ ಘಟಕಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ತಜ್ಞರ ಪ್ರಕಾರ, 2021 ರಲ್ಲಿ ಸೂರತ್ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವು 120 ರಲ್ಲಿ 27 ಸ್ಥಾನಗಳನ್ನು ಗೆಲ್ಲಲು ಈ ಮತದಾರರು ಪ್ರಮುಖ ಪಾತ್ರ ವಹಿಸಿದ್ದಾರೆ.
ವಿಧಾನಸಭಾ ಚುನಾವಣೆಯಲ್ಲೂ ಆಪ್ಗೆ ಬೆಂಬಲ?
ಸೂರತ್ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವು 27 ಸ್ಥಾನಗಳನ್ನು ಗೆಲ್ಲಲು ಈ ವಜ್ರದ ಕೆಲಸಗಾರರು ಪ್ರಮುಖ ಪಾತ್ರ ವಹಿಸಿದ್ದಾರೆ. ಹೀಗಾಗಿ ಗುಜರಾತ್ನ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿಯೂ ಬಿಜೆಪಿಯ ಗೆಲುವಿನ ಮೇಲೆ ಭಾರೀ ಪರಿಣಾಮ ಬೀರಬಹುದು.
ಈ ಮತದಾರರಲ್ಲಿ ಹೆಚ್ಚಿನವರು ರಾಜ್ಯದ ಸೌರಾಷ್ಟ್ರ ಪ್ರದೇಶದಿಂದ ಬಂದವರು. ಜೊತೆಗೆ ರಾಜ್ಯ ರಾಜಕೀಯದ ಮೇಲೆ ಹೆಚ್ಚಿನ ಪ್ರಭಾವ ಹೊಂದಿರುವ ಪಾಟಿದಾರ್ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ಎಲ್ಲರೊಂದಿಗೆ ಸಂಪರ್ಕವನ್ನು ಹಂಚಿಕೊಳ್ಳುತ್ತಾರೆ.
ಸೂರತ್ನ ಸುಮಾರು ಐದು ಕ್ಷೇತ್ರಗಳಾದ ವರಾಚಾ ರಸ್ತೆ, ಕಟರ್ಗಾಂ, ಕರಂಜ್, ಕಾಮ್ರೇಜ್ ಮತ್ತು ಸೂರತ್ ಉತ್ತರ ಕ್ಷೇತ್ರಗಳ ಫಲಿತಾಂಶವು ಸೌರಾಷ್ಟ್ರದಿಂದ ಬಂದು ಅಲ್ಲಿ ನೆಲೆಸಿರುವ ಜನರ ಮೇಲೆ ಪ್ರಭಾವ ಬೀರುತ್ತದೆ.
ಆಪ್ಗೆ ಬೆಂಬಲವಾಗಿ ನಿಂತಿದೆ ಪಾಟಿದಾರ್ ಸಮುದಾಯ!
ಮುಖ್ಯವಾಗಿ ಪಾಟಿದಾರ್ ಸಮುದಾಯ ಮತ್ತು ವಜ್ರ ಕಾರ್ಮಿಕರ ದೊಡ್ಡ ಬೆಂಬಲದಿಂದಾಗಿ 2021 ರ ಮುನ್ಸಿಪಲ್ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಈ ವಿಧಾನಸಭಾ ಕ್ಷೇತ್ರಗಳ ಅಡಿಯಲ್ಲಿ ಬರುವ ಪ್ರದೇಶಗಳಲ್ಲಿ ಗೆಲುವು ದಾಖಲಿಸಿದೆ.
2017 ರ ವಿಧಾನಸಭಾ ಚುನಾವಣೆಯಲ್ಲಿ ಈ ಎಲ್ಲಾ ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿಯು ಕಾಮ್ರೇಜ್ ಹೊರತುಪಡಿಸಿ ಐದು ಸ್ಥಾನಗಳ ಪೈಕಿ ನಾಲ್ಕು ಸ್ಥಾನಗಳಲ್ಲಿ ಹಾಲಿ ಶಾಸಕರಿಗೆ ಟಿಕೆಟ್ ನೀಡಿ ಸೇಫ್ ಆಟವಾಡುತ್ತಿದೆ. ಇದು ಕೂಡ ಆಪ್ಗೆ ದೊರೆತ ಬೆಂಬಲಕ್ಕೆ ಉದಾಹರಣೆಯಾಗಿದೆ.
ಇನ್ನೂ, ಸೂರತ್ನಲ್ಲಿ ಹೆಚ್ಚು ಪ್ರಚಾರ ಪಡೆದ ಕ್ಷೇತ್ರ ಸೂರತ್ ಪೂರ್ವ ಕ್ಷೇತ್ರದ ಎಎಪಿ ಅಭ್ಯರ್ಥಿ ಕಾಂಚನ್ ಜರಿವಾಲಾ ಅವರು ಕೆಲವು ದಿನಗಳ ಹಿಂದೆ ತಮ್ಮ ಉಮೇದುವಾರಿಕೆಯನ್ನು ಹಿಂತೆಗೆದುಕೊಂಡಿದ್ದಾರೆ. ಒಟ್ಟು 182 ಸ್ಥಾನಗಳ ಪೈಕಿ ಎಎಪಿ ಸ್ಪರ್ಧಿಸದ ಏಕೈಕ ಸ್ಥಾನ ಇದಾಗಿದೆ. ಮತ್ತೊಂದೆಡೆ ಕಾಂಗ್ರೆಸ್ ಈ ಕ್ಷೇತ್ರದಿಂದ ಮುಸ್ಲಿಂ ಅಭ್ಯರ್ಥಿ ಅಸ್ಲಾಂ ಫಿರೋಜ್ಭಾಯ್ ಸೈಕಲ್ವಾಲಾ ಅವರನ್ನು ಕಣಕ್ಕಿಳಿಸಿ ಕ್ಷೇತ್ರದ 22% ಮುಸ್ಲಿಂ ಮತಗಳನ್ನು ಹಿಡಿತ ಸಾಧಿಸಿದೆ. ಆದರೆ ಸೂರತ್ ಪೂರ್ವ ಕ್ಷೇತ್ರಕ್ಕೆ ಸ್ಪರ್ಧಿಸಿರುವ 14 ಅಭ್ಯರ್ಥಿಗಳಲ್ಲಿ 12 ಮಂದಿ ಮುಸ್ಲಿಮರಾಗಿರುವುದರಿಂದ ಇದು ಸುಲಭದ ಹೋರಾಟವಲ್ಲ. ಬಿಜೆಪಿ ತನ್ನ ಹಿಂದಿನ ಅಭ್ಯರ್ಥಿ ಅರವಿಂದ್ ರಾಣಾ ಅವರ ಮೇಲೆ ವಿಶ್ವಾಸ ವ್ಯಕ್ತಪಡಿಸಿ ಟಿಕೆಟ್ ನೀಡಿದೆ.
ಕೊರೊನಾ ಸಂಕಷ್ಟ, ಸರ್ಕಾರಿ ಕಾಲೇಜು, ಅನಗತ್ಯ ವಿವಾದಗಳಿಂದ ಬೇಸರ
ಸೂರತ್ನ ಕೆಲವು ಬಿಜೆಪಿ ಪ್ರಾಬಲ್ಯ ಕ್ಷೇತ್ರಗಳಲ್ಲಿ ಜನರು ಬಿಜೆಪಿ ವಿರುದ್ಧ ಭಾರೀ ಅಸಮಾಧಾನ ಹೊರಹಾಕುತ್ತಿದ್ದಾರೆ. ಅದಕ್ಕೆ ಮುಖ್ಯ ಕಾರಣಗಳಲ್ಲಿ ಕೊರೊನಾ ಕೂಡ ಸೇರಿದೆ.
ವರಾಚಾ ರಸ್ತೆ ಕ್ಷೇತ್ರದ ಶಾಸಕ ಕಿಶೋರ ಕನಾನಿ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಾರೆ. ರಾಜ್ಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ನಂತರವೂ ಅವರು ಸಾಂಕ್ರಾಮಿಕ ಅವಧಿಯಲ್ಲಿ ಜನರ ವೈದ್ಯಕೀಯ ಅಗತ್ಯಗಳನ್ನು ನೀಡುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ಹೆಚ್ಚಿನ ಸಂಖ್ಯೆಯಲ್ಲಿ ಯುವಜನತೆಯಿದ್ದರೂ ಇಲ್ಲಿ ಸರ್ಕಾರಿ ಕಾಲೇಜು ಇಲ್ಲ. ಈ ಹಿಂದೆ ಸರಕಾರಿ ಕಾಲೇಜು ಸ್ಥಾಪಿಸುವುದಾಗಿ ಭರವಸೆ ನೀಡಿದ್ದರೂ ಶಂಕುಸ್ಥಾಪನೆ ಮಾತ್ರ ನಡೆದಿದ್ದು, ನಂತರ ಏನೂ ಮಾಡಿಲ್ಲ. ಬಿಜೆಪಿ ಸರ್ಕಾರ ಅನಗತ್ಯ ವಿಷಯಗಳಿಗೆ ಖರ್ಚು ಮಾಡಿ ಮುಖ್ಯ ಸಮಸ್ಯೆಗಳನ್ನು ನಿರ್ಲಕ್ಷಿಸಿದ್ದಾರೆ ಎಂದು ಜನರು ಆಕ್ರೋಶ ಹೊರಹಾಕಿದ್ದಾರೆ.
ಇಂತಹ ಅಸಮಾಧಾನಗಳ ನಡುವೆ, ಸೂರತ್ನ 14 ವಿಧಾನಸಭಾ ಸ್ಥಾನಗಳಲ್ಲಿ ಬಿಜೆಪಿ ಇನ್ನೂ ತನ್ನ ಭದ್ರಕೋಟೆಯನ್ನು ಉಳಿಸಿಕೊಳ್ಳಲು ಸಮರ್ಥವಾಗಿದೆಯೇ ಅಥವಾ ಅದನ್ನು ಇತರ ಪಕ್ಷಗಳಿಗೆ ಬಿಟ್ಟುಕೊಡುತ್ತದೆಯೇ ಎಂಬುದು ಡಿಸೆಂಬರ್ 8 ರಂದು ತಿಳಿಯಲಿದೆ.