ಗುಜರಾತ್: ಮೊರ್ಬಿ ಸೇತುವೆ ಕುಸಿತದ ಹಿನ್ನೆಲೆ ಪ್ರಚಾರ ಯಾತ್ರೆ ಮುಂದೂಡಿದ ಕಾಂಗ್ರೆಸ್
ಅಹಮದಾಬಾದ್, ಅ. 31: ಭಾನುವಾರ ರಾತ್ರಿ ನಡೆದ ಮೊರ್ಬಿ ಸೇತುವೆ ದುರಂತದ ಹಿನ್ನೆಲೆಯಲ್ಲಿ ಕಾಂಗ್ರೆಸ್ ತನ್ನ 'ಗುಜರಾತ್ ಪರಿವರ್ತನ ಸಂಕಲ್ಪ ಯಾತ್ರೆ'ಯನ್ನು ಮಂಗಳವಾರಕ್ಕೆ ಮುಂದೂಡಿದೆ.
ಡಿಸೆಂಬರ್ನಲ್ಲಿ ಚುನಾವಣೆ ನಡೆಯುವ ಸಾಧ್ಯತೆಯಿರುವ ಗುಜರಾತ್ನ ಐದು ವಲಯಗಳಲ್ಲಿ ಕಾಂಗ್ರೆಸ್ 'ಗುಜರಾತ್ ಪರಿವರ್ತನ ಸಂಕಲ್ಪ ಯಾತ್ರೆ'ಯನ್ನು ನಡೆಸಲು ನಿರ್ಧರಿಸಿತ್ತು.
ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನ ಮತ್ತು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಪುಣ್ಯತಿಥಿಯ ಸ್ಮರಣಾರ್ಥವಾಗಿ ಅಕ್ಟೋಬರ್ 31 ರಂದು ವಡ್ಗಾಮ್, ಭುಜ್, ಸೋಮನಾಥ್, ಫಗ್ವೆಲ್ ಮತ್ತು ಜಂಬೂಸರ್ನಿಂದ ಯಾತ್ರೆಯನ್ನು ಪ್ರಾರಂಭಿಸಲು ಕಾಂಗ್ರೆಸ್ ಪಕ್ಷವು ಯೋಜಿಸಿತ್ತು.

"ಯಾತ್ರೆಯು 145 ಸಾರ್ವಜನಿಕ ಸಭೆಗಳು ಮತ್ತು 95 ಮೆರವಣಿಗೆಗಳನ್ನು ಒಳಗೊಂಡಿರುತ್ತದೆ. ಇದು 5,432 ಕಿಮೀಗಳನ್ನು ಕ್ರಮಿಸಲಿದ್ದು, 45 ಮಿಲಿಯನ್ ಜನರೊಂದಿಗೆ ನೇರ ಸಂಪರ್ಕ ಸ್ಥಾಪಿಸುವ ಗುರಿಯನ್ನು ಹೊಂದಿದೆ" ಎಂದು ಗುಜರಾತ್ ಕಾಂಗ್ರೆಸ್ ಅಧ್ಯಕ್ಷ ಜಗದೀಶ್ ಠಾಕೂರ್ ಹೇಳಿದ್ದಾರೆ.
ಯಾತ್ರೆಯಲ್ಲಿ 1 ದಶಲಕ್ಷಕ್ಕೂ ಹೆಚ್ಚು ಪಕ್ಷದ ಕಾರ್ಯಕರ್ತರು ಸೇರುವ ನಿರೀಕ್ಷೆಯಿದೆ. ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದರೆ 11 ಭರವಸೆಗಳನ್ನು ಈಡೇರಿಸುವುದಾಗಿ ಜನರಿಗೆ ತಿಳಿಸಲು ಯೋಜಿಸಲಾಗಿದೆ ಎಂದು ಗುಜರಾತ್ ಕಾಂಗ್ರೆಸ್ ಅಧ್ಯಕ್ಷ ತಿಳಿಸಿದ್ದಾರೆ.

ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಛತ್ತೀಸ್ಗಢದ ಮುಖ್ಯಮಂತ್ರಿ ಭೂಪೇಶ್ ಬಾಘೇಲ್, ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿಗಳಾದ ದಿಗ್ವಿಜಯ ಸಿಂಗ್, ಕಮಲ್ ನಾಥ್ ಮತ್ತು ಕಾಂಗ್ರೆಸ್ ಶಾಸಕ ಸಚಿನ್ ಪೈಲಟ್ ಸೇರಿದಂತೆ ಪಕ್ಷದ ಹಲವಾರು ಹಿರಿಯ ನಾಯಕರು ಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ.
ಭುಜ್-ರಾಜ್ಕೋಟ್ ಯಾತ್ರೆಯನ್ನು ದಿಗ್ವಿಜಯ ಸಿಂಗ್ ಅವರು ಪ್ರಾರಂಭಿಸಿದರೆ, ಸೋಮನಾಥ್ದಲ್ಲಿ ಕರ್ನಾಟಕದ ನಾಯಕ ಬಿಕೆ ಹರಿಪ್ರಸಾದ್ ಪ್ರಾರಂಭಿಸಲಿದ್ದಾರೆ. ಅಶೋಕ್ ಗೆಹ್ಲೋಟ್ ಅವರು ಬನಸ್ಕಾಂತ ಜಿಲ್ಲೆಯ ವಡ್ಗಾಮ್ನಿಂದ, ಸಚಿನ್ ಪೈಲಟ್ ಖೇಡಾ ಜಿಲ್ಲೆಯ ಫಗ್ವೆಲ್ನಿಂದ ಮತ್ತು ಪವನ್ ಖೇರಾ ದಕ್ಷಿಣ ಗುಜರಾತ್ನ ಭರೂಚ್ ಜಿಲ್ಲೆಯ ಜಂಬೂಸರ್ನಿಂದ ಯಾತ್ರೆಯನ್ನು ಪ್ರಾರಂಭಿಸಲಿದ್ದಾರೆ.
ಇನ್ನು, ಕಳೆದ ಮೂರು ದಶಕಗಳಲ್ಲಿ ಬಿಜೆಪಿಯ ದುರಾಡಳಿತ, ತಪ್ಪು ನೀತಿಗಳಿಂದ ರಾಜ್ಯದ ಜನರು ಆಕ್ರೋಶಗೊಂಡಿದ್ದಾರೆ ಎಂದು ಗುಜರಾತ್ ಕಾಂಗ್ರೆಸ್ ಹಿರಿಯ ನಾಯಕ ಸಿದ್ಧಾರ್ಥ್ ಪಟೇಲ್ ಹೇಳಿದ್ದಾರೆ.
ಕಾಂಗ್ರೆಸ್ ತನ್ನ ಭರವಸೆಗಳ ಭಾಗವಾಗಿ 10 ಲಕ್ಷದವರೆಗೆ ಉಚಿತ ಚಿಕಿತ್ಸೆ, 3 ಲಕ್ಷದವರೆಗಿನ ರೈತರ ಸಾಲ ಮನ್ನಾ, ವಿದ್ಯುತ್ ಬಿಲ್ ಮನ್ನಾ, ಯುವಕರಿಗೆ 10 ಲಕ್ಷ ಸರ್ಕಾರಿ ಉದ್ಯೋಗ, ತಿಂಗಳಿಗೆ 3,000 ರೂಪಾಯಿ ನಿರುದ್ಯೋಗ ಭತ್ಯೆ ನೀಡುವುದಾಗಿ ಪ್ರತಿಜ್ಞೆ ಮಾಡಿದೆ. 3,000 ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಗಳನ್ನು ತೆರೆಯುವುದು ಮತ್ತು ಕೊರೊನಾದಿಂದ ಸಾವನ್ನಪ್ಪಿದವರ ಕುಟುಂಬಗಳಿಗೆ 4 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ತಿಳಿಸಿದೆ.












Click it and Unblock the Notifications