Gujarat Election 2022: ಬಿಜೆಪಿ, ಎಎಪಿ ನಡುವೆ ಜಟಾಪಟಿ- ಅಪಹರಣ ಆರೋಪ
ನವದೆಹಲಿ, ನ.16: ವಿಧಾನಸಭಾ ಚುನಾವಣೆಗೆ ಇನ್ನೊಂದು ತಿಂಗಳು ಇರುವಾಗ ಗುಜರಾತ್ನಲ್ಲಿ ಭಾರಿ ಬೆಳವಣಿಗೆಗಳು ಕಂಡು ಬರುತ್ತಿವೆ. ಪ್ರತಿಸ್ಪರ್ಧಿಗಳು ಎಂದು ಬಿಂಬಿಸಿಕೊಳ್ಳುತ್ತಿರುವ ಬಿಜೆಪಿ ಮತ್ತು ಆಮ್ ಆದ್ಮಿ ಪಾರ್ಟಿ ನಡುವೆ ಆರೋಪ ಪ್ರತ್ಯಾರೋಪಗಳು ನಡೆಯುತ್ತಲೇ ಇವೆ.
ಆಮ್ ಆದ್ಮಿ ಪಕ್ಷವು ಬುಧವಾರ ಬಿಜೆಪಿ ವಿರುದ್ಧ ಗಂಭಿರ ಆರೋಪ ಮಾಡಿದ್ದು, ತಮ್ಮ ಅಭ್ಯರ್ಥಿಯನ್ನು ಅಪಹರಣ ಮಾಡಿದೆ ಎಂದು ಆರೋಪಿಸಿದೆ. ಇದರ ಬೆನ್ನಲ್ಲೆ ಅಪಹರಣಕ್ಕೆ ಒಳಗಾಗಿದ್ದಾರೆ ಎನ್ನಲಾಗಿದ್ದ ಅಭ್ಯರ್ಥಿ ಕಾಣಿಸಿಕೊಂಡಿದ್ದು, ನಾಮಪತ್ರ ಹಿಂತೆಗೆದುಕೊಂಡಿದ್ದಾರೆ.
ಸುಕೇಶ್ ಚಂದ್ರಶೇಖರ್ ಬಿಜೆಪಿ ಸೇರಬಹುದು: ಅರವಿಂದ್ ಕೇಜ್ರಿವಾಲ್
ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷದ ಸೂರತ್ (ಪೂರ್ವ)ದ ಅಭ್ಯರ್ಥಿ ಕಾಂಚನ್ ಜರಿವಾಲಾ ನಿನ್ನೆಯಿಂದ ಕಾಣೆಯಾಗಿದ್ದಾರೆ ಎಂದು ಬೆಳಗ್ಗೆ ಎಎಪಿ ಮೊದಲು ಟ್ವೀಟ್ಗಳಲ್ಲಿ ಆರೋಪಿಸಿತ್ತು. 'ಎಎಪಿ ಅಭ್ಯರ್ಥಿ ಕಾಂಚನ್ ಜರಿವಾಲಾ ಅವರನ್ನು ಬಿಜೆಪಿ ಅಪಹರಿಸಿದೆ' ಎಂದು ಮನೀಶ್ ಸಿಸೋಡಿಯಾ ಸುದ್ದಿಗಾರರಿಗೆ ತಿಳಿಸಿದ್ದರು.
ಇದಾದ ಕೆಲ ಹೊತ್ತಿನಲ್ಲೆ ಆಪ್ ಅಭ್ಯರ್ಥಿ ಕಾಂಚನ್ ಜರಿವಾಲಾ ಕಾಣಿಸಿಕೊಂಡಿದ್ದಾರೆ. ಅವರನ್ನು 500 ಪೋಲಿಸರು ಸುತ್ತುವರೆದು ಗುಜರಥಾ್ ಚುನಾವಣಾ ರಿಟರ್ನಿಂಗ್ ಕಚೇರಿಗೆ ಕರೆತರಲಾಗಿದೆ ಎಂದು ಹೇಳಿದ್ದರು.
ಇದು ಪ್ರಜಾಪ್ರಭುತ್ವಕ್ಕೆ ಬಹಿರಂಗ ಬೆದರಿಕೆ
"ಕಾಂಚನ್ ಜರಿವಾಲಾ ಮೇಲೆ ನಾಮಪತ್ರ ಹಿಂಪಡೆಯುವಂತೆ ಒತ್ತಡವಿದೆ. ಅವರನ್ನು ಚುನಾವಣಾ ಕಚೇರಿಯಲ್ಲಿ ಕುಳಿತುಕೊಳ್ಳುವಂತೆ ಮಾಡಲಾಗಿದೆ. ಪೊಲೀಸರಿಂದ ಅವರ ಮೇಲೆ ಒತ್ತಡ ಹೇರಲಾಗುತ್ತಿದೆ" ಎಂದು ಮನೀಶ್ ಸಿಸೋಡಿಯಾ ಆರೋಪಿಸಿದ್ದಾರೆ.
"ಇದು ಪ್ರಜಾಪ್ರಭುತ್ವಕ್ಕೆ ಬಹಿರಂಗ ಬೆದರಿಕೆ ಎಂದು ನಾನು ಚುನಾವಣಾ ಆಯೋಗಕ್ಕೆ ಹೇಳಲು ಬಯಸುತ್ತೇನೆ" ಎಂದು ದೆಹಲಿ ಉಪಮುಖ್ಯಮಂತ್ರಿ ಸಿಸೋಡಿಯಾ ಆರೋಪಿಸಿದ್ದಾರೆ.
"ಅಭ್ಯರ್ಥಿಯನ್ನು ಅಪಹರಿಸಲಾಗಿದೆ. ಬಂದೂಕು ತೋರಿಸಿ ನಾಮಪತ್ರ ಹಿಂತೆಗೆದುಕೊಳ್ಳುವಂತೆ ಮಾಡಿದ್ದಾರೆ. ಹಾಗಾಗಿ ತಕ್ಷಣದ ಕ್ರಮ ಕೈಗೊಳ್ಳುವಂತೆ ನಾವು ಚುನಾವಣಾ ಆಯೋಗಕ್ಕೆ ಮನವಿಯೊಂದಿಗೆ ಬಂದಿದ್ದೇವೆ" ಎಂದಿದ್ದಾರೆ.
|
ಚುನಾವಣೆ ಸೋಲುವ ಭಯದಲ್ಲಿ ಆಪ್ ಅಭ್ಯರ್ಥಿಗಳ ಅಪಹರಣ
ಎಎಪಿಯ ರಾಘವ್ ಚಡ್ಡಾ ಕೂಡ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಾಂಚನ್ ಜರಿವಾಲಾ ಅವರನ್ನು ನಾಮಪತ್ರ ಹಿಂತೆಗೆದುಕೊಳ್ಳುವಂತೆ ಕಚೇರಿಗೆ ಎಳೆದು ತರಲಾಗಿದೆ ಎಂದು ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.
"ನಾಮಪತ್ರವನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿ, ಪೊಲೀಸರು ಮತ್ತು ಬಿಜೆಪಿ ಗೂಂಡಾಗಳು ಹೇಗೆ ಒಟ್ಟಾಗಿ ನಮ್ಮ ಸೂರತ್ ಪೂರ್ವ ಅಭ್ಯರ್ಥಿ ಕಾಂಚನ್ ಜರಿವಾಲಾ ಅವರನ್ನು ಆರ್ಒ ಕಚೇರಿಗೆ ಎಳೆದೊಯ್ದಿದ್ದಾರೆ ಎಂಬುದನ್ನು ವೀಕ್ಷಿಸಿ. 'ಮುಕ್ತ ಮತ್ತು ನ್ಯಾಯಯುತ ಚುನಾವಣೆ' ಎಂಬ ಪದವು ತಮಾಷೆಯಾಗಿದೆ!" ಎಂದು ಟ್ವೀಟ್ ಮಾಡಿದ್ದಾರೆ.
ಗುಜರಾತ್ ಚುನಾವಣೆಯಲ್ಲಿ ಸೋಲುವ ಬಗ್ಗೆ ಬಿಜೆಪಿಯು ಭಯದಲ್ಲಿದೆ. ಆದ್ದರಿಂದ ಎಎಪಿ ಅಭ್ಯರ್ಥಿಯನ್ನು ಅಪಹರಿಸಲು ಮುಂದಾಗಿದೆ ಎಂದು ಮನೀಶ್ ಸಿಸೋಡಿಯಾ ಹೇಳಿದ್ದಾರೆ.
ಎಎಪಿ ಆರೋಪಕ್ಕೆ ಪ್ರತಿಕ್ರಿಯೆ ನೀಡದ ಬಿಜೆಪಿ
"ಇದು ಅಪಾಯಕಾರಿ, ಇದು ಕೇವಲ ಅಭ್ಯರ್ಥಿಯಲ್ಲ ಪ್ರಜಾಪ್ರಭುತ್ವದ ಅಪಹರಣವಾಗಿದೆ ಎಂದು ಎಎಪಿ ನಾಯಕರು ಆರೋಪಿಸಿದ್ದಾರೆ. ಹಲವು ಎಎಪಿ ನಾಯಕರು ಈ ಆರೋಪವನ್ನು ಟ್ವೀಟ್ ಮಾಡಿದ್ದಾರೆ.
"ಸೂರತ್ (ಪೂರ್ವ)ದ ಅಭ್ಯರ್ಥಿ ಕಾಂಚನ್ ಜರಿವಾಲಾ ಮತ್ತು ಅವರ ಕುಟುಂಬ ನಿನ್ನೆಯಿಂದ ನಾಪತ್ತೆಯಾಗಿದೆ. ಮೊದಲು, ಬಿಜೆಪಿ ಅವರ ನಾಮಪತ್ರವನ್ನು ತಿರಸ್ಕರಿಸಲು ಪ್ರಯತ್ನಿಸಿತು. ಆದರೆ ಅವರ ನಾಮಪತ್ರವನ್ನು ಸ್ವೀಕರಿಸಲಾಯಿತು. ನಂತರ, ಅವರಿಗೆ ನಾಮಪತ್ರವನ್ನು ಹಿಂತೆಗೆದುಕೊಳ್ಳುವಂತೆ ಒತ್ತಡ ಹೇರುತ್ತಿದ್ದರು. ಈಗ ಅವರನ್ನು ಕಿಡ್ನಾಪ್ ಮಾಡಲಾಗಿದೆಯೇ?" ಎಂದು ಅರವಿಂದ್ ಕೇಜ್ರಿವಾಲ್ ಬೆಳಗ್ಗೆ ಟ್ವೀಟ್ ಮಾಡಿದ್ದಾರೆ.
ಎಎಪಿ ಆರೋಪಕ್ಕೆ ಬಿಜೆಪಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
|
ಹಣಕ್ಕೆ ಬದಲಾಗಿ ಟಿಕೆಟ್ ದೊರೆಯುವುದಿಲ್ಲ: ಸಿಸೋಡಿಯಾ
ಗುಜರಾತ್ನಲ್ಲಿ 27 ವರ್ಷಗಳಿಂದ ಅಧಿಕಾರದಲ್ಲಿರುವ ಆಡಳಿತ ಪಕ್ಷವು ಈ ಬಾರಿ ಎಎಪಿಯಿಂದ ಆಕ್ರಮಣಕಾರಿ ಸ್ಪರ್ಧೆಯನ್ನು ಎದುರಿಸಲಿದೆ ಎಂಬಂತೆ ಕಂಡು ಬರುತ್ತಿದೆ. ಇದು ರಾಜ್ಯದಲ್ಲಿ ಸಾಂಪ್ರದಾಯಿಕ ಬಿಜೆಪಿ ಮತ್ತು ಕಾಂಗ್ರೆಸ್ ಪೈಪೋಟಿಯನ್ನು ತ್ರಿಕೋನ ಸ್ಪರ್ಧೆಯಾಗಿ ಪರಿವರ್ತಿಸಿದೆ.
ಡಿಸೆಂಬರ್ 1 ಮತ್ತು 5 ರಂದು ಗುಜರಾತ್ನಲ್ಲಿ ಚುನಾವಣೆ ನಡೆಯಲಿದ್ದು, ಡಿಸೆಂಬರ್ 8 ರಂದು ಫಲಿತಾಂಶ ಪ್ರಕಟವಾಗಲಿದೆ.
ಇನ್ನು, ದೆಹಲಿಯ ನಾಗರಿಕ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡಲು ಹಣ ಪಾವತಿಸಲಾಗುತ್ತಿದೆ ಎಂಬ ಆರೋಪಕ್ಕೆ ಉತ್ತರಿಸಿರುವ ಮನೀಶ್ ಸಿಸೋಡಿಯಾ, "ಯಾರಾದರೂ ಟಿಕೆಟ್ಗಾಗಿ ಹಣ ಪಾವತಿಸುತ್ತಿದ್ದರೂ ಮತ್ತು ಬೇರೊಬ್ಬರು ಅದನ್ನು ತೆಗೆದುಕೊಳ್ಳುತ್ತಿದ್ದರೂ ಸಹ ಎಎಪಿಯಲ್ಲಿ ಟಿಕೆಟ್ಗಳನ್ನು ಮಾರಾಟ ಮಾಡಲಾಗುವುದಿಲ್ಲ. ಯಾರೋ ಹಣ ಪಾವತಿಸಿದ್ದಾರೆ ಮತ್ತು ಯಾರೋ ಅದನ್ನು ತೆಗೆದುಕೊಂಡಿದ್ದಾರೆ. ಆದರೆ ಯಾವುದೇ ಟಿಕೆಟ್ ಮಾರಾಟವಾಗಿಲ್ಲ" ಎಂದು ಮನೀಶ್ ಸಿಸೋಡಿಯಾ ಸ್ಪಷ್ಟಪಡಿಸಿದ್ದಾರೆ.