ಗುಜರಾತ್ ವಿಧಾನಸಭಾ ಚುನಾವಣೆ: ತಿಳಿದುಕೊಳ್ಳಬೇಕಾದ ಕೆಲವು ಸಂಗತಿ
ನವದೆಹಲಿ, ಅಕ್ಟೋಬರ್ 25: ಬಹುನಿರೀಕ್ಷಿತ ಗುಜರಾತ್ ಚುನಾವಣೆಯ ದಿನಾಂಕವನ್ನು ಇಂದು(ಅ.25) ಮುಖ್ಯ ಚುನಾವಣಾಧಿಕಾರಿ ಎ.ಕೆ. ಜ್ಯೋತಿ ಪ್ರಕಟಿಸಿದ್ದಾರೆ. ಎರಡು ಹಂತಗಳಲ್ಲಿ ಡಿಸೆಂಬರ್ 9 ಮತ್ತು 14 ರಂದು ಮತದಾನ ನಡೆಯಲಿದ್ದು, ಡಿಸೆಂಬರ್ 18 ರಂದು ಹೊರಬೀಳುವ ಫಲಿತಾಂಶದಲ್ಲಿ ಮುಂದಿನ ಐದು ವರ್ಷಗಳ ಕಾಲ ಗುಜರಾತಿನ ಚುಕ್ಕಾಣಿ ಹಿಡಿಯುವವರು ಯಾರೆಂಬುದು ತಿಳಿಯಲಿದೆ.
ಸತತ ಮೂರು ಬಾರಿ ಗುಜರಾತಿನ ಮುಖ್ಯಂತ್ರಿಯಾಗಿದ್ದ ಪ್ರಸ್ತುತ ಪ್ರಧಾನಿ ನರೇಂದ್ರ ಮೋದಿಯವರ ತವರು ಎಂಬ ಕಾರಣಕ್ಕೆ ಗುಜರಾತಿನ ಚುನಾವಣೆ ಮತ್ತಷ್ಟು ಮಹತ್ವದ್ದೆನ್ನಿಸಿದೆ. ಬಿಜೆಪಿ ರಾಷ್ಟ್ರಾಧ್ಯಕ್ಷ, ರಾಜಕೀಯ ಚಾಣಾಕ್ಯ ಎಂದೇ ಖ್ಯಾತಿ ಪಡೆದ ಅಮಿತ್ ಷಾ ಸಹ ಗುಜರಾತಿನವರೇ ಆಗಿರುವುದರಿಂದ ಬಿಜೆಪಿಗೆ ಇದು ಪ್ರತಿಷ್ಠೆಯೊಂದಿಗೆ ಸೆಣಸಾಟವೆನ್ನಿಸಿದೆ.
ಗುಜರಾತ್ ವಿಧಾನಸಭಾ ಚುನಾವಣೆ ದಿನಾಂಕ ಪ್ರಕಟ
ಗುಜರಾತ್ ನಲ್ಲಿ ಸಂಭವಿಸಿದ ಭೀಕರ ಪ್ರವಾಹ, ಪಟೇಲ್ ಸಮುದಾಯದ ಮೀಸಲಾತಿ ಹೋರಾಟ, ಕೇಂದ್ರ ಬಿಜೆಪಿ ಸರ್ಕಾರದ ಜಿಎಸ್ ಟಿ, ಅಪನಗದೀಕರಣ ಮುಂತಾದ ಅಂಶಗಳನ್ನು ಮುಂದಿಟ್ಟುಕೊಂಡು ಪ್ರತಿಪಕ್ಷ ಕಾಂಗ್ರೆಸ್ ಈ ಬಾರಿ ಬಿಜೆಪಿಯನ್ನು ಮಣಿಸಲೇಬೇಕೆಂಬ ರೊಚ್ಚಿನಲ್ಲಿದೆ. ಅದಕ್ಕೆಂದೇ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ದಣಿವರಿಯದೆ ಗುಜರಾತ್ ಪ್ರವಾಸ ಮಾಡುತ್ತಿದ್ದಾರೆ.
ಕಳೆದ ವಾರವೇ ಘೋಷಣೆಯಾಗಬೇಕಿದ್ದ ದಿನಾಂಕ ಕಾರಣಾಂತರಗಳಿಂದ ಇಂದು ಘೋಷಣೆಯಾಗಿದೆ. ಈ ಹಿನ್ನೆಲೆಯಲ್ಲಿ ಗುಜರಾತ್ ವಿಧಾನಸಭೆಯ ಕುರಿತು ತಿಳಿಯಬಹುದಾದ ಕೆಲವು ಸಂಗತಿ ಇಲ್ಲಿವೆ.
ಮ್ಯಾಜಿಕ್ ನಂಬರ್ 92
ಗುಜರಾತ್ ವಿಧಾನ ಸಭೆಯಲ್ಲಿರುವ ಒಟ್ಟು ಕ್ಷೇತ್ರಗಳು 182. ಸರ್ಕಾರ ರಚನೆಯ ಮ್ಯಾಜಿಕ್ ನಂಬರ್ 92. 92 ಅಥವಾ ಅದಕ್ಕಿಂತ ಹೆಚ್ಚು ಸ್ಥಾನ ಗೆಲ್ಲುವ ಪಕ್ಷ ಸರಳ ಬಹುಮತದೊಂದಿಗೆ ಸರ್ಕಾರ ರಚಿಸಬಹುದು. 2012ರ ವಿಧಾನಸಭಾ ಚುನಾವಣೆಯಲ್ಲಿ 116 ಕ್ಷೇತ್ರಗಳಲ್ಲಿ ಜಯ ಸಾಧಿಸಿದ್ದ ಬಿಜೆಪಿ ಈ ಬಾರಿ 150 ಸ್ಥಾನಗಳನ್ನು ಗೆಲ್ಲಬೇಕೆಂದು ರಾಷ್ಟ್ರಾಧ್ಯಕ್ಷ ಅಮಿತ್ ಶಾ ಸೂಚನೆ ನೀಡಿದ್ದಾರೆ.
4.33 ಕೋಟಿ ಮತದಾರರು
ಈ ಬಾರಿ ಗುಜರಾತ್ ವಿಧಾನ ಸಭಾ ಚುನಾವಣೆಗೆ ಮತಚಲಾಯಿಸುವವರ ಸಂಖ್ಯೆ 4.33 ಕೋಟಿ. ಚುನಾವಣೆಯಲ್ಲಿ ವಿವಿಪಿಎಟಿ ಯಂತ್ರಗಳನ್ನೇ ಬಳಸಲಾಗುವುದು ಎಂದು ಚುನಾವಣಾ ಆಯೋಗ ತಿಳಿಸಿದೆ. ಉತ್ತರ ಪ್ರದೇಶ ಸೇರಿದಂತೆ ಈ ವರ್ಷ ನಡೆದ ಕೆಲವು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಮತಯಂತ್ರವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ವಿವಿಪಿಎಟಿ ಯಂತ್ರಗಳನ್ನು ಬಳಸಲಾಗುತ್ತಿದೆ.
50,128 ಮತಕೇಂದ್ರಗಳು
ಒಟ್ಟು 50,128 ಮತಕೇಂದ್ರಗಳಲ್ಲಿ ಡಿಸೆಂಬರ್ 9 ಮತ್ತು ಡಿ.14 ರಂದು ಚುನಾವಣೆ ನಡೆಯಲಿದೆ. ಡಿಸೆಂಬರ್ 18 ರಂದು ಫಲಿತಾಂಶ ಹೊರಬೀಳಲಿದೆ.
ದಿನಾಂಕ ಘೋಷಣೆಗೆ ವಿಳಂಬವಾಗಿದ್ದೇಕೆ?
ಅಕ್ಟೋಬರ್ ತಿಂಗಳಿನಲ್ಲಿ ಗುಜರಾತ್ ನಲ್ಲಿ ಆಡಳಿತಾರೂಢ ಬಿಜೆಪಿ 18,000 ಕೋಟಿ ರೂ.ಗಳ ಹಲವು ಜನಪರ ಯೋಜನೆಗಳನ್ನು ಜಾರಿಗೊಳಿಸಿದೆ. ಕಾಂಗ್ರೆಸ್ ಮತ್ತಿತರ ವಿಪಕ್ಷಗಳು ಬಿಜೆಪಿ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಯೋಜನೆಗಳನ್ನು ಬಿಡುಗಡೆ ಮಾಡಿದೆ. ಅದಕ್ಕೆಂದೇ ಯೋಜನೆ ಬಿಡುಗಡೆಯಾಗುವವರೆಗೂ ಚುನಾವಣಾ ದಿನಾಂಕವನ್ನು ಚುನಾವಣಾ ಆಯೋಗ ಪ್ರಕಟಿಸಿರಲಿಲ್ಲ ಎಂದು ಆರೋಪಿಸಿದೆ.
ಕಾಂಗ್ರೆಸ್ ಅನ್ನು ತರಾಟೆಗೆ ತೆಗೆದುಕೊಂಡ ಬಿಜೆಪಿ
ಚುನಾವಣಾ ಆಯೋಗ ಬಿಜೆಪಿಯ ಅಗತ್ಯಕ್ಕೆ ತಕ್ಕಂತೆ ಕುಣಿಯುತ್ತಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ಅನ್ನು ಬಿಜೆಪಿ ತರಾಟೆಗೆ ತೆಗೆದುಕೊಂಡು, ಒಂದು ಸಾಂವಿಧಾನಿಕ ಹುದ್ದೆಗೆ (ಚುನಾವಣಾ ಆಯೋಗ) ಅಗೌರವ ಸೂಚಿಸುವುದು ತರವಲ್ಲ ಎಂದಿದೆ.
26000 ಸಿಬ್ಬಂದಿಗಳು
ಚುನಾವಣೆಯ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು 26000 ಸಿಬ್ಬಂದಿಗಳನ್ನು ನೇಮಿಸಿದೆ. ಗುಜರಾತಿನಲ್ಲಿ ಪ್ರವಾಹ ಸಂತ್ರಸ್ತರಿಗೆ ಪರಿಹಾರ ಕಾರ್ಯ ನಡೆಯುತ್ತಿದ್ದರಿಂದ ಚುನಾವಣಾ ದಿನಾಂಕ ಘೋಷಣೆ ವಿಳಂಬವಾಯಿತು ಎಂದು ಎ.ಕೆ.ಜ್ಯೋತಿ ಹೇಳಿದ್ದಾರೆ.