'ರಜಾ ಹಾಕ್ತೀನಿ ಅಂದಿದ್ದ ನನ್ನ ಮಗ ಇನ್ಯಾವತ್ತೂ ಮನೆಗೆ ಬರಲ್ಲ'
ಛತ್ತೀಸ್ ಗಢದಲ್ಲಿ ಮಾವೋವಾದಿಗಳ ದಾಳಿಯಲ್ಲಿ ಹುತಾತ್ಮರಾದ ಸಿಆರ್ ಪಿಎಫ್ ಯೋಧರ ಕುಟುಂಬಗಳು ತಮ್ಮ ದುಃಖವನ್ನು ವ್ಯಕ್ತಪಡಿಸುತ್ತಿರುವ ರೀತಿಯನ್ನು ಗಮನಿಸಿದ್ದೀರಾ? ಅಂಥ ಕುಟುಂಬಗಳ ಭಾವನೆ ತಿಳಿಸುವ ಲೇಖನ ಇದು
ನವದೆಹಲಿ, ಏಪ್ರಿಲ್ 25: ನನ್ನ ಪತಿಯ ಸಾವಿಗೆ ಪ್ರತೀಕಾರ ಹೇಳಬೇಕು ಎಂದು ಹೇಳುವಾಗಲೂ ಆ ಮಹಿಳೆಯ ಕಣ್ಣಲ್ಲಿ ನೀರಿತ್ತು. ಸಿಆರ್ ಪಿಎಫ್ ಯೋಧ ಬನ್ಮಲಿ ಅವರ ಪತ್ನಿ ಆಕೆ. ಛತ್ತೀಸ್ ಘಡದ ಸುಕ್ಮಾದಲ್ಲಿ ನಕ್ಸಲರ ದಾಳಿಯಲ್ಲಿ ಹುತಾತ್ಮರಾದ ಬನ್ಮಲಿ ಕುಟುಂಬದಲ್ಲಿ ಶೋಕ ಹೆಪ್ಪುಗಟ್ಟಿದೆ.
ಬನ್ಮಲಿ ಪತ್ನಿಯ ಕಂಕುಳಲ್ಲಿ ಒಂದೂವರೆ ವರ್ಷದ ಕಂದಮ್ಮ ತನ್ನದೇ ಕೈ ಬೆರಳ ಜತೆಗೆ ಆಟವಾಡುತ್ತಿರುವುದನ್ನು ಕಂಡಾಗ ಕರುಳು ಕತ್ತರಿಸಿದಂತಾಗುತ್ತದೆ. ತನ್ನ ಪತಿಯನ್ನು ಕಳೆದುಕೊಂಡಿರುವ ಜಿತೇಶ್ವರಿ ಅವರಿಗೆ ಈಗ ತನ್ನ ಪತಿಯ ಸಾವಿಗೆ ಪ್ರತೀಕಾರ ಹೇಳಬೇಕಿದೆ. "ನನ್ನ ಪತಿಯನ್ನು ಯಾರಾದರೂ ಕೊಂದಿರಲಿ. ಅದರ ಪ್ರತೀಕಾರ ಹೇಳಬೇಕು. ನಮಗೆ ನ್ಯಾಯ ಸಿಗಬೇಕು" ಎನ್ನುವಷ್ಟರಲ್ಲಿ ಮತ್ತೆ ಕಣ್ಣೀರು ಕಪಾಳಕ್ಕೆ ಇಳಿದಿತ್ತು.[ಸುಕ್ಮಾ ನಕ್ಸಲ್ ದಾಳಿಯ ಹಿಂದಿನ ನಿಜವಾದ ಕಾರಣ!]
Saluting the bravehearts !!
— Prasar Bharati (@prasarbharati) 25 April 2017
Prasar Bharati salutes the supreme sacrifice of 25 @crpfindia bravehearts of #SukmaAttack. pic.twitter.com/4q27PaKA5f
ಬನ್ಮಲಿ ಅವರ ತಂದೆ ಆಘಾತದಿಂದ ಇನ್ನೂ ಹೊರಬಂದಿಲ್ಲ. ತಮ್ಮ ಮಗನ ಜತೆಗೆ ಕೊನೆಯ ಬಾರಿಗೆ ಆಡಿದ ಮಾತುಗಳನ್ನೇ ಮತ್ತೆ ಮತ್ತೆ ಆಡುತ್ತಾರೆ. "ಮೂರು ದಿನದ ಹಿಂದಷ್ಟೇ ಮಾತನಾಡಿದ್ದೆ. ಇನ್ನೇನು ರಜಾ ಹಾಕ್ತೀನಿ ಅಂದಿದ್ದ. ಆದರೆ ಅಷ್ಟರಲ್ಲೇ ಹೀಗಾಯಿತು. ಅವನಿಗೆ ಒಂದೂವರೆ ವರ್ಷದ ಮಗಳಿದ್ದಾಳೆ. ಇದರ ಮೇಲೆ ಹೇಳುವುದಕ್ಕೆ ಇನ್ನೇನಿಲ್ಲ" ಎನ್ನುತ್ತಾರೆ ಬನ್ಮಲಿ ಅವರ ತಂದೆ ರಥ ರಾಮ್.
ಸ್ಥಳೀಯರ ಪಾಲಿನ ಹೀರೋ
ರಾಜಸ್ತಾನದ ಸಿಕರ್ ಗ್ರಾಮದಲ್ಲೂ ಇಂಥದ್ದೇ ಶೋಕದ ವಾತಾವರಣ. ಅಲ್ಲಿ ಜನರ ಪಾಲಿನ ಹೀರೋ ಸಿಆರ್ ಪಿಎಫ್ ಜವಾನ್ ಬನ್ನಾ ರಾಮ್ ಹುತಾತ್ಮರಾಗಿದ್ದಾರೆ. ಇನ್ನು ರಘಭೀರ್ ಸಿಂಗ್ ಕುಟುಂಬದವರು ಹಾಗೂ ಸ್ನೇಹಿತರಿಗೆ ಗುಪ್ತಚರ ದಳದ ವೈಫಲ್ಯ ಮತ್ತು ಸರಕಾರದ ಕೈಲಾಗದತನದಿಂದ ಹೀಗಾಗಿದೆ ಎಂಬ ಸಿಟ್ಟು.
ಈ ರೀತಿಯ ಸರಕಾರ ನೋಡಿಲ್ಲ
"ಆತ ತುಂಬ ದೊಡ್ಡ ಮನುಷ್ಯ. ನಮಗೆ ದಿಗ್ಭ್ರಮೆಯಾಗಿದೆ. ಗುಪ್ತಚರ ದಳದವರೇನು ನಿದ್ದೆ ಮಾಡ್ತಿದ್ದಾರಾ? ಇಂಥ ದಾಳಿಯನ್ನಾಗಲಿ, ಅದಕ್ಕೆ ಈ ರೀತಿಯ ಉತ್ತರ ನೀಡಿದ ಸರಕಾರವನ್ನಾಗಲಿ ಈವರೆಗೆ ನೋಡಿಲ್ಲ" ಎನ್ನುತ್ತಾರೆ ರಘಬೀರ್ ನ ಬಾಲ್ಯ ಸ್ನೇಹಿತ ವಿಕ್ರಂ ಸಿಂಗ್. ಸರಕಾರ ಏನನ್ನೂ ಮಾಡ್ತಿಲ್ಲ. ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಎನ್ನುತ್ತಾರೆ ರಘಬೀರ್ ನ ಮತ್ತೊಬ್ಬ ಸಂಬಂಧಿ.
ನನ್ನ ಮಗನ ಬಗ್ಗೆ ಹೆಮ್ಮೆ
ಹುತಾತ್ಮ ಸೌರಭ್ ಕುಮಾರ್ ನ ತಂದೆ ಮಾತು ಕೇಳಿದವರ ಕಣ್ಣಾಲಿಗಳು ಒದ್ದೆಯಾಗುತ್ತವೆ. "ಇದು ಬಹಳ ದುಃಖದ ಸಂಗತಿ. ಆದರೆ ನನ್ನ ಮಗನ ಬಗ್ಗೆ ನನಗೆ ಹೆಮ್ಮೆ ಇದೆ. ನನ್ನ ಮಗ ಮಾತ್ರವಲ್ಲ, ಇತರ ಹಲವರು ತ್ಯಾಗ ಮಾಡಿದ್ದಾರೆ" ಎನ್ನುತ್ತಾರೆ. "ಇದನ್ನು ಸರಕಾರವು ಸವಾಲಾಗಿ ತೆಗೆದುಕೊಳ್ಳುತ್ತದೆ. ಸಿಆರ್ ಪಿಎಫ್ ಯೋಧರ ಸಾವಿಗೆ ಕಾರಣರಾದ ಒಬ್ಬರನ್ನು ಸಹ ಬಿಡುವುದಿಲ್ಲ" ಎಂದು ಕೇಂದ್ರ ಗೃಹ ಸಚಿವ ರಾಜ್ ನಾಥ್ ಸಿಂಗ್ ಹೇಳಿದ್ದಾರೆ.
ನಕ್ಸಲರ ಹತಾಶ ಮನೋಭಾವ
ಕೇಂದ್ರ ಹಾಗೂ ರಾಜ್ಯ ಸರಕಾರ ಒಟ್ಟಿಗೆ ಕೆಲಸ ಮಾಡುತ್ತದೆ. ತಪ್ಪಿತಸ್ಥರನ್ನು ಶಿಕ್ಷೆಗೆ ಗುರಿಪಡಿಸುತ್ತದೆ. ಇಂಥ ಹೇಡಿತನದ ಮತ್ತು ದುರದೃಷ್ಟ ಕೃತ್ಯಗಳು ನಕ್ಸಲೀಯರ ಹತಾಶ ಮನೋಭಾವವನ್ನು ಬಯಲು ಮಾಡಿದೆ ಎಂದಿದ್ದಾರೆ ರಾಜ್ ನಾಥ್ ಸಿಂಗ್, ಇದೇ ವೇಳೆ ಮೃತರ ಕುಟುಂಬಗಳಿಗೆ ತಮ್ಮ ವಿಷಾದ ವ್ಯಕ್ತಪಡಿಸಿದ್ದಾರೆ ಛತ್ತೀಸ್ ಘಡದ ಮುಖ್ಯಮಂತ್ರಿ ರಮಣ್ ಸಿಂಗ್.
ದಾಳಿ ಎದುರಿಸಲು ಸನ್ನದ್ಧ
ಇನ್ನು ಮುಂದೆ ಇಂಥ ಕೃತ್ಯಗಳು ನಡೆಯದಂತೆ ಯಾವ ರೀತಿಯ ಮುಂಜಾಗ್ರತೆ ವಹಿಸಬೇಕೋ ಎಲ್ಲವನ್ನೂ ತೆಗೆದುಕೊಳ್ತೀವಿ. ಇದು ಎಚ್ಚರಗೊಳ್ಳಬೇಕಾದ ಸಮಯ. ಇಂಥ ಯಾವುದೇ ದಾಳಿಗಳನ್ನು ಎದುರಿಸಲು ಸನ್ನದ್ಧರಾಗಬೇಕಿದೆ ಎಂದು ರಮಣ್ ಸಿಂಗ್ ಹೇಳಿದ್ದಾರೆ. ಈ ಘಟನೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿಗೆ ಗೃಹ ಸಚಿವ ರಾಜ್ ನಾಥ್ ಸಿಂಗ್ ವಿವರಣೆ ನೀಡಿದ್ದಾರೆ.
ಫೋಟೋ ಕೃಪೆ-ಪಿಟಿಐ