ಅಜ್ಜನ ನಿಧನದಿಂದ ಬೇಸತ್ತ ಮೊಮ್ಮಗಳು ಬೆಂಕಿಗೆ ಆಹುತಿ
ಕಾಸರಗೋಡು, ಡಿಸೆಂಬರ್, 08: ಹಿರಿಯರನ್ನು ಕಂಡರೆ ಮೂಗು ಮುರಿಯುವ ಮೊಮ್ಮಕ್ಕಳ ನಡುವೆ ಇಲ್ಲೊಬ್ಬ ಮೊಮ್ಮಗಳು ಅಜ್ಜನ ನಿಧನದಿಂದ ಬೇಸತ್ತು ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾಸರಗೋಡಿನ ಪಡನ್ನ ಬಳಿ ಡಿಸೆಂಬರ್ 07ರ ಸೋಮವಾರ ನಡೆದಿದೆ .
ತಾತನ ಅಗಲಿಕೆ ನೋವನ್ನು ತಾಳಲಾರದೆ ರೇಷ್ಮಾ (22) ಮೃತಪಟ್ಟ ಯುವತಿ. ಈಕೆ ಕಂಪ್ಯೂಟರ್ ತರಬೇತಿ ಪಡೆಯುತ್ತಿದ್ದು, ಅಜ್ಜನನ್ನು ತನ್ನ ಜೀವಕ್ಕಿಂತ ಹೆಚ್ಚು ಪ್ರೀತಿಸುತ್ತಿದ್ದು, ತಾತ ಸತ್ತ ದಿನವೇ ಆಕೆಯೂ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.[ಅರಿಶಿಣದ ಮೈ ಆರುವ ಮುನ್ನ ಮಹಿಳೆ ಜೀವನವೇ ಬಾಡಿತು]
ರೇಷ್ಮಾಳ ಅಜ್ಜ ಪಿ .ಕೆ ಕಣ್ಣನ್(75) ತೀವ್ರ ಎದೆ ನೋವಿನಿಂದ ನರಳುತ್ತಿದ್ದ ಕಾರಣ ಭಾನುವಾರ ರಾತ್ರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಬೆಳಿಗ್ಗೆ ಚೆರ್ವತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದರು.[ಹೆತ್ತವರ ಪ್ರೀತಿ ಕಳೆದುಕೊಂಡು ನಲುಗುತ್ತಿರುವ ಮಕ್ಕಳು]
ತಾತನ ನಿಧನದ ಸುದ್ದಿಯನ್ನು ಕೇಳಿದ ರೇಷ್ಮಾ ಮನನೊಂದಿದ್ದು ಶೌಚಾಲಯ ದೊಳಗೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾಳೆ. ಈ ಪ್ರಕರಣವನ್ನು ಚಂದೇರ ಠಾಣಾ ಪೊಲೀಸರು ದಾಖಲಿಸಿಕೊಂಡಿದ್ದು, ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ .