ವಿರೋಧ ಪಕ್ಷಗಳು ಮೊದಲು ತಮ್ಮ ಜವಾಬ್ದಾರಿ ಅರಿಯಲಿ; ಜೋಶಿ
ಲೋಕಸಭೆ ಕಲಾಪದಲ್ಲಿ ವಿಪಕ್ಷಗಳು ಅದಾನಿ ಗ್ರೂಪ್ ಬಗೆಗಿನ ಆರೋಪಗಳ ಬಗ್ಗೆ ಚರ್ಚಿಸುವಂತೆ ಪಟ್ಟು ಹಿಡಿದ ಪರಿಣಾಮ ಸದನವನ್ನು ಶುಕ್ರವಾರಕ್ಕೆ ಮುಂದೂಡಲಾಯಿತು.
ನವದೆಹಲಿ, ಫೆಬ್ರವರಿ 02; ಸಂಸತ್ ಕಲಾಪದಲ್ಲಿ ವಿಪಕ್ಷಗಳ ವರ್ತನೆಯನ್ನು ಖಂಡಿಸಿರುವ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ, ಬಜೆಟ್ ಅಧಿವೇಶನದಲ್ಲಿ ಬಜೆಟ್ ಮಂಡನೆ ಬಳಿಕ ರಾಷ್ಟ್ರಪತಿಗಳ ಭಾಷಣದ ಮೇಲೆ ಚರ್ಚೆ ನಡೆಸುವುದು ಮೊದಲ ಆದ್ಯತೆಯಾಗಿದೆ ಎಂದು ಹೇಳಿದ್ದಾರೆ.
ಗುರುವಾರ ಲೋಕಸಭೆಯಲ್ಲಿ ವಿಪಕ್ಷಗಳು ಅದಾನಿ ಗ್ರೂಪ್ ಬಗೆಗಿನ ಆರೋಪಗಳ ಬಗ್ಗೆ ಚರ್ಚಿಸುವಂತೆ ಪಟ್ಟು ಹಿಡಿದ ಪರಿಣಾಮ ಸದನವನ್ನು ಶುಕ್ರವಾರಕ್ಕೆ ಮುಂದೂಡಲಾಯಿತು. ಸಂಸತ್ ಕಲಾಪಕ್ಲೆ ವಿಪಕ್ಷಗಳು ಅಡ್ಡಿಪಡಿಸುತ್ತಿರುವುದನ್ನು ಪ್ರಹ್ಲಾದ್ ಜೋಶಿ ಖಂಡಿಸಿದರು.
Union Budget 2023; ರಾಷ್ಟ್ರಪತಿಗಳ ಭಾಷಣ
ಲೋಕಸಭೆ ಕಲಾಪ ಆರಂಭವಾಗುತ್ತಿದ್ದಂತೆ ಪ್ರತಿಪಕ್ಷ ನಾಯಕರಿಗೆ ಮನವಿ ಮಾಡಿದ ಪ್ರಹ್ಲಾದ್ ಜೋಶಿ, ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯ ಕೈಗೊಳ್ಳುವುದು ಅಗತ್ಯವಾಗಿದೆ. ಮಹಿಳಾ ರಾಷ್ಟ್ರಪತಿ ಅವರು ಜಂಟಿ ಅಧಿವೇಶನ ಉದ್ದೇಶಿಸಿ ಮೊದಲ ಭಾಷಣ ಮಾಡಿದ್ದಾರೆ. ಅದಕ್ಕೆ ಗೌರವ ಸಲ್ಲಿಸಲು ಎಲ್ಲ ಸದಸ್ಯರು ಸಹಕರಿಸಬೇಕು ಎಂದು ವಿಪಕ್ಷಗಳಿಗೆ ಮನವಿ ಮಾಡಿದರು.
ಭಾರತವು ನಿರ್ಭೀತ, ನಿರ್ಣಾಯಕ ಸರ್ಕಾರ ಹೊಂದಿದೆ: ರಾಷ್ಟ್ರಪತಿ ಮುರ್ಮು
ವಿಪಕ್ಷಗಳು ಸದನದ ಸಂಪ್ರದಾಯವನ್ನು ಗಾಳಿಗೆ ತೂರಿ ಗದ್ದಲ ನಡೆಸುವುದು ಎಷ್ಟು ಸರಿ? ಎಂದು ಪ್ರಶ್ನಿಸಿದರು. ಸಂಸತ್ತಿನ ಅಧಿವೇಶನದಲ್ಲಿ ಯಾವುದೇ ಮಹತ್ವದ ವಿಚಾರಗಳ ಮೇಲೆ ಚರ್ಚೆಗೆ ಸರ್ಕಾರ ಸಿದ್ಧವಿದೆ. ರಚನಾತ್ಮಕ ಸಲಹೆಗಳನ್ನು ವಿಪಕ್ಷ ನಾಯಕರು ಸದನದಲ್ಲಿ ನೀಡಲಿ ಎಂದರು.
Union Budget 2023; ಅಮೃತ ಕಾಲಕ್ಕೆ ಎಲ್ಲಾ ಸೌಕರ್ಯ ಒದಗಿಸುವ ಬಜೆಟ್, ಜೋಶಿ
ಮಹಿಳಾ ರಾಷ್ಟ್ರಪತಿಗಳ ಮೊದಲ ಭಾಷಣದ ಮೇಲೆ ಸದನದಲ್ಲಿ ಚರ್ಚಿಸಿ ವಂದನಾ ನಿರ್ಣಯ ಕೈಗೊಳ್ಳುವುದು ಅಗತ್ಯ. ಇದನ್ನ ವಿಪಕ್ಷಗಳು ಅರಿತು ಸದನ ನಡೆಸಲು ಸಹಕರಿಸಬೇಕು ಎಂದು ಸಚಿವ ಪ್ರಹ್ಲಾದ್ ಜೋಶಿ ಮನವಿ ಮಾಡಿದರು.
ವಿರೋಧ ಪಕ್ಷಗಳ ವಾದವೇನು?; ವಿರೋಧ ಪಕ್ಷಗಳು ಅದಾನಿ ಗ್ರೂಪ್ ಬಗೆಗಿನ ಆರೋಪಗಳ ಬಗ್ಗೆ ಚರ್ಚಿಸುವಂತೆ ಪಟ್ಟು ಹಿಡಿದ ಪರಿಣಾಮ ಲೋಕಸಭೆ ಕಲಾಪಕ್ಕೆ ಅಡ್ಡಿ ಉಂಟಾಯಿತು.
ಅದಾನಿ ಗ್ರೂಪ್ ಬಿಕ್ಕಟ್ಟಿನ ಕುರಿತು ಜಂಟಿ ಸಂಸದೀಯ ಸಮಿತಿ ಅಥವ ಸುಪ್ರೀಂಕೋರ್ಟ್ ಮೇಲ್ವಿಚಾರಣೆಯ ತನಿಖೆಗೆ ಪ್ರತಿಪಕ್ಷ ಕಾಂಗ್ರೆಸ್ ಪಟ್ಟು ಹಿಡಿದಿದೆ. ವಿವಿಧ ವಿರೋಧ ಪಕ್ಷಗಳು ಈ ಒತ್ತಾಯಕ್ಕೆ ಬೆಂಬಲ ನೀಡಿವೆ.
ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಗುರುವಾರ ಮಾತನಾಡಿ, "ಸಾರ್ವಜನಿಕ ಹಿತಾಸಕ್ತಿಯನ್ನು ಗಮದಲ್ಲಿಟ್ಟುಕೊಂಡು ಜಂಟಿ ಸಂಸದೀಯ ಸಮಿತಿ ಅಥವ ಸುಪ್ರೀಂಕೋರ್ಟ್ ಮೇಲ್ವಿಚಾರಣೆಯ ತನಿಖೆ ನಡೆಸಬೇಕು ಎಂದು ನಾವು ಬಯಸುತ್ತೇವೆ" ಎಂದು ಹೇಳಿದರು.
ಸಂಸತ್ತಿನಲ್ಲಿ ವಿರೋಧ ಪಕ್ಷಗಳು ಇದು ಗಂಭೀರ ಸ್ವರೂಪದ ವಿಷಯವಾಗಿದೆ. ಇದರ ಬಗ್ಗೆ ಚರ್ಚಿಸಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದವು. ಆದರೆ ಲೋಕಸಭೆ ಸ್ಫೀಕರ್ ಬೇಡಿಕೆಯನ್ನು ತಳ್ಳಿ ಹಾಕಿದರು.
ಎಲ್ಐಸಿ, ಎಸ್ಬಿಐ ಸೇರಿದಂತೆ ಸಾರ್ವಜನಿಕ ವಲಯದ ಸಂಸ್ಥೆಗಳು ಅದಾನಿ ಸಮೂಹದಲ್ಲಿ ಭಾರೀ ಮೊತ್ತದ ಹೂಡಿಕೆ ಮಾಡಿವೆ. ಜನರು ತಮ್ಮ ಹಣದ ಕುರಿತು ಆತಂಕಗೊಂಡಿದ್ದಾರೆ. ಆದರೆ ಪ್ರಧಾನಿ ನರೇಂದ್ರ ಮೋದಿ ಗಂಭೀರ ವಿಚಾರದ ಬಗ್ಗೆ ಏಕೆ ಮೌನ ವಹಿಸಿದ್ದಾರೆ ಎಂದು ವಿಪಕ್ಷಗಳು ಪ್ರಶ್ನಿಸಿದವು.
ಸಚಿವರ ಜೊತೆ ಸಭೆ; ಸಚಿವ ಪ್ರಹ್ಲಾದ್ ಜೋಶಿ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರೊಂದಿಗೆ ರಾಜ್ಯದ ಪ್ರಸ್ತುತ ರಾಷ್ಟ್ರೀಯ ಹೆದ್ದಾರಿಗಳ ಯೋಜನೆಗಳ ಕುರಿತಾಗಿ ಚರ್ಚೆ ನಡೆಸಿದರು.
ಧಾರವಾಡ ಲೋಕಸಭಾ ಕ್ಷೇತ್ರದ ರಸ್ತೆ ಯೋಜನೆಗಳು, ರಿಂಗ್ ರೋಡ್ ಕಾಮಗಾರಿ, ಹುಬ್ಬಳ್ಳಿಯಲ್ಲಿ ನಿರ್ಮಾಣ ಹಂತದಲ್ಲಿರುವ ಫ್ಲೈಓವರ್ ಹಾಗೂ ಬೈಪಾಸ್ ರಸ್ತೆಯ ಕಾಮಗಾರಿ ಪ್ರಗತಿ ಕುರಿತಂತೆ ನಿತಿನ್ ಗಡ್ಕರಿ ಜೊತೆ ಚರ್ಚೆ ನಡೆಸಿದ್ದು, ಯೋಜನೆ ಕಾಮಗಾರಿಗಳಿಗೆ ವೇಗ ನೀಡುವ ನಿಟ್ಟಿನಲ್ಲಿ ಅಧಿಕಾರಿಗಳಿಗೆ ನಿತಿನ್ ಗಡ್ಕರಿ ಸೂಚನೆ ನೀಡಿದ್ದಾರೆ.