ಸ್ವಯಂಘೋಷಿತ ದೇವಮಾನವ ಚಂದ್ರಸ್ವಾಮಿಯ ವಿವಾದಗಳು
ಚಂದ್ರಸ್ವಾಮಿ ತಂತ್ರ ವಿದ್ಯೆ ಪರಿಣತರಾಗಿ, ವಿವಾದಿತ ವ್ಯಕ್ತಿಯಾಗಿ, ಸ್ವಯಂಘೋಷಿತ ದೇವಮಾನವರಾಗಿ, ಹಲವು ರಾಜಕೀಯ ಮುಖಂಡರು ಖ್ಯಾತನಾಮರ ಗುರುವಾಗಿ ಗುರುತಿಸಿಕೊಂಡರು.ಅವರ ವಿವಾದಗಳನ್ನು ಕೆದಕಿದರೆ ಅದು ಅವರ ಆಶ್ರಮದಿಂದ LTTE ತನಕ ಬೆಳೆಯುತ್ತದೆ.
ಗಳೂರು, ಮೇ 23: ಬಹುಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಸ್ವಯಂಘೋಷಿತ ದೇವಮಾನವ ಚಂದ್ರಸ್ವಾಮಿ ಇಂದು ನಿಧನರಾಗಿದ್ದಾರೆ.
ಹಣ ಲೇವಾದೇವಿ ವ್ಯವಹಾರ ನಡೆಸುತ್ತಿದ್ದ ರಾಜಸ್ಥಾನಿ ಮೂಲದ ವ್ಯಕ್ತಿಯೊಬ್ಬರ ಮಗನಾದ ನೇಮಿ ಚಂದ್ ಅಲಿಯಾಸ್ ಚಂದ್ರಸ್ವಾಮಿ ತಂತ್ರ ವಿದ್ಯೆ ಪರಿಣತರಾಗಿ, ವಿವಾದಿತ ವ್ಯಕ್ತಿಯಾಗಿ, ಸ್ವಯಂಘೋಷಿತ ದೇವಮಾನವರಾಗಿ, ಹಲವು ರಾಜಕೀಯ ಮುಖಂಡರು ಖ್ಯಾತನಾಮರ ಗುರುವಾಗಿ ಗುರುತಿಸಿಕೊಂಡರು.
ಅವರ ವಿವಾದಗಳನ್ನು ಕೆದಕಿದರೆ ಅದು ಅವರ ಆಶ್ರಮದಿಂದ ಉಗ್ರ ಸಂಘಟನೆ ಎಲ್.ಟಿ.ಟಿ.ಇ ತನಕ ಬೆಳೆಯುತ್ತದೆ. ಅದಕ್ಕೇ ಚಂದ್ರ ಸ್ವಾಮಿ ವಿಶೇಷ; ಅವರ ವಿವಾದಗಳು ಒಂದೆರಡಲ್ಲ. ಅವುಗಳ ಸಂಪುರ್ಣ ಪಟ್ಟಿ ಇಲ್ಲಿದೆ.[ಸ್ವಯಂಘೋಷಿತ ದೇವಮಾನವ ಚಂದ್ರಸ್ವಾಮಿ ಕಣ್ಮರೆ ]
ವಿದೇಶಿ ವಿನಿಮಯಗಳಲ್ಲಿ ಗೋಲ್ ಮಾಲ್
ಚಂದ್ರಸ್ವಾಮಿ ಮೇಲೆ ಹಣಕಾಸು ನಿರ್ವಹಣೆಯಲ್ಲಿ ಕಾನೂನು ನಿಯಮಗಳನ್ನು ಉಲ್ಲಂಘಿಸಿದ ಹಲವು ಪ್ರಕರಣಗಳನ್ನು ಜಡಿದಿತ್ತು ಜಾರಿ ನಿರ್ದೇಶನಾಲಯ. ಸುಮಾರು ಪ್ರಕರಣಗಳಲ್ಲಿ ಅವರಿಗೆ ದಂಡ ಕೂಡಾ ಹಾಕಲಾಗಿದೆ. ಒಟ್ಟು 13 ವಿದೇಶಿ ವಿನಿಮಯ ಕಾಯ್ದೆ ಉಲ್ಲಂಘನೆ ಪ್ರಕರಣದಲ್ಲಿ ಅಂದಾಜು 9 ಕೋಟಿ ದಂಡವನ್ನೂ ಚಂದ್ರ ಸ್ವಾಮಿಗೆ ಜಾರಿ ನಿರ್ದೇಶನಾಲಯ ಹಾಕಿತ್ತು.
ಸಿಬಿಐ ದಾಳಿ ವೇಳೆ 2.07 ಕೋಟಿ ವಿದೇಶಿ ದೇಣಿಗೆ, 1.27 ಕೋಟಿ ಸ್ವದೇಶಿ ದೇಣಿಗೆಯನ್ನು ಸ್ವಾಮಿ ಪಡೆದುಕೊಂಡಿದ್ದು ಪತ್ತೆಯಾಗಿತ್ತು. ಅದೂ 1994ರಲ್ಲೇ. ಅವರ ಆಶ್ರಮಕ್ಕೆ ದೇಣಿಕೆ ಕೊಟ್ಟವರು ಥಾಯ್ಲಾಂಡ್, ಕೆನಡಾ, ಬ್ರಿಟನ್ ಮುತಾದ ವಿದೇಶಗಳಲ್ಲಿದ್ದರು. ಮಾತ್ರವಲ್ಲ ಅವರೆಲ್ಲರೂ ಸುಸ್ತಿದಾರರಾಗಿದ್ದರು. ಇದು ವಿಶೇಷ.
ಉದ್ಯಮಿಗೆ ವಂಚನೆ ಬಂಧನ
ಈ ಪ್ರಕರಣ ನಡೆದಿದ್ದು 1996ರಲ್ಲಿ. ಲಂಡನ್ ಮೂಲದ ಉದ್ಯಮಿಯೊಬ್ಬರಿಗೆ 1 ಲಕ್ಷ ಡಾಲರ್ ವಂಚಿಸಿದ್ದ ಚಂದ್ರಸ್ವಾಮಿ ಕೃಷ್ಣನ ಜನ್ಮಸ್ಥಳಕ್ಕೂ ಹೋಗಿ ಬಂದಿದ್ದರು.
ಇನ್ನು ನರಸಿಂಹ ರಾವ್ ರಂಥ ರಾಜಕಾರಣಿಗಳು ಪರಮಾಪ್ತರ ಪಟ್ಟಿಯಲ್ಲಿದ್ದರೂ ಸೈಂಟ್ ಕಿಟ್ಸ್ ಪೋರ್ಜರಿ ಕೇಸಿನಲ್ಲಿ ಚಂದ್ರ ಸ್ವಾಮಿ ತಮ್ಮ ಆಪ್ತ ರ ಜತೆ ವಿಚಾರಣೆಯನ್ನು ಎದುರಿಸಬೇಕಾಗಿ ಬಂದಿತ್ತು. ಲಾಕೂಭಾಯಿ ಪಾಠಕ್ ಕೇಸಿನಲ್ಲಿ ರಾವ್-ಚಂದ್ರಸ್ವಾಮಿ ಲಿಂಕ್ ಸಾರ್ವಜನಿಕವಾಗಿ ಬಹಿರಂಗವಾಗಿತ್ತು. ಕೊನೆಗೆ ಸಾರ್ವಜನಿಕರ ಒತ್ತಡಕ್ಕೆ ಮಣಿದು 1996ರಲ್ಲಿ ಸ್ವಾಮಿ ಬಂಧನಕ್ಕೆ ರಾವ್ ಆದೇಶ ನೀಡಿದ್ದರು. ಹೀಗೆ ತಿಹಾರ್ ಜೈಲಿನಲ್ಲಿ ಲ್ಯಾಂಡ್ ಆಗಿದ್ದರು ಸ್ವಯಂಘೋಷಿತ ದೇವ ಮಾನವ ಚಂದ್ರಸ್ವಾಮಿ.
ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲೂ ಭಾಗಿ?
ಚಂದ್ರ ಸ್ವಾಮಿಯನ್ನು ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿಯೂ ಸಿಬಿಐ ವಿಚಾರಣೆಗೆ ಒಳಪಡಿಸಿತ್ತು.ಮಜೈನ್ ಆಯೋಗ 1998ರಲ್ಲಿ ಹತ್ಯೆ ಪ್ರಕರಣದಲ್ಲಿ ಸ್ವಾಮಿಯ ಕೈವಾಡ ಇದೆ ಎಂಬ ವಿಚಾರದಲ್ಲಿ ಒಂದು ಪುಸ್ತಕವನ್ನೇ ಹೊರ ತಂದಿತ್ತು. ಹತ್ಯೆಗೆ ಆರ್ಥಿಕ ನೆರವು ಒದಗಿಸಿದ ಕಾರಣಕ್ಕೆ ಇನ್ನೂ ಅವರ ಬಗ್ಗೆ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಲೇ ಇದೆ.
ಶಸ್ತ್ರಾಸ್ತ್ರ ಡೀಲರ್ ಅದ್ನಾನ್ ಖಾಶೋಗ್ಗಿಗೆ 1.05 ಕೋಟಿ ಹಣ ನೀಡಿದ ದಾಖಲೆಗಳು ಅವರ ಆಶ್ರಮಕ್ಕೆ ರೈಡ್ ಮಾಡಿದ್ದಾಗ ಸಿಕ್ಕಿದ್ದವು.
ಎಲಿಜಬೆತ್ ಟೇಲರ್ ಗುರು
ಇಷ್ಟೆಲ್ಲ ಆರೋಪ ಪ್ರತ್ಯಾರೋಪಗಳ ಮಧ್ಯೆ ಪವಾಡ ಪುರುಷರಾಗಿಯೇ ಗುರುತಿಸಿಕೊಂಡಿದ್ದವರು ಚಂದ್ರ ಸ್ವಾಮಿ. ಅವರ ಭಕ್ತರ ಗಣ ನೋಡಿದರೇ ಬೆಚ್ಚಿ ಬೀಳಬೇಕಾಗುತ್ತದೆ. ಇಬ್ಬರು ಮಾಜಿ ಪ್ರಧಾನಿಗಳಾದ ಪಿವಿ ನರಸಿಂಹ ರಾವ್ ಮತ್ತು ಚಂದ್ರಶೇಖರ್ ಚಂದ್ರ ಸ್ವಾಮಿಯ ಭಕ್ತ ಗಣದಲ್ಲಿ ಸ್ಥಾನ ಪಡೆದಿದ್ದರು.
ಉತ್ತರ ಪ್ರದೇಶದ ಮಾಜಿ ರಾಜ್ಯಪಾಲ ರೊಮೇಶ್ ಭಂಡಾರಿ, ಮಾಜಿ ಬಿಹಾರ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್, ಬ್ರೂನಿಯ ರಾಜ, ಬಹ್ರೇನ್ ಸುಲ್ತಾನ, ಎಲಿಜಬೆತ್ ಟೇಲರ್ ರಂಥ ಖ್ಯಾತನಾಮರು ಅವರು ಭಕ್ತರಾಗಿದ್ದರು. ನಿರಂತವಾಗಿ ಚಂದ್ರ ಸ್ವಾಮಿಯಿಂದ ಅವರೆಲ್ಲ ಆಶೀರ್ವಾದ ಪಡೆದುಕೊಂಡು ತೆರಳುತ್ತಿದ್ದರು.
ಕಿಂಗ್ ಮೇಕರ್ ಸ್ವಾಮಿ
ಬಳಿ ಪಂಚೆ, ಬಿಳಿ ಕುರ್ತಾ ಅದರ ಮೇಲೊಂದು ರೇಶ್ಮೆಯ ಶಾಲು ಅವರ ಸಮವಸ್ತ್ರವಾಗಿತ್ತು. ಬಿಳಿ ಗಡ್ಡ, ಹಣೆಯ ಮೇಲೊಂದು ನಾಣ್ಯಾಕಾರದ ಬೊಟ್ಟು ಅವರ ಗುರುತುಗಳಾಗಿದ್ದವು. ಒಮ್ಮೆ ಅವರ 53ನೇ ಹುಟ್ಟು ಹಬ್ಬಕ್ಕೆ ಮೇನಕಾ ಗಾಂಧಿ ವಕೀಲರಿಂದ ಹಿಡಿದು ಬಿಜೆಪಿ ಸಂಸದ ಕೀರ್ತಿ ಅಜಾದ್ ವರೆಗೆ ಎಲ್ಲರೂ ಪಾಲ್ಗೊಂಡಿದ್ದರು. ಸಾಮಾನ್ಯ ಸಂನ್ಯಾಸಿಯಿಂದ ಕಿಂಗ್ ಮೇಕರ್ ವರೆಗೆ ಅವರ ಜೀವನ ಹಬ್ಬಿಕೊಂಡಿತ್ತು.
ವಿಚಿತ್ರ ಖಯಾಲಿ
ಚಂದ್ರಸ್ವಾಮಿಯ ಖಯಾಲಿಗಳೇ ವಿಚಿತ್ರವಾಗಿದ್ದವು. ನಾಲ್ಕು ಗಂಟೆಗೆ ಏಳುತ್ತಿದ್ದ ಸ್ವಾಮಿ ಎದ್ದವರೇ ವಾಕಿಂಗ್ ಹೋಗುತ್ತಿದ್ದರು. ಮಸಾಜ್ ಇಷ್ಟಪಡುತ್ತಿದ್ದರು. ಅವರ ಬೆಡ್ ರೂಂ ನಲ್ಲಿ ಫೇಸ್ ಕ್ರೀಂ ಗಳಿರುತ್ತಿದ್ದವು. ಅವರು ತಮ್ಮ ಇಷ್ಟದ ಕುರ್ಚಿಯಲ್ಲೇ ಕೂರುತ್ತಿದ್ದರು. ಆಶ್ರಮದ ಸುತ್ತಾ ಭಿಗಿ ಭದ್ರತೆ ಹಾಗೂ ಈ ಭದ್ರತೆಯನ್ನು ಅವರು ತಮ್ಮ ಕೋಣೆಯಿಂದಲೇ ಅವಲೋಕಿಸುತ್ತಿದ್ದರು. ಆಶ್ರಮದ ಮೂಲೆ ಮೂಲೆಗಳಿಗೂ ಕ್ಯಾಮೆರಾಗಳಿರುತ್ತಿದ್ವು ಅವುಗಳ ನೇರ ಸಂಪರ್ಕ ಸ್ವಾಮಿಯ ಖಾಸಗಿ ಕೋಣೆಗಳಿಗಿತ್ತು.
ದಾನಶೂರ ಕರ್ಣ
ಚಂದ್ರ ಸ್ವಾಮಿ ತಮ್ಮನ್ನು ತಾವು ದಾನಶೂರ ಕರ್ಣನಂತೆ ಬಿಂಬಿಸಿಕೊಳ್ಳುತ್ತಿದ್ದರು. ಗುಜರಾತ್ ಭೂಕಂಪವಾದಾಗ ಸುಮಾರು ದುಡ್ಡು ಜನರಿಗಾಗಿ ನೀಡಿದೆ. ನಾನು ಭಾರತವಷ್ಟೇ ಅಲ್ಲ ವಿಶ್ವದಾದ್ಯಂತ ಹಿಂದುತ್ವ ಪಸರಿಸುತ್ತಿರುವುದಾಗಿ ಹೇಳಿಕೋಳ್ಳುತ್ತಿದ್ದರು. ಈ ಮೂಲಕ ತಾವೊಬ್ಬ ಅಪ್ರತಿಮ ದೇವಮಾನವ ಎಂದು ಅವರೇ ಬಿಂಬಿಸಿಕೊಳ್ಳುತ್ತಿದ್ದರು.