ಆದಷ್ಟು ಬೇಗ ಬೂಸ್ಟರ್ ಡೋಸ್ ಪಡೆಯಿರಿ: ಭಾರತೀಯ ವೈದ್ಯರ ಸಂಘದ ಎಚ್ಚರಿಕೆ ಏನು?
ನವದೆಹಲಿ, ಡಿಸೆಂಬರ್ 22: ತಕ್ಷಣವೇ ಜಾರಿಗೆ ಬರುವಂತೆ ಕೋವಿಡ್ಗೆ ಸಂಬಂಧಿಸಿದ ಸೂಕ್ತ ಕ್ರಮಗಳನ್ನು ಅನುಸರಿಸಿ ಎಂದು ದೇಶದ ಉನ್ನತ ವೈದ್ಯರ ಸಂಸ್ಥೆ ತಿಳಿಸಿದೆ.
ದೇಶದ ಉನ್ನತ ವೈದ್ಯರ ಸಂಸ್ಥೆಯಾದ ಭಾರತೀಯ ವೈದ್ಯಕೀಯ ಸಂಘ ಇಂದು ಸಾರ್ವಜನಿಕರಿಗೆ ಮನವಿ ಮಾಡಿದೆ.
ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು, ದೈಹಿಕ ಅಂತರವನ್ನು ಕಾಪಾಡಿಕೊಳ್ಳುವುದು, ಸಾಬೂನು ಅಥವಾ ಸ್ಯಾನಿಟೈಸರ್ಗಳಿಂದ ನಿಯಮಿತವಾಗಿ ಕೈ ತೊಳೆಯುವುದು ಸೇರಿದಂತೆ ಹಲವು ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಭಾರತೀಯ ವೈದ್ಯಕೀಯ ಸಂಘ ಹೇಳಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಸಂಸತ್ತಿನಲ್ಲಿ ಹೇಳಿದ್ದಾರೆ.
ದೇಶದಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳ ಮೇಲೆ ಸರ್ಕಾರ ನಿಗಾ ವಹಿಸಿದೆ. ವೈರಸ್ ಹರಡುವುದನ್ನು ತಡೆಗಟ್ಟುವ ಕ್ರಮಗಳನ್ನು ಪಟ್ಟಿ ಮಾಡಿದೆ. ಜಿನೋಮ್ ಸೀಕ್ವೆನ್ಸಿಂಗ್ ಮಾಡಲು ಎಲ್ಲಾ ರಾಜ್ಯಗಳಿಗೆ ಕೋರಲಾಗಿದೆ. ಅಂತರರಾಷ್ಟ್ರೀಯ ಪ್ರಯಾಣಿಕರ ಆರ್ಟಿಪಿಸಿಆರ್ ಟೆಸ್ಟ್ ಅನ್ನು ಇಂದಿನಿಂದ ಆರಂಭಿಸಲಾಗಿದೆ ಎಂದು ಮಾಂಡವೀಯಾ ತಿಳಿಸಿದ್ದಾರೆ.

ಮದುವೆಗಳು, ರಾಜಕೀಯ ಅಥವಾ ಸಾರ್ವಜನಿಕ ಸಭೆಗಳನ್ನು ನಿಲ್ಲಿಸುವಂತೆ ಭಾರತೀಯ ವೈದ್ಯಕೀಯ ಸಂಘ ಸಲಹೆ ನೀಡಿದೆ.
ಜ್ವರ, ನೋಯುತ್ತಿರುವ ಗಂಟಲು, ಕೆಮ್ಮಿನಂತಹ ಯಾವುದೇ ರೋಗಲಕ್ಷಣಗಳ ಕಂಡು ಬಂದ ಸಂದರ್ಭದಲ್ಲಿ ವೈದ್ಯರನ್ನು ಸಂಪರ್ಕಿಸಲು ಹೇಳಿದೆ.
ಬೂಸ್ಟರ್ ಡೋಸ್ ಸೇರಿದಂತೆ ಕೋವಿಡ್ ಲಸಿಕೆಯನ್ನು ಆದಷ್ಟು ಬೇಗ ತೆಗೆದುಕೊಳ್ಳುವಂತೆ ಅದು ಜನರಿಗೆ ಮನವಿ ಮಾಡಿದೆ.
ವಿವಿಧ ದೇಶಗಳಲ್ಲಿ ಕೋವಿಡ್ ಪ್ರಕರಣಗಳ ಹಠಾತ್ ಉಲ್ಬಣವನ್ನು ಗಮನದಲ್ಲಿಟ್ಟುಕೊಂಡು, ಭಾರತೀಯ ವೈದ್ಯಕೀಯ ಸಂಘವು ಸಾರ್ವಜನಿಕರನ್ನು ಎಚ್ಚರಿಕೆ ನೀಡಿದೆ.

ವರದಿಗಳ ಪ್ರಕಾರ, ಕಳೆದ 24 ಗಂಟೆಗಳಲ್ಲಿ ಜಗತ್ತಿನಾದ್ಯಂತ ಸುಮಾರು 5.37 ಲಕ್ಷ ಹೊಸ ಪ್ರಕರಣಗಳು ವರದಿಯಾಗಿವೆ. ಯುಎಸ್, ಜಪಾನ್, ದಕ್ಷಿಣ ಕೊರಿಯಾ, ಫ್ರಾನ್ಸ್ ಮತ್ತು ಬ್ರೆಜಿಲ್ನಂತಹ ಪ್ರಮುಖ ದೇಶಗಳು ಹೊಸ ರೂಪಾಂತರ ಪ್ರಕರಣಗಳನ್ನು ದಾಖಲಿಸಿವೆ.
ತುರ್ತು ಔಷಧಿಗಳು, ಆಮ್ಲಜನಕ ಪೂರೈಕೆ ಮತ್ತು ಆಂಬ್ಯುಲೆನ್ಸ್ ಸೇವೆಗಳನ್ನು ಪೂರೈಸಲು ಕೇಂದ್ರ ಸರ್ಕಾರ ರಾಜ್ಯಗಳಿಗೆ ಮನವಿ ಮಾಡಿದೆ.
'ಹಿಂದಿನಂತೆ ಪರಿಸ್ಥಿತಿಯು ಆತಂಕಕಾರಿಯಾಗಿಲ್ಲ. ಆದ್ದರಿಂದ ಭಯಪಡುವ ಅಗತ್ಯವಿಲ್ಲ. ಚಿಕಿತ್ಸೆಗಿಂತ ತಡೆಗಟ್ಟುವಿಕೆಯೇ ಹೆಚ್ಚು ಒಳ್ಳೆಯದು' ಎಂದು ಆರೋಗ್ಯ ಸಚಿವಾಲಯ ಹೇಳಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ತುರ್ತು ಸಭೆ ನಡೆಸುತ್ತಿದ್ದಾರೆ. ದೇಶದಾದ್ಯಂತ ಮಾಸ್ಕ್ಗಳನ್ನು ಕಡ್ಡಾಯಗೊಳಿಸಬಹುದು ಎಂಬ ಮಾತುಗಳು ಕೇಳಿಬಂದಿವೆ. ರಾಜ್ಯ ಸರ್ಕಾರವು ಈ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ತೆಗೆದುಕೊಂಡಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಆರೋಗ್ಯ ಸಚಿವ ಸುಧಾಕರ್ ಅವರು ತಜ್ಞರೊಂದಿಗೆ ಸಭೆ ನಡೆಸಿದ್ದಾರೆ.












Click it and Unblock the Notifications