'ಟ್ರಾಕ್ಟರುಗಳೊಂದಿಗೆ ಸಿದ್ಧರಾಗಿ': ರೈತರಿಗೆ ರಾಕೇಶ್ ಟಿಕಾಯಿತ್ ಕರೆ
ನವದೆಹಲಿ, ಜೂ.21: ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ಮುಖಂಡ ರಾಕೇಶ್ ಟಿಕಾಯಿತ್ ಸೋಮವಾರ, ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ದ ಪ್ರತಿಭಟನೆಗೆ ರೈತರು ''ಟ್ರಾಕ್ಟರುಗಳೊಂದಿಗೆ ಸಿದ್ಧರಾಗಿ'' ಎಂದು ಕರೆ ನೀಡಿದ್ದಾರೆ.
"ಈ ಸರ್ಕಾರ ಒಪ್ಪುವುದಿಲ್ಲ. ಈ ಸರ್ಕಾರಕ್ಕೆ ಚಿಕಿತ್ಸೆ ನೀಡಬೇಕಾದ ಅಗತ್ಯವಿದೆ. ನಿಮ್ಮ ಟ್ರಾಕ್ಟರುಗಳೊಂದಿಗೆ ಸಿದ್ಧರಾಗಿ, ನಮ್ಮ ಭೂಮಿಯನ್ನು ಉಳಿಸುವ ಆಂದೋಲನವನ್ನು ನಾವು ತೀವ್ರಗೊಳಿಸಬೇಕಾಗಿದೆ," ರೈತ ರಾಕೇಶ್ ಟಿಕಾಯಿತ್ ತಮ್ಮ ಅಧಿಕೃತ ಟ್ವಿಟ್ಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ.
"ರೈತರು ಪ್ರತಿಭಟನೆಯಿಂದ ಹಿಂದೆ ಸರಿಯುತ್ತಾರೆ ಎಂಬ ತಪ್ಪು ಕಲ್ಪನೆಯನ್ನು ಕೇಂದ್ರ ಸರ್ಕಾರ ಮನಸ್ಸಿನಿಂದ ತೆಗೆದುಹಾಕಬೇಕು, ಬೇಡಿಕೆಗಳನ್ನು ಈಡೇರಿಸಿದಾಗ ಮಾತ್ರ ರೈತ ಹಿಂತಿರುಗುತ್ತಾನೆ. ಎಲ್ಲಾ ಮೂರು ಕಾನೂನುಗಳನ್ನು ರದ್ದುಪಡಿಸಬೇಕೆಂದು ನಾವು ಒತ್ತಾಯಿಸುತ್ತೇವೆ. ಎಂಎಸ್ಪಿ ಕುರಿತು ಕಾನೂನು ರೂಪಿಸಬೇಕು," ಎಂದು ಕೂಡಾ ಆಗ್ರಹಿಸಿದ್ದಾರೆ.

"ಹರಿಯಾಣ ಸರ್ಕಾರ ಸುಳ್ಳು ಪ್ರಕರಣಗಳನ್ನು ದಾಖಲಿಸುವ ಮೂಲಕ ರೈತರಿಗೆ ಕಿರುಕುಳ ನೀಡುತ್ತಿದೆ. ಇದರೊಂದಿಗೆ ನೀವು ಪ್ರತಿಭಟನೆಯನ್ನು ನಿಗ್ರಹಿಸಲು ಸಾಧ್ಯವಿಲ್ಲ," ಎಂದು ಹೇಳಿದ್ದಾರೆ,
ಕಳೆದ ಕೆಲವು ದಿನಗಳಿಂದ ಪ್ರತಿಭಟನಾ ಸ್ಥಳಗಳಲ್ಲಿ ರೈತರು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದರು. ಆದರೆ ಪೊಲೀಸರು ರೈತರನ್ನು ಚದುರಿಸಲು ಬಲವನ್ನು ಬಳಸಿದರು ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿ-ಜೆಜೆಪಿ ನಾಯಕರ ಸಾರ್ವಜನಿಕ ಕಾರ್ಯಕ್ರಮಗಳನ್ನು ಕೃಷಿ ಕಾನೂನು ವಿರುದ್ದ ಹರಿಯಾಣದಲ್ಲಿ ಪ್ರತಿಭಟಿಸುತ್ತಿರುವ ರೈತರು ವಿರೋಧಿಸಿದ್ದಾರೆ.
ಈ ತಿಂಗಳ ಆರಂಭದಲ್ಲಿ ದೆಹಲಿ ಪೊಲೀಸರು ಹಲವಾರು ಪ್ರತಿಭಟನಾಕಾರರು ಸಿಂಗ್ ಗಡಿಯಲ್ಲಿರುವ ಇಬ್ಬರು ವಿಶೇಷ ಶಾಖಾ ಅಧಿಕಾರಿಗಳ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ನರೇಲಾ ಪೊಲೀಸ್ ಠಾಣೆಯಲ್ಲಿ ಅಪರಿಚಿತ ಪ್ರತಿಭಟನಾಕಾರರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಈ ಆರೋಪಗಳ ಬಗ್ಗೆ ಮಾತನಾಡಿದ ರಾಕೇಶ್ ಟಿಕಾಯತ್, "ರೈತರನ್ನು ಪ್ರಚೋದಿಸುವುದು ಪೊಲೀಸ್ ಮತ್ತು ಸರ್ಕಾರದ ಉದ್ದೇಶವಾಗಿದೆ," ಎಂದು ದೂರಿದ್ದಾರೆ.
सरकार मानने वाली नहीं है। इलाज तो करना पड़ेगा। ट्रैक्टरों के साथ अपनी तैयारी रखो। जमीन बचाने के लिए आंदोलन तेज करना होगा। #FarmersProtest
— Rakesh Tikait (@RakeshTikaitBKU) June 20, 2021
ರಾಷ್ಟ್ರ ರಾಜಧಾನಿ ದೆಹಲಿಯ ಗಡಿ ಸ್ಥಳಗಳಲ್ಲಿ ಇನ್ನೂ ರೈತರ ಪ್ರತಿಭಟನೆ ನಡೆಯುತ್ತಿದೆ. ಚಳುವಳಿ ಪ್ರಾರಂಭವಾಗಿ 200 ದಿನಗಳಿಗಿಂತಲೂ ಹೆಚ್ಚು ಸಮಯ ಕಳೆದರೂ ಸಹ, ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ತಮ್ಮ ಬೇಡಿಕೆಯಿಂದ ರೈತರು ಹಿಂದೆ ಸರಿದಿಲ್ಲ.
(ಒನ್ಇಂಡಿಯಾ ಸುದ್ದಿ)












Click it and Unblock the Notifications